ವಿಜಯ್ ಇಫ್ತಾರ್ ಪಾರ್ಟಿಯಲ್ಲಿ ಕುಡುಕರು, ರೌಡಿಗಳು; ಚೆನ್ನೈನಲ್ಲಿ ನಟ ವಿಜಯ್ ವಿರುದ್ಧ ದೂರು
ತಮಿಳಿನ ಸ್ಟಾರ್ ನಟ ದಳಪತಿ ವಿಜಯ್ ವಿರುದ್ಧ ಮುಸ್ಲಿಂ ಸಮುದಾಯಕ್ಕೆ ಅವಮಾನ ಮಾಡಿದ ಆರೋಪದ ಹಿನ್ನೆಲೆಯಲ್ಲಿ ದೂರು ದಾಖಲಾಗಿದೆ. ಕಳೆದ ಶುಕ್ರವಾರ ದಳಪತಿ ವಿಜಯ್ ಚೆನ್ನೈನಲ್ಲಿ ರಂಜಾನ್ ಪ್ರಯುಕ್ತ ಮುಸ್ಲಿಂ ಬಾಂಧವರಿಗೆ ಇಫ್ತಾರ್ ಪಾರ್ಟಿಯನ್ನು ನೀಡಿದ್ದರು. ಈ ವೇಳೆ ಮುಸ್ಲಿಂ ಸಮುದಾಯಕ್ಕೆ ಅವಮಾನ ಆಗಿದೆ ಎಂದು ದೂರನ್ನು ದಾಖಲಿಸಲಾಗಿದೆ.
ತಮಿಳು ನಾಡಿನ ಸುನ್ನತ್ ಜಮಾತ್ ಇಸ್ಲಾಮಿಕ್ ಸಂಘಟನೆ ಚೆನ್ನೈನ ಪೊಲೀಸ್ ಕಮಿಷನರ್ಗೆ ದೂರನ್ನು ನೀಡಿದೆ ಎಂದು ಡೈಲಿ ತಂತಿ ವರದಿ ಮಾಡಿದೆ. ದಳಪತಿ ವಿಜಯ್ ಇಫ್ತಾರ್ ಪಾರ್ಟಿ ನೀಡಿದ ದಿನ ಅಂದರೆ ಮಾರ್ಚ್ 7ರಂದು ದೂರನ್ನು ದಾಖಲಿಸಿದ್ದಾಗಿ ವರದಿಯಾಗಿದೆ.

ಸುನ್ನತ್ ಜಮಾತ್ ಇಸ್ಲಾಮಿಕ್ ಸಂಘಟನೆಯ ಖಜಾಂಚಿ ಸೈಯದ್ ಘೌಸ್ ಈ ದೂರನ್ನು ನೀಡಿದ್ದಾರೆ ಎನ್ನಲಾಗಿದೆ. ಇಫ್ತಾರ್ ಪಾರ್ಟಿಯಲ್ಲಿ ಸಾಮೂಹಿಕ ಭೇಟಿಯ ಪವಿತ್ರತೆಯ ಉಲ್ಲಂಘನೆ ಮಾಡಲಾಗಿದೆ. ಇಫ್ತಾರ್ ಅನ್ನೋದು ಸಾರ್ವಜನಿಕ ಸಮಾವೇಶ ಅಲ್ಲ. ಹಾಗೇ ರಾಜಕೀಯ ಸಭೆ ನಡೆಸುವ ಸ್ಥಳವೂ ಅಲ್ಲ. ಇದೊಂದು ಪವಿತ್ರ ಧಾರ್ಮಿಕ ಹಬ್ಬ ಎಂದು ಆರೋಪ ಮಾಡಿದ್ದಾರೆ.
ದಳಪತಿ ವಿಜಯ್ ಆಯೋಜಿಸಿದ್ದ ಇಫ್ತಾರ್ ಇವೆಂಟ್ನಲ್ಲಿ ಕುಡುಕರು ಹಾಗೂ ರೌಡಿಗಳು ಭಾಗವಹಿಸಿದ್ದರು. ಅವರಿಗೂ ಈ ಇಫ್ತಾರ್ ಕೂಟಕ್ಕೂ ಯಾವುದೇ ರೀತಿಯ ಸಂಬಂಧವಿಲ್ಲ. ವಿಜಯ್ ಜೊತೆ ಬಂದಿದ್ದ ಬೌನ್ಸರ್ಸ್ ಉಪವಾಸವಿದ್ದ ಮುಸ್ಲೀಮರನ್ನು ಹೊರಗಡೆ ಹಾಕಿದ್ದಾರೆ. ಅಲ್ಲದೆ ವಿಜಯ್ ಕಾರ್ಯಕ್ರಮ ನಿಗದಿ ಪಡಿಸಿದ ಸಮಯಕ್ಕಿಂತ 90 ನಿಮಿಷ ತಡವಾಗಿ ಬಂದಿದ್ದಾರೆ. ಅದು ಅಲ್ಲಿದ್ದ ಜನರಿಗೆ ತೊಂದರೆಯಾಗಿದೆ ಎಂದು ದೂರಲಾಗಿದೆ.
ಧಾರ್ಮಿಕ ಭಾವನೆಗಳಿಗೆ ಅಗೌರವ ತಂದಿದ್ದ ಹಿನ್ನೆಲೆಯಲ್ಲಿ ದಳಪತಿ ವಿಜಯ್ ವಿರುದ್ಧ ಸರಿಯಾದ ಕ್ರಮವನ್ನು ಕೈಗೊಳ್ಳಬೇಕು ಎಂದು ಸುನ್ನತ್ ಜಮಾತ್ ಇಸ್ಲಾಮಿಕ್ ಸಂಘಟನೆಯ ಖಜಾಂಚಿ ನೀಡಿದ ದೂರಿನಲ್ಲಿ ಉತ್ತಾಯಿಸಲಾಗಿದೆ. ಇಫ್ತಾರ್ ಪಾರ್ಟಿ ಕೊಡುವ ಸಮಯದಲ್ಲಿ ಎಡವಟ್ಟು ಮಾಡಿಕೊಂಡು ದಳಪತಿ ವಿಜಯ್ ಸಂಕಷ್ಟಕ್ಕೆ ಸಿಕ್ಕಿಕೊಂಡಿದ್ದಾರೆ. ಇನ್ನು ಈ ದೂರಿನ ಅನ್ವಯ ವಿಜಯ್ ಮೇಲೆ ಯಾವ ರೀತಿಯ ಕ್ರಮ ಜರುಗಿಸಲಾಗುತ್ತೆ ಅನ್ನೋದು ಮುಂದಿನ ದಿನಗಳಲ್ಲಿ ಗೊತ್ತಾಗಲಿದೆ.
ದಳಪತಿ ವಿಜಯ್ ರಾಜಕೀಯಕ್ಕೆ ಅಧಿಕೃತವಾಗಿ ಎಂಟ್ರಿ ಕೊಟ್ಟಿದ್ದಾರೆ. ತನ್ನ ಯಶಸ್ಸಿನ ಉತ್ತುಂಗದಲ್ಲಿ ಇರುವಾಗಲೇ ಸಿನಿಮಾಗೆ ಗುಡ್ ಬೈ ಹೇಳಿ ರಾಜಕೀಯಕ್ಕೆ ಧುಮುಕಿದ್ದಾರೆ. ತಮ್ಮದೇ 'ತಮಿಳಿಗ ವೆಟ್ರಿ ಕಳಗಂ' ಅನ್ನುವ ಪಕ್ಷವನ್ನು ಕಟ್ಟಿದ್ದಾರೆ. 2026ರಲ್ಲಿ ನಡೆಯಲಿರುವ ವಿಧಾನ ಸಭೆ ಚುನಾವಣೆಯಲ್ಲಿ ಪೂರ್ಣ ಪ್ರಮಾಣದಲ್ಲಿ ಅಖಾಡಕ್ಕೆ ಇಳಿಯಲಿದೆ. ಇದೇ ಮೊದಲ ಬಾರಿಗೆ ದಳಪತಿ ವಿಜಯ್ ಕೂಡ ಚುನಾವಣೆಯಲ್ಲಿ ಸ್ಪರ್ಧೆ ಮಾಡಲಾಗಿದ್ದಾರೆ.
2026ರ ತಮಿಳುನಾಡು ಚುನಾವಣೆ ಸಿಕ್ಕಾಪಟ್ಟೆ ಪೈಪೋಟಿಯಿಂದ ಕೂಡಿರುತ್ತೆ. ಒಂದ್ಕಡೆ ಡಿಎಂಕೆ ಪಕ್ಷದಿಂದ ಸ್ಟ್ಯಾಲಿನ್, ಬಿಜೆಪಿ ಪಕ್ಷದಿಂದ ಅಣ್ಣಾಮಲೈ ಹಾಗೂ ವಿಜಯ್ ಪಾರ್ಟಿ ತಮಿಳಿಗ ವೆಟ್ರಿ ಕಳಗಂ ಇದೆ. ಈ ಮೂರು ಪಕ್ಷಗಳ ನಡುವೆ ತ್ರಿಕೋನ ಸ್ಪರ್ಧೆ ಏರ್ಪಡುವ ಸಾಧ್ಯತೆಯಿದೆ. ದಳಪತಿ ವಿಜಯ್ ಸ್ಟಾರ್ ಆಗಿರುವುದರಿಂದ ತಮಿಳು ಮಂದಿ ಚುನಾವಣೆ ವೇಳೆ ವಿಜಯ್ ಕಡೆಗೆ ವಾಲಿದರೂ ಅಚ್ಚರಿ ಪಡಬೇಕಿಲ್ಲ.
ಈ ಹಿನ್ನೆಲೆಯಲ್ಲಿ ಚುನಾವಣೆಗೆ ಇನ್ನು ಕೆಲವು ತಿಂಗಳು ಬಾಕಿ ಉಳಿದಿರುವಂತೆ ಅಖಾಡಕ್ಕೆ ಇಳಿದಿದ್ದಾರೆ. ಇಷ್ಟು ದಿನ ಸ್ಟಾರ್ಗಿರಿ ತೋರಿಸಿದ್ದ ದಳಪತಿ ವಿಜಯ್ ಇನ್ಮುಂದೆ ರಾಜಕೀಯ ಮಾಡಲಿದ್ದಾರೆ. ಇಫ್ತಾರ್ ಕೂಟವನ್ನು ಆಯೋಜಿಸಿ, ತನ್ನ ರಾಜಕೀಯ ನಡೆ ಹೇಗಿರುತ್ತೆ ಅನ್ನೋದನ್ನು ತೋರಿಸಿದ್ದಾರೆ. ಹೀಗಾಗಿ ಮುಂಬರುವ ಚುನಾವಣೆಯಲ್ಲಿ ತಮಿಳುನಾಡು ಮಂದಿಗೆ ಸ್ಟಾರ್ ಒಬ್ಬರು ಸಿಕ್ಕಂತಾಗಿದೆ. ಇನ್ನು ದಳಪತಿ ವಿಜಯ್ ರಾಜಕೀಯ ತಂತ್ರ ವರ್ಕ್ ಆಗುತ್ತಾ? ಚೊಚ್ಚಲ ಪ್ರಯತ್ನದಲ್ಲಿಯೇ ಜಯಭೇರಿ ಬಾರಿಸುತ್ತಾರಾ? ಅನ್ನೋದು ಮುಂದಿನ ದಿನಗಳಲ್ಲಿ ಗೊತ್ತಾಗಲಿದೆ.


Click it and Unblock the Notifications











