ಕನ್ನಡದಲ್ಲಿಯೂ ಹಾಡಿದ್ದ ದಕ್ಷಿಣ ಭಾರತದ ಹಿರಿಯ ಗಾಯಕ ಎ.ಎಲ್. ರಾಘವನ್ ನಿಧನ
ಕನ್ನಡ ಸೇರಿದಂತೆ ದಕ್ಷಿಣ ಭಾರತದ ವಿವಿಧ ಭಾಷೆಗಳ ಸಿನಿಮಾಗಳಲ್ಲಿ ಹಾಡಿದ್ದ ಖ್ಯಾತ ಗಾಯಕ ಎ.ಎಲ್. ರಾಘವನ್ (87) ಶುಕ್ರವಾರ ಬೆಳಿಗ್ಗೆ 7.30ರ ವೇಳೆಗೆ ಚೆನ್ನೈನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.
Recommended Video
ಶುಕ್ರವಾರ ಬೆಳಿಗ್ಗೆ ಹೃದಯಾಘಾತಕ್ಕೆ ಒಳಗಾಗಿದ್ದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಅವರು ಮೃತಪಟ್ಟಿದ್ದಾರೆ ಎಂದು ವೈದ್ಯರು ತಿಳಿಸಿದು. ರಾಘವನ್ ಅವರು ಪತ್ನಿ, ಹಿರಿಯ ನಟಿ ಎಂ.ಎನ್. ರಾಜಮ್ ಅವರನ್ನು ಅಗಲಿದ್ದಾರೆ.
ಚೆನ್ನೈ ನಗರದ ರಾಯಪೆಟ್ಟಾದಲ್ಲಿನ ನಿವಾಸದಲ್ಲಿ ಪಾರ್ಥಿವ ಶರೀರವನ್ನು ಸಾರ್ವಜನಿಕರ ದರ್ಶನಕ್ಕೆ ಇರಿಸಲಾಗಿತ್ತು. ತಮಿಳಿನಲ್ಲಿ ಹೆಸರಾಂತ ಗಾಯಕರಾಗಿದ್ದ ಅವರು, 'ನೆಂಜಿರಿಕ್ಕುಮ್ ವರೈ' ಚಿತ್ರದ 'ಎಂಗಿರುಂಧಲಮ್ ವಾಳಗಾ' ಮಾಧುರ್ಯಪೂರ್ಣ ದುಃಖದ ಹಾಡಿನ ಮೂಲಕ ಜನಪ್ರಿಯತೆ ಪಡೆದಿದ್ದರು.

1947ರಲ್ಲಿ ಕೃಷ್ಣ ವಿಜಯಂ ಚಿತ್ರದ ಮೂಲಕ ಅವರ ಗಾಯನ ವೃತ್ತಿ ಆರಂಭವಾಗಿತ್ತು. 2014ರಲ್ಲಿ ಆದಮ ಜೀಚೋಮಡ ಚಿತ್ರದ ನಲ್ಲಾ ಕೆಟುಕ ಪಾದಮ್ ಹಾಡು ಅವರು ಹಾಡಿದ್ದ ಕೊನೆಯ ಗೀತೆ. ಸುಮಾರು 67 ವರ್ಷಗಳ ಕಾಲ ಗಾಯನ ಬದುಕಿನಲ್ಲಿ ನೂರಾರು ಚಿತ್ರಗಳಿಗೆ ಹಾಡಿದ್ದಾರೆ.
ಕನ್ನಡ, ಮಲಯಾಳಂ ಮತ್ತು ತೆಲುಗು ಚಿತ್ರಗಳಲ್ಲಿಯೂ ಅವರು ಅನೇಕ ಹಾಡುಗಳನ್ನು ಹಾಡಿದ್ದಾರೆ. ಆರೂರು ಪಟ್ಟಾಭಿ ನಿರ್ದೇಶನದ 'ಅನ್ನಪೂರ್ಣ' ಚಿತ್ರದಲ್ಲಿ ರಾಜನ್-ನಾಗೇಂದ್ರ ಸಂಗೀತದಲ್ಲಿ 'ಚೆಲುವಿನ ಸಿರಿಯೇ' ಹಾಡನ್ನು ಹಾಡಿದ್ದರು.
ಕೆಎಸ್ಎಲ್ ಸ್ವಾಮಿ ನಿರ್ದೇಶನದ ರಾಜ್ ಕುಮಾರ್ ಅಭಿನಯದ 'ಲಗ್ನಪತ್ರಿಕೆ' ಚಿತ್ರದಲ್ಲಿ ಪಿ.ಬಿ. ಶ್ರೀನಿವಾಸ್ ಅವರೊಂದಿಗೆ 'ಬ್ರಹ್ಮಚಾರಿ ಶರಣಾದೆ...' ಗೀತೆಯನ್ನು ಹಾಡಿದ್ದರು. ರಾಜ್ ಕುಮಾರ್ ನಟನೆಯ 'ಸರ್ವಮಂಗಳ' ಚಿತ್ರದಲ್ಲಿಯೂ 'ಚೆಲುವಿನ ಸಿರಿಯೆ ಬಾರೆಲೆ' ಮತ್ತು ಶ್ರೀನಾಥ್ ನಟನೆಯ ಆರ್.ಎನ್. ಜಯಗೋಪಾಲ್ ನಿರ್ದೇಶನದ 'ನಾ ಮೆಚ್ಚಿದ ಹುಡುಗ' ಚಿತ್ರದಲ್ಲಿ 'ಚೆಲುವೆ ಓ ಚೆಲುವೆ' ಹಾಡಿಗೆ ದನಿಯಾಗಿದ್ದರು.
ಗಾಯನದ ಜತೆಗೆ ನಟನೆಯಲ್ಲಿಯೂ ಅವರು ಗುರುತಿಸಿಕೊಂಡಿದ್ದರು. ಅಲೈಗಳ್ ಮತ್ತು ಅಹಲ್ಯಾ ಎಂಬ ಧಾರಾವಾಹಿಗಳಲ್ಲಿ ಅಭಿನಯಿಸಿದ್ದರು.


Click it and Unblock the Notifications











