ವಿಜಯ್-ರಜನಿ ಫ್ಯಾನ್ಸ್ ಮಧ್ಯೆ ಟೈಟಲ್ ಕಿತ್ತಾಟ: ತಲೈವಾಗೆ ಮೊದಲು 'ಸೂಪರ್ಸ್ಟಾರ್' ಎಂದಿದ್ಯಾರು?
ದಕ್ಷಿಣ ಭಾರತದ ಪ್ರತಿಯೊಬ್ಬ ಹೀರೊಗೂ ಒಂದೊಂದು ಟೈಟಲ್ ಇದೆ. ಅದರಲ್ಲೂ ಕನ್ನಡ, ತೆಲುಗು, ತಮಿಳಿನ ಸ್ಟಾರ್ ಹೀರೊಗಳಿಗೆ ಅಭಿಮಾನಿಗಳೇ ಪ್ರೀತಿಯಿಂದ ಒಂದೊಂದು ಬಿರುದು ಕೊಡುತ್ತಾರೆ. ಅವರ ಪ್ರತಿ ಸಿನಿಮಾ ರಿಲೀಸ್ ಆದಾಗಲೂ ಅದೇ ಬಿರುದಿನಿಂದ ಘೋಷಣೆಗಳನ್ನು ಕೂಗುತ್ತಾರೆ.
ಕೆಲವು ಇಬ್ಬರ ಅಭಿಮಾನಿಗಳ ಮಧ್ಯೆ ಇದೇ ಟೈಟಲ್ ವಿಚಾರಕ್ಕೆ ಕಿತ್ತಾಟ ಶುರುವಾಗುತ್ತೆ. ಇಬ್ಬರು ಸೂಪರ್ಸ್ಟಾರ್ ಅಭಿಮಾನಿಗಳಿಗೂ ಒಂದೇ ಟೈಟಲ್ ಬೇಕು. ಒಮ್ಮೆ ಕನ್ನಡದಲ್ಲಿ ಬಾಸ್ ಟೈಟಲ್ಗಾಗಿ ದರ್ಶನ್ ಹಾಗೂ ಯಶ್ ಫ್ಯಾನ್ಸ್ ಕಿತ್ತಾಡಿಕೊಂಡಿದ್ದರು. ಈಗ ಅದೇ ಫ್ಯಾನ್ಸ್ ವಾರ್ ರಜನಿಕಾಂತ್ ಹಾಗೂ ದಳಪತಿ ವಿಜಯ್ ಅಭಿಮಾನಿಗಳ ಮಧ್ಯೆ ಶುರುವಾಗಿದೆ.

ಕಳೆದ ಕೆಲವು ದಿನಗಳಿಂದ ದಳಪತಿ ಅಭಿಮಾನಿಗಳು ಸೂಪರ್ಸ್ಟಾರ್ ಪಟ್ಟಕ್ಕಾಗಿ ಗಂಟು ಬಿದ್ದಿದ್ದಾರೆ. ಇದೇ ಕಾರಣಕ್ಕೆ ರಜನಿಕಾಂತ್ ಹಾಗೂ ವಿಜಯ್ ಫ್ಯಾನ್ಸ್ ನಡುವೆ ಕಿತ್ತಾಟ ಶುರುವಾಗಿದೆ. 'ಜೈಲರ್' ಸಿನಿಮಾ ಈವೆಂಟ್ನಲ್ಲಿ ರಜನಿ ಕಾಗೆ ಹದ್ದು ಕಥೆ ಹೇಳಿದ ಮೇಲಂತೂ ಇಬ್ಬರ ಪ್ಯಾನ್ಸ್ ಹಾವು ಮುಂಗೂಸಿಯಂತಾಗಿದ್ದಾರೆ. ಅಷ್ಟಕ್ಕೂ ರಜನಿಗೆ ಸೂಪರ್ಸ್ಟಾರ್ ಅನ್ನೋ ಟೈಟಲ್ ಬಂದಿದ್ದೇಗೆ? ತಿಳಿಯುವುದಕ್ಕೆ ಮುಂದೆ ಓದಿ.
ರಜನಿಕಾಂತ್ ಸೂಪರ್ಸ್ಟಾರ್ ಆಗಿದ್ದೇಗೆ?
ರಜನಿಕಾಂತ್ ಸಿನಿಮಾರಂಗದಲ್ಲಿ ಸೂಪರ್ಸ್ಟಾರ್ ಆಗಿ ಬೆಳೆಯುವುದಕ್ಕೆ ಅದೆಷ್ಟು ಕಷ್ಟ ಪಟ್ಟಿದ್ದಾರೆ ಅನ್ನೋದು ಹಳೇ ವಿಷಯ. ವಿಲನ್ ಆಗಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದ ರಜನಿ ಅತೀ ಕಡಿಮೆ ಸಮಯದಲ್ಲಿ ತೆಲುಗು ಚಿತ್ರರಂಗದ ಸ್ಟಾರ್ ನಟನಾಗಿ ಬೆಳೆದುಬಿಟ್ಟರು. ರಜನಿಕಾಂತ್ ಸಿನಿಮಾ ಒಂದೊಂದಾಗಿ ಗೆಲ್ಲುತ್ತಿದ್ದಂತೆ ರೇಂಜ್ ಕೂಡ ಬದಲಾಗುತ್ತಲೇ ಹೋಗಿತ್ತು. ಹೀಗೆ ಒಂದೊಂದೆ ಮೆಗಾ ಹಿಟ್ಗಳನ್ನು ನೀಡುತ್ತಿದ್ದಂತೆ ರಜನಿ ಸೂಪರ್ಸ್ಟಾರ್ ಆಗಿ ಹೊರಹೊಮ್ಮಿದ್ದರು. ಸುಮಾರು 45 ವರ್ಷಗಳಿಂದ ರಜನಿ ಸೂಪರ್ಸ್ಟಾರ್ ಆಗಿಯೇ ಉಳಿದುಕೊಂಡಿದ್ದಾರೆ.

ರಜನಿಗೆ 'ಸೂಪರ್ಸ್ಟಾರ್' ಪಟ್ಟ ಸಿಕ್ಕಿದ್ದೇಗೆ?
ಅದು 1978.. ರಜನಿಕಾಂತ್ 'ಬೈರವಿ' ಅನ್ನೋ ಸಿನಿಮಾದಲ್ಲಿ ನಟಿಸಿದ್ದರು. ಎಂ.ಭಾಸ್ಕರ್ ಈ ಸಿನಿಮಾವನ್ನು ನಿರ್ದೇಶನ ಮಾಡಿದ್ದರು. ಇದರಲ್ಲಿ ಮೂಕೈಯ್ಯ ಅನ್ನೋ ಪಾತ್ರದಲ್ಲಿ ರಜನಿ ನಟಿಸಿದ್ದರು. ಇದು ತಮಿಳು ಬಾಕ್ಸಾಫೀಸ್ನಲ್ಲಿ ಹೊಸ ದಾಖಲೆಯನ್ನು ಬರೆದು ಬಿಟ್ಟಿತ್ತು. ನಿರ್ಮಾಪಕ ಎಸ್ ಧನು ಈ ಸಿನಿಮಾ ದೊಡ್ಡ ಮಟ್ಟಕ್ಕೆ ಮಾರ್ಕೆಟಿಂಗ್ ಮಾಡಿದ್ದರು. ಚೆನ್ನೈನ ಪ್ಲಾಜಾ ಚಿತ್ರಮಂದಿರದ ಮುಂದೆ 40 ಅಡಿ ಎತ್ತರದ ಕಟೌಟ್ ಹಾಕಿದ್ದರು. ನಿರ್ಮಾಪಕ ಧನು ಅದೇ ಮೊದಲ ಬಾರಿಗೆ ಕಟೌಟ್ನಲ್ಲಿ 'ಸೂಪರ್ಸ್ಟಾರ್' ಅಂತ ಬಳಸಿದ್ದರು.
ಈ ಟೈಟಲ್ ಬಗ್ಗೆ ರಜನಿ ಎಚ್ಚರಿಕೆ
ಅಂದು ನಿರ್ಮಾಪಕ ಹಾಗೂ ವಿತರಕ ಎಸ್. ಧನು ಸೂಪರ್ಸ್ಟಾರ್ ಇಟ್ಟು ಪ್ರಚಾರ ಮಾಡಿದ್ದಾಗ ರಜನಿ ಎಚ್ಚರಿಕೆ ನೀಡಿದ್ದರು. ಅದಾಗಲೇ ತಮಿಳಿನ ದಿಗ್ಗಜರಾದ ಎಂಜಿಆರ್ ಹಾಗೂ ಶಿವಾಜಿ ಗಣೇಶನ್ ಸಿನಿಮಾಗಳು ಥಿಯೇಟರ್ಗೆ ಬರುತ್ತಿದ್ದವು. ಇಂತಹ ದಿಗ್ಗಜರು ಇರುವಾಗ 'ಸೂಪರ್ಸ್ಟಾರ್' ಟೈಟಲ್ ಬೇಡ ಎಂದಿದ್ದರು. ಆದರೂ, ನಿರ್ಮಾಪಕ ಕೇಳಲೇ ಇಲ್ಲ. ತನ್ನ ಪೋಸ್ಟರ್ಗಳಲ್ಲಿ ಸೂಪರ್ಸ್ಟಾರ್ ಬರೆದು ಪ್ರಚಾರ ಮಾಡಿ ಬಿಟ್ಟರು.
ಪ್ರೇಕ್ಷಕರು ಒಪ್ಪಿದ ಸೂಪರ್ಸ್ಟಾರ್
ಇದೇ ವೇಳೆ ರಜನಿಕಾಂತ್ ಇದ್ದ ಆತಂಕ ಕಡಿಮೆಯಾಗಿತ್ತು. ರಜನಿಕಾಂತ್ಗೆ ನೀಡಿದ ಸೂಪರ್ಸ್ಟಾರ್ ಟೈಟಲ್ ಪ್ರೇಕ್ಷಕರಿಗೂ ಇಷ್ಟ ಆಗಿತ್ತು. ಆದರೆ, ನಿರ್ಮಾಪಕ ಸೂಪರ್ಸ್ಟಾರ್ ಟೈಟಲ್ ಅನ್ನು ಸೂಪರ್ ಹಾಗೂ ಸ್ಟಾರ್ ಅಂತ ಪ್ರತ್ಯೇಕ ಮಾಡಿ ಪ್ರಚಾರ ಮಾಡಿದ್ದರು. 1989ರಲ್ಲಿ ತೆರೆಕಂಡಿದ್ದ 'ರಾಜಾದಿರಾಜ' ಸಿನಿಮಾದ ಹಾಡಿನಲ್ಲಿ ರಜನಿಗಾಗಿ ಒಂದು ಹಾಡನ್ನು ಇಡಲಾಗಿತ್ತು. "ಸೂಪರ್ಸ್ಟಾರ್ ಯಾರುನ್ನು ಯೆಟ್ಟಳ್ ಚಿನ್ನ" ಅನ್ನೋ ಹಾಡಿನಿಂದ ಅಧಿಕೃತವಾಯ್ತು.


Click it and Unblock the Notifications











