ಇಬ್ಬರಿಗೂ ಬಿಸ್ಕೆಟ್ ಮುರಿದು ಕೊಡ್ತಿದ್ರು, ಒಬ್ಬರಿಗೊಂದು ಬಿಸ್ಕೆಟ್ ಬೇಕಿತ್ತು- ಕಮಲ್ ಹಾಸನ್
ಒಟ್ಟೊಟ್ಟಿಗೆ ಸಿನಿ ಜೀವನ ಆರಂಭಿಸಿದ ರಜನಿಕಾಂತ್ ಹಾಗೂ ಕಮಲ್ ಹಾಸನ್ ಕೆಲ ಸಿನಿಮಾಗಳಲ್ಲಿ ತೆರೆ ಹಂಚಿಕೊಂಡಿದ್ದರು. ಬಳಿಕ ಇಬ್ಬರೂ ದೂರಾಗಿದ್ದರು. ಇಬ್ಬರ ನಡುವೆ ಎಲ್ಲವೂ ಸರಿಯಿಲ್ಲ ಎನ್ನುವಂತೆ ಅಭಿಮಾನಿಗಳ ನಡುವೆ ಕಂದಕ ಬೆಳೆದಿತ್ತು. ಆದರೆ ನಾವಿಬ್ಬರೂ ಎಂದೂ ದೂರಾಗಿಲ್ಲ ಎಂದು ಕಮಲ್ ಹಾಸನ್ ಹೇಳಿದ್ದಾರೆ.
ಸೈಮಾ 2025 ವೇದಿಕೆಯಲ್ಲಿ ಕಮಲ್ ಹಾಸನ್ ಭಾಗಿ ಆಗಿದ್ದರು. ಈ ವೇಳೆ ರಜನಿಕಾಂತ್ ಜೊತೆ ಮತ್ತೆ ನಟಿಸುವ ಬಗ್ಗೆ ಅವರು ಮಾತನಾಡಿದ್ದಾರೆ. ಇಷ್ಟು ವರ್ಷ ನಾವಿಬ್ಬರು ಯಾಕೆ ತೆರೆಹಂಚಿಕೊಳ್ಳಲಿಲ್ಲ. ಈಗ ಯಾಕೆ ಒಪ್ಪಿಕೊಂಡೆವು ಎಂದು ತಿಳಿಸಿದ್ದಾರೆ. ಅಂದಹಾಗೆ ಲೋಕೇಶ್ ಕನಕರಾಜ್ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಲಿದ್ದಾರೆ. 'ವಿಕ್ರಂ' ಚಿತ್ರದಲ್ಲಿ ಕಮಲ್ ಹಾಸನ್ ಹಾಗೂ 'ಕೂಲಿ' ಚಿತ್ರದಲ್ಲಿ ತಲೈವಾರನ್ನು ಈಗಾಗಲೇ ಲೋಕೇಶ್ ಡೈರೆಕ್ಟ್ ಮಾಡಿದ್ದಾರೆ.

ರಜನಿಕಾಂತ್ ಹಾಗೂ ಕಮಲ್ ಒಟ್ಟಿಗೆ ನಟಿಸುತ್ತಾರೆ, ಲೋಕೇಶ್ ಚಿತ್ರದ ಸಾರಥ್ಯ ವಹಿಸುತ್ತಾರೆ ಎನ್ನುವ ಮಾತುಗಳು ಇತ್ತೀಚೆಗೆ ಕೇಳಿಬಂದಿತ್ತು. 46 ವರ್ಷಗಳ ಬಳಿಕ ಆ ಅದ್ಭುತ ನಡೆಯುತ್ತದೆ ಎಂದು ಹೇಳಲಾಗ್ತಿದೆ ನಿಜವೇ? ಎಂದು ಸೈಮಾ ವೇದಿಕೆಯಲ್ಲಿ ಕೇಳಿದ ಪ್ರಶ್ನೆಗೆ ಕಮಲ್ "ಅದ್ಭುತ ಎಲ್ಲಾ ನೀವೇ ಮಾಡಬೇಕು. ಸಿನಿಮಾ ನೋಡಿ ಹೇಳಲಿ. ಈಗಲೇ ಹೇಳುವುದು ತಪ್ಪಾಗುತ್ತದೆ. ನಾವಿಬ್ಬರು ಒಟ್ಟಿಗೆ ನಟಿಸಿ ಬಹಳ ದಿನಗಳಾಯಿತು. ಇವು ಇಷ್ಟಪಟ್ಟು ದೂರ ದೂರ ಇದ್ದೆವು" ಎಂದಿದ್ದಾರೆ.
ಮಾತು ಮುಂದುವರೆಸಿದ ಕಮಲ್ ಹಾಸನ್ "ಒಂದೇ ಬಿಸ್ಕೆಟ್ ಮುರಿದು ಇಬ್ಬರಿಗೂ ಕೊಡ್ತಿದ್ರು. ಒಬ್ಬರಿಗೊಂದು ಬಿಸ್ಕೆಟ್ ಬೇಕು ಎಂದು ಆಸೆ ಪಟ್ಟೆವು. ಅದನ್ನು ತಗೊಂಡು ಚೆನ್ನಾಗಿ ತಿಂದ್ವಿ. ಈಗ ಮತ್ತೆ ಅರ್ಧ ಬಿಸ್ಕೆಟ್ ಸಾಕು. ಅದರಲ್ಲೇ ಸಂತೋಷ ಇದೆ. ಹಾಗಾಗಿ ನಾವಿಬ್ಬರು ಒಟ್ಟಿಗೆ ಕೈಜೋಡಿಸುತ್ತಿದ್ದೇವೆ. ನಮ್ಮಿಬ್ಬರ ನಡುವೆ ಯಾವುದೇ ಪೈಪೋಟಿ ಇಲ್ಲ. ಅದನ್ನು ನೀವು ಏರ್ಪಡಿಸಿದ್ದು. ನಮಗೆ ಅದೆಲ್ಲಾ ಇಲ್ಲ, ನಮಗೆ ಅವಕಾಶ ಸಿಕ್ಕಿದ್ದೇ ಹೆಚ್ಚು. ನಾವಿಬ್ಬರು ಹೀಗೆ ಇರೋಣ ಎಂದುಕೊಂಡೆವು. ಯಾವಾಗಲೋ ನಡೆಯಬೇಕಿದ್ದದ್ದು ಈಗ ನಡೆಯುತ್ತಿದೆ, ಸರಿ" ಎಂದು ವಿವರಿಸಿದ್ದಾರೆ.
ಇನ್ನು ಈ ಮೆಗಾ ಮಲ್ಟಿಸ್ಟಾರರ್ ಚಿತ್ರವನ್ನು ಕಮಲ್ ತಮ್ಮದೇ ಬ್ಯಾನರ್ ಅಡಿಯಲ್ಲಿ ನಿರ್ಮಾಣ ಮಾಡುತ್ತಾರೆ ಎನ್ನುವ ಮಾತುಗಳು ಕೇಳಿಬರ್ತಿದೆ. ದಶಕಗಳ ಹಿಂದೆ ಒಟ್ಟಿಗೆ ಸಿನಿಮಾಗಳಲ್ಲಿ ನಟಿಸುತ್ತಿದ್ದ ಇಬ್ಬರೂ ಅದೊಂದು ಕಾರಣಕ್ಕೆ ಬ್ರೇಕ್ ಹಾಕಿದ್ದರು. ಸುದ್ದಿಗೋಷ್ಠಿ ಕರೆದು ಇನ್ನು ಮುಂದೆ ನಾವಿಬ್ಬರು ಒಟ್ಟಿಗೆ ಸಿನಿಮಾಗಳಲ್ಲಿ ನಟಿಸುವುದಿಲ್ಲ ಎಂದು ಘೋಷಿಸಿಬಿಟ್ಟಿದ್ದರು. ಬಳಿಕ ಎಂದೂ ಜೊತೆಯಾಗಲಿಲ್ಲ. '2.O' ಚಿತ್ರದಲ್ಲಿ ಅಕ್ಷಯ್ ಕುಮಾರ್ ಮಾಡಿದ್ದ ಪಕ್ಷಿರಾಜನ್ ಪಾತ್ರ ಕಮಲ್ ಮಾಡಬೇಕಿತ್ತು. ಆಗಲೂ ಅವರು ಒಪ್ಪಿರಲಿಲ್ಲ.
ಅಷ್ಟಕ್ಕೂ ಏನಿದು ಕಮಲ್ ಹೇಳಿದ ಬಿಸ್ಕೆಟ್ ಕಥೆ ಎಂದು ಕೆಲವರಿಗೆ ಅನ್ನಿಸಿರಬಹುದು. ಕೆಲ ದಿನಗಳ ಹಿಂದೆ ಸಂದರ್ಶನವೊಂದರಲ್ಲಿ ಅವರೇ ಈ ಬಗ್ಗೆ ಮಾತನಾಡಿದ್ದರು. ರಜನಿಕಾಂತ್ ಹಾಗೂ ಕಮಲ್ ಒಟ್ಟಿಗೆ ನಟಿಸುತ್ತೀರಾ ಎನ್ನುವ ಒಂದೇ ಒಂದೇ ಕಾರಣಕ್ಕೆ ಇಬ್ಬರಿಗೂ ಸಂಭಾವನೆ ಕಮ್ಮಿ ಕೊಡುತ್ತಿದ್ದರು. ಆದರೆ ಅದು ಇಷ್ಟವಿರಲಿಲ್ಲ. ಹಾಗಾಗಿ ಮುಂದೆ ಜೊತೆಯಾಗಿ ನಟಿಸೋದು ಬೇಡ ಎಂದು ನಿರ್ಧರಿಸಿದ್ದಾಗಿ ಕಮಲ್ ಹೇಳಿದ್ದರು.
"ಆ ಕಾಲದಲ್ಲಿ ನನ್ನ ಸಂಭಾವನೆ 2.50 ಲಕ್ಷ ರೂ. ಇತ್ತು. ಒಬ್ಬ ನಿರ್ಮಾಪಕರು 'ನೀವು ಹಾಗೂ ರಜನಿಕಾಂತ್ ಒಟ್ಟಿಗೆ ನಟಿಸಬೇಕು. ನಿಮಗೆ 1.75 ಲಕ್ಷ ರೂ. ಸಂಭಾವನೆ ಕೊಡುತ್ತೇನೆ' ಎಂದು ಒಪ್ಪಿಸಿದ್ರು. ಬಳಿಕ ರಜನಿ ಬಳಿ ನಿನಗೆ ಎಷ್ಟು ಸಂಭಾವನೆ ಕೊಟ್ರು ಅಂತ ಕೇಳ್ದೆ. 1 ಲಕ್ಷ ರೂ. ಅಂದ್ರು. ಅದರರ್ಥ 25 ಲಕ್ಷ ರೂ. ಹೆಚ್ಚು ಕೊಟ್ಟು ನಮ್ಮಿಬ್ಬರನ್ನು ಚಿತ್ರಕ್ಕೆ ಬಳಸಿಕೊಂಡಿದ್ರು. ಹೀಗೆ ಇಬ್ಬರನ್ನು ಕಮ್ಮಿ ಸಂಭಾವನೆಗೆ ಒಪ್ಪಿಸಿದ್ರೆ ಕಷ್ಟ ಎಂದು ಮುಂದೆ ಒಟ್ಟಿಗೆ ನಟಿಸೋದು ಬೇಡ ಎಂದು ಇಬ್ಬರೂ ನಿರ್ಧರಿಸಿದ್ದೆವು" ಎಂದು ಕಮಲ್ ಹೇಳಿದ್ದರು.
ಹೆಚ್ಚು ಕಡಿಮೆ ಒಟ್ಟೊಟ್ಟಿಗೆ ಕಮಲ್, ರಜನಿ ಚಿತ್ರರಂಗಕ್ಕೆ ಬಂದಿದ್ದರು. 'ಅಪೂರ್ವ ರಾಗಂಗಳ್' ಚಿತ್ರದ ಮೂಲಕ ಇಬ್ಬರ ಸ್ನೇಹ ಶುರುವಾಗಿತ್ತು. ಬಳಿಕ 15ಕ್ಕೂ ಹೆಚ್ಚು ಸಿನಿಮಾಗಳಲ್ಲಿ ತೆರೆ ಹಂಚಿಕೊಂಡಿದ್ದರು.


Click it and Unblock the Notifications











