ತೂತುಕುಡಿ ಘಟನೆ: ಪೊಲೀಸರ ವರ್ತನೆ ವಿರುದ್ಧ ಕಿಡಿಕಾರಿದ ರಜನಿಕಾಂತ್
ತಮಿಳುನಾಡಿನ ತೂತುಕುಡಿಯಲ್ಲಿ ಪೊಲೀಸರ ವಶದಲ್ಲಿ ತಂದೆ ಮತ್ತು ಮಗ ಇಬ್ಬರೂ ಮೃತಪಟ್ಟ ಘಟನೆ ದೇಶದಾದ್ಯಂತ ಆಕ್ರೋಶಕ್ಕೆ ತುತ್ತಾಗಿದೆ. ಕ್ಷುಲ್ಲಕ ಕಾರಣಕ್ಕೆ ತಂದೆ ಮತ್ತು ಮಗನನ್ನು ಬಂಧಿಸಿದ್ದಲ್ಲದೆ, ರಾತ್ರಿಯಿಡೀ ಅಮಾನುಷವಾಗಿ ಥಳಿಸಿ ಅವರು ಸಾಯುವಂತೆ ಮಾಡಿದ ಕ್ರೂರ ಕೃತ್ಯವನ್ನು ಖಂಡಿಸಿರುವ ಅನೇಕ ಸೆಲೆಬ್ರಿಟಿಗಳು, ಬಲಿಪಶುಗಳ ಕುಟುಂಬಕ್ಕೆ ನ್ಯಾಯ ಒದಗಿಸುವಂತೆ ಒತ್ತಾಯಿಸುತ್ತಿದ್ದಾರೆ. ಘಟನೆ ನಡೆದ ಬಹು ದಿನಗಳ ಬಳಿಕ ನಟ ರಜನಿಕಾಂತ್ ಟ್ವಿಟ್ಟರ್ನಲ್ಲಿ ಈ ಘಟನೆ ಬಗ್ಗೆ ತಮ್ಮ ಸಿಟ್ಟು ವ್ಯಕ್ತಪಡಿಸಿದ್ದಾರೆ.
Recommended Video
ಸೌಮ್ಯ ಸ್ವಭಾವದ ರಜನಿಕಾಂತ್, ಕೋಪಗೊಂಡಿರುವ ತಮ್ಮ ಫೋಟೊವೊಂದನ್ನು ಹಂಚಿಕೊಂಡಿದ್ದು, ತಂದೆ ಮತ್ತು ಮಗನನ್ನು ಹೊಡೆದು ಹಿಂಸಿಸಿ ಸಾಯುವಂತೆ ಮಾಡಿದ ಪೊಲೀಸರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು. ಅವರನ್ನು ಶಿಕ್ಷೆಗೆ ಒಳಪಡಿಸಬೇಕು ಎಂದು ತಲೈವಾ ಆಗ್ರಹಿಸಿದ್ದಾರೆ.
ಈ ಪ್ರಕರಣದ ತನಿಖೆ ನಡೆಸುತ್ತಿರುವ ಮ್ಯಾಜಿಸ್ಟ್ರೇಟ್ ಎದುರೂ ಪೊಲೀಸರು ಅನುಚಿತವಾಗಿ ವರ್ತಿಸಿದ್ದಾರೆ. ಇದು ನಿಜಕ್ಕೂ ಆಘಾತಕಾರಿ ಎಂದು ಹೇಳಿದ್ದಾರೆ. ಮುಂದೆ ಓದಿ...

ಪೊಲೀಸರನ್ನು ಸುಮ್ಮನೆ ಬಿಡಬಾರದು
'ಅಪ್ಪ ಹಾಗೂ ಮಗನನ್ನು ಕ್ರೂರವಾಗಿ ಹಿಂಸಿಸಿ ಕೊಂದ ಘಟನೆಯ ವಿರುದ್ಧ ನಾಗರಿಕರು ಪ್ರತಿಭಟನೆ ಮತ್ತು ಆಕ್ರೋಶ ಹೊರಹಾಕಿರುವುದು ತಿಳಿದಿದ್ದರೂ ಪೊಲೀಸ್ ಠಾಣೆಯಲ್ಲಿ ತನಿಖೆ ನಡೆಸುತ್ತಿರುವ ಮ್ಯಾಜಿಸ್ಟ್ರೇಟ್ ಮುಂದೆಯೇ ಕೆಲವು ಪೊಲೀಸ್ ಅಧಿಕಾರಿಗಳ ವರ್ತನೆ ಮತ್ತು ಮಾತುಗಳನ್ನು ಕೇಳಿ ಆಘಾತವಾಯಿತು. ಈ ಪ್ರಕರಣದಲ್ಲಿ ಭಾಗಿಯಾದ ಎಲ್ಲ ಪೊಲೀಸರನ್ನೂ ಸೂಕ್ತ ರೀತಿಯಲ್ಲಿ ಶಿಕ್ಷಿಸಬೇಕು. ಅವರನ್ನು ಬಿಡಬಾರದು' ಎಂದು ರಜನಿ ಹೇಳಿದ್ದಾರೆ.

ಕುಟುಂಬದವರಿಗೆ ಸಾಂತ್ವನ
ಕಳೆದ ವಾರ ರಜನಿಕಾಂತ್, ಪೊಲೀಸರ ಕೃತ್ಯಕ್ಕೆ ಬಲಿಯಾದ ಜೆಯರಾಜ್ ಅವರ ಪತ್ನಿ ಜೆ. ಸೆಲ್ವರಾಣಿ ಅವರೊಂದಿಗೆ ಮಾತನಾಡಿ ಕುಟುಂಬಕ್ಕೆ ಧೈರ್ಯ ತುಂಬಿದ್ದರು. ದುಃಖದಲ್ಲಿರುವ ಜೆಯರಾಜ್ ಮತ್ತು ಫೆನಿಕ್ಸ್ ಕುಟುಂಬದವರೊಂದಿಗೆ ಮಾತನಾಡಿ ಸಾಂತ್ವನ ಹೇಳಿದ್ದರು.

ಪಶ್ಚಾತ್ತಾಪಪಟ್ಟಿದ್ದ ನಿರ್ದೇಶಕ
ಪೊಲೀಸರನ್ನು ವೈಭವೀಕರಿಸುವಂತಹ 'ಸಿಂಗಂ' ಮತ್ತು 'ಸಾಮಿ' ಸರಣಿಯ ಚಿತ್ರಗಳನ್ನು ಮಾಡಿದ್ದಕ್ಕಾಗಿ ನಿರ್ದೇಶಕ ಹರಿ ಇತ್ತೀಚೆಗೆ ಖೇದ ವ್ಯಕ್ತಪಡಿಸಿದ್ದರು. ಪೊಲೀಸರನ್ನು ಕೊಂಡಾಡುವಂತಹ ಸಿನಿಮಾಗಳನ್ನು ಮಾಡಿದ್ದೆ. ಆದರೆ ಈ ಘಟನೆಯ ಬಳಿಕ ಆ ಐದು ಸಿನಿಮಾಗಳನ್ನು ಮಾಡಬಾರದಿತ್ತು ಎಂದು ಪಶ್ಚಾತ್ತಾಪವಾಗುತ್ತಿದೆ ಎಂದಿದ್ದರು.

ಲಾಕಪ್ನಲ್ಲಿ ಥಳಿಸಿದ್ದರಿಂದ ಸಾವು
ಲಾಕ್ ಡೌನ್ ಸಮಯದಲ್ಲಿ ಅನುಮತಿ ಮುಗಿದು 15 ನಿಮಿಷಗಳು ಕಳೆದರೂ ಮೊಬೈಲ್ ಅಂಗಡಿ ತೆರೆದಿದ್ದ ಆರೋಪದಲ್ಲಿ ಜೆಯರಾಜ್ ಮತ್ತು ಅವರ ಮಗ ಫೆನಿಕ್ಸ್ ಅವರನ್ನು ವಶಕ್ಕೆ ಪಡೆದಿದ್ದ ಪೊಲೀಸರು ಲಾಕಪ್ನಲ್ಲಿ ಹಾಕಿ ಅಮಾನುಷವಾಗಿ ಥಳಿಸಿದ್ದರು ಎನ್ನಲಾಗಿದೆ. ತೀವ್ರ ಗಾಯಗೊಂಡಿದ್ದ ಫೆನಿಕ್ಸ್ ಜೂನ್ 22ರಂದು ಕೋವಿಲ್ಪಟ್ಟಿ ಜನರಲ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರೆ, ಅವರ ತಂದೆ ಜೆಯರಾಜ್ ಜೂನ್ 23ರಂದು ಕೊನೆಯುಸಿರೆಳೆದಿದ್ದರು.


Click it and Unblock the Notifications











