ದಕ್ಷಿಣ ಭಾರತ ಚಿತ್ರರಂಗದ ದೈತ್ಯ ಪ್ರತಿಭೆ ಪುಟ್ಟಣ್ಣ ಕಣಗಾಲ್ ಶಿಷ್ಯ ನಿರ್ದೇಶಕ ಭಾರತಿರಾಜ ಇನ್ನಿಲ್ಲ
ದಕ್ಷಿಣ ಭಾರತ ಕಂಡ ಜನಪ್ರಿಯ ನಿರ್ದೇಶಕ ಹಾಗೂ ನಟ ಭಾರತಿರಾಜ ಇಂದು (ಜೂನ್ 10) ಚೆನ್ನೈನಲ್ಲಿ ನಿಧನರಾಗಿದ್ದಾರೆ. ಕಳೆದ ಕೆಲವು ದಿನಗಳಿಂದ ಅವರು ವಯೋಸಹಜ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದರು. ಹೀಗಾಗಿ ಅವರಿಗೆ ಚೆನ್ನೈನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ನೀಡಲಾಗುತ್ತಿತ್ತು. ಆದರೆ, ಚಿಕಿತ್ಸೆ ಫಲಿಸದೆ ಇಂದು ಕೊನೆಯುಸಿರೆಳೆದಿದ್ದಾರೆ. ಭಾರತಿರಾಜ ಅವರ ನಿಧನಕ್ಕೆ ಇಡೀ ದಕ್ಷಿಣ ಭಾರತೀಯ ಚಿತ್ರರಂಗದ ಗಣ್ಯರು ಹಾಗೂ ಅಭಿಮಾನಿಗಳು ತೀವ್ರ ಕಂಬನಿ ಮಿಡಿದಿದ್ದಾರೆ.
ತಮಿಳು ಚಿತ್ರರಂಗದಲ್ಲಿ ಹಲವು ಎವರ್ಗ್ರೀನ್ ಸಿನಿಮಾಗಳನ್ನು ನೀಡಿರುವ ಭಾರತಿರಾಜ ಅವರನ್ನು 'ಇಯಕ್ನುನರ್ ಇಮಯಮ್' (ನಿರ್ದೇಶಕರ ಶಿಖರ) ಎಂದೇ ಕರೆಯುತ್ತಿದ್ದರು. ಭಾರತಿರಾಜ ಅವರಿಗೆ 84 ವರ್ಷ ವಯಸ್ಸಾಗಿತ್ತು. ಇತ್ತೀಚೆಗಷ್ಟೇ ತಮ್ಮ ಮಗನನ್ನು ಕಳೆದುಕೊಂಡಿದ್ದರು. ಇದು ಅವರನ್ನು ಮಾನಸಿಕವಾಗಿ ಆಘಾತ ಉಂಟು ಮಾಡಿತ್ತು. ವಯೋ ಸಹಜ ಆರೋಗ್ಯ ಸಮಸ್ಯೆ ಜೊತೆಗೆ ಮಗನ ಸಾವಿನ ನೋವು ಚೇತರಿಸಿಕೊಳ್ಳಲಾಗದೆ ಕೊನೆಯುಸಿರೆಳೆದಿದ್ದಾರೆ. ಅವರ ನಿಧನ ಇಡೀ ಕಾಲಿವುಡ್ ಹಾಗೂ ದಕ್ಷಿಣ ಭಾರತೀಯ ಚಿತ್ರರಂಗವನ್ನು ತೀವ್ರ ಶೋಕದಲ್ಲಿ ಮುಳುಗಿಸಿದೆ.

ಮಗನ ಸಾವಿನಿಂದ ನೊಂದಿದ್ದ ಭಾರತಿರಾಜ
ದಕ್ಷಿಣ ಭಾರತದ ಲೆಜೆಂಡರಿ ನಿರ್ದೇಶ ಭಾರತಿರಾಜ ಅವರ ಪುತ್ರ ಮನೋಜ್ ಕಳೆದ ವರ್ಷ ಅನಾರೋಗ್ಯದಿಂದ ನಿಧನರಾಗಿದ್ದರು. ಮನೋಜ್ ಕೂಡ ನಟ ಹಾಗೂ ನಿರ್ದೇಶಕರಾಗಿ ಗುರುತಿಸಿಕೊಂಡಿದ್ದರು. ಮಗನ ಸಾವು ಅವರನ್ನು ಇನ್ನಷ್ಟು ಕುಗ್ಗುವಂತೆ ಮಾಡಿತ್ತು. ಮಾನಸಿಕ ಖಿನ್ನತೆ ಹಾಗೂ ನೋವಿಗೆ ಒಳಗಾಗಿದ್ದ ಭಾರತಿರಾಜ ಅವರ ಆರೋಗ್ಯ ಇಲ್ಲಿಂದ ಮತ್ತಷ್ಟು ಹದಗೆಡುತ್ತ ಹೋಗಿತ್ತು.
ಭಾರತಿರಾಜ ಅವರ ಆರೋಗ್ಯ ಹದಗೆಟ್ಟ ಹಿನ್ನೆಲೆಯಲ್ಲಿ ಅವರನ್ನು ಚೆನ್ನೈನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ತೀವ್ರ ನಿಗಾದಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಚಿಕಿತ್ಸೆ ಬಳಿಕ ಸ್ವಲ್ಪ ಮಟ್ಟಿಗೆ ಚೇತರಿಸಿಕೊಂಡಿದ್ದರು. ಬಳಿಕ ಅವರನ್ನುನೀಲಾಂಗರೈನಲ್ಲಿರುವ ಅವರ ನಿವಾಸಕ್ಕೆ ಕರೆದುಕೊಂಡು ಬರಲಾಗಿತ್ತು. ಕುಟುಂಬಸ್ಥರು ಹಾಗೂ ಅಭಿಮಾನಿಗಳು ಕೊಂಚ ಮಟ್ಟಿಗೆ ನಿರಾಳರಾಗಿದ್ದರು. ಆದರೆ, ಇಂದು (ಜೂನ್ 10) ಮುಂಜಾನೆ ಇದ್ದಕ್ಕಿದ್ದಂತೆ ಅವರ ಆರೋಗ್ಯದಲ್ಲಿ ಏರು-ಪೇರಾಗಿತ್ತು. ಕೊನೆಗೆ ಚಿಕಿತ್ಸೆ ಫಲಕಾರಿಯಾಗದೆ ಅವರು ಕೊನೆಯುಸಿರೆಳೆದಿದ್ದಾರೆ.
ಪುಟ್ಟಣ್ಣ ಕಣಗಾಲ್ ಶಿಷ್ಯ
ಭಾರತಿರಾಜ ಇಂಡಿಪೆಂಡೆಂಟ್ ಡೈರೆಕ್ಟರ್ ಆಗಿ ಕೆಲಸ ಮಾಡುವುದಕ್ಕೂ ಮುನ್ನ ಮತ್ತೊಬ್ಬ ಲೆಜೆಂಡರಿ ನಿರ್ದೇಶಕ ಪುಟ್ಟಣ್ಣ ಕಣಗಾಲ್ ಬಳಿ ಸಹಾಯಕ ನಿರ್ದೇಶಕರಾಗಿದ್ದರು. ಪುಟ್ಟಣ್ಣ ಕಣಗಾಲ್ ಅವರ ನಿರ್ದೇಶನದ ಶೈಲಿಯನ್ನು ಮೆಚ್ಚಿಕೊಂಡಿದ್ದರು. ಅವರಿಂದ ಸಿನಿಮಾ ಮೇಕಿಂಗ್ ಕಲಿತು ಭಾರತಿರಾಜ ಸ್ವತಂತ್ರ ನಿರ್ದೇಶಕರಾಗಿ ಹೊರ ಹೊಮ್ಮಿದ್ದರು.
ಎವರ್ಗ್ರೀನ್ ಸಿನಿಮಾಗಳಿಗೆ ಆಕ್ಷನ್ ಕಟ್
1977ರ ಸೂಪರ್ ಹಿಟ್ ತಮಿಳು ಸಿನಿಮಾ '16 ವಯತಿನಿಲೆ' (16 Vayathinile) ಭಾರತಿರಾಜ ನಿರ್ದೇಶಿಸಿದ್ದ ಚೊಚ್ಚಲ ಸಿನಿಮಾ. ಈ ಸಿನಿಮಾದಲ್ಲಿ ಕಮಲ್ ಹಾಸನ್, ರಜನಿಕಾಂತ್ ಹಾಗೂ ಶ್ರೀದೇವಿ ನಟಿಸಿದ್ದರು. 'ಕಿಲಕ್ಕೆ ಪೋಗಮ್ ರೈಲ್', 'ಸಿಗಪ್ಪು ರೋಜಕ್ಕಲ್', 'ಮುದಲ್ ಮರಿಯಾದೈ' ಹಾಗೂ 'ವೇದಂ ಪುದಿದು' ಅಂತಹ ಸಿನಿಮಾಗಳು ಭಾರೀ ಯಶಸ್ಸು ಕಂಡಿದ್ದವು. ನಿರ್ದೇಶಕನಾಗಿ ಅಷ್ಟೇ ಅಲ್ಲದೆ, ನಟನಾಗಿಯೂ ಗುರುತಿಸಿಕೊಂಡಿದ್ದ ಇವರಿಗೆ 6 ರಾಷ್ಟ್ರ ಪ್ರಶಸ್ತಿಗಳು ಹಾಗೂ ದೇಶದ ಪ್ರತಿಷ್ಠಿತ 'ಪದ್ಮಶ್ರೀ' ಗೌರವ ಸಂದಿದೆ.
ಅಂತಿಮ ಸಂಸ್ಕಾರ
ಭಾರತಿರಾಜ ಅವರ ಅಂತಿಮ ವಿಧಿವಿಧಾನಗಳನ್ನು ಚೆನ್ನೈನ ನೀಲಾಂಗರೈನಲ್ಲಿರುವ ಅವರ ನಿವಾಸದಲ್ಲಿ ನಡೆಯಲಿದೆ ಎಂದು ವರದಿಯಾಗಿದೆ. ಚಿತ್ರರಂಗದ ಪ್ರಮುಖ ಗಣ್ಯರು, ನಟ-ನಟಿಯರು ಮತ್ತು ತಮಿಳುನಾಡಿನ ದಿಗ್ಗಜರು ಅವರ ನಿವಾಸಕ್ಕೆ ಆಗಮಿಸಿ ಅಂತಿಮ ದರ್ಶನ ಪಡೆಯುತ್ತಿದ್ದಾರೆ. ದಕ್ಷಿಣ ಭಾರತೀಯ ಚಿತ್ರರಂಗದ ಒಂದು ಸುವರ್ಣ ಯುಗ ಇಂದಿಗೆ ಮುಗಿದಂತಾಗಿದೆ.


Click it and Unblock the Notifications