ವರಲಕ್ಷ್ಮಿ ಶರತ್ಕುಮಾರ್ ಆರತಕ್ಷತೆ: ಕುಟುಂಬ ಸಮೇತ ತೆರಳಿ ಶುಭ ಕೋರಿದ ಕಿಚ್ಚ ಸುದೀಪ್
ತಮಿಳಿ ಹಿರಿಯ ನಟ ಶರತ್ಕುಮಾರ್ ಪುತ್ರಿ ವರಲಕ್ಷ್ಮಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಬಹುದಿನ ಗೆಳೆಯ ಹಾಗೂ ಮುಂಬೈ ಮೂಲದ ಉದ್ಯಮಿ ನಿಕೊಲಾಯ್ ಸಚ್ದೇವ್ ಅವರೊಂದಿಗೆ ಸಪ್ತಪದಿ ತುಳಿದಿದ್ದರು. ಥಾಯ್ಲೆಂಡ್ನಲ್ಲಿ ಕೇವಲ ಕುಟುಂಬಸ್ಥರು ಹಾಗೂ ಆತ್ಮೀಯರು ಮಾತ್ರ ಭಾಗವಹಿಸಿದ್ದರು. ಈ ಬೆನ್ನಲ್ಲೇ ನಿನ್ನೆ (ಜುಲೈ 3) ಚೆನ್ನೈನಲ್ಲಿ ಆರತಕ್ಷತೆಯನ್ನು ಹಮ್ಮಿಕೊಳ್ಳಲಾಗಿತ್ತು.
ವರಲಕ್ಷ್ಮಿ ಶರತ್ಕುಮಾರ್ ಹಾಗೂ ನಿಕೊಲಾಯ್ ಸಚ್ದೇವ್ ಆರತಕ್ಷತೆಯಲ್ಲಿ ಚಿತ್ರರಂಗ ಹಾಗೂ ರಾಜಕೀಯ ಕ್ಷೇತ್ರದ ಗಣ್ಯರು ಆಗಮಿಸಿದ್ದರು. ಅದ್ಧೂರಿಯಾಗಿ ನಡೆದ ಆರತಕ್ಷತೆಯಲ್ಲಿ ದಕ್ಷಿಣ ಭಾರತದ ಚಿತ್ರರಂಗವೇ ನೆರೆದಿತ್ತು. ಈ ಆರತಕ್ಷತೆಗೆ ಕಿಚ್ಚು ಸುದೀಪ್ ಕೂಡ ಭಾಗವಹಿಸಿದ್ದರು. ಪತ್ನಿ ಪ್ರಿಯಾ ಹಾಗೂ ಪುತ್ರಿ ಸಾನ್ವಿ ಕೂಡ ಸುದೀಪ್ಗೆ ಸಾಥ್ ಕೊಟ್ಟಿದ್ದಾರೆ.

ವರಲಕ್ಷ್ಮಿ ಶರತ್ಕುಮಾರ್ ದಕ್ಷಿಣ ಭಾರತದ ಎಲ್ಲಾ ಭಾಷೆಯ ಸಿನಿಮಾಗಳಲ್ಲಿಯೂ ನಟಿಸಿದ್ದಾರೆ. ಕನ್ನಡದಲ್ಲಿಯೂ ಸುಮಾರು ನಾಲ್ಕೈದು ಸಿನಿಮಾಗಳಲ್ಲಿ ನಟಸಿದ್ದು, ಸುದೀಪ್ ಜೊತೆನೇ ಹೆಚ್ಚಾಗಿ ನಟಿಸಿರುವುದು ವಿಶೇಷ. 'ಮಾಣಿಕ್ಯ', 'ರನ್ನ', 'ವಿಸ್ಮಯ', 'ರಣಂ' ಅಂತ ಕನ್ನಡ ಸಿನಿಮಾಗಳಲ್ಲಿ ನಟಿಸಿದ್ದಾರೆ. ಸದ್ಯ ಕಿಚ್ಚ ಸುದೀಪ್ ನಟಿಸುತ್ತಿರುವ ಮ್ಯಾಕ್ಸ್ ಸಿನಿಮಾದಲ್ಲಿ ನಟಿಸುತ್ತಿದ್ದು, ಈ ಬಗ್ಗೆ ಹೆಚ್ಚಿನ ಮಾಹಿತಿ ಚಿತ್ರತಂಡ ನೀಡಿಲ್ಲ.
ಅಂದ್ಹಾಗೆ ತಮಿಳಿನ ಹಿರಿಯ ನಟ ಶರತ್ಕುಮಾರ್ ಅವರ ಮೊದಲ ಪತ್ನಿ ಸಯಾ ಅವರಿಗೆ ಜನಿಸಿದವರೇ ವರಲಕ್ಷ್ಮಿ. ಮೊದಲ ಪತ್ನಿಗೆ ವಿಚ್ಛೇದನ ನೀಡಿದ ಬಳಿಕ ನಟಿ ರಾಧಿಕಾರನ್ನು ವಿವಾಹವಾಗಿದ್ದರು. ಆದರೂ, ರಾಧಿಕಾ ಶರತ್ ಕುಮಾರ್ ಹಾಗೂ ವರಲಕ್ಷ್ಮಿ ನಡುವಿನ ಸಂಬಂಧ ಚೆನ್ನಾಗಿಯೇ ಇದೆ. ಹೀಗಾಗಿ ರಾಧಿಕಾ ಅವರೇ ಮುಂದೆ ನಿಂತು ಮದುವೆಯನ್ನು ನಡೆಸಿಕೊಟ್ಟಿದ್ದಾರೆ.
ತಮಿಳಿನ 'ಪೋಡಾ ಪೋಡಿ' ಸಿನಿಮಾ ಮೂಲಕ ವರಲಕ್ಷ್ಮಿ ಶರತ್ ಕುಮಾರ್ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದರು. ಅಲ್ಲಿಂದ ಇಲ್ಲಿವರೆಗೂ ಸಿನಿಮಾಗಳಲ್ಲಿ ನಟಿಸುತ್ತಲೇ ಬಂದಿದ್ದಾರೆ. ನಾಯಕಿಯಾಗಿ ನಟಿಸಿದ್ದರೂ ಅಲ್ಪ ಪ್ರಮಾಣದ ಯಶಸ್ಸು ಸಿಕ್ಕಿತ್ತು. ಆದರೆ, ಕೆಲವು ಸಿನಿಮಾಗಳಲ್ಲಿ ನೆಗೆಟಿವ್ ಶೇಡ್ಗಳಲ್ಲಿ ಕಾಣಿಸಿಕೊಂಡಿದ್ದರು. ಈ ಸಿನಿಮಾಗಳಿಗೆ ಯಶಸ್ಸು ಸಿಕ್ಕಿತ್ತು. ಈ ಬೆನ್ನಲ್ಲೇ ವರಲಕ್ಷ್ಮಿ ಶರತ್ಕುಮಾರ್ಗೆ ಅಂತಹದ್ದೇ ಹೆಚ್ಚು ಆಫರ್ಗಳು ಸಿಗುತ್ತಿವೆ.
ಈಗ ವೈವಾಹಿಕ ಜೀವನಕ್ಕೆ ಕಾಲಿಟ್ಟಿರುವ ವರಲಕ್ಷ್ಮಿ ಶರತ್ಕುಮಾರ್ ಮುಂದಿನ ಸಿನಿ ಜರ್ನಿ ಹೇಗಿರುತ್ತೆ ಅನ್ನೋ ಕುತೂಹಲವಿದೆ. ಚೆನ್ನೈನಲ್ಲಿ ನಡೆದ ಅದ್ಧೂರಿ ಆರತಕ್ಷತೆಯಲ್ಲಿ ತಮಿಳು, ತೆಲುಗು, ಕನ್ನಡ ಚಿತ್ರರಂಗದ ಗಣ್ಯರೇ ಹೆಚ್ಚಾಗಿ ಭಾಗಿವಹಿಸಿದ್ದರು. ನಿರ್ದೇಶಕ ಬಾಲಾ, ನಟ ಜೀವಾ, ನಟಿ ರೋಜಾ, ನಿರ್ದೇಶಕ ಆರ್.ಕೆ.ಸೆಲ್ವಮಣಿ, ನಿರ್ದೇಶಕ ಹರಿ, ನಟ ವಿಜಯಕುಮಾರ್, ನಟ ಬಾಲಕೃಷ್ಣ, ನಟಿ ಆಂಡ್ರಿಯಾ, ನಿರ್ದೇಶಕ ಕೆ.ಎಸ್.ರವಿಕುಮಾರ್, ನಟ ಶಿವಕುಮಾರ್, ಶೋಭಾ, ಸುಂದರ್ ಸಿ. ಖುಷ್ಬೂ, ನಿರ್ದೇಶಕ ಎ.ಎಲ್.ವಿಜಯ್, ಮಣಿರತ್ನಂ, ಸುಹಾಸಿನಿ, ಜಾಕಿ ಶ್ರಾಫ್ ಸೇರಿದಂತೆ ಚಿತ್ರರಂಗದ ಹಲವು ಗಣ್ಯರು ಬಂದು ಶುಭ ಕೋರಿದ್ದಾರೆ.
ಇವರ ಮದುವೆಯಲ್ಲಿ ರಾಜಕೀಯ ಗಣ್ಯರು ಕೂಡ ಆಗಮಿಸಿದ್ದರು. ಆರತಕ್ಷತೆಯಲ್ಲಿ ವರಲಕ್ಷ್ಮಿ ಶರತ್ಕುಮಾರ್ ಮೆರೂನ್ ಬಣ್ಣದ ಗೌನ್ ಧರಿಸಿದ್ದರೆ, ನಿಕೊಲಾಯ್ ಸಚ್ದೇವ್ ಅದೇ ಬಣ್ಣದ ಶೇರ್ವಾನಿಯಲ್ಲಿ ಮಿಂಚಿದ್ದರು. ತಮಿಳುನಾಡು ಮುಖ್ಯಮಂತ್ರಿ ಎಂ. ಸ್ಟಾಲಿನ್, ಸಚಿವರಾದ ಉದಯನಿಧಿ ಸ್ಟಾಲಿನ್, ಎಂ.ಪಿ. ದಯಾನಿಧಿ ಮಾರನ್, ತಮಿಳುನಾಡು ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ಕೂಡ ಈ ಮದುವೆಗೆ ಆಗಮಿಸಿದ್ದರು.


Click it and Unblock the Notifications











