Rajini-Yogi Adityanath: UP ಸಿಎಂ ಯೋಗಿ ಆದಿತ್ಯನಾಥ್ ಭೇಟಿಯಾದ ರಜನಿಕಾಂತ್.. ಕಾಲಿಗೆ ಬಿದ್ದ ತಲೈವಾ!
ಸೂಪರ್ಸ್ಟಾರ್ ರಜನಿಕಾಂತ್ 'ಜೈಲರ್' ಗೆದ್ದ ಖುಷಿಯಲ್ಲಿದ್ದಾರೆ. ಸಿನಿಮಾ ಬಿಡುಗಡೆಗೂ ಮುನ್ನವೇ ಹಿಮಾಲಯಕ್ಕೆ ಹೋಗಿ ಧ್ಯಾನ ಮಾಡಿದ್ದಾರೆ. ಕೋವಿಡ್ ಹಿನ್ನೆಲೆಯಲ್ಲಿ ಕಳೆದ ನಾಲ್ಕು ವರ್ಷಗಳಿಂದ ರಜನಿಕಾಂತ್ ಹಿಮಾಲಯಕ್ಕೆ ಹೋಗಿರಲಿಲ್ಲ. ಸದ್ಯ ರಜನಿ 'ಜೈಲರ್' ಯಶಸ್ಸಿನ ಅಲೆಯಲ್ಲಿ ತೇಲುತ್ತಿದ್ದಾರೆ.
ಇದೇ ವೇಳೆ ಉತ್ತರ ಪ್ರದೇಶದ ಲಕ್ನೋದಲ್ಲಿ ಸೂಪರ್ಸ್ಟಾರ್ ರಜನಿಕಾಂತ್ ಅಲ್ಲಿನ ಮುಖ್ಯ ಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು ಭೇಟಿ ಮಾಡಿದ್ದಾರೆ. ಇದೇ ವೇಳೆ " ಉತ್ತರ ಪ್ರದೇಶದ ಮುಖ್ಯ ಮಂತ್ರಿ ಯೋಗಿ ಆದಿತ್ಯನಾಥ್ ಜೊತೆ ಸಿನಿಮಾ ನೋಡುತ್ತೇನೆ. ಸಿನಿಮಾ ಹಿಟ್ ಆಗಿದ್ದು ದೇವರ ಆಶೀರ್ವಾದ" ರಜನಿಕಾಂತ್ ಎಎನ್ಐಗೆ ತಿಳಿಸಿದ್ದಾರೆ.

ಇಂದು (ಆಗಸ್ಟ್ 19) ಬೆಳಗ್ಗೆ ಉತ್ತರ ಪ್ರದೇಶದ ಲಕ್ನೋದಲ್ಲಿ 'ಜೈಲರ್' ಸಿನಿಮಾದ ವಿಶೇಷ ಪ್ರದರ್ಶನವನ್ನು ಆಯೋಜನೆ ಮಾಡಲಾಗಿತ್ತು. ಈ ವಿಶೇಷ ಪ್ರದರ್ಶನದಲ್ಲಿ ಉತ್ತರ ಪ್ರದೇಶದ ಉಪಮುಖ್ಯಮಂತ್ರಿ ಕೇಶವ ಪ್ರಸಾದ್ ಮೌರ್ಯ ಭಾಗಿಯಾಗಿ ಸಿನಿಮಾವನ್ನು ವೀಕ್ಷಣೆ ಮಾಡಿದ್ದಾರೆ.
"ಜೈಲರ್ ಸಿನಿಮಾ ನೋಡುವ ಅವಕಾಶ ನನಗೆ ಸಿಕ್ಕಿದೆ. ನಾನು ರಜನಿಕಾಂತ್ ಅವರ ಹಲವು ಸಿನಿಮಾಗಳನ್ನು ನೋಡಿದ್ದೇನೆ. ಅವರೊಬ್ಬ ಅದ್ಭುತ ಪ್ರತಿಭೆಯುಳ್ಳ ನಟ. ಸಿನಿಮಾದಲ್ಲಿ ವಿಷಯ ಇಲ್ಲದೆ ಇರುವ ಸಂದರ್ಭದಲ್ಲಿಯೂ ರಜನಿ ತಮ್ಮ ಅಭಿನಯದಿಂದಲೇ ಸಿನಿಮಾ ಪ್ರಾಮುಖ್ಯತೆಯನ್ನು ಹೆಚ್ಚಿಸುತ್ತಾರೆ." ಎಂದು ಯುಪಿಯ ಉಪಮುಖ್ಯ ಮಂತ್ರಿ ಕೇಶವ ಪ್ರಸಾದ್ ಮೌರ್ಯ ಹೇಳಿದ್ದಾರೆ.
ಇದೇ ವೇಳೆ ರಜನಿಕಾಂತ್ ಉತ್ತರ ಪ್ರದೇಶದ ರಾಜ್ಯಪಾಲರಾದ ಆನಂದಿಬೇನ್ ಪಟೇಲ್ ಅವರನ್ನು ರಾಜ್ ಭವನದಲ್ಲಿ ಭೇಟಿ ಮಾಡಿದ್ದಾಗಿ ರಾಜ್ಯಪಾಲರ 'ಎಕ್ಸ್' (ಟ್ವಿಟರ್) ಖಾತೆಯಲ್ಲಿ ಪೋಸ್ಟ್ ಮಾಡಲಾಗಿದೆ. ಈ ಸಂದರ್ಭದಲ್ಲಿಯೇ ರಜನಿಕಾಂತ್ ಅಯೋಧ್ಯೆಗೂ ಭೇಟಿ ನೀಡಲಿದ್ದಾರೆ.
ಉತ್ತರ ಪ್ರದೇಶಕ್ಕೆ ಬರುವುದಕ್ಕೂ ಮುನ್ನ ಸೂಪರ್ಸ್ಟಾರ್ ರಜನಿಕಾಂತ್ ಜಾರ್ಖಂಡ್ನಲ್ಲಿ ಇದ್ದರು. ಅಲ್ಲಿನ ಜನಪ್ರಿಯ ಚಿನ್ನಮಸ್ತ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆಯನ್ನು ಸಲ್ಲಿಸಿದ್ದರು. ರಾಂಚಿಯ 'ಯಗೊದ ಆಶ್ರಮ'ದಲ್ಲಿ ಸುಮಾರು ಒಂದು ಗಂಟೆಗಳ ಕಾಲ ಧ್ಯಾನವನ್ನು ಮಾಡಿದ್ದಾರೆ. ಹಾಗೇ ಜಾರ್ಖಂಡ್ನ ರಾಜ್ಯಪಾಲರಾದ ಸಿಪಿ ರಾಧಾಕೃಷ್ಣನ್ ಅವರನ್ನು ರಾಜಭವನದಲ್ಲಿ ಭೇಟಿ ಮಾಡಿದ್ದಾರೆ.
'ಜೈಲರ್' ಸಿನಿಮಾ ಬಾಕ್ಸಾಫೀಸ್ನಲ್ಲಿ ಚಿಂದಿ ಉಡಾಯಿಸುತ್ತಿದೆ. ಇದೂವರೆಗೂ ವಿಶ್ವದಾದ್ಯಂತ ಸುಮಾರು 500 ಕೋಟಿ ರೂ.ಗೂ ಅಧಿಕ ಗಳಿಕೆಯನ್ನು ಕಂಡಿದೆ. ರಜನಿಕಾಂತ್ ಹಾಗೂ ನೆಲ್ಸನ್ ದಿಲೀಪ್ ಕುಮಾರ್ ಮೊದಲ ಕಾಂಬಿನೇಷನ್ ಬಾಕ್ಸಾಫೀಸ್ನಲ್ಲಿ ವರ್ಕ್ಔಟ್ ಆಗಿದೆ.


Click it and Unblock the Notifications











