ತಮಿಳುನಾಡು ರಾಜಕೀಯದಲ್ಲಿ ದಳಪತಿ ಯುಗ ಆರಂಭ; ಪಕ್ಷದ ಹೆಸರು ಘೋಷಿಸಿದ 'ಮಾಸ್ಟರ್'
ತಮಿಳುನಾಡಿನ ರಾಜಕೀಯದಲ್ಲಿ ಹೊಸ ಸಂಚಲನ ಸೃಷ್ಠಿಯಾಗಿದೆ. ಮತ್ತೊಂದು ಸಿನಿಮಾ ನಟ ರಾಜಕೀಯ ಪಕ್ಷ ಕಟ್ಟಿದ್ದು, ತಮಿಳು ರಾಜಕೀಯದಲ್ಲಿ ಹೊಸ ಇತಿಹಾಸ ಸೃಷ್ಟಿಯಾಗಬಹುದೆಂಬ ಲೆಕ್ಕಾಚಾರ ಶುರುವಾಗಿದೆ. ಕಳೆದ ಕೆಲವು ದಿನಗಳಿಂದ ದಳಪತಿ ವಿಜಯ್ ರಾಜಕೀಯಕ್ಕೆ ಎಂಟ್ರಿ ಕೊಡುತ್ತಾರೆಂಬ ಸುದ್ದಿ ಹರಿದಾಡಿತ್ತು. ಅದರಂತೆ ಇಂದು (ಫೆಬ್ರವರಿ 2) ತಮ್ಮ ಹೊಸ ರಾಜಕೀಯ ಪಕ್ಷವನ್ನು ಘೋಷಿಸಿದ್ದಾರೆ.
2024 ಲೋಕಸಭಾ ಚುನಾವಣೆ ಸಮೀಪದಲ್ಲಿರುವಂತೆಯೇ ರಾಜಕೀಯದ ಪಕ್ಷದ ಹೆಸರನ್ನು ಘೋಷಿಸಿದ್ದಾರೆ. ದಳಪತಿ ವಿಜಯ್ ಕಟ್ಟಿರೋ ಹೊಸ ರಾಜಕೀಯ ಪಕ್ಷಕ್ಕೆ 'ತಮಿಳಗ ವೆಟ್ರಿ ಕಳಂ' ಎಂದು ಹೆಸರಿಡಲಾಗಿದೆ. ಈ ಮೂಲಕ ದಳಪತಿ ವಿಜಯ್ ಅಧಿಕೃತವಾಗಿ ರಾಜಕೀಯಕ್ಕೆ ಎಂಟ್ರಿ ಕೊಟ್ಟಂತೆ ಆಗಿದೆ.

ದಳಪತಿ ವಿಜಯ್ ಹೊಸ ರಾಜಕೀಯ ಘೋಷಣೆ ಹಿನ್ನೆಲೆ ಈಗಾಗಲೇ ರಾಜಕೀಯ ಲೆಕ್ಕಾಚಾರಗಳು ಆರಂಭ ಆಗಿವೆ. ಆದರೆ, ವಿಜಯ್ ಈಗಾಗಲೇ ಜನರಲ್ ಹಾಗೂ ಕಾರ್ಯಕಾರಿ ಮಂಡಳಿಯ ಸಭೆ ಬಳಿಕ ಕೆಲವು ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿದೆ. 2024ರ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧೆ ಮಾಡದೆ ಇರಲು ನಿರ್ಧರಿಸಿದ್ದಾರೆ. ಹಾಗೇ ಯಾವುದೇ ರಾಜಕೀಯ ಪಕ್ಷಕ್ಕೂ ಬೆಂಬಲ ಸೂಚಿಸದೆ ಇರುವ ತೀರ್ಮಾನವನ್ನು ಕೈಗೊಳ್ಳಲಾಗಿದೆ ಎಂದು ವರದಿಯಾಗಿದೆ.
ತಮಿಳು ನಟ ದಳಪತಿ ವಿಜಯ್ ರಾಜಕೀಯ ಪಕ್ಷವನ್ನು ಅನೌನ್ಸ್ ಮಾಡಿದ ಬಳಿಕ ಮೂಲಭೂತ ರಾಜಕೀಯ ಬದಲಾವಣೆವನ್ನು ತರಲು ಬದ್ಧರಾಗಿರುವುದಾಗಿ ಹೇಳಿದ್ದಾರೆ. ಪಾರದರ್ಶಕ, ಜಾತ್ಯಾತೀತ ಹಾಗೂ ಭ್ರಷ್ಟಾಚಾರ ರಹಿತ ಆಡಳಿತ ನಡೆಸುವ ಪಣ ತೊಟ್ಟಿರುವುದಾಗಿ ವಿಜಯ್ ಬರೆದ ಬಹಿರಂಗ ಪತ್ರದಲ್ಲಿ ತಿಳಿಸಲಾಗಿದೆ.
ಕಳೆದ ವಾರ ತಮ್ಮ ಅಭಿಮಾನಿ ಸಂಘ 'ವಿಜಯ್ ಮಕ್ಕಳ್ ಇಯಕ್ಕಂ' ಜೊತೆ ಚೆನ್ನೈನಲ್ಲಿ ವಿಜಯ್ ಸಭೆ ನಡೆಸಿದ್ದರು. ಆ ಬಳಿಕ ರಾಜಕೀಯ ಪಕ್ಷವನ್ನು ಘೋಷಣೆ ಮಾಡುವ ಬಗ್ಗೆ ನಿರ್ಧಾರವನ್ನು ಕೈಗೊಳ್ಳಲಾಗಿತ್ತು. ಹೀಗಾಗಿ ಇಂದು (ಫೆಬ್ರವರಿ 2) ಚುನಾವಣಾ ಆಯೋಗದಲ್ಲಿ ತಮ್ಮ ರಾಜಕೀಯ ಪಕ್ಷದ ಹೆಸರನ್ನು ನೋಂದಣಿ ಮಾಡಿಸಲು ಮುಂದಾಗಿದ್ದಾರೆ.
"ತಮಿಳಗ ವೆಟ್ರಿ ಕಳಗಂ ರಾಜಕೀಯ ಪಕ್ಷವನ್ನು ಇಂದು ಚುನಾವಣಾ ಆಯೋಗದಲ್ಲಿ ನೋಂದಣಿ ಮಾಡಲು ಅರ್ಜಿಯನ್ನು ಸಲ್ಲಿಸುತ್ತಿದ್ದೇವೆ. 2026ರ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧೆ ಮಾಡುವುದು ನಮ್ಮ ಗುರಿಯಾಗಿದೆ. ಪ್ರಜೆಗಳು ಬಯಸಿದಂತೆ ಮೂಲಭೂತ ರಾಜಕೀಯ ಬದಲಾವಣೆಗಳನ್ನು ತರುವುದು ನಮ್ಮ ಧ್ಯೆಯ" ಎಂದು ದಳಪತಿ ವಿಜಯ್ ತಮ್ಮ ಹೇಳಿಕೆಯಲ್ಲಿ ಹೇಳಿದ್ದಾರೆ.
"ರಾಜಕೀಯ ಅನ್ನೋದು ನನಗೆ ಇನ್ನೊಂದು ವೃತ್ತಿಯಲ್ಲ. ಅದು ಭಯದಲ್ಲಿರುವ ಜನರ ಕೆಲಸ. ಹಲವು ವರ್ಷಗಳಿಂದ ನನ್ನನ್ನು ನಾನು ಇದಕ್ಕೆ ಸಿದ್ಧಪಡಿಸಿಕೊಳ್ಳುತ್ತಿದ್ದೇನೆ. ರಾಜಕೀಯ ನನಗೆ ಹವ್ಯಾಸ ಅಲ್ಲ. ಅದು ನನ್ನಲ್ಲಿರುವ ಬಯಕೆ. ನಾನು ಇದರಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಳ್ಳಲು ನಿರ್ಧರಿಸಿದ್ದೇನೆ" ಎಂದು ದಳಪತಿ ವಿಜಯ್ ಹೇಳಿದ್ದಾರೆ.
ಸದ್ಯ ರಾಜಕೀಯ ಪಕ್ಷದ ಹೆಸರು ಚುನಾವಣಾ ಆಯೋಗಕ್ಕೆ ನೋಂದಣಿ ಮಾಡಿಸಲು ಅರ್ಜಿಯನ್ನು ಸಲ್ಲಿಸಲಾಗಿದೆ. ಇಸಿಯಿಂದ ಗ್ರೀನ್ ಸಿಗ್ನಲ್ ಸಿಕ್ಕಿದ ಕೂಡಲೇ ಪಬ್ಲಿಕ್ ಮೀಟಿಂಗ್ ಕರೆದು ಅದರಲ್ಲಿ ಕೆಲವು ನಿರ್ಧಾರಗಳನ್ನು ತೆಗೆದುಕೊಳ್ಳುವುದಾಗಿ ಹೇಳಿದ್ದಾರೆ. ಜೊತೆಗೆ ತಮ್ಮ ಮುಂದಿನ ರಾಜಕೀಯ ನಡೆ, ಪಕ್ಷದ ಧ್ಯೇಯ, ಪಕ್ಷದ ಚಿನ್ನೆ ಸೇರಿದಂತೆ ಇನ್ನಿತರ ಮಾಹಿತಿಯನ್ನು ತಿಳಿಸುವುದಾಗಿ ದಳಪತಿ ವಿಜಯ್ ಹೇಳಿದ್ದಾರೆ.


Click it and Unblock the Notifications











