ತಮಿಳು ನಟ ವಿಶಾಲ್ಗೆ ಏನಾಗಿದೆ? ಕೈ ಧ್ವನಿ ನಡುಗಿದ್ದು ಯಾಕೆ? ವೈದ್ಯರ ವರದಿಯಲ್ಲಿ ಏನಿದೆ?
ಚೆನ್ನೈ: ತಮಿಳಿನ ಸ್ಟಾರ್ ನಟ ವಿಶಾಲ್ ಆರೋಗ್ಯ ಅವರ ಅಭಿಮಾನಿಗಳಲ್ಲಿ ಆತಂಕ ಮೂಡಿಸಿದೆ. ಇತ್ತೀಚೆಗೆ 12 ವರ್ಷಗಳಿಂದ ಬಿಡುಗಡೆಯಾಗಬೇಕಿದ್ದ ಸಿನಿಮಾ ಇದೇ ಸಂಕ್ರಾಂತಿಗೆ ರಿಲೀಸ್ ಆಗುತ್ತಿದೆ. ಈ ಕಾರಣಕ್ಕೆ ಆ ಸಿನಿಮಾ ಪತ್ರಿಕಾಗೋಷ್ಠಿಗೆ ವಿಶಾಲ್ ಆಗಮಿಸಿದ್ದರು. ಈ ವೇಳೆ ಮೈಕ್ ಹಿಡಿದುಕೊಂಡು ಮಾತಾಡುವುದಕ್ಕೂ ಅವರಿಗೆ ಆಗಲಿಲ್ಲ. ಇದು ಹಲವರಿಗೆ ಆತಂಕ ಮೂಡಿಸಿದೆ.
ವಿಶಾಲ್ ಮೈ ಹಿಡಿದುಕೊಂಡು ಮಾತಾಡುವುದಕ್ಕೂ ಪರದಾಡಿದ್ದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಕಾಡ್ಗಿಚ್ಚಿನಂತೆ ಹಬ್ಬಿತ್ತು. ಇಲ್ಲಿಂದ ವಿಶಾಲ್ಗೆ ಏನಾಗಿದೆ? ಅನ್ನೋ ಪ್ರಶ್ನೆಗಳು ಬರುವುದಕ್ಕೆ ಶುರುವಾಗಿದ್ದವು. ಕೆಲವರು ಟೀಕೆಗಳನ್ನು ಮಾಡಿದ್ದರೆ, ಮತ್ತೆ ಕೆಲವರು ವಿಶಾಲ್ ಆರೋಗ್ಯದ ಬಗ್ಗೆ ಆತಂಕವನ್ನು ವ್ಯಕ್ತಪಡಿಸಿದ್ದರು. ಈ ಸಂಬಂಧ ವೈದ್ಯರು ವಿಶಾಲ್ ಆರೋಗ್ಯದ ವರದಿಯನ್ನು ಬಿಡುಗಡೆ ಮಾಡಿದ್ದಾರೆ.

ತಮಿಳು ನಟ ವಿಶಾಲ್ ಆಕ್ಷನ್ ಹೀರೋ ಆಗಿ ಗುರುತಿಸಿಕೊಂಡವರು. ಸದಾ ಫಿಟ್ ಅಂಡ್ ಫೈನ್ ಆಗಿದ್ದ ವಿಶಾಲ್ ಅವರನ್ನು ದಿಢೀರನೇ ಹೀಗೆ ಇಂತಹ ಸ್ಥಿತಿಯಲ್ಲಿ ನೋಡಿ ಎಲ್ಲರೂ ಕಂಗಾಲಾಗಿದ್ದರು. ಕೈಗಳು ನಡುಗುತ್ತಿದ್ದವು. ಧ್ವನಿಯಲ್ಲಿ ಆಯಾಸವಿತ್ತು. ಕಣ್ಣುಗಳು ವಿಪರೀತ ಕೆಂಪಾಗಿದ್ದವು. ಇದೆಲ್ಲವನ್ನು ನೋಡಿ ವಿಶಾಲ್ ಯಾವುದೋ ಗಂಭೀರ ಸಮಸ್ಯೆಯಿಂದ ಬಳಲುತ್ತಿದ್ದಾರೆ ಎಂಬ ಸುದ್ದಿ ಹಬ್ಬಿತ್ತು.
ಮತ್ತೊಂದು ಕಡೆ ಇವರ ಅನಾರೋಗ್ಯಕ್ಕೆ ಕಾರಣಗಳನ್ನು ಹುಡುಕುವುದಕ್ಕೆ ಶುರುವಿಟ್ಟುಕೊಂಡಿದ್ದರು. ಕೆಲವರು ವಿಶಾಲ್ ಈ ಸ್ಥಿತಿಗೆ 'ಅವನ್ ಇವನ್' ಸಿನಿಮಾದ ನಿರ್ದೇಶಕನೇ ಕಾರಣ ಎಂದು ಆರೋಪಿಸಿದ್ದರು. ಈ ಸಿನಿಮಾದ ಪಾತ್ರಕ್ಕೆ ಕಣ್ಣು ನಾರ್ಮಲ್ ಆಗಿರಬಾರದು ಎಂದು ನಿರ್ದೇಶಕ ಹೇಳಿದ್ದರು. ಆ ಕಾರಣಕ್ಕಾಗಿ ಅವರು ಕಣ್ಣಿಗೆ ಆಪರೇಷನ್ ಮಾಡಿಸಿಕೊಂಡಿದ್ದರು. ಅಲ್ಲಿಂದ ಅವರಿಗೆ ಸಮಸ್ಯೆ ಎದುರಾಯಿತು ಎಂದು ಆರೋಪಿಸಿದ್ದರು.

ಹಾಗೇ ವಿಶಾಲ್ಗೆ ಆಗಾ ಮೈಗ್ರೇನ್ ಬರುತ್ತಿತ್ತು. ಕೆಲವು ಚಟಗಳು ಇವೆ. ಅದಕ್ಕೆ ಹೀಗೆಲ್ಲ ಆಗುತ್ತಿದೆ ಅಂತನೂ ವಾದ ಮಾಡಿದ್ದರು. ವಿಶಾಲ್ ಅನಾರೋಗ್ಯ ಯಾಕೆ ಬೇರೆಯದ್ದೇ ಹಾದಿ ಹಿಡಿಯುತ್ತಿದೆ ಎಂದು ತಿಳಿದ ಬಳಿಕ ವೈದ್ಯರಿಂದ ಸ್ಪಷ್ಟನೆ ಕೊಡಿಸುವ ಕೆಲಸ ನಡೆದಿದೆ. ವಿಶಾಲ್ಗೆ ಚಿಕಿತ್ಸೆ ಮಾಡುತ್ತಿರುವ ಚೆನ್ನೈನ ಅಪೋಲೊ ಆಸ್ಪತ್ರೆ ವೈದ್ಯರು ವಿಶಾಲ್ ಆರೋಗ್ಯದ ವರದಿಯನ್ನು ರಿಲೀಸ್ ಮಾಡಿದ್ದಾರೆ.
ವಿಶಾಲ್ 'ಮದಗಜರಾಜ' ಸಿನಿಮಾದ ಪ್ರೆಸ್ಮೀಟ್ ವೇಳೆನೇ ತನಗೆ ವೈರಲ್ ಫೀವರ್ ಬಂದಿದೆ. ಆದರೂ ಅದನ್ನು ಲೆಕ್ಕಿಸದೇ ಬಂದಿದ್ದೇನೆ ಎಂದಿದ್ದರು. ಈಗ ವೈದ್ಯರು ನೀಡದ ವರದಿಯಲ್ಲೂ ಅದನ್ನೇ ಹೇಳಿದ್ದಾರೆ. "ವಿಶಾಲ್ ವೈರಲ್ ಫೀವರ್ನಿಂದ ಬಳಲುತ್ತಿದ್ದಾರೆ. ಅವರಿಗೆ ಸಂಪೂರ್ಣ ಬೆಡ್ ರೆಸ್ಟ್ ತೆಗೆದುಕೊಳ್ಳುವುದಕ್ಕೆ ಸೂಚಿಸಲಾಗಿದೆ" ಎಂದು ರಿಲೀಸ್ ಮಾಡಿರುವ ವರದಿಯಲ್ಲಿ ಹೇಳಲಾಗಿದೆ.
ಇನ್ನು ವಿಶಾಲ್ ನಟನೆಯ ಮದಗಜರಾಜ ಸಿನಿಮಾ ಇದೇ ಜನವರಿ 12ಕ್ಕೆ ಬಿಡುಗಡೆ ಮಾಡಲಾಗುತ್ತಿದೆ. ಈ ಸಿನಿಮಾದಲ್ಲಿ ವಿಶಾಲ್ ಜೊತೆಗೆ ವರಲಕ್ಷ್ಮಿ ಶರತ್ಕುಮಾರ್, ಅಂಜಲಿ, ಸಂತಾನಂ, ಸೋನು ಸೂದ್ ನಟಿಸಿದ್ದಾರೆ. ವಿಜಯ್ ಆಂಟೋನಿ ಈ ಸಿನಿಮಾ ಸಂಗೀತವನ್ನು ನೀಡಿದ್ದಾರೆ. ಜೆಮಿನಿ ಫಿಲ್ಮ್ ಸರ್ಕ್ಯೂಟ್ ಈ ಸಿನಿಮಾವನ್ನು ನಿರ್ಮಾಣ ಮಾಡಿದೆ. ಹಲವು ಬಾರಿ ಈ ಸಿನಿಮಾವನ್ನು ರಿಲೀಸ್ ಮಾಡುವ ಪ್ರಯತ್ನ ಮಾಡಿದ್ದರೂ, ಅದು ಸಾಧ್ಯವಾಗಿರಲಿಲ್ಲ.


Click it and Unblock the Notifications











