ಜೀವನ್ಮರಣದ ಹೋರಾಟದಲ್ಲಿ ಸೈತಾನ್ ಚಿತ್ರದ ನಟಿ ; ಆರ್ಥಿಕ ಸಹಾಯಕ್ಕೆ ಅಂಗಲಾಚಿದ ಸ್ನೇಹಿತೆ..!
ತಮಿಳು ಹಾಗೂ ಮಲಯಾಳಂನ ಜನಪ್ರಿಯ ನಟಿ ಅರುಂಧತಿ ನಾಯರ್ ರಸ್ತೆ ಅಪಘಾತಕ್ಕೀಡಾಗಿದ್ದಾರೆ. ಈ ಘಟನೆಯಲ್ಲಿ ನಟಿ ಅರುಂಧತಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಇದರ ಪರಿಣಾಮ ಆಕೆಯನ್ನು ಕೇರಳದ ತಿರುವನಂತಪುರಂನಲ್ಲಿರುವ ಆಸ್ಪತ್ರೆಗೆ ದಾಖಲಿಸಲಾಗಿದ್ದು, ವೈದ್ಯರು ಐಸಿಯುನಲ್ಲಿ ಚಿಕಿತ್ಸೆ ನೀಡುತ್ತಿದ್ದಾರೆ.
ಯೂಟ್ಯೂಬ್ ಚಾನೆಲ್ಗೆ ಸಂದರ್ಶನ ನೀಡಿದ ನಂತರ ಅವರು ಮತ್ತು ಅವರ ಸಹೋದರ ಸ್ಕೂಟಿಯಲ್ಲಿ ಮನೆಗೆ ಹೋಗುತ್ತಿದ್ದಾಗ ಕೋವಲಂ ಬಳಿ ವೇಗವಾಗಿ ಬಂದ ಕಾರು ಅವರ ಸ್ಕೂಟಿಗೆ ಡಿಕ್ಕಿ ಹೊಡೆದಿದೆ. ಘಟನೆಯಲ್ಲಿ ಇಬ್ಬರೂ ಗಂಭೀರವಾಗಿ ಗಾಯಗೊಂಡಿದ್ದಾರೆ.

ಅರುಂಧತಿ ಅವರು ಪ್ರಸ್ತುತ ತಿರುವನಂತಪುರದ ಖಾಸಗಿ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ವೆಂಟಿಲೇಟರ್ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಧಾರಾವಾಹಿ ನಟಿ ಗೋಪಿಕಾ ಅನಿಲ್, ಅರುಂಧತಿ ಅವರ ವೈದ್ಯಕೀಯ ಚಿಕಿತ್ಸೆಗೆ ನೆರವಾಗುವಂತೆ ಜನರಲ್ಲಿ ಸಾಮಾಜಿಕ ಜಾಲತಾಣದ ಮೂಲಕ ಮನವಿ ಮಾಡಿಕೊಂಡಿದ್ದಾರೆ
ನನ್ನ ಸ್ನೇಹಿತೆ ಅರುಂಧತಿ ನಿನ್ನೆ ಅಪಘಾತಕ್ಕೀಡಾದಳು. ಆಕೆಯ ಸ್ಥಿತಿ ಗಂಭೀರವಾಗಿದೆ. ಸದ್ಯ ಆಕೆ ವೆಂಟಿಲೇಟರ್ನಲ್ಲಿ ಜೀವನ್ಮರಣ ಹೋರಾಟ ನಡೆಸುತ್ತಿದ್ದಾರೆ. ಆಕೆಯ ಕುಟುಂಬಕ್ಕೆ ದಿನನಿತ್ಯದ ಆಸ್ಪತ್ರೆ ವೆಚ್ಚ ಭರಿಸಲು ಸಾಧ್ಯವಾಗುತ್ತಿರಲಿಲ್ಲ. ನಾವು ನಮ್ಮ ಕೈಲಾದಷ್ಟು ಸಹಾಯ ಮಾಡುತ್ತಿದ್ದೇವೆ. ಆದರೆ ಇದೀಗ ಆಕೆಯ ಚಿಕಿತ್ಸೆಗೆ ಇದು ಸಾಕಾಗುವುದಿಲ್ಲ. ಆಕೆಯ ಕುಟುಂಬಕ್ಕೆ ತುಂಬಾ ಸಹಕಾರಿಯಾಗಲು ನೀವೂ ಸಹಾಯ ಮಾಡಿದರೆ, ಆಕೆಗೆ ಉತ್ತಮ ಚಿಕಿತ್ಸೆ ನೀಡಲು ಸಹಾಯವಾಗುತ್ತದೆ' ಎಂದು ಇನ್ಸ್ಟಾ ಪೋಸ್ಟ್ನಲ್ಲಿ ಬ್ಯಾಂಕ್ ಮತ್ತು ಫೋನ್ ಸಂಖ್ಯೆ ವಿವರಗಳನ್ನು ಹಂಚಿಕೊಂಡಿದ್ದಾರೆ ಗೋಪಿಕಾ ಅನಿಲ್.

ಅರುಂಧತಿ ನಾಯರ್ ಹಿನ್ನೆಲೆ
ಅರುಂಧತಿ ನಾಯರ್ ತಮಿಳು ಚಲನಚಿತ್ರ ಪೊಂಗಿ ಎಲು ಮನೋಹರ (2014) ಮೂಲಕ ತಮ್ಮ ಚಲನಚಿತ್ರ ವೃತ್ತಿಜೀವನವನ್ನು ಪ್ರಾರಂಭಿಸಿದರು. ಆ ನಂತರ ವಿರುಮಾಂಡಿಕುಂ ಶಿವನಂದಿಕಂ, ಸೈತಾನ್, ಪಿಸ್ತಾ ಮತ್ತು ಐರಾಮ್ ಪೊರ್ಕಾಸುಕಲ್ ಚಿತ್ರಗಳಲ್ಲಿ ನಾಯಕಿಯಾಗಿ ನಟಿಸಿದರು.
2018 ರಲ್ಲಿ ಮಲಯಾಳಂನಲ್ಲಿ ಬಿಡುಗಡೆಯಾದ 'ಒಟ್ಟಕೋರು ಕಾಮುಕನ್' ಮೂಲಕ ಮಲಯಾಳಂನಲ್ಲಿ ನಾಯಕಿಯಾಗಿ ಪಾದಾರ್ಪಣೆ ಮಾಡಿದರು. ವಿಜಯ್ ಆಂಟೋನಿ ಜೊತೆ ಸೈತಾನ್ ಚಿತ್ರದ ಮೂಲಕ ಉತ್ತಮ ಜನಪ್ರಿಯತೆಯನ್ನು ಗಳಿಸಿದರು. ಕಳೆದ ವರ್ಷ ಬಿಡುಗಡೆಯಾದ ಐರಾಮ್ ಪೊರ್ಕಾಸುಕಲ್ ಎಂಬ ಚಿತ್ರದಲ್ಲಿಯೂ ನಟಿಸಿದ್ದರು ಅರುಂಧತಿ. ಅರುಂಧತಿ ಸಹೋದರಿ ಆರತಿ ನಾಯರ್ ಕೂಡ ಚಿತ್ರರಂಗದಲ್ಲಿದ್ದಾರೆ.

ಒಟ್ಟಿನಲ್ಲಿ ಅರುಂಧತಿ ಸಾವು ಬದುಕಿನ ಹೋರಾಟವನ್ನ ನಡೆಸುತ್ತಿದ್ದಾರೆ. ಆರ್ಥಿಕ ನೆರವಿನ ನಿರೀಕ್ಷೆಯಲ್ಲಿ ಇವರ ಸ್ನೇಹಿತೆ ಇದ್ದಾರೆ. ತಮಿಳು ಹಾಗೂ ಮಲಯಾಳಂ ಚಿತ್ರರಂಗ ಅರುಂಧತಿ ಅವರಿಗೆ ಈಗ ನೆರವಾಗಬೇಕಿದೆ. ಎರಡು ಉದ್ಯಮದವರು ನೆರವು ನೀಡುವ ವಿಶ್ವಾಸ ಇವರ ಅಭಿಮಾನಿಗಳಿಗೆ ಇದೆ. ಗೆಟ್ ವೆಲ್ ಸೂನ್ ಅರುಂಧತಿ.


Click it and Unblock the Notifications











