ತಮಿಳು ಸಿನಿಮಾ ನಿರ್ಮಾಪಕರು-ಕಲಾವಿದ ಮಧ್ಯೆ ಹೊಸ ವಾರ್ ; ಧನುಷ್ರಿಂದ ಇಬ್ಬಾಗವಾಯ್ತಾ ಕಾಲಿವುಡ್?
ಸೂಪರ್ಸ್ಟಾರ್ ರಜನಿಕಾಂತ್ ಮಾಜಿ ಅಳಿಯ ಧನುಷ್ ವಿವಾದಕ್ಕೆ ಸಿಕ್ಕಿಕೊಳ್ಳುವುದು ಹೊಸದೇನು ಅಲ್ಲ. ಕಾಲಿವುಡ್ನಲ್ಲಿ ಆಗಾಗ ಇವರು ಹೆಸರು ವಿವಾದದ ಸುಳಿಗೆ ಸಿಕ್ಕಿಕೊಳ್ಳುತ್ತಲೇ ಇರುತ್ತೆ. ಸದ್ಯ ತಮಿಳು ಚಿತ್ರರಂಗದ ನಿರ್ಮಾಪಕರು ಧನುಷ್ ಕಾರಣವನ್ನು ಮುಂದಿಟ್ಟುಕೊಂಡು ಆಗಸ್ಟ್ 15ರಿಂದ ಹೊಸ ಸಿನಿಮಾಗಳನ್ನು ನಿರ್ಮಾಣ ಮಾಡುವುದನ್ನು ತಾತ್ಕಾಲಿಕವಾಗಿ ನಿಲ್ಲಿಸುವುದಕ್ಕೆ ಮುಂದಾಗಿದ್ದಾರೆ.
ಧನುಷ್ ತಮಿಳಿನ ಕೆಲವು ನಿರ್ಮಾಪಕರಿಂದ ಅಡ್ವಾನ್ಸ್ ಹಣವನ್ನು ಪಡೆದುಕೊಂಡಿದ್ದಾರೆ. ಆದರೆ, ಡೇಟ್ಸ್ ಕೊಡುವುದಕ್ಕೆ ಸತಾಯಿಸುತ್ತಿದ್ದಾರೆಂದು ನಿರ್ಮಾಪಕರು ಆರೋಪ ಮಾಡಿದ ಬೆನ್ನಲ್ಲೇ ತಮಿಳು ನಿರ್ಮಾಪಕರ ಸಂಘ ಖಡಕ್ ನಿರ್ಧಾರ ತೆಗೆದುಕೊಳ್ಳುವುದಕ್ಕೆ ಮುಂದಾಗಿದೆ. ನಿರ್ಮಾಪಕರು ತೆಗೆದುಕೊಂಡ ನಿರ್ಧಾರವೀಗ ಕಲಾವಿದರ ಸಂಘಕ್ಕೆ (ನಾಡಿಗರ್ ಸಂಗಂ) ಮುಜುಗರವನ್ನು ಉಂಟು ಮಾಡಿದೆ.

ತಮಿಳು ನಿರ್ಮಾಪಕ ಸಂಘದ (TFPC) ಕಾರ್ಯದರ್ಶಿ ಆರ್ ರಾಧಾಕೃಷ್ಣನ್ ಮಾಧ್ಯಮಗಳಿಗೆ ಈ ಬಗ್ಗೆ ಮಾಹಿತಿ ಹಂಚಿಕೊಂಡಿದ್ದು, ನಿರ್ಮಾಪಕರು ಆಗಸ್ಟ್ 16ರಿಂದ ತಾತ್ಕಾಲಿಕವಾಗಿ ಹೊಸ ಸಿನಿಮಾಗಳನ್ನು ನಿರ್ಮಾಣ ಮಾಡುವುದನ್ನು ನಿಲ್ಲಿಸು ನಿರ್ಧಾರಕ್ಕೆ ಬದ್ಧವಾಗಿದ್ದಾರೆ. ಈ ಸಂಬಂಧ ಪ್ರಡ್ಯೂಸರ್ ಕೌನ್ಸಿಲ್ನ ಪ್ರಮುಖ ಸದಸ್ಯರು ಈ ಸಂಬಂಧ ಆಗಸ್ಟ್ 1ರಂದು ಮತ್ತೆ ಸಭೆ ಸೇರಿ ಒಂದು ನಿರ್ಧಾರಕ್ಕೆ ಬರುತ್ತಾರೆ ಎಂದು ಹೇಳಿಕೆ ಕೊಟ್ಟಿದ್ದಾರೆ.
ತಮಿಳು ನಿರ್ಮಾಪಕರ ಈ ನಿರ್ಧಾರ ಅಲ್ಲಿನ ಕಲಾವಿದರ ಸಂಘದ ಪದಾಧಿಕಾರಿಗಳನ್ನು ಕೆರಳಿಸಿದೆ. ನಿರ್ಮಾಪಕರು ಏಕಾಏಕಿ ತೆಗೆದುಕೊಂಡು ಈ ನಿರ್ಧಾರ ಮಾಧ್ಯಮಗಳಿಂದ ತಮಗೆ ತಿಳಿದಿದೆ. ಇವರು ತೆಗೆದುಕೊಂಡಿರುವ ನಿರ್ಧಾರ ಕಾನೂನು ಬಾಹಿರವಾಗಿದೆ ಎಂದು (ನಾಡಿಗರ್ ಸಂಗಂ) ಮಾಧ್ಯಮಗಳಿಗೆ ಪ್ರತ್ಯುತ್ತರ ನೀಡಿದೆ. ನಿರ್ಮಾಪಕರ ಸಭೆಯಲ್ಲಿ ಧನುಷ್ ಹೆಸರನ್ನು ಪ್ರಸ್ತಾಪ ಮಾಡಿದ್ದಕ್ಕೆ ನಿರ್ಮಾಪಕರ ಸಂಘದ ಖಜಾಂಚಿ ಹಾಗೂ ನಟ ಕಾರ್ತಿ ಅಸಮಧಾನ ಹೊರ ಹಾಕಿದ್ದಾರೆ.

ನಿರ್ಮಾಪಕರ ಸಭೆಯಲ್ಲಿ ಧನುಷ್ ಸೇರಿದಂತೆ ಕೆಲವು ನಟರ ಹೆಸರನ್ನು ಪ್ರಸ್ತಾಪ ಮಾಡಿ ಬ್ಯಾನ್ ಮಾಡುವ ಬಗ್ಗೆ ಚರ್ಚೆ ಮಾಡಲಾಗಿದೆ ಎಂದು ವರದಿಯಾಗಿತ್ತು. ಈ ಹಿನ್ನೆಲೆಯಲ್ಲಿ ನಾಡಿಗರ್ ಸಂಗಂ ವಿರೋಧವನ್ನು ವ್ಯಕ್ತಪಡಿಸಿದೆ. ಈ ಮೂಲಕ ಸದ್ಯ ತಮಿಳು ಚಿತ್ರರಂಗ ಇಬ್ಬಾಗವಾದಂತೆ ಆಗಿದೆ. ನಿರ್ಮಾಪಕರು ಹಾಗೂ ಕಲಾವಿದರ ನಡುವೆ ವಾಗ್ಯುದ್ಧ ಶುರುವಾಗಿದೆ. ಇದು ಇನ್ಯಾವ ಹಂತಕ್ಕೆ ಹೋಗಿ ಮುಟ್ಟುತ್ತೋ ಸದ್ಯಕ್ಕೆ ಹೇಳುವುದಕ್ಕೆ ಅಸಾಧ್ಯ.
"ನವೆಂಬರ್ ಒಂದರಿಂದ ಶೂಟಿಂಗ್ ಬಂದ್ ಮಾಡುವ ನಿರ್ಮಾಪಕರ ನಿರ್ಧಾರವನ್ನು ನಾವು ಖಂಡಿಸುತ್ತೇವೆ. ಈ ಬಗ್ಗೆ ನಾವು ಹೇಗೆ ತಿರುಗೇಟು ಕೊಡಬೇಕು ಅನ್ನುವುದನ್ನು ಆಗಸ್ಟ್ 15 ಅಥವಾ ಆಗಸ್ಟ್ 16ರಂದು ನಡೆಯಲಿರುವ ಕಲಾವಿದರ ಸಂಘದ ಸದಸ್ಯರ ಸಭೆಯಲ್ಲಿ ತೀರ್ಮಾನ ಮಾಡುತ್ತೇವೆ" ಎಂದು ದಕ್ಷಿಣ ಭಾರತದ ಕಲಾವಿದರ ಸಂಘದ ಉಪಾಧ್ಯಕ್ಷ ಎಸ್ ಮುರುಗನ್ ಹೇಳಿಕೆ ಕೊಟ್ಟಿದ್ದಾರೆ.
ನಿರ್ಮಾಪಕ ಸಂಘ ಈಗಾಗಲೇ ಮಾಡಿರುವ ದೂರುಗಳನ್ನು ನಾಡಿಗರ್ ಸಂಗಂನ ಸದಸ್ಯರು ಸರಿಪಡಿಸುವ ಹಾದಿಯಲ್ಲಿ ಇದ್ದಾರೆ. ಜೂನ್ 21ರವರೆಗೂ ಹಲವು ಸಮಸ್ಯೆಗಳನ್ನು ಬಗೆಹರಿಸಲಾಗಿದೆ. ಈ ಮಧ್ಯೆ ಏಕಾಏಕಿಯಾಗಿ ಧನುಷ್ ಹೆಸರನ್ನು ತಂದಿರುವುದು ಸರಿಯಲ್ಲ" ಎಂದು ದಕ್ಷಿಣ ಭಾರತದ ಕಲಾವಿದರ ಸಂಘದ ಉಪಾಧ್ಯಕ್ಷ ಎಸ್ ಮುರುಗನ್ ಕಿಡಿಕಾರಿದ್ದಾರೆ.
ಇತ್ತ ನಿರ್ಮಾಪಕ ಸಂಘದ ಆರ್ ರಾಧಾಕೃಷ್ಣನ್ ವಾದವೇ ಬೇರೆ, " ನಿರ್ಮಾಪಕರು ಈಗಾಗಲೇ ಕೆಲವು ನಟರನ್ನು ನಂಬಿಕೊಂಡು ಹಣವನ್ನು ಹೂಡಿಕೆ ಮಾಡಿದ್ದಾರೆ. ಆದರೆ, ಇನ್ನೂ ಸಿನಿಮಾ ಆರಂಭ ಆಗಿಲ್ಲ. ಅದರಲ್ಲೂ ಧನುಷ್ ಹಲವು ಕಮಿಟ್ಮೆಂಟ್ಗಳನ್ನು ಇಟ್ಟುಕೊಂಡಿದ್ದಾರೆ. ಹೀಗಾಗಿ ಹಲವು ಸದಸ್ಯರಿಂದ ಮಾಹಿತಿಯನ್ನು ಪಡೆದುಕೊಂಡ ಬಳಿಕ ಈ ನಿರ್ಧಾರಕ್ಕೆ ಬರಲಾಗಿದೆ. ಹಾಗಾಗಿ ಎಲ್ಲಾ ನಿರ್ಮಾಪಕರಿಗೂ ಹೊಸ ಸಿನಿಮಾಗೆ ಸಹಿ ಮಾಡುವುದನ್ನು ನಿಲ್ಲಿಸಿ ಎಂದು ಹೇಳಿದ್ದು, ಹೊಸ ಗೈಡ್ಲೈನ್ಸ್ ಬಂದ ಮೇಲೆ ಸಿನಿಮಾ ಆರಂಭ ಮಾಡೋಣ ಎಂದು ಹೇಳಿದ್ದಾರೆ.


Click it and Unblock the Notifications











