ಶಾಂತಿಗೆ ಧಕ್ಕೆ:ವಿದೇಶದಲ್ಲಿ ಭಾರತೀಯ ನಟನ ಬಂಧನ
ಪ್ರವಾಸಿ ವೀಸಾದ ಮೂಲಕ ದೇಶ ಪ್ರವೇಶಿಸಿ ನಂತರ ಅಲ್ಲಿ ಶಾಂತಿ ಕದಡುವ ಕೆಲಸಕ್ಕೆ ಮುಂದಾಗಿದ್ದಾರೆ ಎನ್ನುವ ಕಾರಣಕ್ಕಾಗಿ ಭಾರತೀಯ ಮೂಲದ ನಟನೊಬ್ಬರನ್ನು ವಿದೇಶಿ ಪೊಲೀಸರು ಬಂಧಿಸಿದ್ದಾರೆ.
ಭಾರತೀಯ ಮೂಲದ ಮತ್ತು ಸದ್ಯ ನಾರ್ವೇ ದೇಶದ ಪ್ರಜೆಯಾಗಿರುವ ತಮಿಳು ಕವಿ ಮತ್ತು ನಟ ವಿಐಎಸ್ ಜೇಯಪಾಲನ್ ಅವರನ್ನು ಶ್ರೀಲಂಕಾದಲ್ಲಿ ಬಂಧಿಸಲಾಗಿದೆ. ಶುಕ್ರವಾರ (ನ 22) ತಡರಾತ್ರಿ ಜೇಯಪಾಲನ್ ಅವರನ್ನು ಬಂಧಿಸಲಾಗಿದೆ ಎಂದು ವರದಿಯಾಗಿದೆ.

ವೀಸಾ ಉಲ್ಲಂಘನೆಯ ಕಾರಣಕ್ಕಾಗಿ ಜೇಯಪಾಲನ್ ಅವರು ಬಂಧನಕ್ಕೊಳಗಾಗಿದ್ದಾರೆ ಎನ್ನಲಾಗುತ್ತಿದ್ದರೂ, ಪ್ರವಾಸಿ ವೀಸಾದ ಮೂಲಕ ಶ್ರೀಲಂಕಾ ಪ್ರವೇಶಿಸಿರುವ ಇವರು ಶಾಂತಿ ಕದಡುವ ಯತ್ನಕ್ಕೆ ಮುಂದಾಗಿದ್ದರಿಂದ ಅವರನ್ನು ಬಂಧಿಸಲಾಗಿದೆ ಎಂದು ಶ್ರೀಲಂಕಾ ಪೊಲೀಸರು ಹೇಳಿದ್ದಾರೆ.
ಪ್ರವಾಸಿ ವೀಸಾದ ಮೂಲಕ ಜೇಯಪಾಲನ್ ಶ್ರೀಲಂಕಾ ಪ್ರವೇಶಿಸಿದ್ದರು. ಆದರೆ ಅವರು ಜಾಫ್ನಾದಲ್ಲಿ ಸಮ್ಮೇಳನ ಆಯೋಜಿಸಿ ಕೋಮು ಸೌಹಾರ್ದಕ್ಕೆ ಧಕ್ಕೆ ತರುವ ಕೆಲಸಕ್ಕೆ ಮುಂದಾಗಿದ್ದರಿಂದ ಅವರನ್ನು ದೇಶದ ಉತ್ತರ ಭಾಗದ ಮಂಕುಲಾಮ್ ನಲ್ಲಿ ಬಂಧಿಸಲಾಗಿದೆ ಎಂದು ಸರಕಾರದ ವಕ್ತಾರ ಅಜಿತ್ ರೋಹಾನ ಹೇಳಿದ್ದಾರೆ.
79 ವರ್ಷದ ಮತ್ತು ಶ್ರೀಲಂಕಾದ ಜಾಫ್ನಾದಲ್ಲಿ ಹುಟ್ಟಿದ್ದ ಜೇಯಪಾಲನ್ ಓಸ್ಲೋ ನಗರದ ವಾಸಿಯಾಗಿದ್ದು ಹಲವು ತಮಿಳು ಸಿನಿಮಾಗಳಲ್ಲಿ ನಟಿಸಿದ್ದಾರೆ.
ತಮಿಳಿನಲ್ಲಿ ಹಲವು ಕವಿತೆಗಳನ್ನು ರಚಿಸಿರುವ ಜೇಯಪಾಲನ್ ಅವರು ಆದುಕಲಾಂ ಚಿತ್ರದ ನಟನೆಗಾಗಿ ರಾಷ್ಟ್ರಪ್ರಶಸ್ತಿ ಕೂಡಾ ಪಡೆದಿದ್ದರು.
ಶ್ರೀಲಂಕಾ ಪೊಲೀಸರು ಬಂಧನದ ಕ್ರಮವನ್ನು ಸಮರ್ಥಿಸಿ ಕೊಂಡಿದ್ದಾರೆ.


Click it and Unblock the Notifications











