ತಮಿಳಿನ ಹಿರಿಯ ನಟ ಹಾಗೂ ಡಿಎಂಡಿಕೆ ಪಕ್ಷದ ಸಂಸ್ಥಾಪಕ ವಿಜಯಕಾಂತ್ ನಿಧನ
ತಮಿಳು ಚಿತ್ರರಂಗದ ಜನಪ್ರಿಯ ನಟ ಹಾಗೂ ಡಿಎಂಡಿಕೆ ಪಕ್ಷದ ಸಂಸ್ಥಾಪಕ ವಿಜಯಕಾಂತ್ ಚೆನ್ನೈನಲ್ಲಿ ಇಂದು (ಡಿಸೆಂಬರ್ 28) ನಿಧನರಾಗಿದ್ದಾರೆ. ಹಲವು ವರ್ಷಗಳಿಂದ ವಿಜಯಕಾಂತ್ ಅನಾರೋಗ್ಯದಿಂದ ಬಳಲುತ್ತಿದ್ದರು.
71 ವರ್ಷದ ಹಿರಿಯ ನಟ ವಿಜಯಕಾಂತ್ ಅವರಿಗೆ ಕೊವಿಡ್ 19 ಪಾಸಿಟಿವ್ ಬಂದ ಬೆನ್ನಲ್ಲೇ ವೆಂಟಿಲೇಟರ್ನಲ್ಲಿಟ್ಟು ಚಿಕಿತ್ಸೆಯನ್ನು ನೀಡಲಾಗುತ್ತಿತ್ತು. "ಕ್ಯಾಪ್ಟನ್ ವಿಜಯಕಾಂತ್ ಅವರು ನ್ಯೂಮೋನಿಯಾ ಬೆನ್ನಲ್ಲೇ ಆಸ್ಪತ್ರೆಗೆ ದಾಖಲಾಗಿದ್ದರು. ಅವರನ್ನು ವೆಂಟಿಲೇಟರ್ನಲ್ಲಿ ಇಟ್ಟು ಚಿಕಿತ್ಸೆ ನೀಡಲಾಗುತ್ತಿತ್ತು. ಆಸ್ಪತ್ರೆ ಸಿಬ್ಬಂದಿಯ ಪ್ರಯತ್ನದ ಹೊರತಾಗಿಯೂ ಅವರು ಡಿಸೆಂಬರ್ 28ರ ಬೆಳಗ್ಗೆ ನಿಧನರಾಗಿದ್ದಾರೆ." ಎಂದು ಎಂಐಓಟಿ ಆಸ್ಪತ್ರೆ ಪ್ರಕಟಣೆಯಲ್ಲಿ ತಿಳಿಸಿದೆ.

ವಿಜಯಕಾಂತ್ ಅವರನ್ನು ಡಿಸೆಂಬರ್ 26ರಂದು ವೈದ್ಯಕೀಯ ಪರೀಕ್ಷೆಗೆಂದು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈ ವೇಳೆ ಆತಂಕಗೊಂಡಿದ್ದ ಅಭಿಮಾನಿಗಳಿಗೆ "ವಿಜಯ್ ಅವರು ಆರೋಗ್ಯವಾಗಿದ್ದು, ಇದೊಂದು ಸಾಮಾನ್ಯ ಪರೀಕ್ಷೆ ಅಷ್ಟೇ. ಶೀಘ್ರವೇ ಮನೆಗೆ ಮರಳುತ್ತಾರೆ" ಎಂದು ಡಿಎಂಡಿಕೆ ಪಕ್ಷ ತಿಳಿಸಿತ್ತು. ಆದರೆ, ಆಸ್ಪತ್ರೆಗೆ ದಾಖಲಾದ ಬಳಿಕ ವಿಜಯ್ಕಾಂತ್ ಅವರಿಗೆ ಕೊವಿಡ್ ಇರೋದು ದೃಢವಾಗಿತ್ತು. ಹೀಗಾಗಿ ವೆಂಟಿಲೇಟರ್ನಲ್ಲಿ ಇರಿಸಿ ಅವರಿಗೆ ಚಿಕಿತ್ಸೆಯನ್ನು ನೀಡಲಾಗುತ್ತಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ.
ನಟ ಹಾಗೂ ರಾಜಕೀಯ ಮುಖಂಡ ವಿಜಯಕಾಂತ್ ಅವರ ನಿಧನಕ್ಕೆ ತಮಿಳು ಚಿತ್ರರಂಗದ ಗಣ್ಯರು ಹಾಗೂ ರಾಜಕೀಯ ಮುಖಡಂರು ಶೋಕ ವ್ಯಕ್ತಪಡಿಸುತ್ತಿದ್ದಾರೆ. ವಿಜಯಕಾಂತ್ ಕೇವಲ ಚಿತ್ರರಂಗದಲ್ಲಿ ಜನಪ್ರಿಯತೆಯನ್ನು ಗಳಿಸಿದ ಬಳಿಕ ರಾಜಕೀಯಕ್ಕೆ ಧುಮಿಕಿದ್ದರು. ರಾಜಕೀಯದಲ್ಲೂ ವಿಜಯಕಾಂತ್ಗೆ ಯಶಸ್ಸು ಸಿಕ್ಕಿತ್ತು. ತಾವೇ ಸ್ವತ: ಡಿಎಂಡಿಕೆ ಪಕ್ಷವನ್ನು ಕಟ್ಟಿ ಬೆಳೆಸಿದ್ದರು. 2011 ರಿಂದ 2016ರವರೆಗೆ ತಮಿಳುನಾಡಿನ ವಿಧಾನ ಸಭೆಯ ವಿರೋಧ ಪಕ್ಷದ ನಾಯಕರಾಗಿದ್ದರು. ತಮ್ಮ ನಾಯಕನನ್ನು ಕಳೆದುಕೊಂಡಿದ್ದಕ್ಕೆ ಕಾರ್ಯಕರ್ತರು ಕಂಬನಿ ಮಿಡಿಯುತ್ತಿದ್ದಾರೆ.
2022ರಲ್ಲಿಯೂ ವಿಜಯಕಾಂತ್ ಕೋವಿಡ್ ಸೋಂಕಿನಿಂದ ಬಳಲಿದ್ದರು. ಬಳಿಕ ವಿಜಯಕಾಂತ್ಗೆ ಚಿಕಿತ್ಸೆಯನ್ನು ನೀಡಲಾಗಿತ್ತು. ಕೋವಿಡ್ನಿಂದ ಚೇತರಿಸಿಕೊಂಡ ಬಳಿಕ ಮತ್ತೆ ಕಾರ್ಯಕರ್ತರನ್ನು ಭೇಟಿಯಾಗಿದ್ದರು. ಇತ್ತೀಚೆಗೆ ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿ, ಚಿಕಿತ್ಸೆ ಪಡೆದ ಡಿಸೆಂಬರ್ 11ರಂದು ಮನೆಗೆ ಮರಳಿದ್ದರು. ಆ ಬಳಿಕ ಅನಾರೋಗ್ಯದ ಹಿನ್ನೆಲೆಯಲ್ಲಿಯೂ ತಮ್ಮ ಪಕ್ಷದ ಕಾರ್ಯಕರ್ತರನ್ನು ಭೇಟಿಯಾಗಿದ್ದರು.


Click it and Unblock the Notifications











