"ವಿಚ್ಛೇದನದ ಘೋಷಣೆ ಜಯಂ ರವಿಯವರ ಏಕಪಕ್ಷೀಯ ನಿರ್ಧಾರ, ನನಗೆ ಏನೂ ಹೇಳಿಲ್ಲ"; ಉಲ್ಟಾ ಹೊಡೆದ ನಟನ ಪತ್ನಿ
ಭಾರತೀಯ ಚಿತ್ರರಂಗದಲ್ಲಿ ಸ್ಟಾರ್ಗಳು ವಿಚ್ಛೇದನಕ್ಕೆ ಮೊರೆ ಹೋಗುವುದು ಹೆಚ್ಚಾಗುತ್ತಲೇ ಇದೆ. ಅದರಲ್ಲೂ ದಕ್ಷಿಣ ಭಾರತದ ಚಿತ್ರರಂಗದಲ್ಲೂ ಡಿವೋರ್ಸ್ ಕೇಸ್ಗಳು ಹೆಚ್ಚಾಗುತ್ತಿದೆ. ನಾಗಚೈತನ್ಯ ಹಾಗೂ ಸಮಂತಾ, ಧನುಷ್ ಹಾಗೂ ಐಶ್ವರ್ಯಾ, ಜಿವಿ ಪ್ರಕಾಶ್ ಹಾಗೂ ಸೈಂದವಿ ಕೂಡ ದಾಂಪತ್ಯವನ್ನು ಮುರಿದು ಕೊಂಡಿದ್ದಾರೆ. ಇದೇ ಬೆನ್ನಲ್ಲೇ ಮತ್ತೊಬ್ಬ ತಮಿಳು ನಟ ಜಯಂ ರವಿ ಕೂಡ ಡಿವೋರ್ಸ್ಗೆ ಮುಂದಾಗಿದ್ದಾಗಿ ಘೋಷಣೆ ಮಾಡಿದ್ದಾರೆ.
ಕಾಲಿವುಡ್ನ ಜನಪ್ರಿಯ ನಟ ಜಯಂ ರವಿ ತಮ್ಮ ಪತ್ನಿ ಆರತಿಗೆ ವಿಚ್ಛೇದನ ನೀಡಿದ್ದಾಗಿ ಘೋಷಣೆ ಮಾಡಿದ್ದರು. ಈ ವಿಷಯ ಅವರ ಅಭಿಮಾನಿಗಳಿಗೆ ಹಾಗೂ ಚಿತ್ರರಂಗಕ್ಕೆ ದೊಡ್ಡ ಶಾಕ್ ಆಗಿತ್ತು. ಆದ್ರೀಗ ಜಯಂ ರವಿ ಪತ್ನಿ ವಿಚ್ಛೇದನದ ಬಗ್ಗೆ ತನಗೆ ಗೊತ್ತಿಲ್ಲ ಎಂದು ಹೇಳಿಕೆ ಕೊಟ್ಟಿರುವುದು ಹೊಸ ವಿವಾದಕ್ಕೆ ಎಡೆ ಮಾಡಿಕೊಟ್ಟಿದೆ.

ಜಯಂ ರವಿ ತನ್ನ ಇನ್ಸ್ಟಾಗ್ರಾಂ ಖಾತೆಯಲ್ಲಿ ವಿಚ್ಛೇದನದ ಬಗ್ಗೆ ಘೋಷಣೆ ಮಾಡಿದಾಗ ಪತ್ನಿ ಆರತಿ ಸೈಲೆಂಟ್ ಆಗಿದ್ದರು. ತಾರೆಯರು ಡಿವೋರ್ಸ್ ಘೋಷಣೆ ಮಾಡುವಾಗ ಇಬ್ಬರೂ ಒಂದೇ ತರಹದ ಸ್ಟೆಟ್ಮೆಂಟ್ ಕೊಟ್ಟಿದ್ದನ್ನು ಗಮನಿಸಬಹುದು. ಆದರೆ, ಜಯಂ ರವಿ ಕೇಸ್ನಲ್ಲಿ ಹಾಗಾಗಿರಲಿಲ್ಲ. ಕೇವಲ ಜಯಂ ರವಿ ಮಾತ್ರ ವಿಚ್ಚೇದನದ ಬಗ್ಗೆ ಘೋಷಣೆ ಮಾಡಿದ್ದರು. ಆಗಲೇ ಆರತಿ ವಿಚ್ಛೇದನದ ಬಗ್ಗೆ ಮಾತಾಡಿರಲಿಲ್ಲ. ಆದ್ರೀಗ ಈ ಘೋಷಣೆ ಬಗ್ಗೆ ತನಗೇನು ಗೊತ್ತೇ ಇಲ್ಲ ಎಂದು ಹೇಳಿ ಶಾಕ್ ಕೊಟ್ಟಿದ್ದಾರೆ.
ಡಿವೋರ್ಸ್ ವಿಚಾರದಲ್ಲಿ ಕೆಲವು ತಾರೆಯರು ಒಮ್ಮದ ನಿರ್ಧಾರಕ್ಕೆ ಬಂದ ಬಳಿಕ ಘೋಷಣೆ ಮಾಡಿದ್ದಾರೆ. ಇಬ್ಬರೂ ಒಟ್ಟಿಗೆ ತಮ್ಮ ಅಭಿಮಾನಿಗಳಿಗೆ ವಿಚ್ಛೇದನದ ಬಗ್ಗೆ ತಿಳಿಸಿದ್ದಾರೆ. ಅದೇ ಮತ್ತೆ ಕೆಲವು ಬೀದಿ ರಂಪಾಟ ಆಗಿದ್ದು ಇದೆ. ಈಗ ಜಯಂ ರವಿ ವಿಚ್ಛೇದನದ ಪ್ರಕರಣ ಕೂಡ ಅದೇ ಹಾದಿ ಹಿಡಿಯವ ಎಲ್ಲಾ ಲಕ್ಷಣಗಳು ಕೂಡ ಕಾಣುತ್ತಿದೆ. ವಿಚ್ಚೇದನ ಪಡೆಯುವ ಆತುರದಲ್ಲಿ ನಟ ಜಯಂ ರವಿ ಅರ್ಜೆಂಟ್ ಆಗಿ ನಿರ್ಧಾರ ತೆಗೆದುಕೊಂಡರೇ? ಅನ್ನುವ ಅನುಮಾನ ಮೂಡಿದೆ.

ಅಷ್ಟಕ್ಕೂ ಆರತಿ ರವಿ ರಿಲೀಸ್ ಮಾಡಿದ ಹೇಳಿಕೆಯಲ್ಲಿ ಏನಿದೆ ಅಂತ ನೋಡುವುದಾದರೆ, " ಇತ್ತೀಚೆಗೆ ನಮ್ಮ ಮದುವೆ ಬಗ್ಗೆ ಸಾರ್ವಜನಿಕವಾಗಿ ಮಾಡಿದ ಘೋಷಣೆಯಿಂದ ನನಗೆ ಶಾಕ್ ಆಗಿದೆ. ಯಾಕಂದ್ರೆ, ನನಗೆ ಗಮನಕ್ಕೆ ತರದೆ, ನನ್ನ ಅನುಮತಿಯನ್ನು ಪಡೆಯದೆ ಇಂತಹ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. 18 ವರ್ಷಗಳ ಕಾಲ ದಾಂಪತ್ಯದ ಇತಿಹಾಸವಿರುವ ವಿಷಯವನ್ನು ಗೌರವಯುತವಾಗಿ, ಖಾಸಗಿಯಾಗಿ ಹ್ಯಾಂಡಲ್ ಮಾಡಬಹುದಿತ್ತು." ಎಂದು ಆರತಿ ಹೇಳಿದ್ದಾರೆ.
"ಇಷ್ಟೇ ಅಲ್ಲದೆ, ಕೆಲವು ಸಮಯದಿಂದ ನನ್ನ ಪತಿಯೊಂದು ಮಾತನಾಡುವುದಕ್ಕೆ ಪ್ರಯತ್ನ ಪಡುತ್ತಲೇ ಇದ್ದೇನೆ. ನಾವು ನಮ್ಮ ಕುಟುಂಬಕ್ಕಾಗಿ ಮಾಡಿಕೊಂಡಿರುವ ಕಮಿಟ್ಮೆಂಟ್ಗಳ ಬಗ್ಗೆ ಓಪನ್ ಆಗಿ ಮಾತಾಡುವುದಕ್ಕೆ ಶತಪ್ರಯತ್ನವನ್ನು ಮಾಡಿದ್ದೆ. ಆದರೆ, ಆ ಅವಕಾಶವನ್ನು ನನಗೆ ಕೊಡಲೇ ಇಲ್ಲ. ನನ್ನ ಹಾಗೂ ನನ್ನ ಮಕ್ಕಳನ್ನು ಕತ್ತಲೆಯಲ್ಲಿಟ್ಟು ಈ ಘೋಷಣೆಯನ್ನು ಮಾಡಲಾಗಿದೆ. ಈ ದಾಂಪತ್ಯದಿಂದ ಹೊರಬರುವುದು ಸಂಪೂರ್ಣ ಏಕಪಕ್ಷೀಯ ನಿರ್ಧಾರವಾಗಿದ್ದು, ಇದು ನಮ್ಮ ಕುಟುಂಬಕ್ಕೆ ಯಾವುದೇ ರೀತಿ ಪ್ರಯೋಜನ ಆಗಿಲ್ಲ." ಎಂದು ನಟ ಜಯಂ ರವಿ ವಿರುದ್ಧ ಪತ್ನಿ ಆರತಿ ಆರೋಪ ಮಾಡಿದ್ದಾರೆ.
ಇದೇ ಪತ್ರದಲ್ಲಿ ಸದ್ಯ ಒಬ್ಬ ತಾಯಿಯಾಗಿ ತನ್ನ ಇಬ್ಬರು ಮಕ್ಕಳು ಮೊದಲ ಆದ್ಯತೆಯಾಗಿದ್ದು, ಅವರ ಮೇಲೆ ಇಂತಹ ವಿಷಯಗಳು ಪರಿಣಾಮ ಬೀರದಂತೆ ನೋಡಿಕೊಳ್ಳುವುದಾಗಿದೆ. ಅಲ್ಲದೆ ತನ್ನ ಮೇ ಸಾರ್ವಜನಿಕವಾಗಿ ತಪ್ಪನ್ನು ಹೊರಿಸಲಾಗುತ್ತಿದೆ. ನನ್ನ ಕ್ಯಾರೆಕ್ಟರ್ ಮೇಲೆ ಅಟ್ಯಾಕ್ ಮಾಡಲಾಗುತ್ತಿದೆ. ತಮ್ಮ ಕುಟುಂಬದ ಗೌಪ್ಯತೆಯನ್ನು ರಕ್ಷಿಸಲು ಸಹಾಯ ಮಾಡಿ, ಅನಗತ್ಯ ವದಂತಿಗಳನ್ನು ಹಬ್ಬಿಸದಿರುವಂತೆ ಆರತಿ ಮನವಿ ಕೂಡ ಮಾಡಿಕೊಂಡಿದ್ದಾರೆ. ಈಗ ಆರತಿ ಪರವಾಗಿ ಅವರ ಆಪ್ತರು, ನೆಟ್ಟಿಗರು ಹಾಗೂ ಅಭಿಮಾನಿಗಳು ಬೆಂಬಲ ವ್ಯಕ್ತಪಡಿಸುತ್ತಿದ್ದಾರೆ.


Click it and Unblock the Notifications











