Jananayagan: ತಮಿಳುನಾಡು ಚುನಾವಣೆಗೂ ಮುನ್ನವೇ 'ಜನನಾಯಗನ್' ರಿಲೀಸ್ ಆಗ್ಬೇಕು; ಇಲ್ಲದೇ ಹೋದ್ರೆ ಕೆವಿಎನ್ಗೆ ಸಂಕಷ್ಟ
ತಮಿಳುನಾಡಿನ ಜನಪ್ರಿಯ ನಟ ದಳಪತಿ ವಿಜಯ್ ಸಿನಿಮಾಗಿಂತ ಹೆಚ್ಚಾಗಿ ರಾಜಕೀಯದಲ್ಲಿ ತೊಡಗಿಸಿಕೊಂಡಿದ್ದಾರೆ. ತಮ್ಮ ಕೊನೆಯ ಸಿನಿಮಾ 'ಜನ ನಾಯಗನ್' ಚುನಾವಣೆಗೂ ಮುನ್ನ ರಿಲೀಸ್ ಮಾಡುವುದಕ್ಕೆ ಶತ ಪ್ರಯತ್ನ ಮಾಡಿದ್ದರು. ಆದರೆ, ಅದು ಸೆನ್ಸಾರ್ ಸಮಸ್ಯೆಯಿಂದ ಇನ್ನೂ ರಿಲೀಸ್ ಆಗಿಲ್ಲ. 'ಜನನಾಯಗನ್' ಸಿನಿಮಾವನ್ನು ತನ್ನ ರಾಜಕೀಯ ಭವಿಷ್ಯಕ್ಕೆ ಅನುಕೂಲವಂತೆ ಬಳಸಿಕೊಳ್ಳುವ ವಿಜಯ್ ಪ್ಲ್ಯಾನ್ ತಲೆ ಕೆಳಗೆ ಆದಂತೆ ಇದೆ.
ಈ ಮಧ್ಯೆ ವಿಜಯ್ ಕೆಲವು ವಿವಾದಗಳನ್ನು ಮೈ ಮೇಲೆ ಎಳೆದುಕೊಂಡಿದ್ದಾರೆ. ರಾಜಕೀಯ ಸಮಾವೇಶದಲ್ಲಿ ಕಾಲ್ತುಳಿತ ಪ್ರಕರಣ ಇನ್ನೂ ನಡೆಯುತ್ತಿದೆ. ಕರೂರ್ ಕಾಲ್ತುಳಿತ ಸದ್ಯಕ್ಕೆ ತಣ್ಣಗಾಗಿದ್ದರೂ, ಚುನಾವಣೆ ವೇಳೆ ಬುಗಿಲೇಳುವ ಸಾಧ್ಯತೆಯಿದೆ. ಅದರಲ್ಲೂ ಇತ್ತೀಚೆಗೆ ಪತ್ನಿ ಸಂಗೀತಾ ವಿಚ್ಚೇದನಕ್ಕೆ ಮುಂದಾಗಿರೋದು ವಿಜಯ್ಗೆ ರಾಜಕೀಯ ಭವಿಷ್ಯಕ್ಕೆ ಹಿನ್ನಡೆಯಾಗಿದೆ.

ಇಷ್ಟೆಲ್ಲ ನಡೆಯುತ್ತಿರುವಾಗ ಕಾರ್ಯಕ್ರಮವೊಂದಕ್ಕೆ ನಟಿಯೊಂದಿಗೆ ಬಂದು ಇನ್ನೂ ದೊಡ್ಡ ಸಂಚಲನ ಸೃಷ್ಟಿಸಿದ್ದಾರೆ. ಹೀಗಿರುವಾಗ 'ಜನನಾಯಗನ್' ಸಿನಿಮಾ ಚುನಾವಣೆ ಒಳಗೆ ರಿಲೀಸ್ ಆಗದೇ ಹೋದರೆ, ಏನಾಗುತ್ತೆ? ಅನ್ನೋ ಲೆಕ್ಕಾಚಾರ ಶುರುವಾಗಿದೆ. ಒಂದು ವೇಳೆ ಚುನಾವಣೆ ಬಳಿಕ ತೆರೆ ಕಂಡರೆ ಸಿನಿಮಾ ಪ್ಲಾಪ್ ಆಗುತ್ತೆ ಅನ್ನೋದು ಸಿನಿಮಾ ಪಂಡಿತರ ಲೆಕ್ಕಾಚಾರ. ಅದ್ಯಾಕೆ ಅನ್ನೋದನ್ನು ತಿಳಿಯುವುದಕ್ಕೆ ಮುಂದೆ ಓದಿ.
'ಜನನಾಯಗನ್' ಸಿನಿಮಾ ಈ ವರ್ಷದ ಸಂಕ್ರಾಂತಿಗೆ ರಿಲೀಸ್ ಆಗಬೇಕಿತ್ತು. ಒಂದು ವೇಳೆ ಆಗಿದ್ದರೆ, ಬಾಕ್ಸಾಫೀಸ್ನಲ್ಲಿ ಧೂಳೆಬ್ಬಿಸುತ್ತಿತ್ತು. ವಿಜಯ್ ಕೊನೆಯ ಸಿನಿಮಾ ನೋಡುವುದಕ್ಕೆ ಜನರು ಮುಗಿಬೀಳುತ್ತಿದ್ದರು. ಆದರೆ, ಚುನಾವಣೆ ಬಳಿಕ ತೆರೆಕಂಡರೆ, ಆ ಕ್ರೇಜ್ ಇರೋದಿಲ್ಲ. ಅದಕ್ಕೆ ಟ್ರೇಡ್ ಎಕ್ಸ್ಪರ್ಟ್ಗಳು ಒಂದಿಷ್ಟು ಕಾರಣಗಳನ್ನು ಪಟ್ಟಿ ಮಾಡಿದ್ದಾರೆ. ಅದೇನು ಅಂತ ನೋಡುವುದಾರೇ,
ಕೆವಿಎನ್ ಪ್ರೊಡಕ್ಷನ್ಸ್ 'ಜನನಾಯಗನ್' ಸಿನಿಮಾವನ್ನು ತಮಿಳುನಾಡು ಚುನಾವಣೆಗೂ ಮುನ್ನ ರಿಲೀಸ್ ಮಾಡುವುದಕ್ಕೆ ಪ್ರಯತ್ನ ಮಾಡುತ್ತಿದೆ. ಇಂದು (ಮಾರ್ಚ್ 9) ಸೆನ್ಸಾರ್ ಬೋರ್ಡ್ನ ಅಧಿಕಾರಿಗಳು 'ಜನನಾಯಗನ್' ಸಿನಿಮಾವನ್ನು ವೀಕ್ಷಣೆ ಮಾಡಬೇಕಿತ್ತು. ಆದರೆ, ಅಧಿಕಾರಿಯೊಬ್ಬರ ಆರೋಗ್ಯ ಸರಿಯಿಲ್ಲದ ಕಾರಣ ಸಿನಿಮಾ ನೋಡುವುದನ್ನು ಮುಂದೂಡಲಾಗಿದೆ. ಹೀಗಾಗಿ ಇಂದು ಕೂಡ ಸಿನಿಮಾದ ಸೆನ್ಸಾರ್ ಆಗಿಲ್ಲ. ಹಾಗಿದ್ದರೆ, ಮುಂದೇನು?
ಸಿನಿಮಾ ಪಂಡಿತರ ಪ್ರಕಾರ, 'ಜನನಾಯಗನ್'ಗೆ ಎರಡು ಸನ್ನಿವೇಶಗಳು ಎದುರಾಗಬಹುದು. ಮೊದಲನೇಯದ್ದು, ಸೆನ್ಸಾರ್ ಅಧಿಕಾರಿಯ ಆರೋಗ್ಯ ಹೋದ ಬಳಿಕ ಸಿನಿಮಾವನ್ನು ವೀಕ್ಷಣೆ ಮಾಡಬಹುದು. ಆನಂತ್ರ ಕೆವಿಎನ್ ಪ್ರೊಡಕ್ಷನ್ಸ್ ಸಂಸ್ಥೆ ಸಿನಿಮಾವನ್ನು ಯಾವಾಗ ರಿಲೀಸ್ ಮಾಡಬೇಕು ಅಂತ ನಿರ್ಧಾರ ಮಾಡಬಹುದು. ಮಾರ್ಚ್ ತಿಂಗಳಲ್ಲಿಯೇ ರಿಲೀಸ್ ಮಾಡಬೇಕಾ? ಬೇಡ್ವಾ? ಅನ್ನೋದನ್ನು ನಿರ್ಧಾರ ಮಾಡಬಹುದು.
ಆದರೆ, ಕೆವಿಎನ್ ಪ್ರೊಡಕ್ಷನ್ಗೆ ಇರೋ ಭಯ ಅಂದರೆ, ತಮಿಳುನಾಡು ಚುನಾವಣೆ. ಚುನಾವಣಾ ಆಯೋಗ ಯಾವಾಗ ಸಮಯದಲ್ಲಿ ಬೇಕಾದರೂ ದಿನಾಂಕವನ್ನು ಅನೌನ್ಸ್ ಮಾಡಬಹುದು. ಒಂದು ವೇಳೆ ಸಿನಿಮಾಗೆ ಸೆನ್ಸಾರ್ ಸರ್ಟಿಫಿಕೇಟ್ ಸಿಗುವುದಕ್ಕೂ ಮುನ್ನ ಚುನಾವಣಾ ಆಯೋಗ ದಿನಾಂಕವನ್ನು ಘೋಷಣೆ ಮಾಡಿದರೆ, ನೀತಿ ಸಂಹಿತೆ ಪ್ರಕಾರ ಸಿನಿಮಾವನ್ನು ರಿಲೀಸ್ ಮಾಡುವಂತಿಲ್ಲ. ಚುನಾವಣೆ ಮುಗಿದ ಬಳಿಕವೇ 'ಜನನಾಯಗನ್' ರಿಲೀಸ್ ಆಗಲಿದೆ.

ಎರಡನೇಯದ್ದು, ತಮಿಳುನಾಡು ಚುನಾವಣೆ ಮುಗಿದ ಬಳಿಕ ಸಿನಿಮಾ ರಿಲೀಸ್ ಮಾಡೋದು. ಒಂದು ವೇಳೆ ಇಂತಹ ಸನ್ನಿವೇಶ ಏನಾದರೂ ಎದುರಾದರೆ, ಚುನಾವಣೆಯನ್ನು ಮುಂದಿಟ್ಟುಕೊಂಡೇ ಸೃಷ್ಟಿಸಿದ್ದ ದೃಶ್ಯಗಳು ಔಟ್ಡೇಟ್ ಆಗುತ್ತವೆ. ಹೀಗಾಗಿ ಚಿತ್ರರಂಗ ಅನಿವಾರ್ಯವಾಗಿ ಸಿನಿಮಾದ ಆ ದೃಶ್ಯಗಳಿಗೆ ಕತ್ತರಿ ಹಾಕಲೇಬೇಕಾಗುತ್ತೆ. ಹೀಗಿದ್ದರೂ, ಅಭಿಮಾನಿಗಳು ಸಿನಿಮಾವನ್ನು ನೋಡಬಹುದು. ಆದರೆ, ಅವರಿಗೆ ಇಷ್ಟ ಆಗುತ್ತೆ ಅನ್ನೋದು ಅನುಮಾನ.
ಇನ್ನೊಂದು ಕಡೆ ಈಗಾಗಲೇ 'ಜನನಾಯಗನ್' ಸಿನಿಮಾವನ್ನು ರಿಲೀಸ್ ಮಾಡಲು ಮುಂದೆ ಬಂದಿದ್ದ ವಿತರಕರು ಚೌಕಾಸಿಗೆ ಕೂತಿದ್ದಾರೆ. ಈಗ ಆಗಿರುವ ಡೀಲ್ನಲ್ಲಿ ಶೇ.40ರಷ್ಟು ಹಣವನ್ನು ಹಿಂತಿರುಗಿಸುವಂತೆ ಪಟ್ಟು ಹಿಡಿದ್ದಾರೆಂಬ ಸುದ್ದಿ ಸಿನಿಮಾ ಮಂದಿಯ ಬಾಯಲ್ಲಿ ಹರಿದಾಡುತ್ತಿದೆ. ಒಟ್ನಲ್ಲಿ ಸೆನ್ಸಾರ್ ಸಮಸ್ಯೆ ಕೆವಿಎನ್ ಪ್ರೊಡಕ್ಷನ್ಸ್ಗೆ ದೊಡ್ಡ ತಲೆ ನೋವಾಗಿ ಪರಿಣಮಿಸಿರೋದಂತೂ ನಿಜ.


Click it and Unblock the Notifications















