Thalapathy Vijay Rally Tragedy:: ತಮಿಳು ನಟ ವಿಜಯ್ ರ್ಯಾಲಿ ದುರಂತ; ಸಾವಿನ ಸಂಖ್ಯೆ 39ಕ್ಕೆ ಏರಿಕೆ
ತಮಿಳು ನಟ ದಳಪತಿ ವಿಜಯ್ ರಾಜಕೀಯಕ್ಕೆ ಪಾದಾರ್ಪಣೆ ಮಾಡಿದಲ್ಲಿಂದ ಒಂದಲ್ಲ ಒಂದು ದುರ್ಘಟನೆ ನಡೆಯುತ್ತಿದೆ. ವಿಜಯ್ ಇಂದು (ಸೆಪ್ಟೆಂಬರ್ 27) ಆಯೋಜಿಸಿದ್ದ ರ್ಯಾಲಿಯಲ್ಲೂ ಕೂಡ ದುರಂತ ಸಂಭವಿಸಿದೆ.
ನಿನ್ನೆ (ಸೆಪ್ಟೆಂಬರ್ 27) ಈ ರ್ಯಾಲಿಯಲ್ಲಿ ಭಾಗವಹಿಸಿದ 31 ಮಂದಿ ಕಾಲ್ತುಳಿತಕ್ಕೆ ಒಳಗಾಗಿ ಸಾವನ್ನಪ್ಪಿದ್ದಾರೆ. ಸುಮಾರು 30 ಮಂದಿ ಗಾಯಗೊಂಡು ಆಸ್ಪತ್ರೆ ಸೇರಿದ್ದಾರೆಂದು ವರದಿಯಾಗಿತ್ತು. ಇಂದು (ಸೆಪ್ಟೆಂಬರ್ 28) ತಮಿಳುನಾಡಿನ ಕರೂರ್ನಲ್ಲಿ ಈ ದುರ್ಘಟನೆಯಲ್ಲಿ 39 ಮಂದಿ ಸಾವನ್ನಪ್ಪಿದ್ದಾರೆಂದು ತಮಿಳುನಾಡು ಸಿಎಂ ಎಂ.ಕೆ ಸ್ಟ್ಯಾಲಿನ್ ಖಚಿತ ಪಡಿಸಿದ್ದಾರೆ.
ನಟ ವಿಜಯ್ ತಮ್ಮದೇ ಸ್ವಂತ ಪಕ್ಷ ಕಟ್ಟಿ ರಾಜಕೀಯಕ್ಕೆ ಪ್ರವೇಶ ಮಾಡಿದ್ದಾರೆ. 2026ರಲ್ಲಿ ಬರುವ ತಮಿಳುನಾಡಿನ ವಿಧಾನಸಭೆಯ ಚುನಾವಣೆಯಲ್ಲಿ ವಿಜಯ್ ಹಾಗೂ ಅವರ ಪಕ್ಷದ ಸದಸ್ಯರು ಕಣಕ್ಕೆ ಇಳಿಯಲಿದ್ದಾರೆ. ಈ ನಿಟ್ಟಿನಲ್ಲಿ ಈಗಿನಿಂದಲೇ ವಿಜಯ್ ರಾಜಕೀಯ ಪ್ರಚಾರಕ್ಕೆ ಮುಂದಾಗಿದ್ದಾರೆ. ಇಂದು (ಸೆಪ್ಟೆಂಬರ್ 27) ತಮಿಳುನಾಡಿನ ಕರೂರ್ನಲ್ಲಿ ರ್ಯಾಲಿಯನ್ನು ಹಮ್ಮಿಕೊಂಡಿದ್ದರು. ಈ ವೇಳೆ ಕಾಲ್ತುಳಿತಕ್ಕೆ ಸಿಕ್ಕು ವಯಸ್ಕರು ಹಾಗೂ ಮಕ್ಕಳು ಸೇರಿದಂತೆ 31 ಮಂದಿ ಸಾವನ್ನಪ್ಪಿದ್ದಾರೆ.

ಎಂದಿನಂತೆ ತಮಿಳಗ ವೆಟ್ರಿ ಕಳಗಂ ಪಕ್ಷದ ಮುಖ್ಯಸ್ಥ ವಿಜಯ್ ರ್ಯಾಲಿಯನ್ನು ಆಯೋಜಿಸಿದ್ದರು. ನಿಗದಿತ ಸಮಯಕ್ಕೆ ಬಾರದೇ ಆರು ಗಂಟೆ ತಡವಾಗಿ ವಿಜಯ್ ಈ ಸಮಾರಂಭಕ್ಕೆ ಆಗಮಿಸಿದ್ದರು ಎನ್ನಲಾಗಿದೆ. ಇದರಿಂದ ವಿಜಯ್ ಅಭಿಮಾನಿಗಳು ಹಾಗೂ ಕಾರ್ಯಕರ್ತರು ಕಾದೂ ಕಾದು ಸುಸ್ತಾಗಿದ್ದರು. ವಿಜಯ್ ಎಂಟ್ರಿ ಕೊಡುತ್ತಿದ್ದಂತೆ ಏಕಾಏಕಿ ಅವರೆಡೆಗೆ ನುಗ್ಗಲು ಧಾವಿಸಿದ್ದರು. ಇದರಿಂದ ಕಾಲ್ತುಳಿತ ಸಂಭವಿಸಿ ದೊಡ್ಡ ಅನಾಹುತವೇ ನಡೆದು ಹೋಗಿದೆ.
ದಳಪತಿ ವಿಜಯ್ ಸಮಾರಂಭದಲ್ಲಿ ಭಾಗಿಯಾಗಿದ್ದವರಲ್ಲಿ ಸುಮಾರು 31 ಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದಾರೆಂದು ಹೇಳಲಾಗುತ್ತಿದೆ. ಸಾವಿನ ಸಂಖ್ಯೆ ಇನ್ನೂ ಏರಿಕೆಯಾಗುವ ಸಾಧ್ಯತೆಯಿದೆ. ಒಂದೊಂದು ಸುದ್ದಿ ವಾಹಿನಿಯಲ್ಲಿ ಒಂದೊಂದು ಅಂಕಿ ಅಂಶಗಳನ್ನು ನೀಡಲಾಗುತ್ತಿದೆ. ಆದರೆ, ಮೂಲಗಳ ಪ್ರಕಾರ ಸಾವಿನ ಸಂಖ್ಯೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆಯಿದೆ ಎಂದು ಅಂದಾಜಿಸಲಾಗಿದೆ.
ಈ ದುರ್ಘಟನೆ ಸಂಭವಿಸುತ್ತಿದ್ದಂತೆ ತಮಿಳುನಾಡಿನ ಆರೋಗ್ಯ ಸಚಿವ ಎಂ. ಸುಬ್ರಮಣಿಯನ್ ಕರೂರ್ಗೆ ಭೇಟಿ ನೀಡಿದ್ದಾರೆ. ಈ ದುರ್ಘಟನೆ ಕುರಿತು ತನಿಖೆ ನಡೆಸುವಂತೆ ಕರೂರ್ ಜಿಲ್ಲಾಧಿಕಾರಿ ವಿ.ಸೆಂಥಿಲ್ ಬಾಲಾಜಿಗೆ ತಮಿಳುನಾಡಿನ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಆದೇಶ ನೀಡಿದ್ದಾರೆಂದು ವರದಿಯಾಗಿದೆ. ಅಲ್ಲದೆ ತ್ವರಿತಗತಿಯಲ್ಲಿ ಈ ದುರ್ಘಟನೆಯ ಬಗ್ಗೆ ವರದಿ ನೀಡುವಂತೆ ಆದೇಶ ನೀಡಲಾಗಿದೆ. ಇನ್ನೊಂದು ಕಡೆ ಈ ದುರ್ಘಟನೆಗೆ ದಳಪತಿ ವಿಜಯ್ ಅವರೇ ಕಾರಣ ಎಂದು ದೂಷಿಸಲಾಗುತ್ತಿದೆ.
ಈ ರ್ಯಾಲಿಯ ವೇಳೆ ದಳಪತಿ ವಿಜಯ್ ಹಾಗೂ ಅವರ ಕಾರ್ಯಕರ್ತರು ಪೊಲೀಸರ ಸೂಚನೆಯನ್ನು ಪಾಲಿಸಿಲ್ಲ ಎಂಬ ಆರೋಪ ಕೂಡ ಕೇಳಿ ಬರುತ್ತಿದೆ. ಯಾಕಂದ್ರೆ ವಿಜಯ್ಗೆ ಪೊಲೀಸರು ಮಧ್ಯಾಹ್ನ 12ಗಂಟೆಗೆ ಕರೂರಿನಲ್ಲಿ ಭಾಷಣ ಮಾಡುವುದಕ್ಕೆ ಅನುಮತಿಯನ್ನು ನೀಡಿದ್ದರು. ಆದರೆ, ಪೊಲೀಸರು ಕೊಟ್ಟಿದ್ದ ಸಮಯಕ್ಕೆ ವಿಜಯ್ ಬಂದಿರಲಿಲ್ಲ. ಸಂಜೆ ಸುಮಾರು 7 ಗಂಟೆಗೆ ಅವರು ಆಗಮಿಸಿದ್ದರು. ಒಂದು ವೇಳೆ ಮಧ್ಯಾಹ್ನವೇ ಬಂದಿದ್ದರೆ, ಇಂತಹ ದುರ್ಘಟನೆ ಸಂಭವಿಸುತ್ತಿರಲಿಲ್ಲ. ಯಾಕಂದ್ರೆ ಸಾಕಷ್ಟು ಬೆಳಕು ಇರುತ್ತಿದ್ದರಿಂದ ಜನರು ಸಾವಧಾನವಾಗಿ ಸಾಗುತ್ತಿದ್ದರು ಎಂದು ಆರೋಪಿಸಲಾಗುತ್ತಿದೆ.


Click it and Unblock the Notifications











