ಉಡುಗೊರೆ ಕೊಟ್ಟ ಅಭಿಮಾನಿಗಳ ಮೇಲೆ ವೇದಿಕೆಯಲ್ಲೇ ಕಮಲ್ ಹಾಸನ್ ಆಕ್ರೋಶ
ಅಭಿಮಾನಿಗಳ ಉತ್ಸಾಹ ಹೆಚ್ಚಾದಾಗ ಸೆಲೆಬ್ರೆಟಿಗಳು ಒಮ್ಮೊಮ್ಮೆ ತಾಳ್ಮೆ ಕಳೆದುಕೊಳ್ಳುತ್ತಾರೆ. ನಿನ್ನೆ(ಜೂನ್ 14) ನಡೆದ ಕಾರ್ಯಕ್ರಮವೊಂದರಲ್ಲಿ ನಟ ಕಮಲ್ ಹಾಸನ್ ವೇದಿಕೆಯಲ್ಲೇ ಅಭಿಮಾನಿಗಳ ಮೇಲೆ ಗರಂ ಆಗಿದ್ದರು. ಕತ್ತಿ ಮೇಲೆತ್ತಿ ಪೋಸ್ ಕೊಡುವಂತೆ ಅಭಿಮಾನಿಗಳು ಒತ್ತಾಯಿಸಿದ್ದರಿಂದ ಕಮಲ್ ತಾಳ್ಮೆ ಕಳೆದುಕೊಂಡರು.
ಡಿಎಂಕೆ- ಮಕ್ಕಲ್ ನೀದಿಮಯ್ಯಂ ಮೈತ್ರಿ ಅಭ್ಯರ್ಥಿಯಾಗಿ ಕಮಲ್ ಹಾಸನ್ ಇತ್ತೀಚೆಗೆ ತಮಿಳುನಾಡಿನಿಂದ ರಾಜ್ಯಸಭೆಗೆ ಆಯ್ಕೆ ಆಗಿದ್ದಾರೆ. ಈ ಹಿನ್ನೆಲೆಯಲ್ಲಿ ಚೆನ್ನೈನಲ್ಲಿ ಪಕ್ಷ ಸಮಾವೇಶ ಏರ್ಪಡಿಸಲಾಗಿತ್ತು. ಈ ವೇಳೆ ಕೆಲ ಕಾರ್ಯಕರ್ತರು ಕಮಲ್ ಅವರಿಗೆ ಚಿನ್ನ ಲೇಪಿತ ತಲವಾರ್ ಅವರನ್ನು ಉಡುಗೊರೆಯಾಗಿ ನೀಡಿದ್ದಾರೆ. ಈ ವೇಳೆ ಆ ಕತ್ತಿ ಹಿಡಿದು ಕ್ಯಾಮರಾಗೆ ಪೋಸ್ ಕೊಡುವಂತೆ ದುಂಬಾಲು ಬಿದ್ದಿದ್ದಾರೆ. ಉಡುಗೊರೆ ಎನ್ನುವ ಕಾರಣಕ್ಕೆ ಅದನ್ನು ಸ್ವೀಕರಿಸಿದರೂ ಪೋಸ್ ಕೊಡಲು ಕಮಲ್ ಹಿಂದೇಟು ಹಾಕಿದ್ದಾರೆ.

ಕತ್ತಿ ಹಿಡಿದು ಕಮಲ್ ಹಾಸನ್ ಜೊತೆ ಫೋಟೊ ತೆಗೆಸಿಕೊಳ್ಳಲು ಅಭಿಮಾನಿಗಳು ಬಹಳ ಪ್ರಯತ್ನಿಸಿದ್ದಾರೆ. ಆದರೆ ಅದಕ್ಕೆ ಕಮಲ್ ನಿರಾಕರಿಸಿದ್ದಾರೆ. ಒಂದು ಕ್ಷಣ ತಾಳ್ಮೆ ಕಳೆದುಕೊಂಡು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆದರೂ ಅಭಿಮಾನಿಗಳು ಬಿಡದೇ ಫೋಟೊ ಕ್ಲಿಕ್ಕಿಸಿಕೊಳ್ಳಲು ಮುಂದಾಗಿದ್ದರು. ಅಷ್ಟರಲ್ಲಿ ಪೊಲೀಸ್ ಸಿಬ್ಬಂದಿ ಅಲ್ಲಿಗೆ ಬಂದು ಪರಿಸ್ಥಿತಿ ತಿಳಿಗೊಳಿಸಿದ್ದಾರೆ.
ಅಷ್ಟು ದೊಡ್ಡ ಮಾರಕಾಸ್ತ್ರವನ್ನು ಸಾರ್ವಜನಿಕವಾಗಿ ಪ್ರದರ್ಶಿಸುವಂತಿಲ್ಲ. ಈ ಹಿಂದೆ ಕೆಲವರು ಹೀಗೆ ಮಾರಕಾಸ್ತ್ರವನ್ನು ಪ್ರದರ್ಶಿಸಿ ಸಂಕಷ್ಟಕ್ಕೆ ಸಿಲುಕಿದ್ದು ಗೊತ್ತೇಯಿದೆ. ಅದರ ಅರಿವು ಇರುವುದರಿಂದ ಕಮಲ್ ಹಾಸನ್ ಪೋಸ್ ಕೊಡಲು ನಿರಾಕರಿಸಿದ್ದಾರೆ. ಆದರೆ ಅಭಿಮಾನಿಗಳ ಅತ್ಯುತ್ಸಾಹ ಕಂಡು ಗರಂ ಆಗಿದ್ದಾರೆ. ಇಂತಹ ಉಡುಗೊರೆ ಕೊಡುವುದು, ಹೀಗೆ ಕ್ಯಾಮರಾಗೆ ಪೋಸ್ ಕೊಡಬೇಕೆಂದು ಪಟ್ಟುಹಿಡಿಯುವುದು ಸರಿಯಲ್ಲ ಎಂದು ನೆಟ್ಟಿಗರು ಕಾಮೆಂಟ್ ಮಾಡುತ್ತಿದ್ದಾರೆ.
ಕಮಲ್ ಹಾಸನ್ ಇತ್ತ ಚಿತ್ರರಂಗ, ಅತ್ತ ರಾಜಕೀಯರಂಗದಲ್ಲಿ ಸಕ್ರಿಯರಾಗಿದ್ದಾರೆ. ಇತ್ತೀಚೆಗೆ ಕಮಲ್ ನಟನೆಯ 'ಥಗ್ ಲೈಫ್' ಸಿನಿಮಾ ತೆರೆಗೆ ಬಂದಿತ್ತು. ಸಿನಿಮಾ ಬಿಡುಗಡೆ ಸಮಯದಲ್ಲಿ ಅವರು ನೀಡಿದ ಹೇಳಿಕೆ ವಿವಾದ ಸೃಷ್ಟಿಸಿ ಕರ್ನಾಟಕದಲ್ಲಿ ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ. "ತಮಿಳಿನಿಂದ ಕನ್ನಡ ಭಾಷೆ ಹುಟ್ಟಿದ್ದು" ಎನ್ನುವ ಕಮಲ್ ಹೇಳಿಕೆ ಕನ್ನಡಿಗರ ಅಸಮಾಧಾನಕ್ಕೆ ಕಾರಣವಾಗಿದೆ.
ವಿವಾದದ ಬೆನ್ನಲ್ಲೇ ಕಮಲ್ ಕ್ಷಮೆ ಕೇಳಬೇಕು, ಇಲ್ಲದಿದ್ದರೆ 'ಥಗ್ ಲೈಫ್' ಸಿನಿಮಾ ಬಿಡುಗಡೆಗೆ ಕರ್ನಾಟಕದಲ್ಲಿ ಅವಕಾಶ ಕೊಡುವುದಿಲ್ಲ ಎಂದು ಕನ್ನಡ ಪರ ಸಂಘಟನೆಗಳು ಎಚ್ಚರಿಕೆ ಕೊಟ್ಟಿವೆ. ಆದರೂ ಕಮಲ್ ಕ್ಷಮೆ ಕೇಳಲಿಲ್ಲ. ಕಾನೂನು ಮೊರೆ ಹೋಗಿ ಭದ್ರತೆ ನಡೆವೆ ಸಿನಿಮಾ ಬಿಡುಗಡೆಗೆ ಪ್ರಯತ್ನಿಸುತ್ತಿದ್ದಾರೆ. ಕಮಲ್ ಕ್ಷಮೆ ಕೇಳಬೇಕು ಎಂದು ಕರ್ನಾಟಕ ಹೈಕೋರ್ಟ್ ಹೇಳಿದೆ. ಈ ಬಗ್ಗೆ ಸುಪ್ರೀಂ ಕೋರ್ಟ್ನಲ್ಲಿ ಕೂಡ ಅರ್ಜಿ ಸಲ್ಲಿಸಲಾಗಿದೆ.
ಮಣಿರತ್ನಂ ನಿರ್ದೇಶನದ ಗ್ಯಾಂಗ್ಸ್ಟರ್ ಡ್ರಾಮಾ 'ಥಗ್ ಲೈಫ್' ಚಿತ್ರದಲ್ಲಿ ಕಮಲ್ ಹಾಸನ್ ಜೊತೆ ಸಿಂಬು ನಟಿಸಿದ್ದಾರೆ. ಅಂದಾಜು 200 ಕೋಟಿ ರೂ. ಬಜೆಟ್ನಲ್ಲಿ ಸಿನಿಮಾ ನಿರ್ಮಾಣವಾಗಿದೆ. ಆದರೆ ಬಾಕ್ಸಾಫೀಸ್ನಲ್ಲಿ ಸಿನಿಮಾ ಮುಗ್ಗರಿಸಿದೆ. ಚಿತ್ರಕ್ಕೆ ನೀರಸ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಭಾರತದಲ್ಲಿ 50 ಕೋಟಿ ರೂ. ಗ್ರಾಸ್ ಕಲೆಕ್ಷನ್ ಮಾಡಲು ಸಿನಿಮಾ ತಿಣುಕಾಡುತ್ತಿದ್ದಾರೆ. ಮಣಿರತ್ನಂ- ಕಮಲ್ ಜೋಡಿಯ ಸಿನಿಮಾ ಆಗಿದ್ದರೂ ಮ್ಯಾಜಿಕ್ ನಡೆಯಲಿಲ್ಲ.
ಒಂದೇ ವಾರಕ್ಕೆ ಸಾಕಷ್ಟು ಕಡೆಗಳಲ್ಲಿ ಸಿನಿಮಾವನ್ನು ಚಿತ್ರಮಂದಿರದಿಂದ ತೆಗೆದು ಹಾಕಲಾಗುತ್ತಿದೆ. ತಮಿಳು ಪ್ರೇಕ್ಷಕರೇ ಚಿತ್ರವನ್ನು ಟ್ರೋಲ್ ಮಾಡಿದ್ದರು. ಸ್ವತಃ ಕಮಲ್ ಹಾಸನ್ ಹಾಗೂ ಮಣಿರತ್ನಂ ಚಿತ್ರಕ್ಕೆ ಹಣ ಹೂಡಿದ್ದಾರೆ. 2 ವಾರಕ್ಕೆ ಚಿತ್ರವನ್ನು ನೆಟ್ಫ್ಲಿಕ್ಸ್ನಲ್ಲಿ ಸ್ಟ್ರೀಮಿಂಗ್ ಮಾಡುವ ಬಗ್ಗೆ ಊಹಾಪೋಹ ಶುರುವಾಗಿದೆ.


Click it and Unblock the Notifications











