ಟಿವಿಕೆ ವಿಜಯ'ಯಾತ್ರೆ'; ರಜನಿಕಾಂತ್ ಹಾಗೂ ಕಮಲ್ ಮಲ್ಟಿಸ್ಟಾರರ್ ಚಿತ್ರ ನಿಂತು ಹೋಗುತ್ತಾ?
ತಮಿಳುನಾಡಿನಲ್ಲಿ ಈಗ ಟಿವಿಕೆ ಪಕ್ಷದ ಗೆಲುವಿನ ವಿಚಾರ ಭಾರೀ ಸದ್ದು ಮಾಡ್ತಿದೆ. ಸ್ವಂತ ಪಕ್ಷ ಕಟ್ಟಿ ಎರಡು ವರ್ಷದಲ್ಲಿ ಚುನಾವಣೆಗೆ ಸ್ಪರ್ಧಿಸಿ ನಟ ವಿಜಯ್ ಮುಖ್ಯಮಂತ್ರಿ ಪಟ್ಟಕ್ಕೇರುತ್ತಿದ್ದಾರೆ. ಡಿಎಂಕೆ ಹಾಗೂ ಎಡಿಎಂಕೆ ಪಕ್ಷಗಳು ಹೀನಾಯವಾಗಿ ಸೋಲುಂಡಿವೆ. ಇದರ ಪರಿಣಾಮ ಅಷ್ಟಿಷ್ಟಲ್ಲ. ತಮಿಳು ಚಿತ್ರರಂಗದ ಮೇಲೆ ಕೂಡ ಇದು ಪ್ರಭಾವ ಬೀರಲಿದೆ.
ಒಂದ್ಕಡೆ ಚುನಾವಣೆ ಗೆದ್ದು ಸರ್ಕಾರ ರಚಿಸುತ್ತಿರುವ ವಿಜಯ್ ಸಿನಿಮಾಗಳಿಂದ ಅಂತರ ಕಾಯ್ದುಕೊಳ್ಳಲಿದ್ದಾರೆ. ಅದು ಸಹಜವಾಗಿಯೇ ಅಭಿಮಾನಿಗಳ ಬೇಸರಕ್ಕೆ ಕಾರಣವಾಗಿದೆ. ಮತ್ತೆ ದಳಪತಿ ಯಾವಾಗ ಬಣ್ಣ ಹಚ್ಚುತ್ತಾರೆ ಎನ್ನುವುದು ಗೊತ್ತಿಲ್ಲ. ಮತ್ತೊಂದು ಡಿಎಂಕೆ ರೆಡ್ ಜೈಂಟ್ ಮೂವೀಸ್ ಸಂಸ್ಥೆ ನಿರ್ಮಾಣದ ಸಿನಿಮಾಗಳ ಕಥೆ ಏನು? ಎನ್ನುವ ಚರ್ಚೆ ಶುರುವಾಗಿದೆ. ತಮ್ಮದೇ ಪಕ್ಷ ಅಧಿಕಾರದಲ್ಲಿ ಇದ್ದಿದ್ದರಿಂದ ರೆಡ್ ಜೈಂಟ್ ಸಂಸ್ಥೆ ಚಿತ್ರ ನಿರ್ಮಾಣ, ವಿತರಣೆಗೆ ನೂರಾರು ಕೋಟಿ ಬಂಡವಾಳ ಸುರಿಯುತ್ತಿತ್ತು. ಇದು ಹೀಗೆ ಮುಂದುವರೆಯುತ್ತಾ ಕಾದು ನೋಡಬೇಕಿದೆ.

ಟಿವಿಕೆ ಆರ್ಭಟಕ್ಕೆ ಡಿಎಂಕೆ ಪಕ್ಷ ಹೀನಾಯವಾಗಿ ಸೋತಿದೆ. ಹಾಲಿ ಮುಖ್ಯಮಂತ್ರಿ ಎಂ. ಕೆ ಸ್ವಾಲಿನ್ ತಮ್ಮದೇ ಕ್ಷೇತ್ರದಲ್ಲಿ ಸೋತು ಮುಖಭಂಗ ಅನುಭವಿಸಿದ್ದಾರೆ. ಸ್ಟಾಲಿನ್ ಪುತ್ರ ಉದಯನಿಧಿ ಸ್ಟಾಲಿನ್ ಡಿಸಿಎಂ ಆಗಿದ್ದರು. ಅವರೇ ಡಿಎಂಕೆ ರೆಡ್ ಜೈಂಟ್ ಮೂವೀಸ್ ಚಿತ್ರ ನಿರ್ಮಾಣ ಸಂಸ್ಥೆ ಹುಟ್ಟಾಕ್ಕಿದ್ದರು. ಇದೇ ಸಂಸ್ಥೆ ರಜನಿಕಾಂತ್ ಹಾಗೂ ಕಮಲ್ ಹಾಸನ್ ನಟನೆಯ ಚಿತ್ರ ನಿರ್ಮಾಣ ಆರಂಭಿಸಿತ್ತು.
ದಶಕಗಳ ಬಳಿಕ ರಜನಿಕಾಂತ್ ಹಾಗೂ ಕಮಲ್ ಹಾಸನ್ ಮಲ್ಟಿಸ್ಟಾರರ್ ಚಿತ್ರದಲ್ಲಿ ನಟಿಸುತ್ತಿದ್ದಾರೆ. ನೆಲ್ಸನ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳಬೇಕಿದೆ. ಇತ್ತೀಚೆಗೆ ಪ್ರೋಮೊ ಸಮೇತ ಕ್ರೇಜಿ ಪ್ರಾಜೆಕ್ಟ್ ಘೋಷಣೆ ಆಗಿತ್ತು. ರಜನಿ ಹಾಗೂ ಕಮಲ್ ಸ್ಟೈಲಿಶ್ ಅವತಾರದಲ್ಲಿ ಕಾಣಿಸಿಕೊಂಡಿದ್ದ ಟೀಸರ್ ರಿಲೀಸ್ ಆಗಿತ್ತು. ಅಂದಾಜು 500 ಕೋಟಿ ರೂ. ಸಿನಿಮಾ ನಿರ್ಮಾಣವಾಗುತ್ತದೆ ಎನ್ನಲಾಗಿತ್ತು. ಇಂತಾದೊಂದು ಸಾಹಸಕ್ಕೆ ಉದಯನಿಧಿ ಸ್ಟಾಲಿನ್ ಕೈ ಹಾಕಿದ್ದಾರೆ. ಬಹಳ ವರ್ಷಗಳ ಬಳಿಕ ದಿಗ್ಗಜ ನಟರಿಬ್ಬರು ಒಟ್ಟಿಗೆ ತೆರೆ ಹಂಚಿಕೊಳ್ಳುತ್ತಿದ್ದಾರೆ. ಹಾಗಾಗಿ ನಿರೀಕ್ಷೆ ಹೆಚ್ಚಾಗಿತ್ತು. ಅದಕ್ಕೆ ತಕ್ಕಂತೆ ಇಬ್ಬರೂ ಸೇರಿ 300 ಕೋಟಿ ರೂ.ಗೂ ಅಧಿಕ ಸಂಭಾವನೆ ಪಡೆಯುತ್ತಿದ್ದಾರೆ ಎಂದು ಗುಲ್ಲಾಗಿದೆ.

ಇದೀಗ ತಮಿಳುನಾಡಿನಲ್ಲಿ ಡಿಎಂಕೆ ಪಕ್ಷ ಅಧಿಕಾರ ಕಳೆದುಕೊಂಡಿದೆ. ಹಾಗಾಗಿ ರಜನಿಕಾಂತ್ ಹಾಗೂ ಕಮಲ್ ಸಿನಿಮಾ ನಿಂತು ಹೋಗುತ್ತಾ ಎನ್ನುವ ಊಹಾಪೋಹ ಶುರುವಾಗಿದೆ. ಒಂದ್ಕಾಲದಲ್ಲಿ ರಜನಿ ಹಾಗೂ ಕಮಲ್ ಒಟ್ಟಿಗೆ ಒಂದಷ್ಟು ಸಿನಿಮಾಗಳಲ್ಲಿ ನಟಿಸಿದ್ದರು. ನಂತರ ನಾವಿಬ್ಬರು ಜೊತೆಯಾಗಿ ನಟಿಸೋದು ಬೇಡ ಎಂದು ಇಬ್ಬರೂ ನಿರ್ಧರಿಸಿದ್ದರು. ಪ್ಯಾನ್ ಇಂಡಿಯಾ ಟ್ರೆಂಡ್ ನಡೆಯುತ್ತಿರುವಾಗ ಇಬ್ಬರನ್ನು ಒಂದೇ ಫ್ರೇಮ್ನಲ್ಲಿ ಸೇರಿಸಲು ಉದಯನಿಧಿ ಸ್ಟಾಲಿನ್ ಮನಸ್ಸು ಮಾಡಿದ್ದರು. 'ಜೈಲರ್' ರೀತಿ ಹಿಟ್ ಸಿನಿಮಾ ಕೊಟ್ಟ ನೆಲ್ಸನ್ ಅವರನ್ನು ನಿರ್ದೇಶಕರಾಗಿ ಆಯ್ಕೆ ಮಾಡಿದ್ದರು. ಇನ್ನೆರಡು ತಿಂಗಳಲ್ಲಿ ಸಿನಿಮಾ ಚಿತ್ರೀಕರಣ ಆರಂಭವಾಗಬೇಕಿದೆ.
ಡಿಎಂಕೆ ಪಕ್ಷ ಈ ಸೋಲನ್ನು ನಿರೀಕ್ಷಿಸಿರಲಿಲ್ಲ. ಅದರಲ್ಲೂ ವಿಜಯ್ ನೇತೃತ್ವದ ಟಿವಿಕೆ ಪಕ್ಷ 100 ಕ್ಷೇತ್ರಗಳಲ್ಲಿ ಗೆದ್ದು ಅಧಿಕಾರ ಹಿಡಿಯುತ್ತದೆ ಎನ್ನುವುದನ್ನು ಕನಸಿನಲ್ಲಿಯೂ ಎಣಿಸಿರಲಿಲ್ಲ. ವಿಜಯ್ ಹಾಗೂ ತ್ರಿಷಾ ನಟನೆಯ 'ಕುರುವಿ' ಚಿತ್ರದ ಮೂಲಕ ರೆಡ್ ಜೈಂಟ್ ಮೂವೀಸ್ ಸಂಸ್ಥೆ ಚಿತ್ರ ನಿರ್ಮಾಣ ಆರಂಭಿಸಿತ್ತು. 'ಇಂಡಿಯನ್-2' ಹಾಗೂ 'ಥಗ್ ಲೈಫ್' ರೀತಿಯ ಭಾರೀ ಬಜೆಟ್ ಸಿನಿಮಾಗಳನ್ನು ನಿರ್ಮಿಸಿ ಕೈ ಸುಟ್ಟುಕೊಂಡಿತ್ತು. ಇನ್ನು ದೊಡ್ಡ ದೊಡ್ಡ ಸಿನಿಮಾಗಳನ್ನು ವಿತರಣೆ ಮಾಡಿ ಸಂಸ್ಥೆ ಗಮನ ಸೆಳೆಯುತ್ತಿತ್ತು. ಮುಂದಿನ ದಿನಗಳಲ್ಲಿ ಏನಾಗುತ್ತದೆ ಕಾದು ನೋಡಬೇಕಿದೆ.


Click it and Unblock the Notifications