ರಜನಿಕಾಂತ್ ರಾಜಕೀಯ ಪಕ್ಷದ ಬಗ್ಗೆ ಜೋಕ್ ಮಾಡಿದ ಹಾಸ್ಯನಟ ವಡಿವೇಲು
ಸೂಪರ್ ಸ್ಟಾರ್ ರಜನಿಕಾಂತ್ ರಾಜಕೀಯಕ್ಕೆ ಇಳಿಯುವುದಾಗಿ ಘೋಷಿಸಿ ವರ್ಷವೇ ಕಳೆದಿದೆ. ಇನ್ನೂ ಅವರು ರಾಜಕೀಯಪಕ್ಷದ ಹೆಸರು ಘೋಷಿಸಿಲ್ಲ. ಅದರ ಸ್ಥಾಪನೆಯ ದಿನಾಂಕವನ್ನೂ ಅಧಿಕೃತಗೊಳಿಸಿಲ್ಲ. ಆದರೆ ಮುಂಬರುವ ತಮಿಳುನಾಡು ವಿಧಾನಸಭೆ ಚುನಾವಣೆಯಲ್ಲಿ ತಮ್ಮ ಪಕ್ಷ ಸ್ಪರ್ಧಿಸಲಿದೆ ಎಂಬ ಸುಳಿವನ್ನು ರಜನಿ ನೀಡಿದ್ದಾರೆ. ಅಲ್ಲದೆ, ತಾವು ಪಕ್ಷದ ನಾಯಕತ್ವ ವಹಿಸಿದರೂ, ಮುಖ್ಯಮಂತ್ರಿ ಅಭ್ಯರ್ಥಿ ಆಗುವುದಿಲ್ಲ ಎಂದು ರಜನಿ ಹೇಳಿರುವುದು ಚರ್ಚೆಯಲ್ಲಿದೆ.
ಈ ಬಗ್ಗೆ ತಮಿಳಿನ ಖ್ಯಾತ ಹಾಸ್ಯ ನಟ ವಡಿವೇಲು ತಮಾಷೆ ಮಾಡಿದ್ದಾರೆ. ಹಾಸ್ಯ ನಟನೆಯಿಂದ ಮನೆಮಾತಾಗಿರುವ ವಡಿವೇಲು ಅಪಾರ ಅಭಿಮಾನಿಗಳನ್ನು ಸಂಪಾದಿಸಿದ್ದಾರೆ. 'ಚಂದ್ರಮುಖಿ' ಚಿತ್ರದಲ್ಲಿ ರಜನಿಕಾಂತ್ ಜತೆಗೆ ತೆರೆ ಹಂಚಿಕೊಂಡಿದ್ದ ವಡಿವೇಲು, ರಜನಿಕಾಂತ್ ನಾಯಕತ್ವವನ್ನು ಸ್ವಾಗತಿಸಿದ್ದಾರೆ. ಅವರು ಮುಖ್ಯಮಂತ್ರಿ ಅಭ್ಯರ್ಥಿಯಾಗುವುದಿಲ್ಲ ಎಂದು ಹೇಳಿರುವುದನ್ನೂ ಪ್ರಶಂಸಿಸಿದ್ದಾರೆ.

ಹಾಸ್ಯ ಚಟಾಕಿ ಹಾರಿಸಿದ ವಡಿವೇಲು
ತೂತುಕುಡಿ ಜಿಲ್ಲೆಯ ತಿರುಚೆಂದೂರು ಸುಬ್ರಮಣ್ಯ ಸ್ವಾಮಿ ದೇವಾಲಯಕ್ಕೆ ವಡಿವೇಲು ಶುಕ್ರವಾರ ಭೇಟಿ ನೀಡಿದ್ದರು. ಈ ಸಂದರ್ಭದಲ್ಲಿ ಮಾಧ್ಯಮದವರು ವಡಿವೇಲು ಅವರನ್ನು ರಜನಿಕಾಂತ್ ರಾಜಕೀಯ ಪ್ರವೇಶದ ಬಗ್ಗೆ ಪ್ರಶ್ನಿಸಿದಾಗ ಹಾಸ್ಯ ಚಟಾಕಿ ಹಾರಿಸಿದ್ದಾರೆ.

ರಜನಿಕಾಂತ್ಗೇ ಗೊತ್ತಿಲ್ಲ
ರಜನಿಕಾಂತ್ ಅವರು ಯಾವಾಗ ರಾಜಕೀಯ ಪಕ್ಷವನ್ನು ಸ್ಥಾಪಿಸುತ್ತಾರೆ ಎನ್ನುವುದು ತಮಗಾಗಲೀ, ಮಾಧ್ಯಮದವರಿಗಾಗಲೀ ಅಥವಾ ಸ್ವತಃ ರಜನಿಕಾಂತ್ ಅವರಿಗೇ ಆಗಲೀ ತಿಳಿದಿಲ್ಲ ಎಂದು ವಡಿವೇಲು ತಮಾಷೆ ಮಾಡಿದ್ದಾರೆ.

ನಾನೇ ಸಿಎಂ ಆಗುತ್ತೇನೆ
ಅಷ್ಟಕ್ಕೆ ಸುಮ್ಮನಾಗದ ವಡಿವೇಲು, ತಾವೂ ಮುಖ್ಯಮಂತ್ರಿಯಾಗಬೇಕು ಎಂಬ ಆಸೆ ಹೊಂದಿರುವುದಾಗಿ ಹೇಳಿದರು. ಸುತ್ತಲೂ ನೆರೆದಿದ್ದ ಜನರ ಗುಂಪಿನತ್ತ ನೋಡಿ, ನಾನು ಮುಖ್ಯಮಂತ್ರಿಯಾಗುವುದನ್ನು ಅನೇಕರು ತಡೆಯಲು ಪ್ರಯತ್ನಿಸುತ್ತಿದ್ದಾರೆ. ಹೀಗಾಗಿ ನೀವೆಲ್ಲ ನನಗೆ ವೋಟ್ ಹಾಕುತ್ತೀರಲ್ಲ? ಎಂದು ಪ್ರಶ್ನಿಸಿದರು. ಜನರು ಹೌದು ಎಂದು ಕೂಗಿದಾಗ, ವಡಿವೇಲು ತಮ್ಮ ಧ್ವನಿ ಬದಲಿಸಿ '2021ರಲ್ಲಿ ನಾನೇ ಸಿಎಂ ಆಗುತ್ತೇನೆ' ಎಂದು ಕೂಗಿದರು. ಆಗ ಸುತ್ತಲೂ ನಗುವಿನ ಅಲೆ ಎದ್ದಿತು.

ಒಳ್ಳೆಯವರನ್ನು ಸ್ವೀಕರಿಸುತ್ತಾರೆ
ರಜನಿಕಾಂತ್ ಅವರ ಹೊಸ ಸಿದ್ಧಾಂತವಾದ ಪಕ್ಷಕ್ಕೊಂದು ನಾಯಕತ್ವ, ಸರ್ಕಾರಕ್ಕೊಂದು ನಾಯಕತ್ವ ಎಂಬ ಸಿದ್ಧಾಂತವನ್ನು ಸ್ವಾಗತ ಮಾಡುತ್ತೇನೆ. ಜನರಿಗೆ ಒಳ್ಳೆಯದನ್ನು ಮಾಡುವ ಜನರನ್ನು ಅವರು ಸ್ವೀಕರಿಸುತ್ತಾರೆ ಎಂದು ವಡಿವೇಲು ಹೇಳಿದರು.


Click it and Unblock the Notifications











