ದ್ವೇಷ ಮರೆತು ಮತ್ತೆ ಒಂದಾಗುತ್ತಿದ್ದಾರಾ ವಿಶಾಲ್ ಮತ್ತು ಮಿಸ್ಕಿನ್?
ನಟ ವಿಶಾಲ್ ಮತ್ತು ನಿರ್ದೇಶಕ ಮಿಸ್ಕಿನ್ ನಡುವಿನ ಕಿತ್ತಾಟ ದೊಡ್ಡ ವಿವಾದ ಸೃಷ್ಟಿಸಿತ್ತು. ಲಾಕ್ ಡೌನ್ಗೂ ಮುನ್ನ ಜತೆಯಾಗಿ ಸಿನಿಮಾವೊಂದಕ್ಕೆ ಕೆಲಸ ಮಾಡುತ್ತಿದ್ದ ಇಬ್ಬರೂ ಜಗಳವಾಡಿಕೊಂಡಿದ್ದರು. ಅದು ಕಾಲವುಡ್ನಲ್ಲಿ ತೀವ್ರಚರ್ಚೆಗೆ ಒಳಗಾಗಿತ್ತು. ಈಗ ಇಬ್ಬರೂ ತಮ್ಮ ವೈಮನಸ್ಸು ಮರೆತು ಒಂದುಗೂಡಲಿದ್ದಾರೆ ಎಂದು ಹೇಳಲಾಗುತ್ತಿದೆ.
Recommended Video
ವಿಶಾಲ್ ಮತ್ತು ಮಿಸ್ಕಿನ್ 'ತುಪ್ಪರಿವಾಳನ್ 2' ಚಿತ್ರಕ್ಕೆ ಒಟ್ಟಿಗೆ ಕೆಲಸ ಮಾಡುತ್ತಿದ್ದರು. ಇಬ್ಬರು ಜತೆಯಾಗಿ ನೀಡಿದ್ದ 'ತುಪ್ಪರಿವಾಳನ್' ಚಿತ್ರದ ಮುಂದುವರಿದ ಭಾಗ ಇದು. ಫೆಬ್ರವರಿವರೆಗೂ ಎಲ್ಲವೂ ಚೆನ್ನಾಗಿ ನಡೆದಿತ್ತು. ಆದರೆ ಇದ್ದಕ್ಕಿದ್ದಂತೆ ಶುರುವಾದ ಜಗಳ ಇಬ್ಬರ ನಡುವೆ ಕಂದಕ ಸೃಷ್ಟಿಸಿತ್ತು. ಮಿಸ್ಕಿನ್ ಅವರನ್ನು ಕೈಬಿಟ್ಟು ತಾವೇ ನಿರ್ದೇಶನ ಮಾಡಲು ವಿಶಾಲ್ ಮುಂದಾಗಿದ್ದರು. ಆದರೆ ಈಗ ಮಿಸ್ಕಿನ್ ಮನವೊಲಿಸಿ ವಾಪಸ್ ಕರೆತರಲು ಅವರು ಬಯಸಿದ್ದಾರಂತೆ.
ವಿಶಾಲ್ ಅವರ ಕಂಪೆನಿಯ ಮಹಿಳಾ ಅಕೌಟೆಂಟ್ ಹಣ ವಂಚಿಸಿದ್ದಾರೆ ಎಂದು ಆರೋಪಿಸಲಾಗಿತ್ತು. ಇದರ ಬಳಿಕ ಆ ಮಹಿಳೆ ವಿಶಾಲ್ ವಿರುದ್ಧ ಪ್ರತಿ ಆರೋಪ ಮಾಡಿದ್ದರು. ಮುಂದೆ ಓದಿ..

ವಿಶಾಲ್-ಮಿಸ್ಕಿನ್ ಕಿತ್ತಾಟ
ವಿಶಾಲ್ ಮತ್ತು ಮಿಸ್ಕಿನ್ ಪರಸ್ಪರ ದೋಷಾರೋಪಣೆ ಮಾಡುವ ಮೂಲಕ ತೀವ್ರ ವಾದ-ವಿವಾದ ನಡೆಸಿದ್ದರು. 'ಮೂರು ಫ್ಲಾಪ್ ಚಿತ್ರಗಳ ಬಳಿಕ ವಿಶಾಲ್ ನನ್ನ ಬಳಿ ಮತ್ತೊಂದು ಸಿನಿಮಾಕ್ಕಾಗಿ ಬಂದಿದ್ದರು. ಅವರಿಗೆ ಪಾನ್ ಇಂಡಿಯಾ ಚಿತ್ರದ ಕಥೆಯೊಂದನ್ನು ಹೇಳಿದ್ದೆ. ಅದು ಕೊಹಿನೂರ್ ವಜ್ರದ ಸುತ್ತ ನಡೆಯುವ ಕಥೆ. ಅದಕ್ಕೆ 20 ಕೋಟಿ ಬಜೆಟ್ ಬೇಕಿತ್ತು. ಆದರೆ ಬಂಡವಾಳ ಹೂಡಲು ಸಿದ್ಧರಿದ್ದ ನಿರ್ಮಾಪಕರೊಬ್ಬರು ಸಿಕ್ಕಿದ್ದರು. ಹೀಗಾಗಿ 10 ಕೋಟಿ ಬಜೆಟ್ನಲ್ಲಿ ಮಾಡಬಹುದಾದ ಬೇರೆ ಕಥೆ ಹೇಳುವುದಾಗಿ ತಿಳಿಸಿದ್ದೆ. ಇದು ತಮ್ಮದೇ ಸ್ವಂತ ಬ್ಯಾನರ್ನಲ್ಲಿ ನಿರ್ಮಾಣವಾಗಬೇಕು ಎಂದು ವಿಶಾಲ್ ಹಠ ಹಿಡಿದರು' ಎಂದು ಮಿಸ್ಕಿನ್ ಹೇಳಿದ್ದರು.

ಕೆಟ್ಟ ಪದಗಳಿಂದ ನಿಂದಿಸಿದ್ದರು
'ಲಂಡನ್ನಲ್ಲಿ ಕುಳಿತು ಕಥೆ ಬರೆಯಲು ಸುಮಾರು 35 ಲಕ್ಷ ಖರ್ಚು ಮಾಡಿದ್ದೇನೆ ಎಂದು ವಿಶಾಲ್ ಹೇಳಿದ್ದಾರೆ. ಅವರು ನನಗೆ ಅದಕ್ಕೆ ಪುರಾವೆ ತೋರಿಸುತ್ತಾರೆಯೇ? ನನಗೆ ನೀಡಲಾಗಿದ್ದ 7.5 ಲಕ್ಷ ರೂ.ದಲ್ಲಿ 7 ಲಕ್ಷ ರೂ. ಮಾತ್ರ ಬಳಸಿದ್ದೆ. ಅವರು ನನ್ನ ಹಾಗೂ ನನ್ನ ತಾಯಿಯನ್ನು ಅವಾಚ್ಯವಾಗಿ ನಿಂದಿಸಿದ್ದು ಮತ್ತು ಅವರ ಎದುರಿಗೆ ನನ್ನ ಸಹೋದರ ಬಂದಾಗ ಹೊಡೆದಿದ್ದಕ್ಕೆ ನನ್ನ ಬಳಿ ಪುರಾವೆಗಳಿವೆ' ಎಂದು ತಿಳಿಸಿದ್ದರು.

ಕುರುಕ್ಷೇತ್ರಯುದ್ಧಕ್ಕೆ ಬನ್ನಿ
32 ದಿನಗಳ ಶೂಟಿಂಗ್ಅನ್ನು ಆಗಲೇ ಮುಗಿಸಿದ್ದೆ. ಚಿತ್ರದ ನಿರ್ಮಾಣ ಮುಂದುವರಿಸಲು ವಿಶಾಲ್ಗೆ ಎನ್ಓಸಿ ನೀಡುವಂತೆ ಒತ್ತಡ ಹೇರಲಾಗಿತ್ತು ಎಂದಿದ್ದ ಮಿಸ್ಕಿನ್, 'ಇದು ಆರಂಭವಷ್ಟೇ, ಇನ್ನೂ ನಿಮಗೆ ಕೆಟ್ಟ ದಿನಗಳ ಬರುವುದಿದೆ ವಿಶಾಲ್. ನೀವೇ ಮೇಲೆ ಎಂದುಕೊಂಡಿದ್ದರೆ ಕುರುಕ್ಷೇತ್ರಕ್ಕೆ ಯುದ್ಧಕ್ಕೆ ನಡೆಯಿರಿ ಎಂದು ಸವಾಲು ಹಾಕಿದ್ದರು.

ಮಿಸ್ಕಿನ್ ಹೆಸರು ಕಿತ್ತುಹಾಕಿದ್ದ ವಿಶಾಲ್
ಈ ಚಿತ್ರ ಮಾಡಲು ಮಿಸ್ಕಿನ್ ಇನ್ನೂ 40 ಕೋಟಿ ಕೇಳುತ್ತಿದ್ದಾರೆ ಎಂದು ಆರೋಪಿಸಿದ್ದ ವಿಶಾಲ್, ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆಯ ವೇಳೆ ಮಿಸ್ಕಿನ್ ಹೆಸರನ್ನು ಕಿತ್ತು ಹಾಕಿದ್ದರು. ಪ್ರಸನ್ನ, ಲವ್ಲಿ ಸಿಂಗ್, ನಸ್ಸಾರ್, ಗೌತಮಿ ಮತ್ತು ರಹಮಾನ್ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ಈ ಚಿತ್ರದ ಚಿತ್ರೀಕರಣ ಸದ್ಯಕ್ಕೆ ಸ್ಥಗಿತಗೊಂಡಿದೆ.

ಮತ್ತೆ ಮಿಸ್ಕಿನ್ ಮೊರೆ ಹೋದ ವಿಶಾಲ್
ವಿಶಾಲ್ ಫಿಲ್ಮ್ ಫ್ಯಾಕ್ಟರಿ ಹೋಮ್ ಬ್ಯಾನರ್ ಮೂಲಕ 'ಚಕ್ರ' ಚಿತ್ರವನ್ನೂ ಮಾಡುತ್ತಿರುವ ವಿಶಾಲ್, 'ತುಪ್ಪರಿವಾಳನ್ 2' ಚಿತ್ರವನ್ನು ಪೂರ್ಣಗೊಳಿಸಲು ಮತ್ತೆ ಮಿಸ್ಕಿನ್ ಮೊರೆ ಹೋಗಲು ನಿರ್ಧರಿಸಿದ್ದಾರೆ. ಈ ಚಿತ್ರದ ಕಥೆಗೆ ಅಗತ್ಯವಾದ ಕೆಲವು ಅಂಶಗಳನ್ನು ಸೇರಿಸಲು ಮಿಸ್ಕಿನ್ ಅವರಿಂದಲೇ ಸಾಧ್ಯ. ಹೀಗಾಗಿ ಈ ತೀರ್ಮಾನ ಮಾಡಿದ್ದಾರೆ ಎನ್ನಲಾಗಿದೆ. ಆದರೆ ಮಿಸ್ಕಿನ್ ಈಗ ಅರುಣ್ ವಿಜಯ್ ಜತೆಗಿನ ಚಿತ್ರದಲ್ಲಿ ಬಿಜಿಯಾಗಿದ್ದಾರೆ ಎಂದು ಹೇಳಲಾಗಿದೆ.


Click it and Unblock the Notifications











