ಬಿಹಾರ ಚುನಾವಣೆ ಫಲಿತಾಂಶ ; ತಮಿಳಿಗರೇ ಎಚ್ಚರ - ಕಮಲ್ ಹಾಸನ್ ವಾರ್ನಿಂಗ್
ಸಕಲ ಕಲಾ ವಲ್ಲಭ, ವಿಶ್ವರೂಪಿ, ಉಳಗನಾಯಗನ್ ಮುಂತಾದ ಬಿರುದುಗಳನ್ನು ಪಡೆದಿರುವವರು ಕಮಲ ಹಾಸನ್. ಅತ್ಯದ್ಭುತ ಅನ್ನಿಸುವ ಸಿನಿಮಾಗಳನ್ನು ನೀಡಿ ಭಾರತೀಯ ಚಿತ್ರರಂಗದ ಹೆಸರನ್ನು ಜಾಗತಿಕ ಮಟ್ಟಕ್ಕೆ ಕರೆದೊಯ್ದವರಲ್ಲಿ ಇವರು ಕೂಡ ಒಬ್ಬರು. ಆದರೆ ಕಮಲ್ ಹಾಸನ್ ಕಳೆದ ಕೆಲ ವರ್ಷಗಳಿಂದ ಒಂದು ಕಡೆ ಸಿನಿಮಾ ಮತ್ತೊಂದು ಕಡೆ ರಾಜಕಾರಣ ಇನ್ನೊಂದು ಕಡೆ ರಿಯಾಲಿಟಿ ಶೋಗಳನ್ನು ...
ಏಕಕಾಲಕ್ಕೆ ನಿಭಾಯಿಸುತ್ತಾ ಮೂರು ದೋಣಿಯ ನಾವಿಕನಾಗಿದ್ದರು. ಹೀಗಾಗಿ ತಮ್ಮ ನೆಚ್ಚಿನ ನಾಯಕನನ್ನು ಬೆಳ್ಳಿ ತೆರೆಯ ಮೇಲೆ ಹೆಚ್ಚೆಚ್ಚು ನೋಡಲು ಆಗದೇ ತಮ್ಮ ಅಸಮಾಧಾನವನ್ನು ಅಭಿಮಾನಿಗಳು ಹೊರ ಹಾಕುತ್ತಾನೇ ಬಂದಿದ್ದರು.ಹೀಗಾಗಿಯೇ ಏನೋ, ಈಗ ಕಮಲ್ ಹಾಸನ್ ತಮ್ಮ ಹಳೆಯ ಫಾರ್ಮಿಗೆ ಮರಳಿದ್ದಾರೆ. ಸಿನಿಮಾದತ್ತ ಹೆಚ್ಚೆಚ್ಚು ಗಮನ ಕೊಡ್ತಿದ್ದಾರೆ.

ಆದರೆ, ಈ ರಾಜಕೀಯದ ಹುಚ್ಚು ಅಷ್ಟು ಸುಲಭವಾಗಿ ಬಿಡುವಂತಹದ್ದಲ್ಲ. ಎಲ್ಲಕ್ಕಿಂತ ಹೆಚ್ಚಾಗಿ ಮಾಧ್ಯಮದವರು ಸುಮ್ಮನೆ ಇರಲ್ಲ. ಯಾವುದನ್ನೂ ಬಹುಬೇಗ ಮರೆಯಲ್ಲ. ಇದಕ್ಕೆ ಕೈಗನ್ನಡಿ ಎಂಬಂತೆ ಬಿಹಾರದಲ್ಲಿ ಚುನಾವಣೆ ಫಲಿತಾಂಶ ಹೊರ ಬರುತ್ತಿದ್ದಂತೆಯೇ ಕಮಲ್ ಹಾಸನ್ ಅವರಿಗೆ ರಾಜಕೀಯದ ಪ್ರಶ್ನೆಯನ್ನು ಕೇಳಲಾಗಿದೆ.
ಹೀಗಾಗಿಯೇ ತಮಗೆದುರಾದ ಈ ರಾಜಕೀಯದ ಪ್ರಶ್ನೆಗೆ ಸದ್ಯ ಉತ್ತರವನ್ನು ನೀಡಿರುವ ಮಕ್ಕಳ್ ನೀಧಿ ಮಯ್ಯಮ್ (ಎಂಎನ್ಎಂ) ಮುಖ್ಯಸ್ಥ ಕಮಲ್ ಹಾಸನ್, ತಮಿಳುನಾಡಿನ ಜನರು ಬಹಳ ಜಾಗರೂಕರಾಗಿರಬೇಕು ಎಂದು ಹೇಳಿದ್ದಾರೆ. ನಾವು ಜಾಗರೂಕರಾಗಿರಬೇಕು. ಅಖಂಡ ತಮಿಳುನಾಡು ಜಾಗರೂಕರಾಗಿರಬೇಕು ಎಂದು ಮಾತ್ರ ನಾನು ಹೇಳಬಲ್ಲೆ ಎಂದು ಹೇಳಿದ್ದಾರೆ. ಇವಿಎಂನಲ್ಲಿ ಗೋಲ್ಮಾಲ್ ಆಗಿರಬಹದು ಎಂದು ಪರೋಕ್ಷವಾಗಿ ಹೇಳಿದ್ದಾರೆ.
ಅಂದ್ಹಾಗೇ ತಮಿಳುನಾಡಿನಲ್ಲಿ ಮುಂದಿನ ವರ್ಷ ಅಂದರೆ 2026ರಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದೆ. ಈಗಾಗಲೇ 2026ರ ವಿಧಾನಸಭಾ ಚುನಾವಣೆಗೆ ಎಐಎಡಿಎಂಕೆ ನೇತೃತ್ವದಲ್ಲಿ ಅತಿ ದೊಡ್ಡ ಮೈತ್ರಿಕೂಟ ರಚನೆಯಾಗಲಿದೆ ಎಂದು ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ಎಡಪ್ಪಾಡಿ ಕೆ. ಪಳನಿಸ್ವಾಮಿ ಘೋಷಿಸಿದ್ದಾರೆ.
ಮತ್ತೊಂದು ಕಡೆ ತಮಿಳಿನ ಸೂಪರ್ ಸ್ಟಾರ್ ಇಳಯ ದಳಪತಿ ವಿಜಯ್ ಅವರ ತಮಿಳಗ ವೆಟ್ರಿ ಕಳಗಂ (TVK) ಪಕ್ಷ ಕೂಡ 2026ರ ಚುನಾವಣೆಗೆ ಭರ್ಜರಿ ತಯಾರಿ ನಡೆಸುತ್ತಿದೆ. ಪಕ್ಷದ ಅಧ್ಯಕ್ಷ ನಟ ವಿಜಯ್ ದಳಪತಿ ನೇತೃತ್ವದಲ್ಲಿ ಸಭೆಯ ಮೇಲೆ ಸಭೆ ನಡೆಸುತ್ತಿದೆ. ರ್ಯಾಲಿ ಮೇಲೆ ರ್ಯಾಲಿಯನ್ನು ಮಾಡುತ್ತಿದೆ.

ಇನ್ನೊಂದು ಕಡೆ ಕಮಲ್ ಹಾಸನ್ ಅವರ ಎಂಎನ್ಎಮ್ ಪಕ್ಷ 2026ರ ವಿಧಾನಸಭಾ ಚುನಾವಣೆಗೆ ತಯಾರಿ ಆರಂಭಿಸಿದ್ದು, ಎಂಎನ್ಎಮ್ ತಮ್ಮ ಪಕ್ಷದ ಅಭ್ಯರ್ಥಿಗಳು ಮತದಾರರ ಗಮನ ಸೆಳೆಯಲು ಅನುಕೂಲವಾಗುವಂತೆ ಒಂದು ಸಾಮಾನ್ಯ ಚಿಹ್ನೆಯನ್ನು ಪಡೆಯಲು ಮುಂದಾಗಿದೆ. ಈ ನಿಟ್ಟಿನಲ್ಲಿ, ಪಕ್ಷವು 10 ಚಿಹ್ನೆಗಳ ಪಟ್ಟಿಯನ್ನು ತಯಾರಿಸಿ ಚುನಾವಣಾ ಆಯೋಗಕ್ಕೆ ನೀಡಿದೆ. ಈ ಚಿಹ್ನೆಗಳಲ್ಲಿ ಯಾವುದಾದರೂ ಒಂದನ್ನು ತಮ್ಮ ಪಕ್ಷದ ಅಭ್ಯರ್ಥಿಗಳಿಗೆ ನೀಡಬೇಕೆಂದು ''ಮಕ್ಕಳ್ ನೀಧಿ ಮಯ್ಯಮ್'' ಮನವಿ ಮಾಡಿದೆ.
ಪಕ್ಷದ ಈ ನಿರ್ಧಾರವು ಚುನಾವಣಾ ಪ್ರಚಾರದಲ್ಲಿ ತಮ್ಮ ಗುರುತನ್ನು ಬಲಪಡಿಸಿಕೊಳ್ಳುವ ಉದ್ದೇಶವನ್ನು ಹೊಂದಿದ್ದು, ಒಂದು ಸಾಮಾನ್ಯ ಚಿಹ್ನೆಯು ಮತದಾರರಿಗೆ ಪಕ್ಷವನ್ನು ಸುಲಭವಾಗಿ ಗುರುತಿಸಲು ಸಹಾಯ ಮಾಡುತ್ತದೆ. ಇದು ಚುನಾವಣೆಯಲ್ಲಿ ಪಕ್ಷದ ಕಾರ್ಯಕರ್ತರಿಗೂ ಅನುಕೂಲಕರವಾಗಲಿದೆ ಎಂದು ಕಮಲ್ ಹಾಸನ್ ಅವರ ಪಕ್ಷ ''ಮಕ್ಕಳ್ ನೀಧಿ ಮಯ್ಯಮ್'' ಈ ಹಿಂದೆ ಹೇಳಿದೆ.
ಸದ್ಯ ಕಮಲ್ ಹಾಸನ್ ಬಿಹಾರ ಚುನಾವಣೆಯ ಫಲಿತಾಂಶದ ಕುರಿತು ಪ್ರತಿಕ್ರಿಯೆ ನೀಡಿದ್ದಾರೆ. ಕಮಲ್ ಹಾಸನ್ ಅವರ ಈ ಆಕ್ಷನ್ಗೆ ಯಾವ ರೀತಿಯ ರಿಯ್ಯಾಕ್ಷನ್ ಬರುತ್ತೆ..? ಯಾರೆಲ್ಲಾ ಕಮಲ್ ಹಾಸನ್ ವಿರುದ್ದ ಕಾಮೆಂಟ್ ಮಾಡುತ್ತಾರೆ ? ಎನ್ನುವುದನ್ನು ಕಾದು ನೋಡಬೇಕಿದೆ.


Click it and Unblock the Notifications











