ಕರ್ನಾಟಕದಲ್ಲಿ ಆಗುತ್ತಿರುವುದು ತಮಿಳುನಾಡಿನಲ್ಲಿ ಆಗುವುದು ಬೇಡ: ಕಮಲ್ ಹಾಸನ್
ಕರ್ನಾಟಕ ಕಳೆದ ಕೆಲವು ದಿನಗಳಿಂದ ರಾಷ್ಟ್ರ, ಅಂತರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗುತ್ತಿದೆ. ಆದರೆ ಒಳ್ಳೆಯ ಕಾರಣಕ್ಕೆ ಅಲ್ಲ ಬದಲಿಗೆ ಕೋಮು ಕಾರಣಕ್ಕೆ.
ಕರ್ನಾಟಕದ ಕೆಲವು ಜಿಲ್ಲೆಗಳಲ್ಲಿ ಕಾಲೇಜುಗಳಲ್ಲಿ ಹಿಜಾಬ್ v/s ಕೇಸರಿ ಜಗಳ ತಾರಕಕ್ಕೇರಿದ್ದು ನಿನ್ನೆಯಂತೂ ಹಲವು ಕಡೆ ಕಲ್ಲು ತೂರಾಟ, ಲಾಠಿ ಚಾರ್ಜ್, ಅಶ್ರುವಾಯು ಪ್ರಯೋಗಗಳು ನಡೆದಿವೆ. ಹಲವು ವಿದ್ಯಾರ್ಥಿಗಳು, ವಿದ್ಯಾರ್ಥಿನಿಯರು, ಶಿಕ್ಷಕರು, ಪೊಲೀಸರು ಗಾಯಗೊಂಡಿದ್ದಾರೆ. ಪರಿಸ್ಥಿತಿಯನ್ನು ತಿಳಿಗೊಳಿಸಲು ಸರ್ಕಾರವು ಮೂರು ದಿನಗಳ ಕಾಲ ಪ್ರೌಢಶಾಲೆ ಹಾಗೂ ಕಾಲೇಜುಗಳಿಗೆ ರಜೆ ಘೋಷಿಸಿದೆ.
ಕರ್ನಾಟಕದಲ್ಲಿ ನಡೆಯುತ್ತಿರುವ ಕೋಮು ಗಲಭೆ ವಿಚಾರ ರಾಷ್ಟ್ರ, ಅಂತರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗಿದ್ದು, ತಮಿಳುನಾಡಿನಲ್ಲಿ ಈ ಬಗ್ಗೆ ಪ್ರತಿಕ್ರಿಯಿಸಿರುವ ನಟ, ರಾಜಕಾರಣಿ ಕಮಲ್ ಹಾಸನ್, ''ಕರ್ನಾಟಕದಲ್ಲಿ ಆಗುತ್ತಿರುವುದು ತಮಿಳುನಾಡಿನಲ್ಲಿ ಆಗುವುದು ಬೇಡ'' ಎಂದಿದ್ದಾರೆ.
ಕರ್ನಾಟಕದಲ್ಲಿ ನಡೆಯುತ್ತಿರುವ 'ವಸ್ತ್ರ ರಾಜಕೀಯ'ದ ಬಗ್ಗೆ ಟ್ವೀಟ್ ಮಾಡಿರುವ ನಟ, ರಾಜಕಾರಣಿ ಕಮಲ್ ಹಾಸನ್, ''ಕರ್ನಾಟಕದಲ್ಲಿ ಆಗುತ್ತಿರುವ ಸಂಗತಿ ಇತರೆ ಭಾಗಗಳನ್ನು ಪ್ರಭಾವಿಸುತ್ತಿದೆ. ಈ ಘಟನೆ ಮುಗ್ಧ ವಿದ್ಯಾರ್ಥಿಗಳ ಮನದಲ್ಲಿ ಧರ್ಮ ವಿಭಜನೆ ಭಾವ ಮೂಡಿಸುತ್ತಿದೆ. ಕೋಮು ದ್ವೇಷಿಗಳನ್ನಾಗಿ ಅವರನ್ನು ಪರಿವರ್ತಿಸುತ್ತಿದೆ. ಇಂಥಹಾ ಸಮಯದಲ್ಲಿ ನಾವುಗಳು ಹೆಚ್ಚು ಜಾಗೃತೆಯಾಗಿ ಇರಬೇಕು'' ಎಂದು ಕಮಲ್ ಹಾಸನ್ ಹೇಳಿದ್ದಾರೆ.

''ಕರ್ನಾಟಕದಲ್ಲಿ ಆಗುತ್ತಿರುವುದು ಇಲ್ಲಿ ಆಗುವುದು ಬೇಡ''
''ನಮ್ಮ ನೆರೆಯ ರಾಜ್ಯ ಕರ್ನಾಟಕದಲ್ಲಿ ಏನು ಆಗುತ್ತಿದೆಯೋ ಅದು ತಮಿಳುನಾಡಿನಲ್ಲಿ ಸುತಾರಾಂ ಆಗುವುದು ಬೇಡ. ನಮ್ಮ ರಾಜ್ಯದ ಪ್ರಗತಿಪರ ಪಡೆ ಈ ಸಮಯದಲ್ಲಿ ಎಚ್ಚರಿಕೆಯಿಂದಲೂ ಸಜ್ಜಾಗಿಯೂ ಇರಬೇಕು'' ಎಂದು ಕಮಲ್ ಹಾಸನ್ ಹೇಳಿದ್ದಾರೆ. ಕಮಲ್ ಹಾಸನ್ ಟ್ವೀಟ್ಗೆ ಹಲವರು ಧನಾತ್ಮಕವಾಗಿ ಪ್ರತಿಕ್ರಿಯೆ ನೀಡಿದ್ದಾರೆ. ಕಮಲ್ ಹಾಸನ್ ಮೊದಲಿನಿಂದಲೂ ಜಾತ್ಯಾತೀತ ಹಾಗೂ ಧರ್ಮಾತೀತ ವಿಚಾರಗಳಲ್ಲಿ ನಂಬಿಕೆ ಇಟ್ಟವರು. ತಮ್ಮ ಪಕ್ಷವನ್ನು ಎಂದಿಗೂ ಬಿಜೆಪಿ ಜೊತೆಯಾಗಲಿ ಇತರೆ ಕೋಮು ಪ್ರೇಮಿ ಪಕ್ಷಗಳ ಜೊತೆ ವಿಲೀನ ಅಥವಾ ಕೈ ಜೋಡಿಸುವುದಿಲ್ಲ ಎಂದು ಅವರ ಈ ಹಿಂದೆ ಸಂದರ್ಶನವೊಂದರಲ್ಲಿ ಹೇಳಿದ್ದರು. ''ನನ್ನ ಬಣ್ಣ ಕೇಸರಿ ಅಲ್ಲ'' ಎಂದಿದ್ದರು ಕಮಲ್.

'ಕಡಿಮೆ ಬಟ್ಟೆ ತೊಟ್ಟರೂ, ಸಮಸ್ಯೆ ಹೆಚ್ಚು ಬಟ್ಟೆ ತೊಟ್ಟರೂ ಸಮಸ್ಯೆ'
''ಧರಿಸುವ ಬಟ್ಟೆಯ ಕಾರಣಕ್ಕೆ ಹೆಣ್ಣು ಮಕ್ಕಳನ್ನು ಶಿಕ್ಷಣದಿಂದ ವಂಚಿತರನ್ನಾಗಿ ಮಾಡುತ್ತಿರುವುದು ಭಯಾನಕವಾಗಿದೆ. ಕಡಿಮೆ ಬಟ್ಟೆ ಅಥವಾ ಹೆಚ್ಚು ಬಟ್ಟೆ ಧರಿಸುವ ಕಾರಣಕ್ಕೆ ಹೆಣ್ಣುಮಕ್ಕಳ ಬಗ್ಗೆ ಆಕ್ಷೇಪ ಎತ್ತುವುದು ಹೀಗೆಯೇ ಮುಂದುವರೆದಿದೆ. ಭಾರತೀಯ ರಾಜಕೀಯ ನಾಯಕರು ಮುಸ್ಲಿಂ ಹೆಣ್ಣುಮಕ್ಕಳನ್ನು ಕಡೆಗಣಿಸುವುದನ್ನು ನಿಲ್ಲಿಸಬೇಕು'' ಅಂತರಾಷ್ಟ್ರೀಯ ಶಿಕ್ಷಣ ಹಕ್ಕು ಹೋರಾಟಗಾರ್ತಿ, ನೊಬೆಲ್ ಶಾಂತಿ ಪುರಸ್ಕೃತೆ ಯೂಸಫ್ ಝಾಯ್ ಮಲಾಲ ಹೇಳಿದ್ದಾರೆ.

ಲೋಕಸಭೆಯಲ್ಲೂ ಚರ್ಚೆ
ಕರ್ನಾಟಕದಲ್ಲಿ ನಡೆಯುತ್ತಿರುವ ಕೇಸರಿ ಶಾಲು v/s ಹಿಜಾಬ್ ಗಲಭೆಗೆ ಹಲವರು ಸ್ಪಂದಿಸಿದ್ದಾರೆ. ನಿನ್ನೆ ಲೋಕಸಭೆಯಲ್ಲಿಯೂ ಈ ಬಗ್ಗೆ ಚರ್ಚೆ ನಡೆದಿದ್ದು 'ಹಿಜಾಬ್ ಧರಿಸುವುದು ಅಪರಾಧವಲ್ಲ ಎಂದು ಕೇಂದ್ರ ಸರ್ಕಾರ ಪ್ರತಿಕ್ರಿಯಿಸಬೇಕು'' ಎಂದು ವಿಪಕ್ಷಗಳು ಕೇಂದ್ರ ಸರ್ಕಾರವನ್ನು ಒತ್ತಾಯಿಸಿವೆ. ಕರ್ನಾಟಕದ ಕೇಸರಿ ಶಾಲು v/s ಹಿಜಾಬ್ ಗಲಭೆ ವಿಷಯವಾಗಿ ಚರ್ಚಿಸಲು ಅವಕಾಶ ನೀಡಬೇಕೆಂದು ಕಾಂಗ್ರೆಸ್, ಸಿಪಿಐ, ವಿಸಿಕೆ, ಎಂಡಿಎಂಕೆ, ಮುಸ್ಲಿಂ ಲೀಗ್, ಜೆಎಂಎಂ ಇತರೆ ಪಕ್ಷಗಳು ಒತ್ತಾಯಿಸಿ, ಅವಕಾಶ ಸಿಗದ ಕಾರಣ ಸಭಾತ್ಯಾಗ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕಾಡ್ಗಿಚ್ಚಿನಂತೆ ಹರಡಿದ ಗಲಭೆ
ಇದೇ ವರ್ಷಾರಂಭದಲ್ಲಿ ಉಡುಪಿಯ ಒಂದು ಕಾಲೇಜಿನಲ್ಲಿ ಪ್ರಾರಂಭವಾದ ಈ ಹಿಜಾಬ್ ಹಾಗೂ ಕೇಸರಿ ಶಾಲು ವಿವಾದ ಕೆಲವು ವಾರಗಳ ವರೆಗೆ ಉಡುಪಿಯ ಕೆಲ ಕಾಲೇಜುಗಳಿಗೆ ಮಾತ್ರವೇ ಸೀಮಿತವಾಗಿದ್ದವು. ಆದರೆ ಕಳೆದೊಂದು ವಾರದಲ್ಲಿ ಕೋಮು ವಿವಾದ ಕಾಡ್ಗಿಚ್ಚಿನಂತೆ ರಾಜ್ಯದ ಹಲವು ಜಿಲ್ಲೆಗಳ ಕಾಲೇಜುಗಳಿಗೆ ವಿಸ್ತರಿಸಿದೆ. ಕಾಲೇಜು ವಿದ್ಯಾರ್ಥಿಗಳನ್ನು ಪರಸ್ಪರರ ಧರ್ಮದ ವಿರುದ್ಧ ಎತ್ತಿಕಟ್ಟುವ ಕಾರ್ಯವನ್ನು ಬಾಹ್ಯದ ಕೆಲವು 'ಗಲಭೆ ಪ್ರೇಮಿ'ಗಳು ಮಾಡುತ್ತಿರುವುದು ಮೇಲ್ನೋಟಕ್ಕೆ ಸ್ಪಷ್ಟ. ಗಲಭೆಯನ್ನು ತಿಳಿಗೊಳಿಸಲೆಂದು ರಾಜ್ಯದಾದ್ಯಂತ ಪ್ರೌಢಶಾಲೆ ಹಾಗೂ ಕಾಲೇಜುಗಳಿಗೆ ಮೂರು ದಿನ ರಜೆ ಘೋಷಿಸಲಾಗಿದೆ. ವಿವಾದವು ಈಗಾಗಲೇ ಹೈಕೋರ್ಟ್ ಮೆಟ್ಟಿಲೇರಿದ್ದು ಇಂದು ತೀರ್ಪು ಪ್ರಕಟವಾಗುವ ಸಾಧ್ಯತೆ ಇದೆ.


Click it and Unblock the Notifications











