ನಮ್ಮನ್ನು ಇಷ್ಟುಪಡುವವರಿಗೆ ನಾವು ಏನೇ ಮಾಡಿದ್ರು ಇಷ್ಟ ಅಂದುಕೊಳ್ಳೋದು ಮುಠ್ಠಾಳತನ; ರಜನಿಕಾಂತ್
ಸೂಪರ್ ಸ್ಟಾರ್ ರಜನಿಕಾಂತ್ ನಟನೆಯ ಮುಂದಿನ ಸಿನಿಮಾ ಟೈಟಲ್ ಘೋಷಣೆಯಾಗಿದೆ. ಕಮಲ್ ಹಾಸನ್ ನಿರ್ಮಾಣದ ಚಿತ್ರದಲ್ಲಿ ತಲೈವಾ ನಟಿಸುತ್ತಿದ್ದಾರೆ. ಅಶ್ವಥ್ ಮಾರ್ಮುತ್ತು ಚಿತ್ರಕ್ಕೆ ಆಕ್ಷನ್ ಕಟ್ ಹೇಳಲಿದ್ದಾರೆ. ಈ ಹಿಂದೆ ಸುಂದರ್ ಸಿ ಚಿತ್ರವನ್ನು ನಿರ್ದೇಶನ ಮಾಡಬೇಕಿತ್ತು. ಕಾರಣಾಂತರಗಳಿಂದ ಅವರು ಚಿತ್ರದಿಂದ ಹೊರ ಬಂದಿದ್ದರ. ಚೆನ್ನೈನಲ್ಲಿ ಚಿತ್ರದ ಫಸ್ಟ್ ಲುಕ್ ಅನಾವರಣ ಕಾರ್ಯಕ್ರಮ ನಡೀತು.
ಕಾರ್ಯಕ್ರಮದಲ್ಲಿ ನಟ ರಜನಿಕಾಂತ್, ಚಿತ್ರದ ನಿರ್ಮಾಪಕ ಕಮಲ್ ಹಾಸನ್ ಹಾಗೂ ನಿರ್ದೇಶಕ ಸೇರಿ ಇಡೀ ಚಿತ್ರತಂಡ ಭಾಗಿ ಆಗಿತ್ತು. ಚಿತ್ರಕ್ಕೆ 'ಧರ್ಮನ್' ಎಂದು ಟೈಟಲ್ ಫಿಕ್ಸ್ ಮಾಡಿದ್ದಾರೆ. ಚಿತ್ರದಲ್ಲಿ ವೈದ್ಯನ ಪಾತ್ರದಲ್ಲಿ ತಲೈವಾ ನಟಿಸುವುದು ಖಚಿತವಾಗಿದೆ. ಫಸ್ಟ್ ಲುಕ್ ಪೋಸ್ಟರ್ ಅಭಿಮಾನಿಗಳ ಗಮನ ಸೆಳೆದಿದೆ. ಆಪರೇಷನ್ ರೂಮ್ನಲ್ಲಿ ನೀಲಿ ಬಣ್ಣದ ನರ್ಸಿಂಗ್ ಸ್ಕ್ರಬ್ಸ್ ಧರಿಸಿ ರಜನಿಕಾಂತ್ ಕೈಯಲ್ಲಿ ಸರ್ಜಿಕಲ್ ಸ್ಕಲ್ಪ್ಲ್ ಹಿಡಿದುಕೊಂಡಿದ್ದು ರಕ್ತ ಸೋರುತ್ತಿದೆ. ಹಲ್ಲೆ ಮಾಡಿ ಸಾಯಿಸಿದ ವ್ಯಕ್ತಿಯ ದೇಹದ ಮೇಲೆ ಕಾಲಿಟ್ಟು ಸನ್ ಗ್ಲಾಸ್ ಧರಿಸಿ ತಮ್ಮದೇ ಸ್ಟೈಲ್ನಲ್ಲಿ ಕುಹಕ ನಗೆ ಬೀರಿದ್ದಾರೆ. 'ಡೆಡ್ಲಿ ಡಾಕ್ಟರ್' ಎಂಬ ಟ್ಯಾಗ್ಲೈನ್ ಚಿತ್ರಕ್ಕಿದೆ.

ಪೂಜೆ ಸಲ್ಲಿಸಿ 'ಧರ್ಮನ್' ಚಿತ್ರಕ್ಕೆ ಚಾಲನೆ ಕೊಡಲಾಗಿದೆ. ನಾಳೆ(ಜೂನ್ 25)ಯಿಂದ ಸಿನಿಮಾ ಚಿತ್ರೀಕರಣ ಶುರುವಾಗಲಿದೆ. ಇನ್ನು ಕಾರ್ಯಕ್ರಮದಲ್ಲಿ ನಟ ರಜನಿಕಾಂತ್ ಆಡಿದ ಮಾತುಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದೆ. ಇತ್ತೀಚೆಗೆ ಕೆಲ ವಿಚಾರಗಳಲ್ಲಿ ರಜನಿಕಾಂತ್ ಹೆಸರು ಎಳೆದು ತಂದು ಟ್ರೋಲ್ ಮಾಡಲಾಗಿತ್ತು. ಯಾಕೆ ತಲೈವಾ ಮೌನ ವಹಿಸಿದ್ದಾರೆ ಎಂದು ಕೆಲವರು ಕಾಮೆಂಟ್ ಮಾಡಿದ್ದರು. ಈ ಬಗ್ಗೆ ತಮ್ಮದೇ ಸ್ಟೈಲ್ನಲ್ಲಿ ವ್ಯಂಗ್ಯವಾಗಿ ತಿರುಗೇಟು ನೀಡಿದ್ದಾರೆ. ನಾನು ಮಾತನಾಡಿದ್ರು ತಪ್ಪು, ಮಾತನಾಡದಿದ್ರು ತಪ್ಪು ಎಂದು ಮಾತು ಆರಂಭಿಸಿದ್ದಾರೆ.
ಮಾತನಾಡುವಂತೆ ವೇದಿಕೆಗೆ ಕರೆದರೆ ಭಯವಾಗುತ್ತದೆ. ಏನಾದರೂ ಮಾತನಾಡಿದ್ರೆ ಅದಕ್ಕೆ ಮತ್ತೇನೊ ಅರ್ಥ ಕೊಡುತ್ತಾರೆ. ಮಾತನಾಡದಿದ್ದರೆ ಯಾಕೆ ಮೌನ ಅಂತಾರೆ. ಬಾಯಲ್ಲಿ ಮುದ್ದೆ ತುರುಕಿಕೊಂಡಿದ್ದಾರಾ ಅಂತಾರೆ. ಮಾತನಾಡಿದ್ರೆ, ಹ್ಞೂ, ಈಗ ಮಾತನಾಡಪ್ಪ ಎಲ್ಲಾ ಅದ್ಮೇಲೆ ಅಂತಾರೆ. ಇನ್ನು ಕೆಲವರು ಇದೆಲ್ಲಾ ನಿಮಗೆ ಯಾಕೆ ಬೇಕಿತ್ತು. ಸುಮ್ನೆ ಯಾಕೆ ಮಾತನಾಡಿದ್ರಿ ಅಂತಾರೆ. ಬಹಳ ದಿನಗಳ ಬಳಿಕ ಒಂದು ವಿಷಯ ಗೊತ್ತಾಯ್ತು.. ನಮ್ಮನ್ನು ಕಂಡ್ರೆ ಆಗದವರಿಗೆ ನಾವು ಏನೇ ಮಾತನಾಡಿದ್ರು ಇಷ್ಟವಾಗಲ್ಲ. ನಮ್ಮನ್ನು ಇಷ್ಟುಪಡುವವರಿಗೆ ನಾವು ಏನೇ ಮಾಡಿದ್ರು ಇಷ್ಟ ಅಂದುಕೊಳ್ಳೋದು ಮುಠ್ಠಾಳತನ, ಜಾಗ್ರತೆಯಿಂದ ಇರಬೇಕು ಎಂದು ರಜನಿಕಾಂತ್ ನಕ್ಕಿದ್ದಾರೆ.
ಪದೇ ಪದೆ ಸಿನಿಮಾ ನಿರ್ದೇಶಕರು ಬದಲಾಗಿದ್ದು ಯಾಕೆ? 'ಧರ್ಮನ್' ಸಿನಿಮಾ ಚಿತ್ರೀಕರಣ ಯಾವಾಗ? ಹೀಗೆ ಸಾಕಷ್ಟು ವಿಚಾರಗಳ ಬಗ್ಗೆ ರಜನಿಕಾಂತ್ ಮಾತನಾಡಿದ್ದಾರೆ. ಕಮಲ್ ಹಾಸನ್ ಜೊತೆ ಸಿನಿಮಾ ಮಾಡಬೇಕು ಎನ್ನುವ ಚರ್ಚೆ ನಡೀತಿತ್ತು. ಆದ್ರೆ ಸಾಧ್ಯವಾಗಿರಲಿಲ್ಲ. ಅಂದಹಾಗೆ ಈ ಚಿತ್ರಕ್ಕೆ ಅಶ್ವಥ್ ಮಾರಿಮುತ್ತು 4ನೇ ನಿರ್ದೇಶಕರು. ಮೊದಲಿಗೆ ನಾವು ಸಿನಿಮಾ ಮಾಡೋಣ ಎಂದುಕೊಂಡಾಗ ಕೆ. ಎಸ್ ರವಿಕುಮಾರ್ ನಿರ್ದೇಶನ ಮಾಡಬೇಕಿತ್ತು ಎಂದು ತಲೈವಾ ಹೇಳಿದ್ದಾರೆ. "ಆ ಬಳಿಕ ಸುಂದರ್ ಸಿ ನಿರ್ದೇಶಕರಾಗಿ ಬಂದ್ರು. ಅವ್ರು ಬೇರೆ ಸಿನಿಮಾದಲ್ಲಿ ಬ್ಯುಸಿ ಇದ್ದಿದ್ರಿಂದ ಸಾಧ್ಯವಾಗಲಿಲ್ಲ. ಬಳಿಕ ಸಿಬಿ ಚಕ್ರವರ್ತಿ ಬಂದ್ರು. ಅವ್ರು ಮಾಡಿದ್ದ ಕಥೆ ಬಹಳ ಸೆನ್ಸಿಟಿವ್ ಆಗಿತ್ತು. ನ್ಯೂಕ್ಲಿಯರ್ ಸೈಂಟಿಸ್ಟ್ ಕಥೆ. ಅಫ್ಘಾನಿಸ್ತಾನ, ರಷ್ಯಾದಲ್ಲಿ ಚಿತ್ರೀಕರಣ ಮಾಡಬೇಕಿತ್ತು. ಹಾಗಾಗಿ ಅದನ್ನು ಬಿಟ್ಟು ಕೊನೆಗೆ ಅಶ್ವಥ್ ಮಾರಿಮುತ್ತು ನಿರ್ದೇಶಕರಾಗಿ ಆಯ್ಕೆ ಆದ್ರು ಎಂದು ರಜನಿಕಾಂತ್ ವಿವರಿಸಿದ್ದಾರೆ.
ಕಮಲ್ ನನಗೆ ಎಷ್ಟು ಸಹಾಯ ಮಾಡಿದ್ದಾರೆ, ಪ್ರೋತ್ಸಾಹಿಸಿದ್ದಾರೆ ಎಂದು ಎಷ್ಟು ಹೇಳಿದ್ರು ಕಮ್ಮಿ ಎಂದು ರಜನಿಕಾಂತ್ ಹೇಳಿದ್ದಾರೆ. ಸಿಮ್ರನ್ ಚಿತ್ರದಲ್ಲಿ ನಟಿಸುತ್ತಿದ್ದಾರೆ. 'ಪೆಟಾ' ಚಿತ್ರದಲ್ಲಿ ಅವರಿಗೆ ಕಡಿಮೆ ಅವಕಾಶ ಸಿಕ್ಕಿತ್ತು ಅಂದ್ರು. ಈ ಚಿತ್ರದಲ್ಲಿ ಹೆಚ್ಚು ಅವಕಾಶ ಅವ್ರ ಪಾತ್ರಕ್ಕೆ ಸಿಗಲಿದೆ ಎಂದು ತಲೈವಾ ವಿವರಿಸಿದ್ದಾರೆ.


Click it and Unblock the Notifications