'ಅಮರನ್' ನೋಡಿ ಕಣ್ಣೀರಿಡುತ್ತಿರೋ ಪ್ರೇಕ್ಷಕರು; ಈ ಸಿನಿಮಾದ ಹಿಂದಿನ ರಿಯಲ್ ಹೀರೋ ಮುಕುಂದನ್ ಯಾರು ಗೊತ್ತೇ?
ದಕ್ಷಿಣ ಭಾರತದಲ್ಲಿ ಸದ್ದು ಮಾಡುತ್ತಿರುವ ಸಿನಿಮಾ 'ಅಮರನ್'. ಈ ಸಿನಿಮಾ ನೋಡಿದವರೆಲ್ಲ ಕಣ್ಣೀರು ಹಾಕಿಕೊಂಡು ಮನೆಗೆ ಮರಳುತ್ತಿದ್ದಾರೆ. ಶಿವಕಾರ್ತಿಕೇಯನ್ ಹಾಗೂ ಸಾಯಿ ಪಲ್ಲವಿ ನಟನೆಯ ಈ ಸಿನಿಮಾ ತಮಿಳುನಾಡಿನಲ್ಲಿ ಜನರ ಮನಸ್ಸು ಗೆದ್ದಿದೆ. ಸೂಪರ್ ಸ್ಟಾರ್ ರಜನಿಕಾಂತ್ ಈ ಸಿನಿಮಾ ನೋಡಿ ಕಣ್ಣೀರು ಹಾಕಿದ್ದಾರೆ. ಭಾವನಾತ್ಮಕವಾಗಿ ಜನರನ್ನು ಸೆಳೆದಿರುವ ಸಿನಿಮಾದಲ್ಲಿ ಅಂತಹದ್ದೇನಿದೆ?
ಭಾರತೀಯ ಸೇನೆ, ಸೈನಿಕನ ಹಿನ್ನೆಲೆಯನ್ನು ಇಟ್ಟುಕೊಂಡು ಹೆಣೆದ ಕಥೆಯೇ 'ಅಮರನ್'. ಇಂಡಿಯನ್ ಆರ್ಮಿ ಹಾಗೂ ಸೈನಿಕನ ಕಥೆಯನ್ನು ತೆರೆಮೇಲೆ ತರುತ್ತಿರುವುದು ಇದೇ ಮೊದಲೇನಲ್ಲ. ಆದರೂ, 'ಅಮರನ್' ಸಿನಿಮಾ ಯಾಕಿಷ್ಟು ಮೆಚ್ಚುಗೆ ಪಡೆದಿದೆ. ತಮಿಳರು ಈ ಸಿನಿಮಾವನ್ನು ಇಷ್ಟೊಂದು ಕೊಂಡಾಡುತ್ತಿರುವುದು ಯಾಕೆ? ಅದಕ್ಕೊಂದು ಕಾರಣವಿದೆ.

'ಅಮರನ್' ಸಿನಿಮಾ ಭಾರತೀಯ ಸೇನೆಯ ಹೆಮ್ಮೆಯ ಸೈನಿಕ ರಿಯಲ್ ಸ್ಟೋರಿ. ತಮಿಳುನಾಡು ಮೂಲದ ಈ ಯೋಧ ಭಯೋತ್ಪಾದಕರ ವಿರುದ್ಧ ಹೋರಾಡಿ ವೀರ ಮರಣವನ್ನಿಪ್ಪಿದ್ದರು. ಆ ಯೋಧನ ಹೋರಾಟವನ್ನೇ ಶಿವಕಾರ್ತಿಕೇಯನ್ ರೂಪದಲ್ಲಿ ತೆರೆಮೇಲೆ ತರಲಾಗಿದೆ. ಅಸಲಿಗೆ ಈ ಸಿನಿಮಾದ ಹಿಂದಿನ ರಿಯಲ್ ಹೀರೋನೇ ಮೇಜರ್ ಮುಕುಂದ್ ವರದರಾಜನ್. ಅಷ್ಟಕ್ಕೂ ಈ ಭಾರತದ ಈ ಹೆಮ್ಮೆಯ ಪುತ್ರನ ಕಥೆಯೇನು? ತಿಳಿಯಲು ಮುಂದೆ ಓದಿ.
ತಮಿಳಿನ 'ಅಮರನ್' ಸಿನಿಮಾದ ನಿರ್ದೇಶಕ ರಾಜ್ಕುಮಾರ್ ಪೆರಿಯಾಸಾಮಿ. ಈ ಕಥೆಯನ್ನು ತೆರೆಯ ಮೇಲೆ ತರುವುದಕ್ಕೆ ಸಾಕಷ್ಟು ಶ್ರಮ ಹಾಕಿದ್ದಾರೆ. ಅದಕ್ಕೀಗ ಪ್ರತಿಫಲ ಸಿಗುತ್ತಿದೆ. ಸಾಮಾನ್ಯವಾಗಿ ಆರ್ಮಿ, ಸೈನಿಕ, ಯುದ್ಧದ ಕಥೆಗಳು ದಕ್ಷಿಣ ಭಾರತದ ಗೆದ್ದಿರುವ ಉದಾಹರಣೆಗಳು ಕಮ್ಮಿಯಿವೆ. ಆದರೆ, 'ಅಮರನ್' ಈಗಾಗಲೇ ಬಾಕ್ಸಾಫೀಸ್ನಲ್ಲಿ ನೂರು ಕೋಟಿಗೂ ಅಧಿಕ ಕಲೆಕ್ಷನ್ ಮಾಡಿದೆ. ಎಲ್ಲದಕ್ಕಿಂತ ಹೆಚ್ಚಾಗಿ ತಮಿಳರ ಹೃದಯ ಗೆದ್ದಿದೆ. ಅವರ ಕಣ್ಣುಗಳನ್ನು ಒದ್ದೆ ಮಾಡಿವೆ.

ಇಷ್ಟೊಂದು ಸದ್ದು ಮಾಡುತ್ತಿರುವ 'ಅಮರನ್' ಸಿನಿಮಾದ ಅಸಲಿ ಹೀರೋ ಶಿವಕಾರ್ತಿಕೇಯನ್ ಅಲ್ಲ ಮೇಜರ್ ಮುಕುಂದ್ ವರದರಾಜನ್. ಭಾರತೀಯ ಸೇನೆಯ ರಜಪೂತ ರೆಜಿಮೆಂಟ್ನ ಅಧಿಕಾರಿ. ರಾಷ್ಟ್ರೀಯ ರೈಫಲ್ಸ್ 44ರ ಮೇಜರ್ ಆಗಿದ್ದವರು. ಹುಟ್ಟಿದ್ದು ಏಪ್ರಿಲ್ 12, 1983 ತಮಿಳುನಾಡಿನ ಚೆನ್ನೈನಲ್ಲಿ. ಭಾರತೀಯ ಸೇನೆಯಲ್ಲಿ ಮೇಜರ್ ಮುಕುಂದ್ ವರದರಾಜನ್ ಅಂದರೆ ಒಂದು ಗತ್ತು. ಅಂಜದೆ ಎದುರಾಳಿಗಳನ್ನು ಎದುರಿಸುತ್ತಿದ್ದ ವೀರ ಯೋಧ. ತನ್ನ ತಂಡವನ್ನು ಎಂದಿಗೂ ಬಿಟ್ಟು ಕೊಡದ ವೀರಪುತ್ರ.
ಮೇಜರ್ ಮುಕುಂದ್ ತಾತ ಹಾಗೂ ಇಬ್ಬರು ಸಂಬಂಧಿಗಳು ಆರ್ಮಿಯಲ್ಲಿ ಸೇವೆ ಸಲ್ಲಿಸಿದ್ದರು. ಇವರಿಂದ ಸ್ಪೂರ್ತಿ ಪಡೆದೆ ಭಾರತಮಾತೆಯ ಸೇವೆ ಮಾಡಲೇಬೇಕು ಅಂತ ಸೇನೆಯನ್ನು ಸೇರಿಕೊಂಡರು. ಇವರ ಕೆಲಸವನ್ನು ಅರಿತ ಸೇನೆಯ ಹಿರಿಯ ಅಧಿಕಾರಿಗಳು ಹುದ್ದೆಯಲ್ಲಿ ಬಡ್ತಿಯನ್ನು ನೀಡಿದ್ದರು. ಬಹುಬೇಗನೇ ಮೇಜರ್ ಆಗಿಬಿಟ್ಟರು. ಭಾರತೀಯ ಸೇನೆಯಲ್ಲಿ ಧೈರ್ಯಕ್ಕೆ ಮತ್ತೊಂದು ಹೆಸರಾಗಿದ್ದವರೇ ಮೇಜರ್ ಮುಕುಂದ್ ವರದರಾಜನ್.
2014, ಏಪ್ರಿಲ್ 25ರಂದು ಕಾಶ್ಮೀರದ ಶೋಪಿಯಾನ್ ಎಂಬಲ್ಲಿ ಅಡಗಿ ಕೂತಿದ್ದ ಭಯೋತ್ಪಾದಕರನ್ನು ಹೊಡೆದುರುಳಿಸುವ ಜವಾಬ್ದಾರಿ ಮೇಜರ್ ಮುಕುಂದ್ ಅವರಿಗೆ ಬಂದಿತ್ತು. ನಾಗರೀಕರ ಮಧ್ಯೆ ಅಡಗಿ ಕೂತಿದ್ದ ಮೂವರು ಹಿಜ್ಬುಲ್ ಮುಜಾಹಿದ್ದೀನ್ ಭಯೋತ್ಪಾದಕರನ್ನು ಹೊಡೆದುರುಳಿಸಬೇಕಿತ್ತು. ಇದು ತುಂಬಾನೇ ಅಪಾಯಕಾರಿ ಎಂದು ಮೇಜರ್ ಮುಕುಂದ್ ವರದರಾಜನ್ಗೂ ಗೊತ್ತಿತ್ತು. ಯಾಕಂದ್ರೆ, ಇಲ್ಲಿ ನಾಗರೀಕರಿಗೆ ಏನೂ ತೊಂದರೆ ಆಗಬಾರದಿತ್ತು. ಇಂತಹ ಸಮಯದಲ್ಲಿ ಎದೆಕೊಟ್ಟು ಹೋರಾಡಿದ್ದ ಮೂವರು ಭಯೋತ್ಪಾದಕರನ್ನು ಹೊಡೆದುರುಳಿಸಿದ್ದರು.
ಈ ಹೋರಾಟದಲ್ಲಿ ಮೇಜರ್ ಮುಕುಂದ್ ವರದರಾಜನ್ ಅವರಿಗೂ ಗಂಭೀರ ಗಾಯಗಳಾಗಿದ್ದವು. ಅವರನ್ನು ಚಿಕಿತ್ಸೆಗೆಂದು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಮಾರನೇ ದಿನ ಕೊನೆಯುಸಿರೆಳೆದರು. ದೇಶಕ್ಕಾಗಿ ತನ್ನ ಜೀವವನ್ನೇ ತ್ಯಾಗ ಮಾಡಿದ ವೀರಪುತ್ರನಿಗೆ ಭಾರತೀಯ ಸೇನೆ ನೀಡುವ ಅತ್ಯುನ್ನತ ಪ್ರಶಸ್ತಿ ಅಶೋಕ ಚಕ್ರವನ್ನು ನೀಡಲಾಯಿತು. ಇವರ ಹೋರಾಟದ ಬದುಕು, ಕುಟುಂಬ, ಲವ್ ಸ್ಟೋರಿಯನ್ನು ಶಿವಕಾರ್ತಿಕೇಯನ್ ಹಾಗೂ ಸಾಯಿ ಪಲ್ಲವಿ ಮೂಲಕ ತೆರೆಮೇಲೆ ತೋರಿಸಲಾಗಿದೆ.


Click it and Unblock the Notifications











