ರಾಜಭವನದಲ್ಲಿ ವಿಜಯ್ ಜೊತೆ ಕಾಣಿಸಿಕೊಂಡ ಕೆವಿಎನ್? ಕೆವಿಎನ್ಗೂ ಟಿವಿಕೆಗೂ ಏನು ಸಂಬಂಧ?
ತಮಿಳುನಾಡು ರಾಜಕೀಯ ತ್ರೀವ ಕುತೂಹಲದ ಘಟ್ಟ ತಲುಪಿದೆ. ಈ ಬಾರಿ ಡಿಎಂಕೆ, ಎಐಡಿಎಂಕೆ ಪಕ್ಷಗಳಿಗೂ ಅಧಿಕ ಸ್ಥಾನಗಳನ್ನು ದಳಪತಿ ವಿಜಯ್ ಅವರ ಟಿವಿಕೆ ಪಕ್ಷ ಪಡೆದುಕೊಂಡಿದೆ. ಆದರೆ, ಸರ್ಕಾರ ರಚನೆ ಮಾಡುವುದಕ್ಕೆ ಬೇಕಿರೋ ಬಹುಮತದ ಕೊರತೆ ಎದುರಾಗಿದೆ. ಸದ್ಯ ಅತಂತ್ರ ಸ್ಥಿತಿಯಲ್ಲಿದ್ದು, ವಿಜಯ್ ಬಹುಮತ ಪಡೆದು ಸರ್ಕಾರ ರಚನೆಗೆ ಮುಂದಾಗಿದ್ದಾರೆ. ಆದರೆ, ದಿನದಿಂದ ದಿನಕ್ಕೆ ಒಂದೊಂದು ಸಂಕಷ್ಟ ಎದುರಾಗುತ್ತಿದೆ.
ವಿಜಯ್ ಈಗಾಗಲೇ ಪ್ರಮಾಣ ವಚನ ಸ್ವೀಕರಿಸುವುದಕ್ಕೆ ರಾಜ್ಯಪಾಲರಿಗೆ ಮನವಿ ಮಾಡಿಕೊಂಡಿದ್ದಾರೆ. ಒಂದಲ್ಲ, ಎರಡಲ್ಲ ಮೂರು ಬಾರಿ ರಾಜಭವನಕ್ಕೆ ತೆರಳಿ ಮನವಿ ಸಲ್ಲಿಸಿದ್ದರು. ಆದರೆ, ಮೂರು ಬಾರಿಯೂ ರಾಜ್ಯಪಾಲರು ಬಹುಮತ ಸಾಬೀತು ಪಡಿಸುವಂತೆ ಸೂಚಿಸಿದ್ದಾರೆ. ಹೀಗಾಗಿ ವಿಜಯ್ ಅಭಿಮಾನಿಗಳು ಆಕ್ರೋಶವನ್ನೂ ಹೊರ ಹಾಕುತ್ತಿದ್ದಾರೆ.

ಒಂದ್ಕಡೆ ತಮಿಳುನಾಡು ರಾಜಕೀಯ ದಿನಕ್ಕೊಂದು ಟ್ವಿಸ್ಟ್ ಪಡೆದುಕೊಳ್ಳುತ್ತಿದ್ದರೆ. ಇತ್ತ ವಿಜಯ್ ಜೊತೆ ರಾಜಭವನಕ್ಕೆ ತೆರಳಿದ್ದ ಜನನಾಯಗನ್ ನಿರ್ಮಾಪಕ ಕೆವಿಎನ್ ಬಗ್ಗೆ ಚರ್ಚೆಯಾಗುತ್ತಿದೆ. ಇಂತಹ ಇಕ್ಕಟ್ಟಿನ ಸಂದರ್ಭದಲ್ಲಿ ವಿಜಯ್ ಜೊತೆ ಕೆವಿಎನ್ ಏನು ಮಾಡುತ್ತಿದ್ದಾರೆ? ರಾಜಭವನಕ್ಕೆ ಹೋಗಿದ್ದು ಯಾಕೆ? ವಿಜಯ್ಗೆ ಬೆಂಬಲ ನೀಡುವುದಕ್ಕೆ ಹೋಗಿದ್ದಾ? ಇಲ್ಲ ಟಿವಿಕೆಗೂ ಕೆವಿಎನ್ಗೂ ಏನಾದರೂ ಲಿಂಕ್ ಇದೆಯಾ? ಈ ಪ್ರಶ್ನೆಗೆ ಗಾಂಧಿನಗರದ ಗಲ್ಲಿ ಗಲ್ಲಿಯಲ್ಲೊಂದು ಸುದ್ದಿ ಓಡಾಡುತ್ತಿದೆ.
ಕನ್ನಡದ ನಿರ್ಮಾಣ ಸಂಸ್ಥೆ ಕೆವಿಎನ್ ಪ್ರೊಡಕ್ಷನ್ಸ್ ಪರಭಾಷೆಯಲ್ಲೂ ನಿರ್ಮಾಣ ಮಾಡುತ್ತಿದೆ. ಈಗಾಗಲೇ ತಮಿಳಿನಲ್ಲಿ ವಿಜಯ್ ನಟಿಸಿದ 'ಜನ ನಾಯಗನ್' ಸಿನಿಮಾವನ್ನು ನಿರ್ಮಾಣ ಮಾಡಿದೆ. ಆ ಸಿನಿಮಾ ಇನ್ನೂ ರಿಲೀಸ್ ಆಗಬೇಕಿದೆ. ಸೆನ್ಸಾರ್ ಜೊತೆ ಸಮಸ್ಯೆ ಮಾಡಿಕೊಂಡಿದ್ದರಿಂದ ಸಂಕ್ರಾಂತಿಗೆ ರಿಲೀಸ್ ಆಗಬೇಕಿದ್ದ ಸಿನಿಮಾ ಮುಂದೂಡಲ್ಪಟ್ಟಿತ್ತು. ಚುನಾವಣೆಗೂ ಮುನ್ನವೇ 'ಜನ ನಾಯಗನ್' ರಿಲೀಸ್ ಮಾಡಬೇಕು ಅನ್ನೋ ಆಸೆಗಳೆಲ್ಲ ನೀರು ಪಾಲಾಗಿತ್ತು. ಬಳಿಕ ಇಡೀ ಸಿನಿಮಾ ಲೀಕ್ ಆಗಿತ್ತು. ಹೀಗಾಗಿ ಕೆವಿಎನ್ ಸಂಸ್ಥೆಗೆ ಸಿಕ್ಕಾಪಟ್ಟೆ ನಷ್ಟ ಆಗಿತ್ತು.
ಈಗ 'ಜನ ನಾಯಗನ್' ಸಿನಿಮಾ ರಿಲೀಸ್ ಮಾಡುವುದಕ್ಕೆ ಕೆವಿಎನ್ ಸಂಸ್ಥೆ ಪ್ರಯತ್ನ ಪಡುತ್ತಿದೆ. ಇದೇ ಮೇ ತಿಂಗಳ ಕೊನೆಯಲ್ಲಿ ಸಿನಿಮಾ ರಿಲೀಸ್ ಕೆವಿಎನ್ ಭಾರೀ ಪ್ರಯತ್ನ ಪಡುತ್ತಿದೆ ಅನ್ನೋದು ಸುದ್ದಿ. ಸಿನಿಮಾ ರಿಲೀಸ್ಗೆ ಇದು ಸೂಕ್ತ ಸಮಯವಲ್ಲ. ಯಾಕಂದ್ರೆ, ವಿಜಯ್ ರಾಜಕೀಯದಲ್ಲಿ ಬ್ಯುಸಿ ಇದ್ದಾರೆ. ಹೀಗಾಗಿ ಕೆವಿಎನ್ ಕೈಗೆ ವಿಜಯ್ ಸಿಗೋದು ಅನುಮಾನ ಎಂದೇ ನಂಬಲಾಗಿತ್ತು. ಸೀನ್ ಕಟ್ ಮಾಡಿದರೆ, ವಿಜಯ್ ಮೂರನೇ ಬಾರಿಗೆ ಸರ್ಕಾರ ರಚನೆಗೆ ರಾಜಭವನಕ್ಕೆ ತೆರಳಿದ್ದ ವೇಳೆ ಅಲ್ಲಿ ಕೆವಿಎನ್ ಕೂಡ ಕಾಣಿಸಿಕೊಂಡಿದ್ದಾರೆ. ಫೋಟೊ, ವಿಡಿಯೋ ವೈರಲ್ ಆಗುತ್ತಿದ್ದಂತೆ, ಇವರು ಯಾಕೆ ರಾಜಭವನಕ್ಕೆ ತೆರಳಿದ್ದು ಏಕೆ ಅಂತ ಕಾರಣ ಹುಡುಕುತ್ತಿದ್ದಾರೆ.

ಸದ್ಯಕ್ಕೆ ಗಾಂಧಿನಗರದಲ್ಲಿ ಹರಿದಾಡುತ್ತಿರುವ ಸುದ್ದಿ ಅಂದರೆ, ವಿಜಯ್ ಟಿವಿಕೆ ಪಕ್ಷ ಕಟ್ಟುವುದಕ್ಕೆ ಕೆವಿಎನ್ ಅವರು ಹಣಕಾಸಿನ ಸಹಾಯ ಮಾಡಿದ್ದಾರೆ. ಅದಕ್ಕೆ ವಿಜಯ್ ಹಾಗೂ ಕೆವಿಎನ್ ಮಧ್ಯೆ ಸ್ಟ್ರಾಂಗ್ ಬಾಂಡಿಂಗ್ ಬೆಳೆದಿದೆ. ಹೀಗಾಗಿ ವಿಜಯ್ ಅವರೇ ರಾಜಭವನಕ್ಕೆ ಕರೆದುಕೊಂಡು ಹೋಗಿದ್ದಾರೆ ಅನ್ನೋ ಮಾತುಗಳು ಕೇಳಿ ಬರುತ್ತಿವೆ. ಆದರೆ, ಟಿವಿಕೆಗೆ ಹಣ ಕೊಟ್ಟಿದ್ದು ನಿಜವೇ? ಎಷ್ಟು ಕೋಟಿ ಕೊಟ್ಟಿದ್ದಾರೆ? ಎಂಬ ಕುತೂಹಲ ಮನೆ ಮಾಡಿದೆ.
ಇನ್ನೊಂದು ಮೂಲಗಳ ಪ್ರಕಾರ, 'ಜನ ನಾಯಗನ್' ಸಿನಿಮಾ ಮಾಡುವ ಸಮಯದಲ್ಲಿ ವಿಜಯ್ ಹಾಗೂ ಕೆವಿಎನ್ ಮಧ್ಯೆ ಒಂದೊಳ್ಳೆ ಬಾಂಧವ್ಯ ಬೆಳೆದಿದೆ. ಈ ಕಾರಣಕ್ಕೆ ವಿಜಯ್ ಅವರೇ ಕೆವಿಎನ್ ಅವರನ್ನು ತಮ್ಮ ಜೊತೆಯಲ್ಲಿಯೇ ಕರೆದುಕೊಂಡು ಹೋಗಿದ್ದರು. ಅದು ಬಿಟ್ಟರೆ ಯಾವುದೇ ವಿಷಯ ಇಲ್ಲ ಎಂದೂ ಹೇಳುತ್ತಿದ್ದಾರೆ.
ಆದರೆ, ಕೆಲವರಿಗೆ ಈ ಉತ್ತರ ಸಮಾಧಾನ ಕೊಟ್ಟಿಲ್ಲ. ಹೀಗಾಗಿ ಟಿವಿಕೆಗೂ ಹಾಗೂ ಕೆವಿಎನ್ಗೂ ಯಾವ ರೀತಿ ನಂಟು ಇರಬಹುದೆಂದು ಚರ್ಚೆ ಮಾಡುತ್ತಿದ್ದಾರೆ. ಒಟ್ನಲ್ಲಿ 'ಜನ ನಾಯಗನ್' ಸಿನಿಮಾ ಮಾಡಿ ಕೆವಿಎನ್ ರಾಜಭವಕ್ಕೆ ಎಂಟ್ರಿ ಕೊಡುವ ಹಾಗಾಯ್ತು ಎಂದು ಮಾತಾಡಿಕೊಳ್ಳುತ್ತಿದ್ದಾರೆ.


Click it and Unblock the Notifications
