ಶಂಕರ್ ನಿರ್ದೇಶನದಲ್ಲಿ ರಜನಿಕಾಂತ್ ಜೊತೆ ನಟಿಸೋಕೆ ಕಮಲ್ ನೋ ಎಂದಿದ್ದೇಕೆ?
ಸೂಪರ್ ಸ್ಟಾರ್ ರಜನಿಕಾಂತ್ ಹಾಗೂ ಉಳಗನಾಯಕನ್ ಕಮಲ್ ಹಾಸನ್ ಭಾರತೀಯ ಚಿತ್ರರಂಗದ ದಿಗ್ಗಜ ಕಲಾವಿದರು. ಒಬ್ಬರಿಗಿಂತ ಒಬ್ಬರೂ ತೆರೆಮೇಲೆ ಮೋಡಿ ಮಾಡುವ ತಾರೆಯರು. ಒಂದ್ಕಾಲದಲ್ಲಿ ಇಬ್ಬರೂ ಒಟ್ಟಿಗೆ ಹಲವು ಸಿನಿಮಾಗಳಲ್ಲಿ ನಟಿಸಿದರು. ಆದರೆ ಆ ಬಳಿಕ ಮತ್ತೆ ಜೊತೆಯಾಗಿ ಕಾಣಿಸಿಕೊಳ್ಳಲಿಲ್ಲ.
ಕೆ. ಬಾಲಚಂದರ್ ಗರಡಿಯಲ್ಲಿ ರಜನಿ-ಕಮಲ್ ಪಳಗಿದವರು. 'ಅಪೂರ್ವ ರಾಗಂಗಳ್' ಚಿತ್ರದಲ್ಲಿ ಇಬ್ಬರೂ ಒಟ್ಟಿಗೆ ನಟಿಸಿದ್ದರು. ಮುಂದೆ ತಮ್ಮದೇ ಹಾದಿಯಲ್ಲೇ ಇಬ್ಬರೂ ಬೆಳೆದು ಬಂದರು. ರಜನಿಕಾಂತ್ ಮಾಸ್ ಸಬ್ಜೆಕ್ಟ್ಗಳಲ್ಲಿ ತಮ್ಮ ಸ್ಟೈಲ್, ಮ್ಯಾನರಿಸಂನಿಂದ ಸೂಪರ್ ಸ್ಟಾರ್ ಪಟ್ಟಕ್ಕೇರಿದ್ದರು. ಕಮಲ್ ಹಾಸನ್ ಮನೋಜ್ಞ ಅಭಿನಯದಿಂದ ಪ್ರೇಕ್ಷಕರನ್ನು ರಂಜಿಸುತ್ತಾ ಬಂದರು. ವಿಭಿನ್ನ ಗೆಟಪ್, ಮೇಕಪ್ನಿಂದ ಹುಬ್ಬೇರಿಸಿದರು.

ಸೋತಾಗಲೆಲ್ಲಾ ಇಬ್ಬರೂ ಮತ್ತೆ ಮತ್ತೆ ಎದ್ದು ಬಂದಿದ್ದಾರೆ. ಕಳೆದ ಕೆಲ ವರ್ಷಗಳಲ್ಲಿ ಇಬ್ಬರ ಸಿನಿಮಾಗಳು ಅಷ್ಟಾಗಿ ಗೆಲ್ಲಲಿಲ್ಲ. ಆದರೆ 'ವಿಕ್ರಂ' ಚಿತ್ರದಿಂದ ಕಮಲ್, 'ಜೈಲರ್' ಚಿತ್ರದಿಂದ ರಜನಿಕಾಂತ್ ಮತ್ತೆ ಗೆದ್ದು ಬೀಗಿದ್ದಾರೆ. ಇತ್ತೀಚೆಗೆ ಬಂದಿರುವ 'ಕಲ್ಕಿ 2898 AD' ಚಿತ್ರದಲ್ಲಿ ಕೂಡ ಕಮಲ್ ನಟನೆಗೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಶೀಘ್ರದಲ್ಲೇ 'ಇಂಡಿಯನ್'-2 ಚಿತ್ರದ ಮೂಲಕ ಉಳಗ ನಾಯಕನ್ ಪ್ರೇಕ್ಷಕರ ಮುಂದೆ ಬರ್ತಿದ್ದಾರೆ.
ಶಂಕರ್ ನಿರ್ದೇಶನದ 'ಇಂಡಿಯನ್'-2 ಭಾರೀ ನಿರೀಕ್ಷೆ ಹುಟ್ಟಾಕ್ಕಿದೆ. 28 ವರ್ಷಗಳ ಹಿಂದೆ ಬಂದಿದ್ದ ಸೂಪರ್ ಹಿಟ್ ಸಿನಿಮಾ ಸೀಕ್ವೆಲ್ ಇದು. ಇನ್ನು ಈ ಸರಣಿಯ ಮತ್ತೊಂದು ಸಿನಿಮಾ ಮುಂದಿನ ವರ್ಷ ಬರಲಿದೆ. ಸದ್ಯ ಸಿನಿಮಾ ಪ್ರಚಾರದಲ್ಲಿ ಚಿತ್ರತಂಡ ಬ್ಯುಸಿಯಾಗಿದೆ. ಈ ವೇಳೆ ಸಾಕಷ್ಟು ಇಂಟ್ರೆಸ್ಟಿಂಗ್ ಸಂಗತಿಗಳನ್ನು ಕಮಲ್ ಹಾಗೂ ನಿರ್ದೇಶಕ ಶಂಕರ್ ಬಿಚ್ಚಿಡುತ್ತಿದ್ದಾರೆ.
ರಜನಿಕಾಂತ್ ಹಾಗೂ ಕಮಲ್ ಇಬ್ಬರನ್ನು ಮತ್ತೆ ತೆರೆಮೇಲೆ ಒಟ್ಟಿಗೆ ನೋಡಬೇಕು ಎನ್ನುವುದು ಅಭಿಮಾನಿಗಳ ಆಸೆ. ಆದರೆ 7 ವರ್ಷಗಳ ಹಿಂದೆ ಇಂತಾದೊಂದು ಅವಕಾಶ ಇತ್ತು. ಆದರೆ ಕಮಲ್ ನಿರಾಕರಣಿಯಿಂದ ಅದು ಸಾಧ್ಯವಾಗಿರಲಿಲ್ಲ. ಅಂದು ಅವರು ಒಪ್ಪಿದ್ದರೆ ಅಭಿಮಾನಿಗಳ ಆಸೆ ಈಡೇರುತ್ತಿತ್ತು. ರಜನಿ- ಕಮಲ್ ಆತ್ಮೀಯ ಸ್ನೇಹಿತರು. 50 ವರ್ಷಗಳಿಂದ ಇಬ್ಬರ ನಡುವೆ ಒಡನಾಟ, ಸ್ನೇಹವಿದೆ.

ಒಂದಷ್ಟು ವರ್ಷಗಳು ಒಟ್ಟಿಗೆ ನಟಿಸಿದ ಇಬ್ಬರೂ ಬಳಿಕ ಜೊತೆಯಾಗಿ ಕಾಣಿಸಿಕೊಳ್ಳಲಿಲ್ಲ. ಆದರೆ ಆಗಾಗ್ಗೆ ಈ ಬಗ್ಗೆ ಇಬ್ಬರೂ ಚರ್ಚಿಸುತ್ತಿರುತ್ತೇವೆ. ನಾನು ಕೂಡ ನನ್ನದೇ ಚಿತ್ರನಿರ್ಮಾಣ ಸಂಸ್ಥೆ ಇದೆ. ನೀವು ಓಕೆ ಎಂದು ಸಿನಿಮಾ ಮಾಡೋಣ ಎಂದು ಹೇಳುತ್ತಾ ಬರುತ್ತಿದ್ದೇನೆ. ಆದರೆ ಅದು ಸಾಧ್ಯವಾಗುತ್ತಿಲ್ಲ ಎಂದು ಕಮಲ್ ಹಾಸನ್ ಹೇಳಿದ್ದಾರೆ.
'ರೋಬೊ 2. O' ಚಿತ್ರದಲ್ಲಿ ರಜನಿಕಾಂತ್- ಕಮಲ್ ಒಟ್ಟಿಗೆ ನಟಿಸಬೇಕಿತ್ತು. ಕಮಲ್ ಹಾಸನ್ಗೋಸ್ಕರ ಶಂಕರ್, ಪಕ್ಷಿ ರಾಜನ್ ಪಾತ್ರ ಡಿಸೈನ್ ಮಾಡಿದ್ದರು. ಅಂದ್ರೆ ಚಿತ್ರದಲ್ಲಿ ಉಳಗ ನಾಯಕನ್ ವಿಲನ್ ಆಗಿ ನಟಿಸಬೇಕಿತ್ತು. ಈ ಬಗ್ಗೆ ಚರ್ಚೆ ಕೂಡ ನಡೆದಿತ್ತು. ಆದರೆ ಕಮಲ್ ಹಾಸನ್ ಕಾರಣಾಂತರಗಳಿಂದ ನಟಿಸೋಕೆ ನಿರಾಕರಿಸಿದ್ದರು. ಹಾಗಾಗಿ ಆ ಅವಕಾಶ ಅಕ್ಷಯ್ ಕುಮಾರ್ ಪಾಲಾಯಿತು ಎಂದು ಶಂಕರ್ ನೆನಪಿಸಿಕೊಂಡಿದ್ದಾರೆ.
ಇದೇ ವಿಚಾರದ ಬಗ್ಗೆ ಕಮಲ್ ಸಹ ಮಾತನಾಡಿದ್ದು "ಅಷ್ಟು ಬೇಗ ವಿಲನ್ ಆಗುವುದು ಬೇಡ ಎನಿಸಿತು. ಅದಕ್ಕೆ ಒಪ್ಪಲಿಲ್ಲ" ಎಂದು ನಕ್ಕಿದ್ದಾರೆ. ಇದನ್ನು ಅಭಿಮಾನಿಗಳು ಛೇ, ಒಳ್ಳೆ ಅವಕಾಶ ಮಿಸ್ ಆಯ್ತು. ನೀವಿಬ್ಬರು ನಟಿಸಿದ್ದರೆ ಬಾಕ್ಸಾಫೀಸ್ ಶೇಕ ಆಗ್ತಿತ್ತು ಎನ್ನುತ್ತಿದ್ದಾರೆ. ಮುಂದೆ ಅವಕಾಶ ಸಿಕ್ಕರೆ ರಜನಿಕಾಂತ್- ಕಮಲ್ ಇಬ್ಬರನ್ನು ಸೇರಿಸಿ ಸಿನಿಮಾ ಮಾಡ್ತೀನಿ ಎಂದು ಶಂಕರ್ ಇಂಗಿತ ವ್ಯಕ್ತಪಡಿಸಿದ್ದಾರೆ.


Click it and Unblock the Notifications











