ವಿವಾಹ ವಾರ್ಷಿಕೋತ್ಸವದ ದಿನದಂದೇ ಅಪ್ಪು ಮನೆಗೆ ಭೇಟಿ ನೀಡಿದ ತೆಲುಗು ನಟ ಅಲ್ಲು ಶಿರೀಶ್
ಪವರ್ಸ್ಟಾರ್ ಪುನೀತ್ ರಾಜ್ಕುಮಾರ್ ದೊಡ್ಡ ಆಸ್ತಿ ಅಂದರೆ ಸ್ನೇಹಿತರು. ಕೇವಲ ಕನ್ನಡ ಚಿತ್ರರಂಗದಲ್ಲಿ ಅಷ್ಟೇ ಅಲ್ಲ. ತೆಲುಗು, ತಮಿಳು ಭಾಷೆಯ ಸಿನಿಮಾಗಳಲ್ಲೂ ಪುನೀತ್ ರಾಜ್ಕುಮಾರ್ಗೆ ಉತ್ತಮ ಸ್ನೇಹಿತರಿದ್ದಾರೆ. ಇದೇ ಕಾರಣಕ್ಕೆ ಪುನೀತ್ ಅಗಲಿದ ದಿನದಿಂದ ಬೇರೆ ಬೇರೆ ಭಾಷೆಯಿಂದ ಕಲಾವಿದರು ಅಪ್ಪು ಮನೆಗೆ ಭೇಟಿ ನೀಡುತ್ತಿದ್ದಾರೆ. ಇಂದು (ಡಿಸೆಂಬರ್ 01) ತೆಲುಗು ನಟ ಅಲ್ಲು ಶಿರೀಶ್ ಭೇಟಿ ನೀಡಿ ಅಪ್ಪು ಪತ್ನಿ ಅಶ್ವಿನಿಯವರಿಗೆ ಸಮಾಧಾನದ ಮಾತುಗಳನ್ನು ಆಡಿದ್ದಾರೆ.
ಅಪ್ಪು ಅಗಲಿದ ದಿನದಿಂದ ತೆಲುಗು ಹಾಗೂ ತಮಿಳಿನ ಸ್ಟಾರ್ ನಟರು ಆಗಮಿಸಿದ ಪುನೀತ್ ಕುಟುಂಬಕ್ಕೆ ಸಮಾಧಾನ ಮಾಡುತ್ತಿದ್ದಾರೆ. ಈಗಾಗಲೇ ಮೆಗಾಸ್ಟಾರ್ ಚಿರಂಜೀವಿ, ನಾಗಾರ್ಜುನ, ಜೂ. ಎನ್ಟಿಆರ್, ವಿಜಯ್ ಸೇತುಪತಿ, ಸೂರ್ಯ, ರಾಮ್ ಚರಣ್ ಸೇರಿದಂತೆ ದಕ್ಷಿಣ ಭಾರತದ ಗಣ್ಯರು ಪುನೀತ್ಗೆ ನಮನ ಸಲ್ಲಿಸಿದ್ದಾರೆ. ಈಗ ಅಲ್ಲು ಅರ್ಜುನ್ ಸಹೋದರ ಅಲ್ಲು ಶಿರೀಶ್, ಪುನೀತ್ ಮನೆಗೆ ಭೇಟಿ ನೀಡಿದ್ದಾರೆ.

ವಿವಾಹ ವಾರ್ಷಿಕೋತ್ಸವದಂದೇ ಅಲ್ಲು ಶಿರೀಶ್ ಭೇಟಿ
ತೆಲುಗು ನಟ ಅಲ್ಲು ಶಿರೀಶ್ ಹಾಗೂ ಪುನೀತ್ ರಾಜ್ಕುಮಾರ್ ಇಬ್ಬರು ಉತ್ತಮ ಸ್ನೇಹಿತರು. ತೆಲುಗಿನ ಅಲ್ಲು ಫ್ಯಾಮಿಲಿ ಜೊತೆ ಡಾ. ರಾಜ್ಕುಮಾರ್ ಕುಟುಂಬ ಮೊದಲಿನಿಂದಲೂ ಉತ್ತಮ ಬಾಂಧವ್ಯ ಹೊಂದಿದೆ. ಆದರೆ, ಪುನೀತ್ ನಿಧನ ವೇಳೆ ಅಲ್ಲು ಶಿರೀಶ್ ಹಾಗೂ ಅವರ ಅಣ್ಣ ಅಲ್ಲು ಅರ್ಜುನ್ ಇಬ್ಬರಿಗೂ ಅಂತಿಮ ದರ್ಶನ ಪಡೆಯಲು ಸಾಧ್ಯವಾಗಿರಲಿಲ್ಲ. ಹೀಗಾಗಿ ಇಂದು (ಡಿಸೆಂಬರ್ 01) ಶಿರೀಶ್ ಅಪ್ಪು ಮನೆಗೆ ಭೇಟಿ ನೀಡಿದ್ದಾರೆ. ಪುನೀತ್ ಹಾಗೂ ಅಶ್ವಿನಿ 22ನೇ ವಿವಾಹ ವಾರ್ಷಿಕೋತ್ಸವದ ದಿನದಂದು ದು:ಖದಲ್ಲಿರುವ ಅಪ್ಪು ಪತ್ನಿ ಅಶ್ಚಿನಿ ಹಾಗೂ ಮಗಳಿಗೆ ಧೈರ್ಯ ತುಂಬಿದ್ದಾರೆ.

ವೇದಿಕೆ ಮೇಲೆ ಭಾವುಕರಾಗಿದ್ದ ಅಲ್ಲು ಅರ್ಜುನ್
ಪುನೀತ್ ರಾಜ್ಕುಮಾರ್ ನಿಧನದ ಸುದ್ದಿ ಕೇಳಿ ಅಲ್ಲು ಅರ್ಜುನ್ 'ಪುಷ್ಪಕ ವಿಮಾನಂ' ಸಿನಿಮಾದ ಪ್ರಿ ರಿಲೀಸ್ ಇವೆಂಟ್ನಲ್ಲಿ ಭಾವುಕರಾಗಿದ್ದರು. "ಪುನೀತ್ ರಾಜ್ಕುಮಾರ್ ಅವರು ನನಗೆ ಬಹಳ ಕಾಲದಿಂದ ಪರಿಚಯ. ನಮ್ಮ ಮನೆಗೆ ಬರುತ್ತಿದ್ದರು. ಅದೆಷ್ಟೋ ಬಾರಿ ನಾವು ಒಟ್ಟಿಗೆ ಕೂತು ಊಟ ಮಾಡಿದ್ದೇವೆ. ನಮ್ಮಿಬ್ಬರ ನಡುವೆ ಪರಸ್ಪರ ಪ್ರೀತಿ ವಿಶ್ವಾಸವಿತ್ತು. ಆದ್ರೀಗ ದಿಢೀರನೇ ಅವರಿಲ್ಲ ಅಂದರೆ, ತುಂಬಾ ನೋವಾಗುತ್ತದೆ." ಎಂದು ಅಲ್ಲು ಅರ್ಜುನ್ ಭಾವುಕರಾಗಿದ್ದರು. ಅಪ್ಪು ಅಗಲಿದ ಒಂದು ತಿಂಗಳ ಬಳಿಕ ಈಗ ಅಲ್ಲು ಶಿರೀಶ್ ಅಪ್ಪು ನಿವಾಸಕ್ಕೆ ಭೇಟಿ ನೀಡಿದ್ದಾರೆ.

'ಒಕ್ಕ ಕ್ಷಣಂ' ಶೂಟಿಂಗ್ ಸ್ಥಳಕ್ಕೆ ಭೇಟಿ ನೀಡಿದ್ದ ಅಪ್ಪು
2017ರಲ್ಲಿ ನಟ ಅಲ್ಲು ಶಿರೀಶ್ ಅಭಿನಯದ 'ಒಕ್ಕ ಕ್ಷಣಂ' ಚಿತ್ರದ ಚಿತ್ರೀಕರಣ ಬೆಂಗಳೂರಿನಲ್ಲಿ ನಡೆಯುತ್ತಿತ್ತು. ಈ ವೇಳೆ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಶೂಟಿಂಗ್ ಸೆಟ್ಗೆ ಭೇಟಿ ನೀಡಿದ್ದರು. ಶೂಟಿಂಗ್ ಸೆಟ್ಗೆ ಭೇಟಿ ನೀಡಿದ್ದ ಪುನೀತ್ ರಾಜ್ ಕುಮಾರ್, ಅಲ್ಲು ಶಿರೀಶ್ ಯೋಗಕ್ಷೇಮ ವಿಚಾರಿಸಿ ಬಂದಿದ್ದರು. ಈ ಬಗ್ಗೆ ಸ್ವತ: ಶಿರೀಶ್ ಟ್ವೀಟ್ ಮಾಡಿ, "ಕನ್ನಡದ ಸ್ಟಾರ್ ನಟನೊಬ್ಬರು ತಮ್ಮ ಶೂಟಿಂಗ್ ಸೆಟ್ ಬಂದು ಕೆಲ ಹೊತ್ತು ನಮ್ಮ ಜತೆ ಸಮಯ ಕಳೆದಿದ್ದು ಸಂತಸ ತಂದಿದೆ" ಬರೆದುಕೊಂಡಿದ್ದರು.

'ಟಗರು' ಚಿತ್ರದ ಟ್ರೈಲರ್ ಲಾಂಚ್ ಮಾಡಿದ್ದು ಶಿರೀಶ್
ಇಷ್ಟೇ ಅಲ್ಲದೆ ಅಲ್ಲು ಶಿರೀಶ್ ಸೆಂಚುರಿ ಸ್ಟಾರ್ ಶಿವರಾಜ್ಕುಮಾರ್ ನಟಿಸಿದ 'ಟಗರು' ಚಿತ್ರದ ಟ್ರೈಲರ್ ಲಾಂಚ್ ಮಾಡಲು ಬಂದಿದ್ದರು. ವಿಶೇಷ ಅತಿಥಿಯಾಗಿ ಆಗಮಿಸಿದ್ದ ಅಲ್ಲು ಶಿರೀಶ್ ವೇದಿಕೆ ಮೇಲೆ ಭರ್ಜರಿ ಸ್ಟೆಪ್ಸ್ ಹಾಕಿ ಅಭಿಮಾನಿಗಳನ್ನು ರಂಜಿಸಿದ್ದರು.


Click it and Unblock the Notifications











