14 ದಿನ ಹೋರಾಡಿ ಜೀವ ಬಿಟ್ಟ ನಟ, ವಿಮರ್ಶಕ ಕತ್ತಿ ಮಹೇಶ್
ತೆಲುಗು ನಟ, ಸಿನಿಮಾ ವಿಮರ್ಶಕ ಕತ್ತಿ ಮಹೇಶ್ ಸತತ 14 ದಿನಗಳ ಕಾಲ ಜೀವನ್ಮರಣ ಸ್ಥಿತಿಯಲ್ಲಿ ಹೋರಾಡಿ ಕೊನೆಗೆ ಇಂದು ಕಣ್ಣು ಮುಚ್ಚಿದ್ದಾರೆ.
ಕತ್ತಿ ಮಹೇಶ್ಗೆ ಜೂನ್ 26 ರಂದು ಬೆಳಿಗ್ಗೆ ಅಪಘಾತವಾಗಿತ್ತು. ನೆಲ್ಲೂರಿನ ಬಳಿ ಅವರು ಚಲಾಯಿಸುತ್ತಿದ್ದ ಇನ್ನೋವಾ ಕಾರು ನಿಂತಿದ್ದ ಲಾರಿಗೆ ಢಿಕ್ಕಿಯಾಗಿದ್ದ ಪರಿಣಾಮ ಕತ್ತಿ ಮಹೇಶ್ಗೆ ತೀವ್ರ ಗಾಯಗಳಾಗಿದ್ದವು. ಪ್ರಾಥಮಿಕ ಚಿಕಿತ್ಸೆ ಬಳಿಕ ಅವರನ್ನು ಚೆನ್ನೈನ ಆಸ್ಪತ್ರೆಗೆ ರವಾನಿಸಲಾಗಿತ್ತು.
ಚೆನ್ನೈ ಆಸ್ಪತ್ರೆಯಲ್ಲಿ ಕತ್ತಿ ಮಹೇಶ್ಗೆ ಪ್ಲಾಸ್ಟಿಕ್ ಸರ್ಜರಿ, ಮೆದುಳು ಶಸ್ತ್ರ ಚಿಕಿತ್ಸೆಗಳನ್ನು ಮಾಡಲಾಗಿತ್ತು. ಕತ್ತಿ ಮಹೇಶ್ ಚಿಕಿತ್ಸೆಗಾಗಿ ಆಂಧ್ರಪ್ರದೇಶ ಸರ್ಕಾರ ಹದಿನೇಳು ಲಕ್ಷ ಹಣ ನೀಡಿತ್ತು. ಅವರ ಸ್ನೇಹಿತರು, ಸಿನಿಮಾ ಗಣ್ಯರು, ಅಭಿಮಾನಿಗಳು ಕತ್ತಿ ಮಹೇಶ್ಗಾಗಿ ಪ್ರಾರ್ಥನೆ ಮಾಡಿದ್ದರು, ಆದರೆ ಕತ್ತಿ ಮಹೇಶ್ ಮರಳಿ ಬರಲಿಲ್ಲ.

ಕತ್ತಿ ಮಹೇಶ್ ಮೂಗಿಗೆ, ಕಣ್ಣಿಗೆ, ತಲೆಗೆ ತೀವ್ರತರವಾದ ಪೆಟ್ಟು ಬಿದ್ದಿತ್ತು. ಮೂಗು ಹಾಗೂ ಎಡಗಣ್ಣು ಜಜ್ಜಿಯಾಗಿ ಹೋಗಿತ್ತು ಎಂದು ಪ್ರತ್ಯಕ್ಷ ದರ್ಶಿಗಳು ಹೇಳಿದ್ದರು. ಇದೀಗ ಕತ್ತಿ ಮಹೇಶ್ ಅಗಲಿಕೆಗೆ ತೆಲುಗು ಚಿತ್ರರಂಗದ ಗಣ್ಯರು ಹಾಗೂ ಕತ್ತಿ ಮಹೇಶ್ ಗೆಳೆಯರು ಸಂತಾಪ ಸೂಚಿಸಿದ್ದಾರೆ.
ಸಿನಿಮಾ ವಿಮರ್ಶಕರಾಗಿದ್ದ ಮಹೇಶ್ ಕತ್ತಿ, 2011 ರಲ್ಲಿ ಎಡಾರಿ ವರ್ಷಂ ಸಿನಿಮಾ ಮೂಲಕ ಅಭಿನಯ ಆರಂಭಿಸಿದರು. ನಂತರ 2014 'ಮಿನುಗುರುಲು' ಸಿನಿಮಾಕ್ಕೆ ಚಿತ್ರಕತೆ ಬರೆದರು. ಆ ನಂತರ ಹಲವು ಸಿನಿಮಾಗಳಲ್ಲಿ ಮಹೇಶ್ ಕತ್ತಿ ನಟಿಸಿದ್ದಾರೆ. ತೆಲುಗು ಬಿಗ್ಬಾಸ್ ಮೊದಲ ಸೀಸನ್ನಲ್ಲಿ ಸ್ಪರ್ಧಿಯೂ ಆಗಿದ್ದರು ಮಹೇಶ್. ಆ ಸೀಸನ್ನಲ್ಲಿ ಸಾಕಷ್ಟು ಜನಪ್ರಿಯತೆಯನ್ನು ಗಳಿಸಿಕೊಂಡಿದ್ದರು.
Recommended Video
ಕೊರೊನಾ ಲಾಕ್ಡೌನ್ ಅವಧಿಯಲ್ಲಿ ಸಾಮಾಜಿಕ ಜಾಲತಾಣದ ಮೂಲಕ 'ಮಾರ್ನಿಂಗ್ ರಾಗಾ' ಹೆಸರಿನಲ್ಲಿ ಮನೊರಂಜನೆ ಮಾಡುತ್ತಿದ್ದ ಮಹೇಶ್. ಟಿವಿ ಚರ್ಚೆಗಳಲ್ಲಿ ಪಾಲ್ಗೊಂಡು ಹಲವು ಬಾರಿ ವಿವಾದಾತ್ಮಕ ಹೇಳಿಕೆಗಳನ್ನು ನೀಡಿ ವಿವಾದಗಳೀಗೂ ಈಡಾಗಿದ್ದರು. ಅವರ ಸಾಮಾಜಿಕ ಜಾಲತಾಣ ಪೋಸ್ಟ್ಗಳು ಸಹ ವಿವಾದ ಹುಟ್ಟುಹಾಕುವ ರೀತಿಯಲ್ಲಿಯೇ ಇರುತ್ತಿದ್ದವು.


Click it and Unblock the Notifications











