ಮತ್ತೆ ವಿವಾದಾತ್ಮಕ ಜ್ಯೋತಿಷಿ ವೇಣು ಸ್ವಾಮಿ ನಂಬಿದರೇ ತೆಲುಗು ನಟಿ; ವಿಶೇಷ ಪೂಜೆ ಮಾಡಿಸಿದ್ದೇಕೆ?
ತೆಲುಗಿನ ಸೆಲೆಬ್ರೆಟಿಗಳ ಜ್ಯೋತಿಷಿ ವೇಣುಸ್ವಾಮಿ ಮತ್ತೆ ಆಕ್ಟಿವ್ ಆಗಿದ್ದಾರೆ. ಕಳೆದ ಕೆಲವು ತಿಂಗಳಿಂದ ಸಿನಿಮಾ ತಾರೆಯರ ಬಗ್ಗೆ ಇಲ್ಲ ಸಲ್ಲದ ಭವಿಷ್ಯ ನುಡಿದು ಪೇಚಿಗೆ ಸಿಕ್ಕಿಕೊಂಡಿದ್ದರು. ಯಾರಿಂದ ಜನಪ್ರಿಯತೆ ಪಡೆದಿದ್ದರೋ ಅವರ ವಿರುದ್ಧವೇ ಭವಿಷ್ಯ ಹೇಳಿದ್ದರು. ನಟ, ನಟಿಯರ ಸಿನಿಮಾಗಳು ರಿಲೀಸ್, ಮದುವೆ, ವಿಚ್ಛೇದನದ ಬಗ್ಗೆ ವಿವಾದಾತ್ಮಕ ಭವಿಷ್ಯ ಹೇಳಿದ್ದರು. ಇದು ಟಾಲಿವುಡ್ ಮಂದಿಯನ್ನು ಕಿರಿಕಿರಿ ಮಾಡಿತ್ತು.
ಈ ಕಾರಣಕ್ಕೆ ವೇಣು ಸ್ವಾಮಿ ನ್ಯಾಯಾಲಯದ ಮೆಟ್ಟಿಲನ್ನೂ ಏರಬೇಕಾಗಿ ಬಂದಿತ್ತು. ಆದ್ರೀಗ ಮತ್ತೆ ಸೋಶಿಯಲ್ ಮೀಡಿಯಾಗಳಲ್ಲಿ ವೇಣು ಸ್ವಾಮಿ ಆಕ್ಟಿವ್ ಆಗಿದ್ದಾರೆ. ಸೆಲೆಬ್ರೆಟಿಗಳು, ರಾಜಕೀಯ ವ್ಯಕ್ತಿಗಳ ಕುರಿತು ಭವಿಷ್ಯವನ್ನು ನುಡಿಯುತ್ತಿದ್ದಾರೆ. ಕೆಲವು ವಿಷಯಗಳ ಬಗ್ಗೆ ಭವಿಷ್ಯವನ್ನು ನುಡಿಯುತ್ತಿದ್ದಾರೆ. ಈ ಬೆನ್ನಲ್ಲೇ ಟಾಲಿವುಡ್ನ ಜನಪ್ರಿಯ ನಟಿ ನಿಧಿ ಅಗರ್ವಾಲ್ ಇದೇ ಜ್ಯೊತಿಷಿಯೊಂದಿಗೆ ಕಾಣಿಸಿಕೊಂಡಿದ್ದಾರೆ.

ಟಾಲಿವುಡ್ ನಟಿ ನಿಧಿ ಅಗರ್ವಾಲ್ ಹಾಗೂ ವೇಣುಸ್ವಾಮಿ ಇಬ್ಬರಿಗೂ ಮೊದಲೇ ಪರಿಚಯವಿದೆ. ಈ ಹಿಂದೆ ವೇಣು ಸ್ವಾಮಿಯ ಜೊತೆ ಪೂಜಾ ಕಾರ್ಯಗಳಲ್ಲಿ ನಿಧಿ ಅಗರ್ವಾಲ್ ಭಾಗಿಯಾಗಿದ್ದರು. ಈಗ ಸೋಶಿಯಲ್ ಮೀಡಿಯಾದಲ್ಲಿ ನಿಧಿ ಅಗರ್ವಾಲ್ ಪೂಜಾ ಕಾರ್ಯಗಳಲ್ಲಿ ಮಗ್ನರಾಗಿರುವ ವಿಡಿಯೋ ವೈರಲ್ ಆಗುತ್ತಿದೆ. ಅಷ್ಟಕ್ಕೂ ವಿಡಿಯೋದಲ್ಲಿ ಏನೇನಿದೆ? ತಿಳಿಯುವುದಕ್ಕೆ ಮುಂದೆ ಓದಿ.
ವೇಣು ಸ್ವಾಮಿ ಈ ಹಿಂದೆ ತೆಲುಗು ಚಿತ್ರರಂಗದ ಹಲವು ನಟಿಯರೊಂದಿಗೆ ವಿಶೇಷ ಪೂಜೆಗಳಲ್ಲಿ ಭಾಗಿಯಾಗಿದ್ದಾರೆ. ಈಗ ಮತ್ತೆ ನಿಧಿ ಅಗರ್ವಾಲ್ ಜೊತೆ ಕಾಣಿಸಿಕೊಂಡಿದ್ದು ಚರ್ಚೆಗೆ ಗ್ರಾಸವಾಗಿದೆ. ನಿಧಿ ಅಗರ್ವಾಲ್ ತೆಲುಗಿನ ಎರಡು ಬಿಗ್ ಬಜೆಟ್ ಸಿನಿಮಾಗಳಲ್ಲಿ ನಟಿಸಿದ್ದಾರೆ. ಪವರ್ಸ್ಟಾರ್ ಪವನ್ ಕಲ್ಯಾಣ್ ನಟಿಸಿರುವ 'ಹರಿಹರ ವೀರ ಮಲ್ಲು' ಹಾಗೂ ಪ್ರಭಾಸ್ ನಟನೆಯ 'ರಾಜಾ ಸಾಬ್' ಸಿನಿಮಾಗಳಿಗೆ ಇವರೇ ನಾಯಕಿ. ಈ ಎರಡು ಸಿನಿಮಾಗಳು ಬಿಡುಗಡೆಗೆ ಸಜ್ಜಾಗುತ್ತಿರುವ ಬೆನ್ನಲ್ಲೇ ವಿಶೇಷ ಪೂಜೆಯಲ್ಲಿ ತೊಡಗಿದ್ದಾರೆಂಬ ಸುದ್ದಿ ಓಡಾಡುತ್ತಿದೆ.
ವೇಣು ಸ್ವಾಮಿ ಮಾಡುವ ಪೂಜಾ ಕಾರ್ಯಗಳ ಮೇಲೆ ಟಾಲಿವುಡ್ ನಟಿಯರಿಗೆ ವಿಶೇಷ ನಂಬಿಕೆ. ನಟಿ ರಶ್ಮಿಕಾ ಮಂದಣ್ಣ, ನಿಧಿ ಅಗರ್ವಾಲ್, ಡಿಂಪಲ್ ಹಯಾತಿಗಾಗಿ ವಿಶೇಷ ಪೂಜೆಯನ್ನು ಸಲ್ಲಿಸಿದ್ದಾರೆ. ಆ ವಿಡಿಯೋಗಳು ಈ ಹಿಂದೆ ವೈರಲ್ ಆಗಿವೆ. ಇಷ್ಟೇ ಅಲ್ಲದೆ ಆಶು ರೆಡ್ಡಿ, ಇನಾಯಾ ಸುಲ್ತಾನಾ, ನಿಶ್ವಿಕಾ ನಾಯ್ಡು ಕೂಡ ವೇಣುಸ್ವಾಮಿಯನ್ನು ನಂಬಿತ್ತಾರೆಂದು ಹೇಳಲಾಗಿದೆ. ಈಗ ನಿಧಿ ಅಗರ್ವಾಲ್ ಮತ್ತೊಮ್ಮೆ ವೇಣು ಸ್ವಾಮಿ ಅವರಿಂದ ಪೂಜೆಯನ್ನು ಮಾಡಿಸಿದ್ದಾರೆ. ಇದ್ಯಾಕೆ ಅನ್ನೋದು ಮಾತ್ರ ಇನ್ನೂ ಗೊತ್ತಾಗಿಲ್ಲ.
ಟಾಲಿವುಡ್ ನಟಿ ನಿಧಿ ಅಗರ್ವಾಲ್ ಈ ವಿವಾದಾತ್ಮಕ ಜ್ಯೋತಿಷಿ ಜೊತೆ ಕಾಣಿಸಿಕೊಳ್ಳುವುದು ಇದೇ ಮೊದಲೇನಲ್ಲ. ಈ ಹಿಂದೆ ಕೂಡ ಇಂತಹದ್ದೇ ಒಂದು ಪೂಜಾ ಕಾರ್ಯಗಳಲ್ಲಿ ಭಾಗಿಯಾಗಿದ್ದರು. ಆ ಬಳಿಕ ಅವರಿಗೆ ಒಳ್ಳೊಳ್ಳೆ ಆಫರ್ಗಳು ಬಂದಿದ್ದವು ಎಂದು ಟಿವಿ 9 ತೆಲುಗು ವರದಿ ಮಾಡಿದೆ. ಈಗ ಪವರ್ ಸ್ಟಾರ್ ಪವನ್ ಕಲ್ಯಾಣ್ ಸಿನಿಮಾ 'ಹರಿಹರ ವೀರಮಲ್ಲು' ಹಾಗೂ ಪ್ರಭಾಸ್ ಸಿನಿಮಾ 'ರಾಜಾ ಸಾಬ್' ಸಿನಿಮಾಗೂ ನಾಯಕಿಯಾಗಿದ್ದು ಬಿಡುಗಡೆಗೆ ಪ್ರಾರ್ಥನೆ ಸಲ್ಲಿಸಿದ್ದಾರೆ ಎನ್ನಲಾಗಿದೆ.
'ಹರಿಹರ ವೀರಮಲ್ಲು', 'ರಾಜಾ ಸಾಬ್' ಈ ಎರಡೂ ಸಿನಿಮಾಗಳೂ ಬಿಡುಗಡೆಗೆ ಅಡೆತಡೆಗಳಾಗುತ್ತಿವೆ. ಈ ಹಿನ್ನೆಲೆಯಲ್ಲಿ ನಿಧಿ ಅಗರ್ವಾಲ್ ವಿಶೇಷ ಪೂಜೆಯನ್ನು ಸಲ್ಲಿಸಿದ್ದಾರೆಂದು ಹೇಳಲಾಗುತ್ತಿದೆ. ಸದ್ಯ ಈ ವಿಡಯೋ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದು, ಅಭಿಮಾನಿಗಳು ಕಮೆಂಟ್ ಮಾಡುವುದಕ್ಕೆ ಶುರು ಮಾಡಿದ್ದಾರೆ. ವೇಣುಸ್ವಾಮಿ ಹಾಗೂ ನಿಧಿ ಅಗರ್ವಾಲ್ ಇಬ್ಬರನ್ನೂ ಟ್ರೋಲ್ ಮಾಡುವುದಕ್ಕೆ ಶುರು ಮಾಡಿದ್ದಾರೆ.


Click it and Unblock the Notifications











