"ಈ ಕಾರಣಕ್ಕೆ ಮಕ್ಕಳು ಮಾಡಿಕೊಂಡಿಲ್ಲ.. ನನ್ನ ಸಾವಿನ ನಂತರ ಆಸ್ತಿಯೆಲ್ಲ ಅಲ್ಲಿಗೆ ಸೇರಬೇಕು"; ವಿಜಯಶಾಂತಿ ದಿಟ್ಟ ಹೆಜ್ಜೆ
ದಕ್ಷಿಣ ಭಾರದತ ಲೇಡಿ ಆಕ್ಷನ್ ಸೂಪರ್ಸ್ಟಾರ್ ವಿಜಯಶಾಂತಿ. ಇವರ ಸಿನಿಮಾಗಳಿಗೆ ಪ್ರತ್ಯೇಕ ವರ್ಗವೇ ಇದೆ. ನಾಯಕ ನಟಿಯರು ಕೇವಲ ರೊಮ್ಯಾಂಟಿಕ್, ಸೆಂಟಿಮೆಂಟ್ ಪಾತ್ರಗಳಿಗೆ ಮಾತ್ರ ಅಲ್ಲ. ಆಕ್ಷನ್ ಸಿನಿಮಾಗಳನ್ನು ಮಾಡಬಲ್ಲರು ಅಂತ ತೋರಿಸಿಕೊಟ್ಟಿದ್ದು ಇದೇ ವಿಜಯಶಾಂತಿ. ಒಂದು ಕಾಲಕ್ಕೆ ಸೂಪರ್ಸ್ಟಾರ್ಗಳೇ ಇವರ ಡೇಟ್ಗಳಿಗೆ ಕಾಯುತ್ತಿದ್ದ ಕಾಲವೂ ಇತ್ತು.
ವೃತ್ತಿ ಬದುಕಿನಲ್ಲಿ ಯಶಸ್ಸಿನ ಉತ್ತುಂಗಕ್ಕೆ ಏರಿದ್ದ ವಿಜಯಶಾಂತಿ ಈಗ ಸಿನಿಮಾದಿಂದ ದೂರವಿದ್ದಾರೆ. ಒಂದು ಕಾಲದಲ್ಲಿ ಈ ನಟಿಯನ್ನು ಲೇಡಿ ಅಮಿತಾಬ್ ಬಚ್ಚನ್ ಅಂತಲೇ ಕರೆಯುತ್ತಿದ್ದರು. ಈ ಮಟ್ಟಿಗೆ ಹವಾ ಹುಟ್ಟಾಕಿದ್ದ ನಟಿ, ಈಗ ಸಿನಿಮಾದಿಂದ ದೂರವಿದ್ದು ರಾಜಕೀಯದಲ್ಲಿ ಸಕ್ರಿಯರಾಗಿದ್ದಾರೆ. ಆದರೂ, ಇವರ ಕ್ರೇಜ್ ಮಾತ್ರ ಕಿಂಚಿತ್ತೂ ಕಡಿಮೆಯಾಗಿಲ್ಲ.

ನಟಿ ವಿಜಯಶಾಂತಿ ಇತ್ತೀಚೆಗೆ ಸಿನಿಮಾಗಳಲ್ಲಿ ನಟಿಸಿದ್ದು ಕಡಿಮೆ. ಅವರು ರಾಜಕೀಯದ ಕಡೆಗೆ ಮುಖ ಮಾಡಿದ ಮೇಲೆ ಅಲ್ಲಿಯೇ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಇತ್ತೀಚೆಗೆ ವಿಜಯಶಾಂತಿ ತಮ್ಮ ಕೌಟುಂಬಿಕ ಜೀವನ ಹೇಗಿದೆ? ಯಾಕೆ ಮಕ್ಕಳಾಗಿಲ್ಲ? ತನ್ನ ಬಳಿರುವ ಆಸ್ತಿಯನ್ನು ಏನು ಮಾಡುತ್ತಾರೆ? ಚಿನ್ನದ ಆಭರಣಗಳು ಎಲ್ಲಿವೆ? ಎನ್ನುವ ಬಗ್ಗೆ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದರು. ಆ ವಿಡಿಯೋ ಈಗ ಮತ್ತೆ ವೈರಲ್ ಆಗುತ್ತಿದೆ. ಅಸಲಿಗೆ ಆ ವಿಡಿಯೋದಲ್ಲಿ ಏನು ಹೇಳಿದ್ದಾರೆ.
ವಿಜಯಶಾಂತಿ ಸಿನಿಮಾ ಜರ್ನಿ ನಿಜಕ್ಕೂ ರೋಚಕವಾಗಿದೆ. ತೆಲುಗು ಚಿತ್ರರಂಗದ ಹಿರಿಯ ನಟಿ ವಿಜಯಲಲಿತಾ ಅವರ ಪುತ್ರಿ. ಕೇವಲ 15ನೇ ವಯಸ್ಸಿನಲ್ಲಿಯೇ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದರು. ಅಲ್ಲಿಂದ ಸುಮಾರು 40 ವರ್ಷಗಳ ಕಾಲ ಸಿನಿ ಪ್ರಿಯರನ್ನು ರಂಜಿಸುತ್ತಲೇ ಬಂದಿದ್ದಾರೆ. 80ರ ದಶಕದಲ್ಲಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದವರು ಬಹುಭಾಷಾ ನಟಿಯಾಗಿ ಹೊರ ಹೊಮ್ಮಿದ್ದರು. ತೆಲುಗು, ಕನ್ನಡ, ತಮಿಳು, ಮಲಯಾಳಂ ಅಷ್ಟೇ ಅಲ್ಲ ಹಿಂದಿ ಭಾಷೆಯ ಸಿನಿಮಾಗಳಲ್ಲೂ ನಟಿಸಿ ಯಶಸ್ಸನ್ನು ಗಳಿಸಿದ್ದರು. ಸುಮಾರು 200ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿ ದಕ್ಷಿಣ ಭಾರತದ ಲೇಡಿ ಸೂಪರ್ಸ್ಟಾರ್ ಎನಿಸಿಕೊಂಡಿದ್ದರು.

ವಿಜಯಶಾಂತಿ ದಕ್ಷಿಣ ಭಾರತದ ಬಹುಬೇಡಿಕೆಯ ನಟಿಯಾಗಿದ್ದರು. ಕನ್ನಡದಲ್ಲಿಯೂ ಮೂರು ಸಿನಿಮಾಗಳಲ್ಲಿ ನಟಿಸಿದ್ದಾರೆ. 1983ರಲ್ಲಿ 'ಕೆರಳಿದ ಹೆಣ್ಣು' ಹಾಗೂ 'ಸಿಂಹ ಘರ್ಜನೆ' ಈ ಎರಡು ಸಿನಿಮಾಗಳಲ್ಲಿ ನಟಿಸಿದ್ದರು. ಬಳಿಕ 2001ರಲ್ಲಿ 'ವಂದೇ ಮಾತರಂ' ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು. ಈ ಮಧ್ಯೆ ವಿಜಯಶಾಂತಿಯ ಕೆಲವು ಸಿನಿಮಾಗಳು ಕನ್ನಡಕ್ಕೆ ಡಬ್ ಕೂಡ ಆಗಿತ್ತು. ಐದು ಸಾವಿರ ರೂಪಾಯಿ ಸಂಭಾವನೆಯಿಂದ ನಾಯಕ ನಟಿಯಾಗಿದ ಸಂಭಾವನೆ ಪಡೆದ ವಿಜಯಶಾಂತಿ ಸೂಪರ್ಸ್ಟಾರ್ ಪಟ್ಟಕ್ಕೆ ಏರಿದ ಬಳಿಕ 1 ಕೋಟಿ ರೂಪಾಯಿ ಸಂಭಾವನೆ ಪಡೆದರು. ಹೀಗೆ ಒಂದು ಕೋಟಿ ರೂಪಾಯಿ ಸಂಭಾವನೆ ಪಡೆದ ದಕ್ಷಿಣ ಭಾರತದ ಮೊದಲ ನಟಿ ಎಂಬ ಮಾತು ಕೂಡ ಇದೆ.
ಹೀಗೆ ಉತ್ತುಂಗದಲ್ಲಿ ಇದ್ದಾಗ ವಿಜಯಶಾಂತಿ ರಾಜಕೀಯಕ್ಕೆ ಎಂಟ್ರಿ ಕೊಟ್ಟಿದ್ದರು. 2009ರಲ್ಲಿ ಮೇಡಕ್ನಿಂದ ಸ್ಪರ್ಧಿಸಿ ಗೆದ್ದಿದ್ದರು. ಆದರೆ, 2014ರಲ್ಲಿ ಸೋಲು ಕಂಡ ನಟಿ ಮತ್ತೆ ಚುನಾವಣೆ ಸ್ಪರ್ಧಿಸುವ ಮನಸ್ಸು ಮಾಡಲಿಲ್ಲ. ಈ ವೇಳೆ ಇವರಿಗೆ ಆರೋಗ್ಯ ಕೂಡ ಹದಗಟ್ಟಿತ್ತು. ಈ ಕಾರಣಕ್ಕೆ ಸಿನಿಮಾ ಹಾಗೂ ರಾಜಕೀಯದಿಂದ ಅಂತರವನ್ನು ಕಾಯ್ದುಕೊಂಡಿದ್ದರು. ತಮ್ಮ ಮುಂದಿನ ಜೀವನವನ್ನು ಜನರ ಸೇವೆ ಮಾಡುವುದಕ್ಕೆ ಮೀಸಲಿಟ್ಟಿದ್ದಾಗಿ ಹೇಳಿಕೊಂಡಿದ್ದಾರೆ. ಈ ಕಾರಣಕ್ಕೆ ಅವರು ಮಕ್ಕಳನ್ನು ಪಡೆಯುವ ಆಲೋಚನೆಯಿಂದ ದೂರವಿದ್ದಿದ್ದಾಗಿ ಹೇಳಿಕೊಂಡಿದ್ದರು.
ಇಷ್ಟೇ ಅಲ್ಲದೆ ವಿಜಯಶಾಂತಿ ತಮ್ಮ ಸಾವಿನ ನಂತರ ಆಸ್ತಿಯೆಲ್ಲ ಜನರಿಗೆ ಹೋಗವಂತೆ ನೋಡಿಕೊಳ್ಳುವುದಾಗಿ ಹೇಳಿಕೊಂಡಿದ್ದರು. ವಿಜಯಶಾಂತಿ ಈಗಾಗಲೇ ಅವರ ತಾಯಿಯ ಹೆಸರಿನಲ್ಲಿ ಒಂದು ಪ್ರತಿಷ್ಠಾನವನ್ನು ಸ್ಥಾಪಿಸಿದ್ದಾರೆ. ಈ ಮೂಲಕ ಜನರಿಗೆ ಶಿಕ್ಷಣ ಹಾಗೂ ವೈದ್ಯಕೀಯ ನೆರವು ನೀಡುವುದಕ್ಕೆ ತಮ್ಮ ಆಸ್ತಿಯನ್ನು ವಿನಿಯೋಗಿಸುವುದಾಗಿ ಹೇಳಿಕೊಂಡಿದ್ದರು. ಇಷ್ಟೇ ಅಲ್ಲ ತಮ್ಮ ಆಭರಣಗಳನ್ನು ವೆಂಕಟೇಶ್ವರನ ಹುಂಡಿಯಲ್ಲಿ ಇಟ್ಟಿದ್ದಾಗಿ ಹೇಳಿಕೊಂಡಿದ್ದಾರೆ. ಈಗ ವಿಜಯಶಾಂತಿಯವರ ಈ ಹೇಳಿಕೆ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.


Click it and Unblock the Notifications











