ಪವನ್ ಕಲ್ಯಾಣ್ ಸಿನಿಮಾ ಚಿತ್ರೀಕರಣದ ವೇಳೆ ಅಪಘಾತ, ನಟ ಆಸ್ಪತ್ರೆಗೆ ದಾಖಲು
ಪವನ್ ಕಲ್ಯಾಣ್ ಅವರ ಹೊಸ ಸಿನಿಮಾ 'ಹರಿಹರ ವೀರ ಮಲ್ಲು' ಸಿನಿಮಾದ ಚಿತ್ರೀಕರಣದ ವೇಳೆ ಸಂಭವಿಸಿರುವ ಅಪಘಾತದಲ್ಲಿ ಹಿರಿಯ ನಟ ಆದಿತ್ಯ ಮೆನನ್ ಗಾಯಗೊಂಡಿದ್ದಾರೆ.
'ಹರಿಹರ ವೀರಮಲ್ಲು' ಸಿನಿಮಾದ ಚಿತ್ರೀಕರಣ ಹೈದರಾಬಾದ್ನ ಹೊರವಲಯದಲ್ಲಿ ನಡೆಯುತ್ತಿತ್ತು. ಸಿನಿಮಾಕ್ಕಾಗಿ ಕೆಲವು ಆಕ್ಷನ್ ದೃಶ್ಯಗಳ ಚಿತ್ರೀಕರಣ ಮಾಡಲಾಗುತ್ತಿತ್ತು. ಈ ಸಮಯ ಕುದುರೆ ಚೇಸ್ ಒಂದರ ಚಿತ್ರೀಕರಣದ ವೇಳೆ ನಟ ಆದಿತ್ಯ ಮೆನನ್ ಕುದುರೆ ಮೇಲಿಂದ ಬಿದ್ದು ಗಾಯಗೊಂಡಿದ್ದಾರೆ. ಕೂಡಲೇ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದ್ದು, ಗಾಯಕ್ಕೆ ಹದಿನೈದು ಹೊಲಿಗೆಗಳನ್ನು ಹಾಕಲಾಗಿದೆ.
ಕುದುರೆ ಚೇಸ್ ನಡೆಯುವ ವೇಳೆ ಪಕ್ಕದಲ್ಲಿಯೇ ಸಿನಿಮಾಕ್ಕಾಗಿ ಸ್ಪೋಟಕವನ್ನೂ ಇಡಲಾಗಿತ್ತಂತೆ. ಸ್ಪೋಟದ ಸದ್ದಿಗೆ ಗಾಬರಿಯಾದ ಕುದುರೆ ಮೇಲೆ ಕೂತಿದ್ದ ಆದಿತ್ಯ ಮೆನನ್ ಅವರನ್ನು ಕೆಳಗೆ ದಬ್ಬಿದೆ.

'ಅದೊಂದು ಕೆಟ್ಟ ಸಂದರ್ಭ. ಕೆಳಗೆ ಬಿದ್ದ ಕೂಡಲೇ ವಿಪರೀತ ನೋವಿನಲ್ಲಿದ್ದೆ. ಕೂಡಲೇ ನನ್ನ ಕ್ಯಾರಾವ್ಯಾನ್ಗೆ ಹೋಗಿ ಪ್ರಥಮ ಚಿಕಿತ್ಸೆ ಮಾಡಿಕೊಂಡೆ. ಬಿದ್ದ ರೀತಿಗೆ ದೇಹದ ಕೆಲವು ಭಾಗಗಳಿಗೆ ಪೆಟ್ಟಾಯಿತು, ಕೆಲವೆಡೆ ಊತ ಬಂದಿದೆ. ತೊಡೆಯ ಬಳಿ ಗಾಯವಾಗಿದೆ' ಎಂದಿದ್ದಾರೆ ಆದಿತ್ಯ.
'ಬಹಳ ರಕ್ತಸ್ರಾವವಾಗುತ್ತಿದ್ದ ಕಾರಣ ಚಿತ್ರತಂಡದ ಸಹಾಯದೊಂದಿಗೆ ಆಸ್ಪತ್ರೆಗೆ ಹೋದೆ. ವೈದ್ಯರು, ಗಾಯಕ್ಕೆ ಹದಿನೈದು ಹೊಲಿಗೆಗಳನ್ನು ಹಾಕಿದರು. ಗಾಯ ಗುಣವಾಗುವವರೆಗೆ ವಿಶ್ರಾಂತಿಗೆ ಸೂಚಿಸಿದ್ದಾರೆ' ಎಂದಿದ್ದಾರೆ ನಟ.
'ನಾನು ಬಿದ್ದಿದ್ದು ಯಾರ ತಪ್ಪಿನಿಂದಲೂ ಅಲ್ಲ. ಎಷ್ಟೇ ಮುನ್ನೆಚ್ಚರಿಕೆ ತೆಗೆದುಕೊಂಡರು ಚಿತ್ರೀಕರಣದ ವೇಳೆ ಹೀಗೆಲ್ಲ ಆಗುತ್ತಿರುತ್ತವೆ. ಪ್ರಾಣಿಗಳೊಟ್ಟಿಗೆ ಕೆಲಸ ಮಾಡುವಾಗ ಎಷ್ಟೇ ಎಚ್ಚರವಾಗಿದ್ದರೂ ಸಾಲದು' ಎಂದಿದ್ದಾರೆ ಆದಿತ್ಯ.
Recommended Video
ಪವನ್ ಕಲ್ಯಾಣ್ ನಟಿಸುತ್ತಿರುವ 'ಹರಿ ಹರ ವೀರಮಲ್ಲು' ಸಿನಿಮಾದ ಚಿತ್ರೀಕರಣ ಕಳೆದ ಕೆಲವು ವಾರಗಳಿಂದ ಪ್ರಾರಂಭವಾಗಿದೆ. ಸ್ವಾತಂತ್ರ್ಯ ಪೂರ್ವದ ಬಂಡಾಯಗಾರನೊಬ್ಬನ ಕುರಿತಾದ ಕತೆಯನ್ನು ಸಿನಿಮಾ ಹೊಂದಿರಲಿದೆ. ಸಿನಿಮಾವನ್ನು ಕ್ರಿಶ್ ನಿರ್ದೇಶನ ಮಾಡುತ್ತಿದ್ದಾರೆ.


Click it and Unblock the Notifications











