ಬೈಕ್ ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದ ಸಾಯಿ ಧರಂ ತೇಜ್ ಗುಣಮುಖ: ಹೊಸ ಸಿನಿಮಾ ಶುರು
ತೆಲುಗಿನ ಯುವ ನಟ ಸಾಯಿ ಧರಂ ತೇಜ್ ಕಳೆದ ವರ್ಷ ಸೆಪ್ಟೆಂಬರ್ 10ರಂದು ರಾತ್ರಿ ಬೈಕ್ನಲ್ಲಿ ತೆರಳುವಾಗ ಅಪಘಾತಕ್ಕೀಡಾಗಿದ್ದರು. ಗಂಭೀರವಾಗಿ ಗಾಯಗೊಂಡಿದ್ದ ಸಾಯಿ ಧರಂ ತೇಜ್ ಅವರನ್ನು ತಕ್ಷಣವೇ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅತೀ ವೇಗದಲ್ಲಿ ಸ್ಟೋರ್ಟ್ ಬೈಕ್ ಚಲಾಯಿಸುತ್ತಿದ್ದ ನಟನ ಅಪಘಾತ ಟಾಲಿವುಡ್ ಮಂದಿಯನ್ನು ಬೆಚ್ಚಿಬೀಳಿಸಿತ್ತು. ತಿಂಗಳುಗಳ ಕಾಲ ಆಸ್ಪತ್ರೆಯಲ್ಲಿಯೇ ಚಿಕಿತ್ಸೆ ಪಡೆಯಬೇಕಾಗಿತ್ತು.
ಸಾಯಿ ಧರಂ ತೇಜ್ ಬೈಕ್ ಅಪಘಾತ ಸಂಭವಿಸಿದ ಕೆಲವು ದಿನಗಳಲ್ಲೇ ಅವರೇ ನಟಿಸಿದ 'ರಿಪಬ್ಲಿಕ್' ಸಿನಿಮಾ ಬಿಡುಗಡೆ ಸಜ್ಜಾಗಿತ್ತು. ನಟ ಸಾಯಿ ಧರಂ ತೇಜ್ಗೆ ಬೈಕ್ ರೈಡಿಂಗ್ ಅಂದರೆ ಇಷ್ಟ. ಹೀಗಾಗಿ ಸ್ನೇಹಿತರೊಂದಿಂಗೆ ಬೈಕ್ ರೈಡಿಂಗ್ಗೆ ತೆರಳಿದ್ದರು. ಈ ವೇಳೆ ಆಟೋವನ್ನು ಓವರ್ ಟೇಕ್ ಮಾಡಲು ಹೋದಾಗ ಹೈದರಾಬಾದ್ನ ಮಾದಾಪುರ ಕೇಬಲ್ ಬ್ರಿಡ್ಜ್ ಬಳಿ ಅಪಘಾತ ಸಂಭವಿಸಿತ್ತು. ಸ್ಥಳದಲ್ಲಿ ಕಾಮಗಾರಿ ನಡೆಯುತ್ತಿದ್ದರಿಂದ ಮರುಳು ಹಾಗೂ ಜಲ್ಲಿ ಕಲ್ಲುಗಳು ರಸ್ತೆ ಮೇಲೆ ಬಿದ್ದಿತ್ತು, ಇದೇ ಅಪಘಾತಕ್ಕೆ ಕಾರಣ ಎನ್ನಲಾಗಿದೆ. ಸದ್ಯ ಗುಣಮುಖರಾಗಿರುವ ಸಾಯಿ ಧರಂ ತೇಜ್ ಈಗ ಸಿನಿಮಾ ಚಿತ್ರೀಕರಣದಲ್ಲಿ ಭಾಗಿಯಾಗಲಿದ್ದಾರೆ.

ಚಿತ್ರೀಕರಣಕ್ಕೆ ಸಾಯಿ ಧರಂ ತೇಜ್ ಸಜ್ಜು
'ರಿಪಬ್ಲಿಕ್' ನಟ ಸಾಯಿ ಧರಂ ತೇಜ್ ಹೊಸ ಸಿನಿಮಾಗೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಬೈಕ್ ಅಪಘಾತದ ಬಳಿಕ ಮತ್ತೆ ಸಿನಿಮಾದಲ್ಲಿ ನಟಿಸಲು ಸಜ್ಜಾಗಿದ್ದಾರೆ. ಸಾಯಿ ಧರಂ ತೇಜ್ ಬೈಕ್ ಅಪಘಾತಕ್ಕೂ ಮುನ್ನ ಸಿನಿಮಾವೊಂದರಲ್ಲಿ ನಟಿಸುತ್ತಿದ್ದರು. ಆದರೆ, ರಿಪಬ್ಲಿಕ್ ಸಿನಿಮಾದ ಪ್ರಚಾರ ಹಾಗೂ ಅಪಘಾತದಿಂದ ಆ ಸಿನಿಮಾ ನಿಂತಿತ್ತು. ಹೀಗಾಗಿ ಕೆಲವು ಚಿತ್ರೀಕರಣಗೊಂಡು ನಿಂತಿದ್ದ ಥ್ರಿಲ್ಲರ್ ಕಥೆಯ ಸಿನಿಮಾ ಮತ್ತೆ ಶೂಟಿಂಗ್ ಆರಂಭ ಆಗಲಿದೆ. ಈ ಸಿನಿಮಾವನ್ನು ಕಾರ್ತಿಕ್ ವರ್ಮ ದಂಡು ಎಂಬುವವರು ನಿರ್ದೇಶನ ಮಾಡಲಿದ್ದಾರೆ.

ಫ್ರೆಬ್ರವರಿಯಲ್ಲಿ ಸಿನಿಮಾ ಶೂಟಿಂಗ್ ಶುರು
ಈ ಸಿನಿಮಾದ ಚಿತ್ರೀಕರಣ ಇದೇ ತಿಂಗಳಿನಿಂದ ಆರಂಭಿಸಬೇಕಿತ್ತು. ಆದರೆ, ಕೊರೊನಾ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವುದರಿಂದ ಮುಂದಿನ ತಿಂಗಳಿಗೆ ಮುಂದೂಡಲಾಗಿದೆ. ಫೆಬ್ರವರಿ ತಿಂಗಳಿನಿಂದ ಸಾಯಿ ಧರಂ ತೇಜ್ ಮತ್ತೆ ಸಿನಿಮಾ ಶೂಟಿಂಗ್ನಲ್ಲಿ ಭಾಗಿಯಾಗಲಿದ್ದಾರೆ. ಸಾಯಿ ಧರಂ ತೇಜ್ಗೆ ಸಂಯುಕ್ತ ಮೆನನ್ ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದು, ಸುಕುಮಾರ್ ಹಾಗೂ ಬಿವಿಎಸ್ಎನ್ ಈ ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದಾರೆ.

ಅಪಘಾತದಿಂದ ಸಿನಿಮಾ ಮುಂದೂಡಿಕೆ
ಸಾಯಿ ಧರಂ ತೇಜ್ ಬೈಕ್ ಅಪಘಾತದಿಂದ ಗಂಭೀರ ಗಾಯಗೊಳ್ಳುವುದಕ್ಕೂ ಮುನ್ನ ಕೆಲ ಸಿನಿಮಾ ನಿರ್ದೇಶಕರಿಂದ ಕಥೆ ಕೇಳಿದ್ದರು. 'ರಿಪಬ್ಲಿಕ್' ಸಿನಿಮಾ ಬಳಿಕ ಆ ಕಥೆಗಳು ಸೆಟ್ಟೇರುವ ಸಾಧ್ಯತೆಯಿತ್ತು. ಅಪಘಾತದಿಂದ ಕೆಲವು ತಿಂಗಳು ವಿಶ್ರಾಂತಿ ಪಡೆಯಲೇ ಬೇಕಿದ್ದರಿಂದ ಆ ಸಿನಿಮಾಗಳನ್ನು ಮುಂದೂಡಲಾಯ್ತು. ಈಗ ಮತ್ತೆ ಎಲ್ಲಾ ಪ್ರಾಜೆಕ್ಟ್ಗಳಿಗೂ ಚಾಲನೆ ಸಿಗಲಿದೆ ಎನ್ನಲಾಗಿದೆ.

ಪವನ್ ಕಲ್ಯಾಣ್ ಪ್ರಚಾರದಿಂದಲೂ ಸಿನಿಮಾ ಗೆದ್ದಿಲ್ಲ
ಬೈಕ್ ಅಪಘಾತದಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಸಾಯಿ ಧರಂ ತೇಜ್ 'ರಿಪಬ್ಲಿಕ್' ಸಿನಿಮಾದ ಪ್ರಚಾರದಲ್ಲಿ ಭಾಗಿಯಾಗಿರಲಿಲ್ಲ. ಈ ವೇಳೆ ಪವನ್ ಕಲ್ಯಾಣ್ ಅಖಾಡಕ್ಕೆ ಇಳಿದಿದ್ದರು. ಆದರೂ 'ರಿಪಬ್ಲಿಕ್' ಸಿನಿಮಾ ಥಿಯೇಟರ್ನಲ್ಲಿ ಹೆಚ್ಚು ಸದ್ದು ಮಾಡಿರಲಿಲ್ಲ. ಬಳಿಕ ಈ ಸಿನಿಮಾವನ್ನು ಓಟಿಟಿಯಲ್ಲಿ ಬಿಡುಗಡೆ ಮಾಡಲಾಗಿತ್ತು. ಈಗ ಬೈಕ್ ಅಪಘಾತದಿಂದ ಸಂಪೂರ್ಣ ಚೇತರಿಸಿಕೊಂಡಿರುವ ಸಾಯಿ ಧರಂ ತೇಜ್ ಮತ್ತೆ ನಟನೆಗೆ ಮರಳು ಸಿದ್ಧತೆಗಳನ್ನು ಮಾಡಿಕೊಂಡಿದ್ದಾರೆ.


Click it and Unblock the Notifications











