'ಕೆಜಿಎಫ್' ಬಳಿಕ ನಟಿಸಿದ 'ಕೋಬ್ರಾ'ದಲ್ಲಿ ನಿರಾಸೆ ಮೂಡಿಸಿದ ಶ್ರೀನಿಧಿ ಶೆಟ್ಟಿ: ಮುಂದೇನು?
'ಕೆಜಿಎಫ್' ಸಿನಿಮಾಗಾಗಿ ಶ್ರೀನಿಧಿ ಶೆಟ್ಟಿ ತನ್ನ ಕರಿಯರ್ ಅನ್ನು ಮೀಸಲಾಗಿಟ್ಟಿದ್ದು ಗೊತ್ತೇ ಇದೆ. 'ಕೆಜಿಎಫ್ 2' ರಿಲೀಸ್ ಬಳಿಕ ಶ್ರೀನಿಧಿ ಶೆಟ್ಟಿ ಮುಂದಿನ ಸಿನಿಮಾ ಏನು? ಅನ್ನೋರಿಗೆ 'ಕೋಬ್ರಾ' ರೆಡಿಯಾಗಿತ್ತು. ಅದರಲ್ಲೂ ತಮಿಳಿನ ಸ್ಟಾರ್ ನಟ ಚಿಯಾನ್ ವಿಕ್ರಮ್ಗೆ ಶ್ರೀನಿಧಿ ಶೆಟ್ಟಿ ನಾಯಕಿಯಾಗಿದ್ದು ಕನ್ನಡಿಗರಲ್ಲಿ ನಿರೀಕ್ಷೆ ಮತ್ತಷ್ಟು ಹೆಚ್ಚಾಗಿತ್ತು.
ಗಣೇಶ್ ಚತುರ್ಥಿಯಂದೇ ಬಹುನಿರೀಕ್ಷೆ ಹುಟ್ಟಿಸಿದ್ದ 'ಕೋಬ್ರಾ' ಸಿನಿಮಾ ರಿಲೀಸ್ ಆಗಿತ್ತು. ಬಿಡುಗಡೆಗೂ ಮುನ್ನವೇ ಹಾಡುಗಳು ಹಾಗೂ ಟ್ರೈಲರ್ಗೆ ಸಿನಿಪ್ರೇಮಿಗಳ ಮನಗೆದ್ದಿತ್ತು. ಆದರೆ, ವಿಕ್ರಮ್ ಗೆಟಪ್ ಹಾಗೂ ರೋಲ್ ಹೆಚ್ಚು ಗಮನ ಸೆಳೆದಿತ್ತೇ ವಿನ: ಸಿನಿಮಾದ ಕಥೆ ಬಗ್ಗೆ ಯಾರೂ ಮಾತಾಡಿರಲಿಲ್ಲ. ಹೀಗಾಗಿ ಸಿನಿಮಾ ಯಶಸ್ಸಿನ ಬಗ್ಗೆ ಟ್ರೇಡ್ ಅನಲಿಸ್ಟ್ಗಳಲ್ಲಿ ಸಿನಿಮಾ ಕಲೆಕ್ಷನ್ ಬಗ್ಗೆ ಡೌಟ್ ಇತ್ತು.
ಇನ್ನೊಂದು ಕಡೆ 'ಕೆಜಿಎಫ್' ಸಿನಿಮಾ ಮೂಲಕ ಸ್ಟಾರ್ ಪಟ್ಟ ಗಿಟ್ಟಿಸಿಕೊಂಡಿದ್ದ ಶ್ರೀನಿಧಿ ಶೆಟ್ಟಿ ಬಗ್ಗೆನೂ ನಿರೀಕ್ಷೆ ದುಪ್ಪಟ್ಟಾಗಿತ್ತು. 'ಕೋಬ್ರಾ' ಹೊಸ ಇಮೇಜ್ ಕೊಡಬಹುದೆಂದು ಊಹಿಸಲಾಗಿತ್ತು. ಆದರೆ, ಶ್ರೀನಿಧಿ ಶೆಟ್ಟಿ ಆ ಊಹೆಯನ್ನು ಹುಸಿಗೊಳಿಸಿದ್ದಾರೆ ಎನ್ನಲಾಗುತ್ತಿದೆ.

'ಕೋಬ್ರಾ'ಗೆ ಮಿಶ್ರ ಪ್ರತಿಕ್ರಿಯೆ
ಚಿಯಾನ್ ವಿಕ್ರಂ ಅಭಿನಯದ 'ಕೋಬ್ರಾ' ಸಿನಿಮಾ ಬಾಕ್ಸಾಫೀಸ್ನಲ್ಲಿ ಸೌಂಡು ಮಾಡೋದರಲ್ಲಿ ಹಿಂದೆ ಬಿದ್ದಿದೆ. ಸದಾ ವಿಭಿನ್ನ ಪಾತ್ರಗಳಲ್ಲಿಯೇ ಕಾಣಿಸಿಕೊಳ್ಳುವ ವಿಕ್ರಂ 'ಕೋಬ್ರಾ'ದಲ್ಲೂ ಹಲವು ಅವತಾರಗಳಲ್ಲಿ ಕಾಣಿಸಿಕೊಂಡಿದ್ದರು. ಆದರೂ, ಪ್ರೇಕ್ಷಕರಿಗೆ ಈ ಸಿನಿಮಾ ಇಷ್ಟ ಆಗಲಿಲ್ಲ. ಫಸ್ಟ್ ಡೇ ಫಸ್ಟ್ ಶೋನಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಹಾಗೇ ವಿಮರ್ಶಕ ಹಾಗೂ ಪ್ರೇಕ್ಷರಿಂದರಿಂದಲೂ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಈ ಪಾತ್ರಕ್ಕಾಗಿ ವಿಕ್ರಂ ಹಾಕಿದ ಎಫರ್ಟ್ ಬಗ್ಗೆ ಮೆಚ್ಚುಗೆ ವ್ಯಕ್ತವಾಗುತ್ತಿದ್ದರೂ, ಸರಿಯಾದ ಸ್ಕ್ರಿಪ್ಟ್ ಅನ್ನು ಆಯ್ಕೆ ಮಾಡಿಕೊಳ್ಳುವಂತೆ ಸಲಹೆ ಕೂಡ ನೀಡುತ್ತಿದ್ದಾರೆ. ಇದರಲ್ಲಿ ಶ್ರೀನಿಧಿ ಶೆಟ್ಟಿ ಕಳೆದೇ ಹೋಗಿದ್ದಾರೆ.

ಸೋತಿದ್ದೆಲ್ಲಿ ಶ್ರೀನಿಧಿ ಶೆಟ್ಟಿ?
'ಕೋಬ್ರಾ' ಸಿನಿಮಾಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದ್ದರೂ, ವಿಕ್ರಂ ಬಗ್ಗೆ ಮೆಚ್ಚುಗೆ ಮಾತುಗಳು ಕೇಳಿ ಬರುತ್ತಿವೆ. ವಿಕ್ರಂ ಪಾತ್ರದ ಮುಂದೆ ನಾಯಕಿ ಕಳೆದೇ ಹೋಗಿದ್ದಾರೆ ಅನ್ನೋ ಅಭಿಪ್ರಾಯ ವ್ಯಕ್ತವಾಗುತ್ತಿದೆ. ಈ ಸಿನಿಮಾದಲ್ಲಿ ಮಿರ್ನಾಲಿನಿ ರವಿ ಹಾಗೂ ಮಿಯಾ ಜಾರ್ಜ್ ಅನ್ನೋ ಇನ್ನೂ ಇಬ್ಬರು ನಟಿಯರಿದ್ದರೂ ಶ್ರೀನಿಧಿ ಶೆಟ್ಟಿಯನ್ನೇ ನಾಯಕಿ ಎಂದು ಚಿತ್ರತಂಡ ಘೋಷಿಸಿತ್ತು. ಆದರೆ, ಇಲ್ಲಿ ಶ್ರೀನಿಧಿ ಶೆಟ್ಟಿ ಜನರ ಮನ ಗೆಲ್ಲುವಲ್ಲಿ ಸೋತಿದ್ದಾರೆ ಎನ್ನಲಾಗಿದೆ. ತೆರೆಮೇಲೆ ಹೆಚ್ಚು ಸಮಯ ಕಾಣಿಸಿಕೊಳ್ಳುವುದಿಲ್ಲ. ಪಾತ್ರ ಕೂಡ ಅಷ್ಟಕ್ಕಷ್ಟೇ ಇದೆ ಅನ್ನೋ ಮಾತು ಕೇಳಿ ಬರುತ್ತಿದೆ.

ಯೋಚಿಸಿ ಸಿನಿಮಾ ಆಯ್ಕೆ ಮಾಡಿಕೊಳ್ಳಬೇಕು
'ಕೋಬ್ರಾ' ಸಿನಿಮಾ ನೋಡಿದ ಬಳಿಕ ಸಿನಿಪ್ರಿಯರ ಶ್ರೀನಿಧಿ ಶೆಟ್ಟಿ ಇನ್ಮುಂದೆ ಯೋಚಿಸಿ ಸಿನಿಮಾಗಳನ್ನು ಆಯ್ಕೆ ಮಾಡಿಕೊಳ್ಳಬೇಕು ಅಂತಿದ್ದಾರೆ. ಹೀಗೆ ಮುಂದುವರೆದರೆ 'ಕೆಜಿಎಫ್'ನಲ್ಲಿ ಸಂಪಾಧಿಸಿದ ಹೆಸರು ಕೆಲವೇ ಸಿನಿಮಾಗಳಲ್ಲಿ ಹೊರಟು ಹೋಗುತ್ತೆ ಎಂದು ಸೋಶಿಯಲ್ ಮೀಡಿಯಾದಲ್ಲಿ ಕಮೆಂಟ್ ಮಾಡುತ್ತಿದ್ದಾರೆ. 'ಕೆಜಿಎಫ್ ಚಾಪ್ಟರ್ 1'ನಲ್ಲೂ ಶ್ರೀನಿಧಿ ಶೆಟ್ಟಿ ಲುಕ್ ಬಗ್ಗೆ ಕಮೆಂಟ್ ಮಾಡಿದ್ದರು. ಆದರೆ, ಚಾಪ್ಟರ್ 2ನಲ್ಲಿ ಶ್ರೀನಿಧಿ ಶೆಟ್ಟಿ ಪ್ರೇಕ್ಷಕರ ಮನಗೆಲ್ಲುವಲ್ಲಿ ಯಶಸ್ವಿಯಾದರು.

ತೆಲುಗು ಸಿನಿಮಾಗಳಿಗೆ ಗ್ರೀನ್ ಸಿಗ್ನಲ್
'ಕೆಜಿಎಫ್' ಸಿನಿಮಾ ಬಳಿಕ ಶ್ರೀನಿಧಿ ಶೆಟ್ಟಿ ಯಾವುದೇ ಸಿನಿಮಾವನ್ನು ಅನೌನ್ಸ್ ಮಾಡಿಲ್ಲ. ಆದರೆ, ಕೆಲವು ತೆಲುಗು ಪ್ರಾಜೆಕ್ಟ್ಗಳನ್ನು ಒಪ್ಪಿಕೊಂಡಿದ್ದಾರೆ ಅನ್ನೋ ಮಾತು ಕೇಳಿಬರುತ್ತಿದೆ. ಈಗಾಗ್ಲೇ ತೆಲುಗು ಸಿನಿಮಾಗಳಿಗೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ ಎನ್ನಲಾಗಿದೆ. ಆದರೆ, ಶ್ರೀನಿಧಿ ಶೆಟ್ಟಿ ಇನ್ನೂ ಮುಂದಿನ ಸಿನಿಮಾಗಳ ಬಗ್ಗೆ ಅಧಿಕೃತ ಹೇಳಿಕೆಗಳನ್ನು ನೀಡಿಲ್ಲ. ಹೀಗಾಗಿ ಸಿನಿಮಾ ಬಗ್ಗೆ ಸಹಜವಾಗಿಯೇ ಕುತೂಹಲ ಮೂಡಿಸಿದೆ.


Click it and Unblock the Notifications











