ಸಂಧ್ಯಾ ಥಿಯೇಟರ್ ಕಾಲ್ತುಳಿತ ಪ್ರಕರಣ: 'ಪುಷ್ಪ 2' ನಟ ಅಲ್ಲು ಅರ್ಜುನ್ಗೆ ರೆಗ್ಯೂಲರ್ ಜಾಮೀನು
'ಪುಷ್ಪ 2' ಸಿನಿಮಾದ ಪ್ರೀಮಿಯರ್ ವೇಳೆ ತೆಲಂಗಾಣದ ಸಂಧ್ಯಾ ಚಿತ್ರಮಂದಿರದಲ್ಲಿ ಕಾಲ್ತುಳಿತಕ್ಕೆ ಮಹಿಳೆಯೊಬ್ಬರು ಸಾವನ್ನಪ್ಪಿದ್ದರು. ಆ ಮಹಿಳೆಯ ಮಗನ ಸ್ಥಿತಿ ಗಂಭೀರವಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದರ ವಿರುದ್ಧ ಪ್ರಕರಣ ದಾಖಲಿತ್ತು. ಅಲ್ಲು ಅರ್ಜುನ್ ಹಾಗೂ ಸಂಧ್ಯಾ ಚಿತ್ರಮಂದಿರದ ಮ್ಯಾನೇಜ್ಮೆಂಟ್ ಅನ್ನು ಸೇರಿಸಿ ದೂರನ್ನು ದಾಖಲಿಸಲಾಗಿತ್ತು. ಆ ಪ್ರಕರಣದಲ್ಲಿಂದ ಅಲ್ಲು ಅರ್ಜುನ್ಗೆ ರಿಲೀಫ್ ಸಿಕ್ಕಿದೆ.
ಸಂಧ್ಯಾ ಥಿಯೇಟರ್ ಕಾಲ್ತುಳಿತ ಪ್ರಕರಣದಲ್ಲಿ ಸಂಕಷ್ಟಕ್ಕೆ ಸಿಲುಕಿದ್ದ ಅಲ್ಲು ಅರ್ಜುನ್ಗೆ ನಾಂಪಲ್ಲಿ ನ್ಯಾಯಾಲಯದಿಂದ ರಿಲೀಫ್ ಸಿಕ್ಕಿದೆ. ಕಳೆದ ಕೆಲವು ದಿನಗಳಿಂದ ತೆಲಂಗಾಣ ಸಿ ಎಂ ಈ ಪ್ರಕರಣದ ವಿಚಾರವಾಗಿ ಅಲ್ಲು ಅರ್ಜುನ್ ವಿರುದ್ಧ ತಿರುಗಿಬಿದ್ದಿದ್ದರು. ಹೀಗಾಗಿ 'ಪುಷ್ಪ' ನಟನನ್ನು ಬಂಧಿಸಲಾಗಿತ್ತು. ಬಳಿಕ ಮಧ್ಯಂತರ ಜಾಮೀನಿನ ಮೇಲೆ ಹೊರ ಬಂದಿದ್ದರು. ಇಂದು (ಜನವರಿ 3) ಅಲ್ಲು ಅರ್ಜುನ್ಗೆ ರೆಗ್ಯೂಲರ್ ಜಾಮೀನು ನೀಡುವ ಬಗ್ಗೆ ತೀರ್ಪು ಇತ್ತು. ಅದೀಗ ಹೊರ ಬಂದಿದೆ.

ತೆಲಂಗಾಣದ ನಾಂಪಲ್ಲಿ ಕೋರ್ಟ್ ಹೀರೋ ಅಲ್ಲು ಅರ್ಜುನ್ಗೆ 50 ಸಾವಿರ ರೂಪಾಯಿಯ ಇಬ್ಬರು ಶ್ಯೂರಿಟಿ ನೀಡಬೇಕು. ಅಲ್ಲದೆ ಈ ತನಿಖೆಗೆ ಸಹಕರಿಸುವಂತೆ ಕೋರ್ಟ್ ಹೇಳಿ ರೆಗ್ಯೂಲರ್ ಜಾಮೀನನ್ನು ನೀಡಿದೆ. ಹೀಗಾಗಿ ಸಂಕಷ್ಟಕ್ಕೆ ಸಿಕ್ಕಿಕೊಂಡಿದ್ದ ಅಲ್ಲು ಅರ್ಜುನ್ಗೆ ರೆಗ್ಯೂಲರ್ ಜಾಮೀನು ಸಿಕ್ಕಿದ್ದು, ರಿಲೀಫ್ ಸಿಕ್ಕಂತೆ ಆಗಿದೆ.
ಡಿಸೆಂಬರ್ 4, 2024ರಂದು 'ಪುಷ್ಪ 2' ಪೇಯ್ಡ್ ಪ್ರೀಮಿಯರ್ ವೇಳೆ ಪ್ರೇಕ್ಷಕರು ಸಂಧ್ಯಾ ಚಿತ್ರಮಂದಿರಕ್ಕೆ ನುಗ್ಗಿದ್ದರು. ಈ ವೇಳೆ ಕಾಲ್ತುಳಿತದಲ್ಲಿ ಮಹಿಳೆ ಸಾವನ್ನಪ್ಪಿದ್ದು, ಪುತ್ರ ಸ್ಥಿತಿ ಗಂಭೀರವಾಗಿತ್ತು. ಈ ಘಟನೆ ನಡೆಯುವ ವೇಳೆ ಅಲ್ಲು ಅರ್ಜುನ್ ಅದೇ ಚಿತ್ರಮಂದಿರದಲ್ಲಿ ಸಿನಿಮಾ ನೋಡುವುದಕ್ಕೆ ಬಂದಿದ್ದರು. ಹೀಗಾಗಿ ಅಲ್ಲು ಅರ್ಜುನ್ ವಿರುದ್ಧ ಚಿಕ್ಕಡಪಲ್ಲಿ ಪೊಲೀಸರು ದೂರನ್ನು ದಾಖಲಿಸಿ, ನ್ಯಾಯಾಲಯಕ್ಕೆ ಒಪ್ಪಿಸಿದ್ದರು. ಕೋರ್ಟ್ ಅಲ್ಲು ಅರ್ಜುನ್ಗೆ 14 ದಿನ ನ್ಯಾಯಾಂಗ ಬಂಧನ ವಿಧಿಸಿತ್ತು.
ಈ ಆದೇಶ ಹೊರ ಬೀಳುತ್ತಿದ್ದಂತೆ ಅಲ್ಲು ಅರ್ಜುನ್ ಪರ ವಕೀಲರು ಹೈಕೋರ್ಟ್ಗೆ ಅರ್ಜಿಯನ್ನು ಸಲ್ಲಿಸಿದ್ದರು. ಅಲ್ಲು ಅರ್ಜುನ್ ಅರೆಸ್ಟ್ ಆಗಿದ್ದ ದಿನವೇ ತೆಲಂಗಾಣ ಹೈಕೋರ್ಟ್ ನಾಲ್ಕು ವಾರಗಳ ಮಧ್ಯಂತರ ಜಾಮೀನು ನೀಡಿ ಆದೇಶ ಹೊರಡಿಸಿತ್ತು. ಹಾಗೇ ಕೆಳ ನ್ಯಾಯಾಲಯದಲ್ಲಿ ರೆಗ್ಯೂಲರ್ ಜಾಮೀನಿಗೆ ಅರ್ಜಿ ಸಲ್ಲಿಸುವಂತೆ ಸೂಚಿಸಿತ್ತು. ಕಳೆದ ಈ ಸಂಬಂಧ ಅಲ್ಲು ಅರ್ಜುನ್ ಪರ ವಕೀಲರು ರೆಗ್ಯೂಲರ್ ಜಾಮೀನಿಗೆ ಅರ್ಜಿ ಸಲ್ಲಿಸಿದ್ದರು.

ಕೆಳ ನ್ಯಾಯಾಲಯದಲ್ಲಿ ಅಲ್ಲು ಅರ್ಜುನ್ಗೆ ರೆಗ್ಯೂಲರ್ ಜಾಮೀನು ನೀಡುವ ಬಗ್ಗೆ ವಾದ ವಿವಾದಗಳು ನಡೆದೆ ತೀರ್ಪನ್ನು ಇಂದು (ಜನವರಿ 3) ಕಾಯ್ದಿರಿಸಲಾಗಿತ್ತು. ಅದಂತೆ ರೆಗ್ಯೂಲರ್ ಜಾಮೀನನ್ನು ನೀಡಿ ಆದೇಶ ಹೊರಡಿಸಲಾಗಿದೆ. ಅಲ್ಲು ಅರ್ಜುನ್ ಜಾಮೀನು ವಿಚಾರವಾಗಿ ಸಲ್ಲಿಸಿದ ಅಫಿಡವಿಟ್ನಲ್ಲಿ ಪೊಲೀಸರು ವಿರೋಧ ವ್ಯಕ್ತಪಡಿಸಿಲ್ಲ ಎಂದು ವರದಿಯಾಗಿದೆ. ಕೇವಲ ತನಿಖೆಗೆ ಸಹಕರಿಸಲು ನಿರ್ದೇಶನ ನೀಡುವಂತೆ ನಾಂಪಲ್ಲಿ ಕೋರ್ಟ್ಗೆ ಮನವಿ ಮಾಡಿಕೊಂಡಿದ್ದರು ಎನ್ನಲಾಗಿದೆ.
ಅಲ್ಲು ಅರ್ಜುನ್ ಪ್ರಕರಣವನ್ನು ತೆಲಂಗಾಣ ಸರ್ಕಾರ ಗಂಭೀರವಾಗಿ ಪರಿಗಣಿಸಿತ್ತು. ಸಿ ಎಂ ರೇವಂತ್ ರೆಡ್ಡಿ 'ಪುಷ್ಪ 2' ನಟನ ವಿರುದ್ಧ ಸಿಡಿದೆದ್ದಿದ್ದರು. ಸಂಧ್ಯಾ ಚಿತ್ರಮಂದಿರದ ಕಾಲ್ತುಳಿತದ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದರು. ಅಲ್ಲು ಅರ್ಜುನ್ ಬಂಧನದ ಬಳಿಕ ತೆಲುಗು ಚಿತ್ರರಂಗದ ನಡೆಯನ್ನು ಟೀಕಿಸಿದ್ದರು. ಬಳಿಕ ಅಲ್ಲು ಅರ್ಜುನ್ ಮತ್ತೆ ಪತ್ರಿಕಾಗೋಷ್ಠಿ ನಡೆಸಿ ಅಂದಿನ ಘಟನೆಯನ್ನು ವಿವರಿಸುವ ಪ್ರಯತ್ನ ಮಾಡಿದ್ದರು. ಈಗ ಕೊನೆಗೂ ಅಲ್ಲು ಅರ್ಜುನ್ಗೆ ರೆಗ್ಯೂಲ್ ಜಾಮೀನು ಮಂಜೂರಾಗಿದೆ.


Click it and Unblock the Notifications











