Allu Arjun: ಟ್ವಿಟರ್ನಲ್ಲಿ ತನ್ನ ಸಿನಿಮಾದ ನಾಯಕಿಯನ್ನೇ ಬ್ಲಾಕ್ ಮಾಡಿದ ನಟ: ಯಾರೀ ಭಾನು ಶ್ರೀ
ಒಂದು ಕಾಲದಲ್ಲಿ ಈ ನಟಿ ತೆಲುಗು ಮಂದಿಯ ಫೇವರಿಟ್ ಹೀರೊಯಿನ್. ಆಕೆ ಹೆಸರು ಭಾನು ಶ್ರೀ ಮೆಹ್ರಾ. ಈ ಹೆಸರು ಹೇಳಿದರೆ, ಬಹುಶ: ಯಾರಿಗೂ ನೆನಪಾಗಲಿಕ್ಕಿಲ್ಲ. ತೆಲುಗು ಸಿನಿಮಾ ಪ್ರಿಯರಿಗೆ ಈ ನಟಿ ಮುಖ ಪರಿಚಯವೇ ವಿನ: ಹೆಸರಿನಿಂದ ಅಲ್ಲ.
ಇದೇ ಭಾನು ಶ್ರೀ ಮೆಹ್ರಾ ತೆಲುಗಿನ ಐಕಾನ್ ಸ್ಟಾರ್ ಅಲ್ಲು ಅರ್ಜುನ್ಗೆ ನಾಯಕಿಯಾಗಿ ನಟಿಸಿದ್ದರು. 2010ರಲ್ಲಿ ತೆರೆಕಂಡ 'ವರುಡು' ಸಿನಿಮಾಗೆ ಇವರೇ ನಾಯಕಿ. ಆದರೆ, ಈ ಸಿನಿಮಾ ಬಾಕ್ಸಾಫೀಸ್ನಲ್ಲಿ ಗೆಲ್ಲಲಿಲ್ಲ. ಹೀಗಾಗಿ ಭಾನು ಶ್ರೀ ಮೆಹ್ರಾ ಮತ್ತೊಂದು ತೆಲುಗು ಸಿನಿಮಾದಲ್ಲಿ ನಟಿಸುವುದಕ್ಕೆ ಎರಡು ವರ್ಷ ಕಾಯಬೇಕಾಗಿ ಬಂತು.

ಆ ಬಳಿಕ ಕೆಲವು ಚಿಕ್ಕ ಪುಟ್ಟ ಪಾತ್ರಗಳಲ್ಲಿ ನಟಿಸಿದ ಭಾನು ಶ್ರೀ ಮೆಹ್ರಾ 2020ರಲ್ಲಿ ತೆರೆಕಂಡಿದ್ದ ಎರಡು ತೆಲುಗು ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದರು. ಆ ಬಳಿಕ ನಟಿ ಬಗ್ಗೆ ಮತ್ತೆ ಸುದ್ದಿ ಇರಲಿಲ್ಲ. ಈಗ ದಿಢೀರನೇ ಮತ್ತೆ ಸದ್ದು ಮಾಡುತ್ತಿರುವುದಕ್ಕೆ ಕಾರಣ ಅಲ್ಲು ಅರ್ಜುನ್.
ಭಾನು ಶ್ರೀ ಮೆಹ್ರಾ ಬ್ಲಾಕ್ ಮಾಡಿದ ಅಲ್ಲು
ಭಾನು ಶ್ರೀ ಮೆಹ್ರಾ ಇದ್ದಕ್ಕಿದ್ದ ಹಾಗೇ ಟ್ವಿಟರ್ನಲ್ಲಿ ಹಲ್ಚಲ್ ಎಬ್ಬಿಸಿದ್ದರು. 'ಪುಷ್ಪ' ಖ್ಯಾತಿಯ ನಟ ಅಲ್ಲು ಅರ್ಜುನ್ ತನ್ನನ್ನು ಅವರ ಟ್ವಿಟರ್ ಖಾತೆಯಿಂದ ಬ್ಲಾಕ್ ಮಾಡಿದ್ದಾರೆಂದು ಟ್ವೀಟ್ ಮಾಡಿದ್ದರು. ಅಲ್ಲು ಅರ್ಜುನ್ 'ವರುಡು' ಸಿನಿಮಾದಲ್ಲಿ ನಟಿಸಿದ್ದರೂ, ನನಗೆ ಕೆಲಸವಿಲ್ಲ. ಕಷ್ಟದಲ್ಲೂ ಖುಷಿಯನ್ನು ಕಂಡುಕೊಳ್ಳಲು ಯತ್ನಿಸಿದ್ದೇನೆ ಎಂದು ಯೂಟ್ಯೂಬ್ ಚಾನೆಲ್ಗೆ ಚಂದಾದಾರರಾಗಲು ಮನವಿ ಮಾಡಿಕೊಂಡಿದ್ದರು. ಈ ನಟಿ ಮಾಡಿದ ಟ್ವೀಟ್ ಹೀಗಿದೆ.
"ನಿಮಗೆ ಯಾವತ್ತಾದರೂ ನೀವು ಹಳಿಯಲ್ಲಿ ಸಿಕ್ಕಿಕೊಂಡಿದ್ದೀರಿ ಎಂದು ಭಾಸವಾಗಿದೆಯೇ. ನಾನು ವರುಡು ಸಿನಿಮಾದಲ್ಲಿ ಅಲ್ಲು ಅರ್ಜುನ್ ಅವರೊಂದಿಗೆ ಕೆಲಸ ಮಾಡಿದ್ದರೂ, ನನಗೆ ಕೆಲಸ ಸಿಗುತ್ತಿಲ್ಲ ಎಂದು ನೆನಪು ಮಾಡಿಕೊಂಡಿದ್ದೇನೆ. ಆದರೆ, ನನ್ನ ಕಷ್ಟಗಳಿಂದಲೇ ಖುಷಿಯನ್ನು ಕಂಡುಕೊಳ್ಳಲು ಕಲಿತಿದ್ದೇನೆ. ಅದರಲ್ಲೂ ಅಲ್ಲು ಅರ್ಜುನ್ ಟ್ವಿಟರ್ನಲ್ಲಿ ನನ್ನನ್ನು ಬ್ಲಾಕ್ ಮಾಡಿದ್ದ ಮೇಲೆ ಕಲಿತುಕೊಂಡಿದ್ದೇನೆ." ಎಂದು ಟ್ವೀಟ್ ಮಾಡಿದ್ದರು.

ಅಸಲಿ ಮ್ಯಾಟರ್ ಏನು? ಬ್ಲಾಕ್ ಮಾಡಿದ್ದೇಕೆ?
ಭಾನು ಶ್ರೀ ಮೆಹ್ರಾಗೆ ಸಿನಿಮಾಗಳಲ್ಲಿ ಅವಕಾಶಗಳು ಕಡಿಮೆಯಾಗುತ್ತಿವೆ. ಸದ್ಯ ಈ ನಟಿಯ ಕೈಯಲ್ಲಿ ದೊಡ್ಡ ಸಿನಿಮಾಗಳಿಲ್ಲ. ಹೀಗಾಗಿ ಯೂಟ್ಯೂಬ್ ಚಾನೆಲ್ ಅನ್ನು ಆರಂಭಿಸಿದ್ದರು. ಪ್ರತಿಬಾರಿ ವಿಡಿಯೋ ಮಾಡಿದಾಗಲೂ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದರು. ಆಗ ಅಲ್ಲು ಅರ್ಜುನ್ಗೂ ಟ್ಯಾಗ್ ಮಾಡುತ್ತಿದ್ದರು ಎನ್ನಲಾಗಿದೆ. ಹೀಗಾಗಿಯೇ ಬ್ಲಾಕ್ ಮಾಡಿರಬಹುದು ಎಂಬುದು ಅಭಿಮಾನಿಗಳ ವಾದ.
ಭಾನು ಶ್ರೀ ಮೆಹ್ರಾ ಟ್ವೀಟ್ ವೈರಲ್ ಆಗುತ್ತಿದ್ದಂತೆ ಅಭಿಮಾನಿಗಳು ನಟಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ನಟಿಯದ್ದೇ ತಪ್ಪು ಎಂದು ನೇರವಾಗಿ ಟೀಕೆ ಮಾಡುತ್ತಿದ್ದಾರೆ. ಆದರೆ, ಭಾನು ಶ್ರೀ ಮೆಹ್ರಾ ಇದಕ್ಕೆಲ್ಲ ಅಂಜದೆ, ತಿರುಗಿ ಉತ್ತರಕೊಟ್ಟಿದ್ದಾರೆ.
ಟ್ವಿಟರ್ ವೈರಲ್ ಅನ್ಬ್ಲಾಕ್ ಮಾಡಿದ ಅಲ್ಲು ಅರ್ಜುನ್
ಟಾಲಿವುಡ್ನ ಐಕಾನ್ ಸ್ಟಾರ್ ಅಲ್ಲು ಅರ್ಜುನ್ ಸುಮಾರು ಎರಡು ಗಂಟೆಗಳ ಕಾಲ ಟ್ವಿಟರ್ನಲ್ಲಿ ಭಾನು ಶ್ರೀ ಮೆಹ್ರಾರನ್ನು ಬ್ಲಾಕ್ ಮಾಡಿದ್ದರು. ಆ ಬಳಿಕ ಮತ್ತೆ ಇದೇ ನಟಿ ಅನ್ಬ್ಲಾಕ್ ಮಾಡಿದ್ದಾರೆಂದು ಟ್ವೀಟ್ ಮಾಡಿದ್ದಾರೆ. " ಸಿಹಿ ಸುದ್ದಿ, ಅಲ್ಲು ಅರ್ಜುನ್ ನನ್ನನ್ನು ಅನ್ಬ್ಲಾಕ್ ಮಾಡಿದ್ದಾರೆ. ನನ್ನ ವೃತ್ತಿ ಜೀವನದಲ್ಲಿ ಹಿನ್ನೆಡೆಯಾಗಿದ್ದಕ್ಕೆ ನಾನು ಎಂದಿಗೂ ಅವರನ್ನು ದೂಷಿಸಿಲ್ಲ. ನನ್ನ ಕಷ್ಟಗಳಲ್ಲೇ ಖುಷಿಯನ್ನು ಕಂಡುಕೊಳ್ಳುತ್ತಿದ್ದೇನೆ. ನನ್ನನ್ನು ಬೆಂಬಲಿಸಿದ್ದಕ್ಕಾಗಿ ಧ್ಯನವಾದಗಳು" ಎಂದು ಟ್ವೀಟ್ ಮಾಡಿದ್ದಾರೆ.
ಭಾನು ಶ್ರೀ ಮೆಹ್ರಾ 'ವರುಡು' ಬಳಿಕ ತಮಿಳಿನಲ್ಲಿ 'ಉದಯನ್' ಸಿನಿಮಾದಲ್ಲಿ ನಟಿಸಿದ್ದರು. ನಂತರ ತೆಲುಗಿನಲ್ಲೇ 'ಡಿಂಗ್ ಡಾಂಗ್ ಬೆಲ್','ಅಲಾ ಎಲಾ' ರಾಮ್ ಚರಣ್ ಸಿನಿಮಾ 'ಗೋವಿಂದುಡು ಅಂದರಿವಾಡೆಲೆ', 'ರನ್' ಮತ್ತು 'ಮಿಸ್ ಇಂಡಿಯಾ'ದಲ್ಲಿ ಕೀರ್ತಿ ಸುರೇಶ್ ಜೊತೆ ಚಿಕ್ಕ ಪಾತ್ರದಲ್ಲಿ ನಟಿಸಿದ್ದಾರೆ. ವಿಶೇಷ ಅಂದ್ರೆ, ಕನ್ನಡದಲ್ಲೂ ಕೋಮಲ್ ಕುಮಾರ್ ಜೊತೆ 'ಡೀಲ್ ರಾಜ' ಸಿನಿಮಾದಲ್ಲಿ ನಟಿಸಿದ್ದರು.


Click it and Unblock the Notifications











