ಕೀರ್ತಿ ಸುರೇಶ್ ಮೊಟ್ಟೆ ದೃಶ್ಯದ ವಿರುದ್ಧ ರೊಚ್ಚಿಗೆದ್ದ ಅಂಗನವಾಡಿ ಕಾರ್ಯಕರ್ತೆಯರು: 'ದಸರಾ' ದೃಶ್ಯದಲ್ಲಿ ಅಂತಹದ್ದೇನಿದೆ?
ನ್ಯಾಚುರಲ್ ಸ್ಟಾರ್ ನಾನಿ ಮೋಸ್ಟ್ ಎಕ್ಸ್ಪೆಕ್ಟೆಡ್ ಸಿನಿಮಾ 'ದಸರಾ' ರಿಲೀಸ್ ಆಗಿದೆ. ನಾನಿ ಜೊತೆ 'ಮಹಾನಟಿ'ಯ ಸುಂದರಿ ಕೀರ್ತಿ ಸುರೇಶ್ ನಾಯಕಿಯಾಗಿ ನಟಿಸಿದ್ದಾರೆ. ಶ್ರೀಕಾಂತ್ ಒಡೆಲಾ ನಿರ್ದೇಶನದ ಈ ಪ್ಯಾನ್ ಇಂಡಿಯಾ ಸಿನಿಮಾ ಈಗಾಗಲೇ ರಿಲೀಸ್ ಆಗಿ ಬಾಕ್ಸಾಫೀಸ್ನಲ್ಲಿ ಸದ್ದು ಮಾಡುತ್ತಿದೆ.
'ದಸರಾ' ಮಾರ್ಚ್ 30 ರಂದು ಬಹು ಭಾಷೆಗಳಲ್ಲಿ ರಿಲೀಸ್ ಆಗಿದೆ. ಫಸ್ಟ್ ಡೇ ಫಸ್ಟ್ ಶೋನಲ್ಲೇ ಪ್ರೇಕ್ಷಕರು ಸಿನಿಮಾಗೆ ಜೈ ಎಂದಿದ್ದಾರೆ. ಬಾಕ್ಸಾಫೀಸ್ನಲ್ಲೂ ಈ ಸಿನಿಮಾ ಬೇಜಾನ್ ಸದ್ದು ಮಾಡುತ್ತಿದೆ. ಮೆಗಾಸ್ಟಾರ್ ಚಿರಂಜೀವಿ ನಟಿಸಿದ 'ವಾಲ್ತೇರು ವೀರಯ್ಯ' ಹಾಗೂ ಬಾಲಕೃಷ್ಣ ಅಭಿನಯದ 'ವೀರಸಿಂಹ ರೆಡ್ಡಿ' ಸಿನಿಮಾಗಳ ಫಸ್ಟ್ ಡೇ ಕಲೆಕ್ಷನ್ ಅನ್ನು ಬೀಟ್ ಮಾಡಿದೆ. ಟ್ರೇಡ್ ಎಕ್ಸ್ಪರ್ಟ್ಗಳ ಪ್ರಕಾರ, ಈ ಸಿನಿಮಾ ನಾನಿ ವೃತ್ತಿಜೀವನದ ಅತೀ ಹೆಚ್ಚು ಗಳಿಸಿದ ಸಿನಿಮಾ ಆಗಬಹುದು ಎಂದು ಅಂದಾಜಿಸಲಾಗಿದೆ.
ಒಂದ್ಕಡೆ ಸಿನಿಮಾ ಬಾಕ್ಸಾಫೀಸ್ನಲ್ಲಿ ಸೌಂಡ್ ಮಾಡುತ್ತಿದ್ದರೆ, ಅದೇ ಇನ್ನೊಂದು ಕಡೆ ವಿವಾದಕ್ಕೆ ಸಿಲುಕಿದೆ. ಅಂಗನವಾಡಿ ಕಾರ್ಯಕರ್ತೆಯರ ಆಕ್ರೋಶಕ್ಕೆ ಕಾರಣವಾಗಿದೆ. ಅಷ್ಟಕ್ಕೂ ಏನಿದು ವಿವಾದ ಅಂತ ತಿಳಿಯಲು ಮುಂದೆ ಓದಿ.

ಅಂಗನವಾಡಿ ಕಾರ್ಯಕರ್ತೆಯರ ಆಕ್ರೋಶ
'ದಸರಾ' ಬಿಡುಗಡೆಯಾದ ಮೂರೇ ದಿನಕ್ಕೆ ವಿವಾದಕ್ಕೆ ಸಿಲುಕಿದೆ. ಈ ಸಿನಿಮಾದಲ್ಲಿ ತಮ್ಮನ್ನು ಅವಮಾನಿಸಲಾಗಿದೆ ಎಂದು ಅಂಗನವಾಡಿ ಕಾರ್ಯಕರ್ತೆಯರು ಆಕ್ರೋಶ ಹೊರಹಾಕುತ್ತಿದ್ದಾರೆ. ಈ ಕೂಡಲೇ ಆ ದೃಶ್ಯಗಳನ್ನು ತೆಗೆದು ಹಾಕಬೇಕು. ಜೊತೆಗೆ 'ದಸರಾ' ಚಿತ್ರತಂಡ ತಮ್ಮಲ್ಲಿ ಕ್ಷಮೆ ಕೇಳಬೇಕು ಎಂದು ಅಂಗನವಾಡಿ ಕಾರ್ಯಕರ್ತೆಯರು ಪಟ್ಟು ಹಿಡಿದು ಕೂತಿದ್ದಾರೆ. ಈ ಸಿನಿಮಾದಲ್ಲಿ ಇರುವ ಅಂತಹ ದೃಶ್ಯಗಳೇನು?
ಕೀರ್ತಿ ಸುರೇಶ್ ಈ ಸಿನಿಮಾದಲ್ಲಿ ವೆನ್ನೆಲ ಅನ್ನೋ ಪಾತ್ರದಲ್ಲಿ ನಟಿಸಿದ್ದಾರೆ. ಅಂಗನವಾಡಿ ಕಾರ್ಯಕರ್ತೆಯಾಗಿ ಕೀರ್ತಿ ನಟಿಸಿದ್ದಾರೆ. ಒಂದು ದೃಶ್ಯದಲ್ಲಿ ಮಕ್ಕಳಿಗೆ ಕೊಡಬೇಕಾದ ಕೋಳಿ ಮೊಟ್ಟೆಗಳನ್ನು ವೆನ್ನೆಲಾ ಕದ್ದು ಮಾರುತ್ತಾಳೆ. ಇನ್ನೊಂದು ದೃಶ್ಯದಲ್ಲಿ ಅಂಗನವಾಡಿಗೆ ಅಂತ ತಂದ ಮೊಟ್ಟೆಗಳನ್ನು ತನ್ನ ಕುಟುಂಬಕ್ಕೆ ನೀಡುತ್ತಾಳೆ. ಈ ದೃಶ್ಯಗಳ ವಿರುದ್ಧವೇ ಅಂಗನವಾಡಿ ಕಾರ್ಯಕರ್ತೆಯರು ಆಕ್ರೋಶ ಹೊರಹಾಕಿದ್ದಾರೆ. ಕೆಲವೆಡೆ ಥಿಯೇಟರ್ಗಳ ಮುಂದೆ ಧರಣಿಯನ್ನೂ ನಡೆಸಲಾಗಿದೆ.
ಸಿನಿಮಾದ ಮೇಲೆ ಹೆಚ್ಚಿದ ನಿರೀಕ್ಷೆ
'ದಸರಾ' ಒಂದ್ಕಡೆ ವಿವಾದದಲ್ಲಿ ಸಿಕ್ಕಿಕೊಂಡಿದೆ. ಅಂಗನವಾಡಿ ಕಾರ್ಯಕರ್ತೆಯರು ಚಿತ್ರತಂಡ ದೃಶ್ಯವನ್ನು ತೆಗೆದು ಹಾಕದಿದ್ದಲ್ಲಿ ಪ್ರತಿಭಟನೆ ಮಾಡುವುದಾಗಿ ಎಚ್ಚರಿಕೆ ನೀಡಿದ್ದಾರೆ. ಈ ಮಧ್ಯೆ ಸಿನಿಮಾ ಮೇಲೆ ನಿರೀಕ್ಷೆ ಹೆಚ್ಚಾಗಿದೆ. ಬಾಕ್ಸಾಫೀಸ್ನಲ್ಲಿ ಹೊಸ ದಾಖಲೆ ಬರೆಯುತ್ತಾ? ಅಂತ ಎದುರು ನೋಡುತ್ತಿದ್ದಾರೆ.
'ದಸರಾ' ಸಿನಿಮಾ ಬಿಡುಗಡೆಗೂ ಮುನ್ನವೇ ಭಾರೀ ನಿರೀಕ್ಷೆಯನ್ನು ಹುಟ್ಟಾಕಿತ್ತು. ಅದೇ ಕ್ರೇಜ್ ಈಗ ಥಿಯೇಟರ್ನಲ್ಲೂ ಕಾಣುತ್ತಿದೆ. 'ದಸರಾ' ಎರಡು ದಿನಗಳಲ್ಲಿ 53 ಕೋಟಿ ರೂ. ಕಲೆಕ್ಷನ್ ಮಾಡಿದೆ ಎನ್ನಲಾಗಿದೆ. ವಿದೇಶದಲ್ಲೂ ಕಲೆಕ್ಷನ್ ಜೋರಾಗಿಯೇ ಇದೆ ಎನ್ನಲಾಗಿದೆ.
'ದಸರಾ' ಸಿನಿಮಾದ ಹಿನ್ನೆಲೆ ಏನು?
'ದಸರಾ' ತೆಲಂಗಾಣದ ಸಿಂಗರೇಣಿ ಕಲ್ಲಿದ್ದಲು ಗಣಿ ಪ್ರದೇಶದ ವೀರಲಪಲ್ಲಿ ಎಂಬ ಹಳ್ಳಿಯಲ್ಲಿ ನಡೆಯೋ ಕಥೆ. ಧರಣಿ ಪಾತ್ರದಲ್ಲಿ ನಾನಿ ಹಾಗೇ ಗೆಳೆಯ ಸೂರಿ ಪಾತ್ರದ ದೀಕ್ಷಿತ್ ಶೆಟ್ಟಿ ನಟಿಸಿದ್ದಾರೆ. ಸ್ನೇಹಿತರ ಗುಂಪಿನೊಂದಿಗೆ ಕಲ್ಲಿದ್ದಲು ಹೊತ್ತು ಬರುವ ಗೂಡ್ಸ್ ರೈಲುಗಳನ್ನು ದೋಚುವುದೇ ಇವರ ಕೆಲಸ. ಇತ್ತ ಧರಣಿ ಹಾಗೂ ಸೂರಿಯ ಬಾಲ್ಯದ ಗೆಳತಿ ಕೀರ್ತಿ ಸುರೇಶ್ ಅಂಗನವಾಡಿ ಶಿಕ್ಷಕಿ. ಧರಣಿ ಹಾಗೂ ವೆನ್ನೆಲಿ ಪರಸ್ಪರ ಪ್ರೀತಿಸುತ್ತಾರೆ. ಹಾಗೇ ಸೂರಿಗೂ ಅವಳ ಮೇಲೆ ಪ್ರೀತಿ ಮೂಡುತ್ತೆ. ಇಲ್ಲಿಂದ ಮುಂದೇನಾಗುತ್ತೆ ಅನ್ನೋದೇ ಕಥೆ.

'ದಸರಾ' ಸಿನಿಮಾ ನಾನಿ ವೃತ್ತಿ ಬದುಕಿನ ದೊಡ್ಡ ಸಿನಿಮಾ ಆಗೋ ಸಾಧ್ಯತೆಯಿದೆ. ಇವರೊಂದಿಗೆ ಕನ್ನಡದ ನಟ ದೀಕ್ಷಿತ್ ಶೆಟ್ಟಿ, ಸಾಯಿ ಕುಮಾರ್, ಸಮುದ್ರಖನಿ, ಶೈನ್ ಟಾಮ್ ಚಾಕೊ ಹಲವು ಕಲಾವಿದರು ನಟಿಸಿದ್ದಾರೆ. ಇದೊಂದು ಮಾಸ್ ಆಕ್ಷನ್ ಸಿನಿಮಾ ಆಗಿದ್ದು, ಅಂಗನವಾಡಿ ಕಾರ್ಯಕರ್ತೆಯರ ವಿವಾದ ಸಿನಿಮಾ ವೇಗಕ್ಕೆ ಅಡ್ಡಿಯುಂಟು ಮಾಡುತ್ತಾ ಅನ್ನೋದೇ ಪ್ರಶ್ನೆ.


Click it and Unblock the Notifications











