ಕ್ಯಾಮೆರಾಮ್ಯಾನ್ ಜತೆಗಿನ ನಟಿ ಶ್ರೀಸುಧಾ 'ಲವ್ ಸ್ಟೋರಿ' ಪ್ರಕರಣಕ್ಕೆ ಹೊಸ ತಿರುವು
'ಅರ್ಜುನ್ ರೆಡ್ಡಿ' ಚಿತ್ರದ ಮೂಲಕ ಹೆಸರು ಪಡೆದಿದ್ದ ತೆಲುಗು ನಟಿ ಶ್ರೀಸುಧಾ ಅವರ 'ಪ್ರೇಮಕಥೆ'ಯ ಪ್ರಕರಣ ಹೊಸ ತಿರುವು ಪಡೆದುಕೊಂಡಿದೆ. ಪ್ರೇಮವಂಚನೆ ಪ್ರಕರಣದಲ್ಲಿ ಸಿಲುಕೊಂಡಿರುವ ಛಾಯಾಗ್ರಾಹಕ ಶ್ಯಾಮ್ ಕೆ. ನಾಯ್ಡು ಅವರನ್ನು ಬಚಾವ್ ಮಾಡಲು ಎಸ್ ಆರ್ ನಗರದ ಸರ್ಕಲ್ ಇನ್ಸ್ಪೆಕ್ಟರ್ ಮುರಳಿ ಕೃಷ್ಣ 5 ಲಕ್ಷ ರೂಪಾಯಿ ಲಂಚ ಪಡೆದಿದ್ದಾರೆ ಎಂದು ಶ್ರೀಸುಧಾ ಆರೋಪಿಸಿದ್ದಾರೆ.
'ಪೋಕಿರಿ' ಸೇರಿದಂತೆ ವಿವಿಧ ಚಿತ್ರಗಳಲ್ಲಿ ಕೆಲಸ ಮಾಡಿರುವ ಛಾಯಾಗ್ರಾಹಕ ಶ್ಯಾಮ್ ಕೆ. ನಾಯ್ಡು ತಮ್ಮೊಂದಿಗೆ ಸಂಬಂಧ ಇರಿಸಿಕೊಳ್ಳುವಂತೆ ಬಲವಂತ ಮಾಡಿದ್ದರು. ಮದುವೆಯಾಗುವುದಾಗಿ ಭರವಸೆ ನೀಡಿದ್ದರು. ಆದರೆ ಎಲ್ಲ ಮುಗಿದ ಬಳಿಕ ಕೈಬಿಟ್ಟರು ಎಂದು ಮೇ ತಿಂಗಳ ಅಂತ್ಯದಲ್ಲಿ ಶ್ರೀಸುಧಾ ಎಸ್ಆರ್ ನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಶ್ರೀಸುಧಾ ಅವರ ದೂರಿನ ಅನ್ವಯ ಶ್ಯಾಮ್ ವಿರುದ್ಧ ಪ್ರಕರಣ ದಾಖಲಿಸಿ ಬಂಧಿಸಲಾಗಿತ್ತು. ಮುಂದೆ ಓದಿ.

ಲಂಚ ಪಡೆದಿದ್ದಕ್ಕೆ ಸಾಕ್ಷಿ ಸಲ್ಲಿಕೆ
ಎಸ್ಆರ್ ನಗರ ಪೊಲೀಸರು ಲಂಚ ಪಡೆದಿರುವುದಕ್ಕೆ ತಮ್ಮ ಬಳಿ ಸಾಕ್ಷ್ಯಗಳಿವೆ ಎಂದಿರುವ ಶ್ರೀಸುಧಾ, ಎಸಿಬಿ ಪೊಲೀಸರನ್ನು ಸಂಪರ್ಕಿಸಿ ಪುರಾವೆಗಳನ್ನು ಸಲ್ಲಿಸಿದ್ದಾರೆ. ಶ್ಯಾಮ್ ನಾಯ್ಡು ಮತ್ತು ತಮ್ಮ ನಡುವೆ ಸರ್ಕಲ್ ಇನ್ಸ್ಪೆಕ್ಟರ್ ಮಧ್ಯಸ್ಥಿಕೆ ವಹಿಸಿದ್ದರು. ಆದರೆ ಬಳಿಕ ತಮ್ಮ ಸಹಿಯನ್ನು ನಕಲು ಮಾಡಿ ಹೈಕೋರ್ಟ್ನಲ್ಲಿ ರಾಜಿ ಒಪ್ಪಂದದ ಪತ್ರ ಸಲ್ಲಿಸಿದ್ದಾರೆ ಎಂದು ಆರೋಪಿಸಿದ್ದಾರೆ.

ಫೋರ್ಜರಿ ಆರೋಪದಲ್ಲಿ ಬಂಧನ
ಬಂಧನಕ್ಕೆ ಒಳಗಾಗಿ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದ ಶ್ಯಾಮ್ ಅವರನ್ನು ಕಳೆದ ತಿಂಗಳು ಮತ್ತೆ ಬಂಧಿಸಲಾಗಿತ್ತು. ತಮ್ಮ ಹಾಗೂ ಶ್ರೀಸುಧಾ ನಡುವೆ ರಾಜಿಯಾಗಿದೆ ಎಂದು ಅವರು ನ್ಯಾಯಾಲಯಕ್ಕೆ ದಾಖಲೆಗಳನ್ನು ಸಲ್ಲಿಸಿದ್ದರು. ಆದರೆ ಸುಳ್ಳು ಮಾಹಿತಿ ಹಾಗೂ ಫೋರ್ಜರಿ ಮಾಡಿದ ಆರೋಪದಲ್ಲಿ ಮತ್ತೊಂದು ಪ್ರಕರಣ ದಾಖಲಿಸಲಾಗಿತ್ತು.

ಡ್ರಗ್ಸ್ ಪ್ರಕರಣದಲ್ಲಿ ಸಿಕ್ಕಿದ್ದ ಶ್ಯಾಮ್
ಸೂಪರ್, ಬುಜ್ಜಿಗಾಡು, ಚಿರುತ, ಬಿಜಿನೆಸ್ ಮ್ಯಾನ್, ಜುಲಾಯಿ ಮುಂತಾದ ಚಿತ್ರಗಳಲ್ಲಿ ಛಾಯಾಗ್ರಹಣ ಮಾಡಿದ್ದ ಶ್ಯಾಮ್, 2017ರಿಂದಲೂ ವಿವಾದದಲ್ಲಿದ್ದರು. ಹೈದರಾಬಾದ್ ಮಾದಕ ವಸ್ತು ಜಾಲದಲ್ಲಿ ಅವರನ್ನು ಎಸ್ಐಟಿ ಹತ್ತು ಗಂಟೆಗಳ ಕಾಲ ವಿಚಾರಣೆಗೆ ಒಳಪಡಿಸಿತ್ತು. ಆರೋಪಿ ಜತೆ ಸಂಪರ್ಕ ಹೊಂದಿದ್ದರು ಎಂಬ ಆರೋಪ ಅವರ ಮೇಲಿತ್ತು. ಅವರೊಂದಿಗೆ ತೆಲುಗು ಚಿತ್ರರಂಗದ ಇನ್ನೂ 12 ಮಂದಿಯನ್ನು ವಿಚಾರಣೆಗೆ ಒಳಪಡಿಸಲಾಗಿತ್ತು.

ಶ್ರೀಸುಧಾ ಆರೋಪವೇನು?
ನಟ ಶ್ರೀಸುಧಾ 'ಎ ಆ', 'ಯೆವಡೆ ಸುಬ್ರಮಣ್ಯಂ' ಮುಂತಾದ ಚಿತ್ರಗಳಲ್ಲಿ ನಟಿಸಿದ್ದರು. 2015ರಿಂದ ಫೇಸ್ ಬುಕ್ ಮೂಲಕ ಶ್ಯಾಮ್ ಸ್ನೇಹ ಬೆಳೆದಿತ್ತು. ನಂತರ ಅವರು ಬಲವಂತಪಡಿಸಿ ತಮ್ಮೊಂದಿಗೆ ಸಂಬಂಧ ಇರಿಸಿಕೊಂಡಿದ್ದರು. ಮದುವೆ ಮಾಡಿಕೊಳ್ಳುವುದಾಗಿ ನಂಬಿಸಿದ್ದರು. ಆದರೆ ತಮ್ಮನ್ನು ವಂಚಿಸಿದ್ದಾರೆ ಎಂದು ಆರೋಪಿಸಿದ್ದರು.


Click it and Unblock the Notifications











