"ರಾಮ್ಚರಣ್ಗೆ ಗಂಡು ಮಗುವಿನ ಭಾಗ್ಯವಿಲ್ಲ" ಎಂದಿದ್ದ ವೇಣುಸ್ವಾಮಿ; ಭವಿಷ್ಯ ತಲೆಕೆಳಗಾಗಿದ್ದಕ್ಕೆ ತಪ್ಪೊಪ್ಪಿಕೊಂಡ ಜ್ಯೋತಿಷಿ?
ಟಾಲಿವುಡ್ನ ಸೆಲೆಬ್ರೆಟಿ ಜ್ಯೋತಿಷಿ ವೇಣು ಸ್ವಾಮಿ ಯಾವಾಗಲೂ ವಿವಾದದಲ್ಲೇ ಇರುತ್ತಾರೆ. ಒಂದು ಕಾಲದಲ್ಲಿ ಸೆಲೆಬ್ರೆಟಿಗಳ ನೆಚ್ಚಿನ ಜ್ಯೋತಿಷಿಯಾಗಿದ್ದ ವೇಣು ಸ್ವಾಮಿ ಈಗ ಹಲವರ ಪಾಲಿಗೆ ವಿಲನ್ ಆಗಿದ್ದಾರೆ. ತೆಲುಗಿನ ಮೆಗಾ ಪವರ್ಸ್ಟಾರ್ ರಾಮ್ ಚರಣ್ ತೇಜಾ ಹಾಗೂ ಉಪಾಸನಾ ಅವಳಿ ಮಕ್ಕಳಿಗೆ ಜನ್ಮ ನೀಡಿದ ಬಳಿಕವಂತೂ ವೇಣು ಸ್ವಾಮಿ ಸಿಕ್ಕಾಪಟ್ಟೆ ಟ್ರೋಲ್ ಆಗುತ್ತಿದ್ದಾರೆ. ಅದಕ್ಕೆ ಅವರು ಈ ಹಿಂದೆ ನುಡಿದಿದ್ದ ಭವಿಷ್ಯ.
ಮೆಗಾ ಪವರ್ ಸ್ಟಾರ್ ರಾಮ್ ಚರಣ್ ಹಾಗೂ ಉಪಾಸನಾಗೆ ಮೊದಲ ಮಗು ಜನಿಸಿದಾಗ ವೇಣು ಸ್ವಾಮಿ ಭವಿಷ್ಯ ನುಡಿದಿದ್ದರು. ಮಗಳಉ ಕ್ಲಿಂಕಾರಾ ಜನಿಸಿದ ಸಂದರ್ಭದಲ್ಲಿ ಜ್ಯೋತಿಷಿ ವೇಣುಸ್ವಾಮಿ ಹೇಳಿದ್ದ ಜಾತಕ ಭವಿಷ್ಯ ಈಗ ವಿವಾದಕ್ಕೆ ಸಿಕ್ಕಿಕೊಂಡಿದೆ. ಎರಡು ವರ್ಷಗಳ ಹಿಂದೆ ಹೇಳಿದ್ದ ಭವಿಷ್ಯ ಈಗ ವೇಣು ಸ್ವಾಮಿಗೆ ಉಲ್ಟಾಗಿದೆ. ಉಪಾಸನಾ ಇತ್ತೀಚೆಗೆ ಅವಳಿ ಮಕ್ಕಳಿಗೆ ಜನ್ಮ ನೀಡಿದ್ದ ಬೆನ್ನಲ್ಲೇ ಈ ಜ್ಯೋತಿಷಿ ನುಡಿದ ಭವಿಷ್ಯವಾಣಿಗಳು ತಪ್ಪೆಂದೂ ಸುದ್ದಿಯಾಗುತ್ತಿವೆ.

ಅಂದ್ಹಾಗೆ ಎರಡು ವರ್ಷಗಳ ಹಿಂದೆ ರಾಮ್ ಚರಣ್-ಉಪಾಸನಾ ಹಾಗೂ ಚಿರಂಜೀವಿ ಕುಟುಂಬದ ಗ್ರಹಗತಿಗಳ ಬಗ್ಗೆ ವಿಡಿಯೋ ಮಾಡಿದ್ದರು. ಆ ವಿಡಿಯೋದಲ್ಲಿ ರಾಮ್ ಚರಣ್ ಹಾಗೂ ಉಪಾಸನಾಗೆ ಎರಡನೇ ಮಗುವಿನ ಭಾಗ್ಯವಿಲ್ಲ ಎಂದಿದ್ದರು. ಇಷ್ಟೇ ಅಲ್ಲದೆ ರಾಮ್ ಚರಣ್ಗೆ ಗಂಡು ಮಕ್ಕಳ ಯೋಗವಿಲ್ಲ ಖಡಕ್ ಆಗಿ ಭವಿಷ್ಯ ನುಡಿದಿದ್ದರು. ಈ ಭವಿಷ್ಯವಾಣಿಗಳೇ ಇದೀಗ ವಿವಾದದ ಕೇಂದ್ರಬಿಂದುವಾಗಿವೆ.
ಟಾಲಿವುಡ್ ಜ್ಯೋತಿಷಿ ವೇಣುಸ್ವಾಮಿ ಪ್ರಕಾರ, ಕ್ಲಿಂಕಾರಾ ಪುನರ್ವಸು ನಕ್ಷತ್ರದ ಎರಡನೇ ಪಾದ, ಮಿಥುನ ರಾಶಿಯಲ್ಲಿ 'ಕೋಣಂಗಿ' ಎಂಬ ಜನ್ಮ ನಾಮದಲ್ಲಿ ಜನಿಸಿದ್ದಾರೆ. ರಾಮ್ ಚರಣ್-ಉಪಾಸನಾ ದಂಪತಿ ಹಾಗೂ ಕ್ಲಿಂಕಾರಾ ದೇವತಾ ಅಂಶವುಳ್ಳ ನಕ್ಷತ್ರಗಳಲ್ಲಿ ಅಂದರೆ, ರೋಹಿಣಿ, ಕೃತ್ತಿಕಾ, ಪುನರ್ವಸು ಕ್ರಮವಾಗಿ ಹುಟ್ಟಿದ್ದಾರೆ. ಹೀಗಾಗಿ ಅವರಲ್ಲಿ ದೇವತಾ ಅಂಶಗಳಿವೆ ಎಂದಿದ್ದರು. ಹೀಗಾಗಿ ಕ್ಲಿಂಕಾರ ಆಕೆಯ ಪೋಷಕರಿ ಅಂದರೆ, ರಾಮ್ ಚರಣ್, ಉಪಾಸನಾಗಿಂತಲೂ ಹೆಚ್ಚು ಜನಪ್ರಿಯತೆ ಗಳಿಸಿ ಇತಿಹಾಸ ಸೃಷ್ಟಿಸುತ್ತಾಳೆ. ಇದೊಂದು ಅತ್ಯಂತ ವಿರಳ ಜಾತಕ ಎಂದೂ ವೇಣುಸ್ವಾಮಿ ಹೇಳಿದ್ದರು.
ರಾಮ್ಚರಣ್ ಹಾಗೂ ಉಪಾಸನಾಗೆ ಗಂಡು ಮಗುವಿನ ಭಾಗ್ಯವಿಲ್ಲ ಎಂದಿದ್ದ ವೇಣುಸ್ವಾಮಿಗೆ ಅದೇ ತಿರುಗುಬಾಣವಾಗಿದೆ. ಇತ್ತೀಚೆಗೆ ಉಪಾಸನಾ ಆರೋಗ್ಯವಂತ ಅವಳಿ ಮಕ್ಕಳಿಗೆ ಜನ್ಮ ನೀಡಿದ್ದಾರೆ. ಒಂದು ಗಂಡು ಹಾಗೂ ಒಂದು ಹೆಣ್ಣು ಮಗು. ಹೀಗಾಗಿ ವೇಣುಸ್ವಾಮಿ ಭವಿಷ್ಯದ ಮೇಲೆ ನೆಟ್ಟಿಗರು ಕಿಡಿಕಾರುತ್ತಿದ್ದಾರೆ. ಯಾಕಂದ್ರೆ, ರಾಮ್ಚರಣ್ ದಂಪತಿಗೆ ಎರಡನೇ ಸಂತಾನವಿಲ್ಲ ಎಂದಿದ್ದರು. ಹಾಗೇ ಗಂಡು ಮಗುವಿನ ಯೋಗವಿಲ್ಲ ಎಂದಿದ್ದರು. ಈ ಎರಡೂ ಭವಿಷ್ಯವಾಣಿಗಳು ತಲೆ ಕೆಳಗಾಗಿವೆ. ಹೀಗಾಗಿ ರಾಮ್ ಚರಣ್ ಅಭಿಮಾನಿಗಳು ವೇಣುಸ್ವಾಮಿಯನ್ನು ಹೀನಾಯವಾಗಿ ಟ್ರೋಲ್ ಮಾಡುತ್ತಿದ್ದಾರೆ.

ತನ್ನ ಭವಿಷ್ಯವಾಣಿ ವಿವಾದಕ್ಕೆ ಸಿಲುಕುತ್ತಿದ್ದಂತೆ ವೇಣುಸ್ವಾಮಿ ಸೋಶಿಯಲ್ ಮೀಡಿಯಾದಲ್ಲಿ ಸ್ಪಷ್ಟೀಕರಣ ನೀಡಿದ್ದಾರೆಂದು ತೆಲುಗು ಮಾಧ್ಯಮಗಳು ವರದಿ ಮಾಡಿವೆ. "ನಾನು ಜಾತಕ ನೋಡಿಯೇ ಮಾತನಾಡುತ್ತೇನೆ. ಅದನ್ನು ಬಿಟ್ಟು ಸುಳ್ಳು ಹೇಳುವುದಿಲ್ಲ. ಕ್ಲಿಂಕಾರಾ ಜಾತಕದಲ್ಲಿ ರಾಜಯೋಗವಿತ್ತು. ಆದರೆ, ಆಕೆಯ ಬಳಿಕ ಮತ್ತೊಂದು ಸಂತಾನದ ಯೋಗ ಸ್ಪಷ್ಟವಾಗಿರಲಿಲ್ಲ. ಹೀಗಾಗಿ ಕ್ಲಿಂಕಾರಾ ಏಕೈಕ ಸಂತಾನವೆಂದು ಜಾತಕದ ಆಧಾರದ ಮೇಲೆ ಹೇಳಿದ್ದೆ" ಎಂದು ವೇಣುಸ್ವಾಮಿ ಹೇಳಿದ್ದಾರೆ.
ಇದೇ ವಿಡಿಯೋದಲ್ಲಿ ತಾನು ಹೇಳಿದ ಮಾತನ್ನು ಹಿಂಪಡೆಯುತ್ತೇನೆಂದು ಹೇಳಿದ್ದಾರೆ ಎನ್ನಲಾಗಿದೆ. "ರಾಮ್ ಚರಣ್ ದಂಪತಿಗೆ ಈಗ ಅವಳಿ ಮಕ್ಕಳು, ಒಂದು ಗಂಡು ಹಾಗೂ ಒಂದು ಹೆಣ್ಣು ಜನಿಸಿದ್ದಾರೆ. ಹೀಗಾಗಿ, ನನ್ನ ಆ ಮಾತನ್ನು ಹಿಂಪಡೆಯುತ್ತೇನೆ" ಎಂದು ವೇಣುಸ್ವಾಮಿ ಹೇಳಿದ್ದಾರೆಂದು ವರದಿಯಾಗಿದೆ. ಆದರೆ, ಈ ಬಗ್ಗೆ ಇನ್ನೂ ಕ್ಲಾರಿಟಿ ಸಿಗಬೇಕಿದೆ.


Click it and Unblock the Notifications











