'ಬಾಹುಬಲಿ' ನಟಿ ರಮ್ಯಾ ಕೃಷ್ಣ ವಿಚ್ಛೇದನ; ಪತಿ ಕೃಷ್ಣ ವಂಶಿ ಕೊಟ್ಟ ಹೇಳಿಕೆಯಲ್ಲೇನಿದೆ?
ದಕ್ಷಿಣ ಭಾರತದ ಜನಪ್ರಿಯ ನಟಿ ರಮ್ಯಾ ಕೃಷ್ಣ ಆಗಾಗ ಸುದ್ದಿಯಲ್ಲಿ ಇರುತ್ತಾರೆ. ಇವರ ವೃತ್ತಿ ಬದುಕು ಹಾಗೂ ವೈಯಕ್ತಿಕ ಬದುಕು ಎರಡೂ ಅಂದುಕೊಂಡಂತೆ ಇಲ್ಲ. ಎರಡನ್ನೂ ವಿಭಿನ್ನವಾಗಿ ಹ್ಯಾಂಡಲ್ ಮಾಡುತ್ತಿದ್ದಾರೆ. ಸಿನಿಮಾ ಅಂತ ಬಂದರೆ, ರಮ್ಯಾ ಕೃಷ್ಣಗೆ ಇನ್ನೂ ಬೇಡಿಕೆ ಏನೂ ಕಮ್ಮಿಯಾಗಿಲ್ಲ. ಇವರೊಂದಿಗೆ ಸಿನಿಮಾ ಮಾಡುವುಕ್ಕೆ ತುದಿಗಾಲಲ್ಲಿ ನಿಂತಿದ್ದಾರೆ.
ರಮ್ಯಾ ಕೃಷ್ಣ ವೃತ್ತಿ ಬದುಕು ಯಶಸ್ವಿಯಾಗಿ ನಡೆಯುತ್ತಿದೆ. ಆದರೆ, ವೈಯಕ್ತಿಕ ಬದುಕಿನ ಬಗ್ಗೆ ಆಗಾಗ ಸುದ್ದಿಗಳು ಹರಿದಾಡುತ್ತಲೇ ಇದೆ. ಇತ್ತೀಚೆಗೆ ರಮ್ಯಾ ಕೃಷ್ಣ ವಿಚ್ಛೇದನಕ್ಕೆ ಮುಂದಾಗಿದ್ದಾರೆ ಅನ್ನೋ ಸುದ್ದಿಗಳು ಹರಿದಾಡಿದ್ದವು. ಪತಿ ಹಾಗೂ ಜನಪ್ರಿಯ ನಿರ್ದೇಶಕ ಕೃಷ್ಣ ವಂಶಿಯಿಂದ ಬೇರೆಯಾಗುತ್ತಿದ್ದಾರೆ ಅಂತ ಸುದ್ದಿ ಹಬ್ಬಿತ್ತು.

ರಮ್ಯಾ ಕೃಷ್ಣ ಹಾಗೂ ಕೃಷ್ಣ ವಂಶಿ ಬೇರೆಯಾಗುತ್ತಿದ್ದಾರೆ ಅನ್ನೋ ಸುದ್ದಿ ದಕ್ಷಿಣ ಭಾರತದ ಚಿತ್ರರಂಗದಲ್ಲಿ ಸಂಚನ ಸೃಷ್ಟಿಸಿತ್ತು. ಈಗ ಸ್ವತ: ರಮ್ಯಾ ಕೃಷ್ಣ ಪತಿ ಕೃಷ್ಣ ವಂಶಿ ಸಂದರ್ಶನವೊಂದರಲ್ಲಿ ವಿಚ್ಚೇದನದ ವದಂತಿಗೆ ಸ್ಪಷ್ಟನೆ ನೀಡಿದ್ದಾರೆ. ಯಾಕೆ ಇಂತಹ ಸುದ್ದಿಗಳು ಹರಡುತ್ತಿವೆ? ವಿಚ್ಛೇದನದ ಸುದ್ದಿಗಳನ್ನು ಹಬ್ಬಿಸುತ್ತಿರುವವರು ಯಾರು? ಅನ್ನೋದನ್ನು ಹೇಳಿದ್ದಾರೆ. ಅದೇನು ಅನ್ನೋದನ್ನು ತಿಳಿಯಲು ಮುಂದೆ ಓದಿ.
ಕೃಷ್ಣ ವಂಶಿ ಕೂಡ ದಕ್ಷಿಣ ಭಾರತದ ಜನಪ್ರಿಯ ನಟ. ರಾಮ್ ಗೋಪಾಲ್ ವರ್ಮಾರಂತಹ ದಿಗ್ಗಜರೊಂದಿಗೆ ಸಹಾಯಕ ನಿರ್ದೇಶಕನಾಗಿ ಕೆಲಸ ಮಾಡಿ ಡೈರೆಕ್ಷನ್ಗೆ ಕಾಲಿಟ್ಟವರು. ಇವರು ನಿರ್ದೇಶಿಸಿದ ಹಲವು ಸಿನಿಮಾಗಳು ಬಾಕ್ಸಾಫೀಸ್ನಲ್ಲಿ ಸದ್ದು ಮಾಡಿವೆ. ಕೃಷ್ಣ ವಂಶಿ ನಿರ್ದೇಶಿಸಿದ ಸಿನಿಮಾಗಳು ತೆಲುಗು ಚಿತ್ರರಂಗದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡಿವೆ. ಅವಿಭಕ್ತ ಕುಟುಂಬ, ಸಂಬಂಧಗಳು, ದೇಶಭಕ್ತಿಯಂತಹ ಸಿನಿಮಾಗಳನ್ನೇ ಹೆಚ್ಚಾಗಿ ನಿರ್ದೇಶಿಸಿ ಗೆದ್ದಿರುವಂತಹ ನಿರ್ದೇಶಕ.

ಇತ್ತ ರಮ್ಯಾ ಕೃಷ್ಣ ಕೂಡ ಕನ್ನಡ, ತೆಲುಗು, ತಮಿಳು, ಮಲಯಾಳಂ, ಹಿಂದಿ ಭಾಷೆಯ ಸಿನಿಮಾಗಳಲ್ಲಿ ನಟಿಸಿದ್ದಾರೆ. ರಮ್ಯಾ ಕೃಷ್ಣ ಇಂದಿಗೂ ಬಹು ಬೇಡಿಕೆಯ ನಟಿಯಾಗಿದ್ದಾರೆ. ಆದರೆ, ರಮ್ಯಾ ಕೃಷ್ಣ ಅವರ ವಿಚ್ಛೇದನದ ಸುದ್ದಿ ಆಗಾಗ ಅವರ ಅಭಿಮಾನಿಗಳ ಕಿವಿಗೆ ಬೀಳುತ್ತಲೇ ಇರುತ್ತೆ. ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ಆಗುತ್ತಲೇ ಇರುತ್ತೆ. ಈಗ ಸ್ವತ: ಅವರ ಪತಿ ನಿರ್ದೇಶಕ ಕೃಷ್ಣ ವಂಶಿ ಈ ಎಲ್ಲಾ ವದಂತಿಗಳಿಗೂ ಕ್ಲಾರಿಟಿ ಕೊಟ್ಟಿದ್ದಾರೆ.
2003ರಲ್ಲಿ ರಮ್ಯಾ ಕೃಷ್ಣ ಹಾಗೂ ಕೃಷ್ಣ ವಂಶಿ ಇಬ್ಬರೂ ಪರಸ್ಪರ ಪ್ರೀತಿಸಿ ಮದುವೆಯಾಗಿದ್ದವರು. ಇವರಿಗೆ ರಿತ್ವಿಕ್ ಎಂಬ ಒಬ್ಬ ಪುತ್ರನಿದ್ದಾನೆ. ಅಷ್ಟಕ್ಕೂ ಇವರಿಬ್ಬರ ವಿಚ್ಛೇದನದ ಬಗ್ಗೆ ಸುದ್ದಿ ಹರಡುವುದಕ್ಕೆ ಕಾರಣವಿದೆ. ರಮ್ಯಾ ಕೃಷ್ಣ ಹಾಗೂ ಕೃಷ್ಣ ವಂಶಿ ಇಬ್ಬರೂ ಬೇರೆ ಬೇರೆ ಕಡೆಗಳಲ್ಲಿ ವಾಸ ಮಾಡುತ್ತಾರೆ. ರಮ್ಯಾ ಕೃಷ್ಣ ಚೆನ್ನೈನಲ್ಲಿ ನೆಲೆಸಿದರೆ, ಕೃಷ್ಣ ವಂಶಿ ಹೈದರಾಬಾದ್ನಲ್ಲಿ ವಾಸವಿದ್ದಾರೆ. ಕಳೆದ ಹಲವು ವರ್ಷಗಳಿಂದ ಹೀಗೆ ವಾಸ ಮಾಡುತ್ತಿರುವುದೇ ಈ ವದಂತಿಗೆ ಕಾರಣ ಎನ್ನಲಾಗಿದೆ.
ಈಗ ಬಗ್ಗೆ ಕೃಷ್ಣ ವಂಶಿ ಇತ್ತೀಚೆಗೆ ನೀಡಿದ ಸಂದರ್ಶನದಲ್ಲಿ ಕ್ಲಾರಿಟಿ ಕೊಟ್ಟಿದ್ದಾರೆ. ನಮ್ಮಿಬ್ಬರ ಬಗ್ಗೆ ಒಳ್ಳೆಯದನ್ನು ಬಯಸುವವರು ನಮಗೆ ಏನಾದರೂ ಆಗುತ್ತೆ ಎಂದು ಇಂತಹ ವಿಷಯಗಳನ್ನು ಸೃಷ್ಟಿಸುತ್ತಿದ್ದಾರೆ. ನಾವು ಪ್ರತ್ಯೇಕವಾಗಿ ವಾಸಿಸುತ್ತಿದ್ದೇವೆ. ರಮ್ಯಾ ಚೆನ್ನೈನಲ್ಲಿ ನೆಲೆಸಿದ್ದಾರೆ. ನಾನು ಹೈದರಾಬಾದ್ನಲ್ಲಿ ವಾಸವಿದ್ದೇನೆ. ಸಾಧ್ಯವಾದಾಗಲೆಲ್ಲ ನಾವು ಪರಸ್ಪರ ಭೇಟಿಯಾಗುತ್ತಲೇ ಇರುತ್ತೇವೆ ಎಂದು ಸಂದರ್ಶನದ ವೇಳೆ ಹೇಳಿಕೊಂಡಿದ್ದಾರೆ.
ಇದೇ ಸಂದರ್ಶನದಲ್ಲಿ ರಮ್ಯಾ ಕೃಷ್ಣ ವೃತ್ತಿ ಹಾಗೂ ವೈಯಕ್ತಿಕ ಜೀವನ ಎರಡನ್ನೂ ನಿಭಾಯಿಸುವಂತಹ ಗುಣವುಳ್ಳವರು. ಅವರು ಬುದ್ಧಿವಂತ ಮಹಿಳೆ ಎಂದು ಪತ್ನಿಯನ್ನು ಹಾಡಿಹೊಗಳಿದ್ದಾರೆ. ನಾವು ಆಗಾಗ ಪಾರ್ಟಿ ಹಾಗೂ ಕಾರ್ಯಕ್ರಮಗಳಿಗೆ ಹೋಗುತ್ತೇವೆ. ಅವು ನಮ್ಮ ವೈಯಕ್ತಿಕ ವಿಚಾರ ಆಗಿದ್ದರಿಂದ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುವುದಿಲ್ಲ. ಈ ಕಾರಣಕ್ಕೆ ನಮ್ಮಿಬ್ಬರ ಸಾಂಸಾರಿಕ ಜೀವನದ ಬಗ್ಗೆ ವದಂತಿಗಳನ್ನು ಹಬ್ಬಿಸುತ್ತಿದ್ದಾರೆ. ಈ ಸಂದರ್ಶನದ ಬಳಿಕ ವದಂತಿಗಳಿಗೆ ಬ್ರೇಕ್ ಬೀಳುತ್ತಾ? ಅನ್ನೋದು ನೋಡಬೇಕಿದೆ.


Click it and Unblock the Notifications











