Chiranjeevi MSVPG Trailer: ಹೆಂಗೈತೆ ಮೆಗಾಸ್ಟಾರ್ ಚಿರಂಜೀವಿ ಹೊಸ ಸಿನಿಮಾ ಟ್ರೈಲರ್?
ಟಾಲಿವುಡ್ನ ಮೆಗಾಸ್ಟಾರ್ ಚಿರಂಜೀವಿಯ ಬಹುನಿರೀಕ್ಷಿತ ಸಿನಿಮಾ 'ಮನ ಶಂಕರ ವರಪ್ರಸಾದ್ ಗಾರು' ಸಂಕ್ರಾಂತಿ ಹಬ್ಬಕ್ಕೆ ರಿಲೀಸ್ ಆಗುತ್ತಿದೆ. ಹೀಗಾಗಿ ಇಡೀ ಚಿತ್ರತಂಡ ಪ್ರಚಾರದಲ್ಲಿ ಬ್ಯುಸಿಯಾಗಿದೆ. ದಿನದಿಂದ ದಿನಕ್ಕೆ ಚಿತ್ರದ ಮೇಲಿನ ನಿರೀಕ್ಷೆಗಳು ಗರಿಗೆದರುತ್ತಿವೆ. ಟಾಲಿವುಡ್ನ ಸಕ್ಸಸ್ಪುಲ್ ನಿರ್ದೇಶಕ ಅನಿಲ್ ರವಿಪುಡಿ ಈ ಸಿನಿಮಾಗೆ ಆಕ್ಷನ್ ಕಟ್ ಹೇಳಿದ್ದಾರೆ. ಹೀಗಾಗಿ ಈ ಸಿನಿಮಾ ಬಗ್ಗೆ ನಿರೀಕ್ಷೆಗಳು ದುಪ್ಪಟ್ಟಾಗಿವೆ.
ಜನವರಿ 12ರಂದು ರಿಲೀಸ್ ಆಗುತ್ತಿರುವ 'ಮನ ಶಂಕರ ವರಪ್ರಸಾದ್ ಗಾರು' ಸಿನಿಮಾದ ಟ್ರೈಲರ್ ಇಂದು (ಜನವರಿ 4) ರಿಲೀಸ್ ಆಗಿದೆ. ಈಗಾಗಲೇ ಸಿನಿಮಾ ಪೋಸ್ಟರ್ ಹಾಗೂ ಹಾಡುಗಳು ಚಿರಂಜೀವಿ ಅಭಿಮಾನಿಗಳಿಗೆ ಮನಗೆದ್ದಿತ್ತು. ಹೀಗಾಗಿ ಟ್ರೈಲರ್ ನೋಡುವುದಕ್ಕೆ ಚಿರಂಜೀವಿ ಅಭಿಮಾನಿಗಳು ಎದುರು ನೋಡುತ್ತಿದ್ದರು. ನಿರೀಕ್ಷೆ ಮಾಡಿದ್ದಂತೆ ಟ್ರೈಲರ್ ಈಗ ರಿಲೀಸ್ ಆಗಿದೆ.

ಇಂದು ಭಾನುವಾರ (ಜನವರಿ 4) ತಿರುಪತಿಯಲ್ಲಿ 'ಮನ ಶಂಕರ ವರಪ್ರಸಾದ್ ಗಾರು' ಸಿನಿಮಾದ ಟ್ರೈಲರ್ ಲಾಂಚ್ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಇಲ್ಲಿ ಸಿನಿಮಾದ ಟ್ರೈಲರ್ ಅನ್ನು ಅದ್ಧೂರಿಯಾಗಿ ಅನಾವರಣಗೊಳಿಸಲಾಗಿದೆ. ನಿರ್ದೇಶಕ ರವಿಪುಡಿ ತಮ್ಮ ಸಿನಿಮಾ ಬಿಡುಗಡೆಗೂ ಮುನ್ನ ತಿರುಪತಿಯಲ್ಲಿ ಕಾರ್ಯಕ್ರಮವನ್ನು ಇಟ್ಟುಕೊಳ್ಳುತ್ತಾರೆ. ಅದು ಅವರ ನಂಬಿಕೆ. ಹಾಗೆಯೇ ಈ ಸಿನಿಮಾದ ಟ್ರೈಲರ್ ಲಾಂಚ್ ಅನ್ನೂ ತಿರುಪತಿಯಲ್ಲಿಯೇ ಮಾಡಲಾಗಿದೆ.
ಟ್ರೈಲರ್ ಲಾಂಚ್ ಬಳಿಕ ನಿರ್ದೇಶಕ ಅನಿಲ್ ರವಿಪುಡಿ ತಮ್ಮ ಸಿನಿಮಾ ಹಾಗೂ ನಂಬಿಕೆ ಬಗ್ಗೆ ಮಾತಾಡಿದ್ದಾರೆ. "ಯಾವುದೇ ಸಿನಿಮಾ ಆರಂಭಿಸುವಾಗ, ಇಲ್ಲವೇ ಬಿಡುಗಡೆಯಾಗುವ ಮುನ್ನ ತಿರುಪತಿಗೆ ಬರುವುದು ರೂಢಿ. ಶ್ರೀ ವೆಂಕಟೇಶ್ವರ ಸ್ವಾಮಿಯ ಕೃಪೆಯಿಂದಲೇ ನನ್ನ ವೃತ್ತಿಜೀವನ ಯಶಸ್ವಿಯಾಗಿ ನಡೆಯುತ್ತಿದೆ. ಇಂತಹ ಪವಿತ್ರ ಸ್ಥಳದಲ್ಲಿ ಮೆಗಾಸ್ಟಾರ್ ಚಿರಂಜೀವಿ ಸಿನಿಮಾದ ಟ್ರೈಲರ್ ಬಿಡುಗಡೆ ಆಗಿರುವುದು ಖುಷಿ ಕೊಟ್ಟಿದೆ" ಎಂದು ಹೇಳಿದ್ದಾರೆ.
ಹಾಗೇ ಟ್ರೈಲರ್ ಬಗ್ಗೆ ಅನಿಲ್ ರವಿಪುಡಿ ಕೆಲವು ಕುತೂಹಲಕಾರಿ ವಿಷಯಗಳನ್ನು ಹಂಚಿಕೊಂಡಿದ್ದಾರೆ. " ಮನ ಶಂಕರ ವರಪ್ರಸಾದ್ ಗಾರು ಇದು ಕೇವಲ ಎರಡೂವರೆ ನಿಮಿಷದ ಟ್ರೈಲರ್ ಅಷ್ಟೇ. ಆದರೆ, ಥಿಯೇಟರ್ನಲ್ಲಿ ಎರಡೂವರೆ ಗಂಟೆಗಳ ಕಾಲ ಸಂಪೂರ್ಣ ಸಿನಿಮಾ ಇರುತ್ತೆ. ಪ್ರೇಕ್ಷಕರು ಟೈಮ್ ಮೆಷಿನ್ನಲ್ಲಿ ಹೋಗಿ ವಿಂಟೇಜ್ ಚಿರಂಜೀವಿಯನ್ನು ನೋಡಿ ಬಂದಂತೆ ಆಗುತ್ತದೆ" ಎಂದು ಅನಿಲ್ ರವಿಪುಡಿ ಹೇಳಿದ್ದಾರೆ.

ಮೆಗಾಸ್ಟಾರ್ ಚಿರಂಜೀವಿ ಎನರ್ಜಿ ಹಾಗೂ ಟೈಮಿಂಗ್ ಸಿನಿ ಪ್ರಿಯರಿಗೆ ಸಿಕ್ಕಾಪಟ್ಟೆ ಇಷ್ಟ ಆಗುತ್ತೆ. ಈ ಸಿನಿಮಾದಲ್ಲಿ ಇದನ್ನೇ ಗಮನದಲ್ಲಿಟ್ಟುಕೊಂಡು 'ಶಂಕರ ವರಪ್ರಸಾದ್' ಪಾತ್ರವನ್ನು ವಿನ್ಯಾಸಗೊಳಿಸಿದ್ದಾಗಿ ನಿರ್ದೇಶಕ ಅನಿಲ್ ರವಿಪುಡಿ ಹೇಳಿದ್ದಾರೆ. ಈ ಪಾತ್ರವನ್ನು ವಿನ್ಯಾಸಗೊಳಿಸಿದ್ದಕ್ಕಿಂತ ತಮ್ಮ ವಿಶಿಷ್ಟ ಶೈಲಿಯ ಮೂಲಕ ಚಿರಂಜೀವಿ ನೂರು ಪಟ್ಟು ಹೆಚ್ಚು ಮನರಂಜನೆ ನೀಡುತ್ತಾರೆಂದು ನಿರ್ದೇಶಕ ಅನಿಲ್ ರವಿಪುಡಿ ಅಭಿಪ್ರಾಯ ಪಟ್ಟಿದ್ದಾರೆ.
ಇಷ್ಟೇ ಅಲ್ಲದೆ ಮೆಗಾಸ್ಟಾರ್ ಚಿರಂಜೀವಿ ಹಾಗೂ ವಿಕ್ಟರಿ ವೆಂಕಟೇಶ್ ಇಬ್ಬರನ್ನೂ ಒಟ್ಟಿಗೆ ನೋಡಬೇಕೆಂಬ ಆಸೆ ತೆಲುಗು ಮಂದಿಗೆ ಇತ್ತು. ಅದು ಈ ಸಿನಿಮಾ ಮೂಲಕ ಈಡೇರಿದೆ. ಇಬ್ಬರು ಅಭಿಮಾನಿಗಳ ಆಸೆಯನ್ನು ನಿರ್ದೇಶಕ ಅನಿಲ್ ರವಿಪುಡಿ ಈಡೇರಿಸಿದ್ದಾರೆ. ಈ ಕಾರಣಕ್ಕೆ 'ಮನ ಶಂಕರ ವರಪ್ರಸಾದ್ ಗಾರು' ಸಿನಿಮಾ ಈ ಬಾರಿ ಸಂಕ್ರಾಂತಿ ಹಬ್ಬದಂದು ಸಖತ್ ಮನರಂಜನೆ ನೀಡೋದು ಗ್ಯಾರಂಟಿ.


Click it and Unblock the Notifications











