"ತೆಲುಗು ಚಿತ್ರರಂಗದಲ್ಲಿ ಕಾಸ್ಟಿಂಗ್ ಕೌಚ್ ಇಲ್ಲ.. ನೀವು ಹೇಗಿರುತ್ತೀರೋ ಹಾಗೆ"; ಚಿರಂಜೀವಿ ಹೇಳಿಕೆಗೆ ಚಿನ್ಮಯಿ ಖಂಡನೆ
ಕಾಸ್ಟಿಂಗ್ ಕೌಚ್ ವಿಚಾರಕ್ಕೆ ಎಲ್ಲಾ ಚಿತ್ರರಂಗದಲ್ಲೂ ದೊಡ್ಡ ಅಭಿಯಾನವೇ ನಡೆದಿದೆ. ಮೀಟೂ ಅಭಿಯಾನ ಶುರುವಾದಾಗ ಚಿತ್ರರಂಗ ಗಣ್ಯರ ಹೆಸರುಗಳೆಲ್ಲವೂ ಹೊರ ಬಂದಿದ್ದವು. ಲೈಂಗಿಕ ಕಿರುಕುಳಕ್ಕೆ ಒಳಗಾದವರು ಮುಂದೆ ಬಂದು ದಿಗ್ಗಜರ ಹೆಸರುಗಳನ್ನು ಬಹಿರಂಗ ಪಡಿಸಿದ್ದರು. ಕೆಲವರು ಮಾಡಿದ ಆರೋಪಗಳು ದೊಡ್ಡ ಸಂಚಲನವನ್ನೇ ಸೃಷ್ಟಿಸಿತ್ತು. ಹೀಗಿದ್ದರೂ, ಇತ್ತೀಚೆಗೆ ಮೆಗಾಸ್ಟಾರ್ ಚಿರಂಜೀವಿ ಕಾಸ್ಟಿಂಗ್ ಕೌಚ್ ಬಗ್ಗೆ ಕೊಟ್ಟ ಹೇಳಿಕೆ ವಿವಾದಕ್ಕೆ ಎಡೆ ಮಾಡಿಕೊಟ್ಟಿದೆ.
ಮೆಗಾಸ್ಟಾರ್ ಚಿರಂಜೀವಿ ನಟಿಸಿದ ಸಿನಿಮಾ 'ಮನ ಶಂಕರ ವರಪ್ರಸಾದ ಗಾರು' ಬಾಕ್ಸಾಫೀಸ್ನಲ್ಲಿ ಗೆದ್ದಿದೆ. ಈ ಸಿನಿಮಾದ ಗೆದ್ದಿರೋ ಖುಷಿಯಲ್ಲಿ ಹೈದರಾಬಾದ್ನಲ್ಲಿ ಸಮಾರಂಭವನ್ನು ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ಕಾಸ್ಟಿಂಗ್ ಕೌಚ್ ಬಗ್ಗೆ ವಿಷಯ ಬಂದಾಗ ಮೆಗಾಸ್ಟಾರ್ ಚಿರಂಜೀವಿ ಕೊಟ್ಟ ಹೇಳಿಕೆಗಳು ದೊಡ್ಡ ವಿವಾದವನ್ನೇ ಸೃಷ್ಟಿಸಿವೆ. ಇವರ ಹೇಳಿಕೆಗೆ ಭಾರೀ ವಿರೋಧ ವ್ಯಕ್ತವಾಗುತ್ತಿದೆ.

ಮೆಗಾಸ್ಟಾರ್ ಚಿರಂಜೀವಿ ವೇದಿಕೆ ಮೇಲೆ ತೆಲುಗು ಚಿತ್ರರಂಗದಲ್ಲಿ ಕಾಸ್ಟಿಂಗ್ ಕೌಚ್ ಅನ್ನೋದು ಇಲ್ಲ. ಇಲ್ಲಿ ಕೆಲಸ ಮಾಡುವುದಕ್ಕೆ ಒಳ್ಳೆಯ ವಾತಾವರಣವಿದೆ. ನೀವು ಹೇಗಿರುತ್ತಿರೋ ಅದೇ ರೀತಿ ಚಿತ್ರರಂಗದಲ್ಲಿ ರಿಸಲ್ಟ್ ಸಿಗುತ್ತೆ" ಎಂಬ ಅರ್ಥದಲ್ಲಿ ಹೇಳಿಕೆ ಕೊಟ್ಟಿದ್ದರು. ಈ ಹೇಳಿಕೆಗೆ ಈಗ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವಿರೋಧ ವ್ಯಕ್ತವಾಗುತ್ತಿದೆ. ಕಾಸ್ಟಿಂಗ್ ಕೌಚ್ ವಿರುದ್ಧ ಕಿಡಿಕಾರುತ್ತಿರುವ ಗಾಯಕಿ ಚಿನ್ಮಯಿ ಶ್ರೀಪಾದ್ ಅಸಮಧಾನ ಹೊರ ಹಾಕಿದ್ದಾರೆ.
ಸೋಶಿಯಲ್ ಮೀಡಿಯಾದಲ್ಲಿ ಕೆಲವರು ಚಿರಂಜೀವಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಚಿತ್ರರಂಗದಲ್ಲಿರುವ ಶೋಷಣೆ, ಲೈಂಗಿಕ ದೌರ್ಜನ್ಯದಂತಹ ಗಂಭೀರ ವಿಷಯವನ್ನು ಚಿರಂಜೀವಿ ತಳ್ಳಿ ಹಾಕಿದ್ದಾರೆ. ಇದು ಸಂತ್ರಸ್ತೆಯನ್ನು ಹೊಣೆಗಾರರನ್ನಾಗಿ ಮಾಡುವ ಮನೋಭಾವ ಎಂದು ಕೆಲವು ಆಕ್ರೋಶವನ್ನು ಹೊರ ಹಾಕುತ್ತಿದ್ದಾರೆ. ಅಷ್ಟಕ್ಕೂ ಚಿರಂಜೀವಿ ಹೇಳಿಕೆ ಇಷ್ಟೊಂದು ಸದ್ದು ಮಾಡುವುದಕ್ಕೆ ಕಾರಣ ಅವರು ಕೊಟ್ಟ ಈ ಹೇಳಿಕೆ.
ಮೆಗಾಸ್ಟಾರ್ ಚಿರಂಜೀವಿ ಕಾಸ್ಟಿಂಗ್ ಕೌಚ್ ಬಗ್ಗೆ ಹೀಗೆ ಹೇಳಿದ್ದಾರೆ. " ಕೆಲಸ ಮಾಡುವುದಕ್ಕೆ ಚಿತ್ರರಂಗದಲ್ಲಿ ಒಳ್ಳೆಯ ವಾತಾವರಣವಿದೆ. ನಿಮ್ಮ ಕೆಲಸದಲ್ಲಿ ನೀವು ಕಟ್ಟು ನಿಟ್ಟಾಗಿದ್ದು, ಪ್ರಾಮಾಣಿಕವಾಗಿ ಕೆಲಸ ಮಾಡಿದರೆ, ಯಾರೂ ನಿಮ್ಮನ್ನು ದುರುಪಯೋಗ ಪಡಿಸಿಕೊಳ್ಳುವುದಕ್ಕೆ ಸಾಧ್ಯವಿಲ್ಲ. ತೆಲುಗು ಚಿತ್ರರಂಗದಲ್ಲಿ ಕಾಸ್ಟಿಂಗ್ ಕೌಚ್ ಸಂಸ್ಕೃತಿಯೇ ಇಲ್ಲ. ಅದು ಆಯಾ ವ್ಯಕ್ತಿಯ ಮೇಲೆ ಅವಲಂಭಿತವಾಗಿರುತ್ತೆ. ಸಿನಿಮಾ ಇಂಡಸ್ಟ್ರಿ ಒಂದು ಕನ್ನಡಿಯಂತೆ. ನೀವು ಹೇಗೆ ನಡೆದುಕೊಳ್ಳುತ್ತೀರೋ ಹಾಗೇ ಅದಕ್ಕೆ ಪ್ರತಿಫಲ ಸಿಗುತ್ತೆ." ಎಂದು ಹೇಳಿದ್ದಾರೆ.
ಚಿರಂಜೀವಿ ಕೊಟ್ಟ ಈ ಹೇಳಿಕೆಯನ್ನು ಗಾಯಕಿ ಚಿನ್ಮಯಿ ಶ್ರೀಪಾದ್ ವಿರೋಧ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಅವರ ಎಕ್ಸ್ ಖಾತೆಯಲ್ಲಿ ಬರೆದು ಪೋಸ್ಟ್ ಮಾಡಿದ್ದಾರೆ. " ಫಿಲ್ಮ್ ಇಂಡಸ್ಟ್ರಿಯಲ್ಲಿ ಕಾಸ್ಟಿಂಗ್ ಕೌಚ್ ಅನ್ನೋದು ವ್ಯಾಪಕವಾಗಿ ಹಬ್ಬಿದೆ. 'ಫುಲ್ ಕಮಿಟ್ಮೆಂಟ್' ಕೊಡದೇ ಹೋದರೆ ಅವರಿಗೆ ಅವಕಾಶಗಳು ಕೊಡುವುದಿಲ್ಲ. ಇದು ಚಿತ್ರರಂಗದಲ್ಲಿ ಹಲವು ಮಹಿಳೆಯರು ಎದುರಿಸುತ್ತಿರುವ ಕಟು ಸತ್ಯ. ಕಮಿಟ್ಮೆಂಟ್ ಅನ್ನೋ ಪದ ವೃತ್ತಿಪರತೆ ಎಂದು ತೋರುವುದಾದರೂ, ಸಿನಿಮಾ ಇಂಡಸ್ಟ್ರಿಯಲ್ಲಿ ಈ ಪದಕ್ಕೆ ಬೇರೆಯದ್ದೇ ಅರ್ಥವಿದೆ. ಇಂಗ್ಲಿಷ್ ಶಿಕ್ಷಣ ಪಡೆದವರು 'ಕಮಿಟ್ಮೆಂಟ್' ಪದವನ್ನು ಕೆಲಸದ ಮೇಲಿನ ನಿಷ್ಠೆ, ಸಮಯಪಾಲನೆ, ವೃತ್ತಿಪರತೆ ಎಂದು ಅರ್ಥ ಮಾಡಿಕೊಂಡರೆ, ಅದು ತಪ್ಪು. ಹಲವು ಮಂದಿ ಮಹಿಳೆಯರಿಗೆ ಕೆಲಸ ಕೊಟ್ಟು ಲೈಂಗಿಕ ಅನುಕೂಲವನ್ನು ಕೇಳುವುದು ದೊಡ್ಡ ಸಮಸ್ಯೆ" ಎಂದು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಗಾಯಕಿ ಚಿನ್ಮಯಿ ಶ್ರೀಪಾದ್ ಕಾಸ್ಟಿಂಗ್ ಕೌಚ್ ಬಗ್ಗೆ ಧ್ವನಿ ಎತ್ತುತ್ತಿರೋದು ಇದೇ ಮೊದಲೇನು ಅಲ್ಲ. ಈ ಹಿಂದೆ ಹಲವು ಬಾರಿ ಕಾಸ್ಟಿಂಗ್ ಕೌಚ್ ಬಗ್ಗೆ ಮಾತಾಡಿದ್ದಾರೆ. ಅಲ್ಲದೆ, ಮೀಟೂ ಅಭಿಯಾನ ಶುರುವಾದಾಗಲೂ ಧ್ವನಿ ಎತ್ತಿದ್ದರು. ತಮಿಳಿನ ಹಿರಿಯ ಸಿನಿ ಸಾಹಿತಿ ವೈರಮುತ್ತುವನ್ನು ಎದುರು ಹಾಕಿಕೊಂಡಿದ್ದರು. ಇಂದಿಗೂ ಅವರನ್ನು ವಿರೋಧಿಸುತ್ತಲೇ ಇದ್ದಾರೆ. ಚಿರಂಜೀವಿ ಹೇಳಿಕೆ ವಿರೋಧಿಸುವ ವೇಳೆನೂ ವೈರಮುತ್ತು ಹೆಸರನ್ನು ತೆಗೆದುಕೊಂಡಿದ್ದಾರೆ.


Click it and Unblock the Notifications











