'ಮನ ಶಂಕರ ವರಪ್ರಸಾದ ಗಾರು' ಸಿನಿಮಾ ನೋಡುವಾಗಲೇ ಕುಸಿದು ಬಿದ್ದ ಅಭಿಮಾನಿ; ಕುಟುಂಬಕ್ಕೆ ಸಂತಾಪ
ಮೆಗಾಸ್ಟಾರ್ ಚಿರಂಜೀವಿ ನಟನೆಯ 'ಮನ ಶಂಕರ ವರಪ್ರಸಾದ ಗಾರು' ಸಿನಿಮಾ ರಿಲೀಸ್ ಆಗಿದೆ. ಮೊದಲ ದಿನವೇ ಈ ಸಿನಿಮಾಗೆ ಅದ್ಭುತ ರೆಸ್ಪಾನ್ಸ್ ಸಿಕ್ಕು ಮುನ್ನುತ್ತಿದೆ. ಚಿರಂಜೀವಿ ಯಂಗ್ ಅಂಡ್ ಎನರ್ಜೆಟಿಕ್ ಲುಕ್ ಅವರ ಅಭಿಮಾನಿಗಳಿಗೆ ಕಿಕ್ ಕೊಡುತ್ತಿದೆ. ಸುಗ್ಗಿ ಹಬ್ಬ ಸಂಕ್ರಾಂತಿಗೆ ತಮ್ಮ ಅಭಿಮಾನಿಗಳಿಗೆ ಉಡುಗೊರೆಯನ್ನಾಗಿ ನೀಡಿದ್ದಾರೆ. ಹೀಗಾಗಿ ಫ್ಯಾನ್ಸ್ ಸಿನಿಮಾ ನೋಡಿ ಹುಚ್ಚೆದ್ದು ಕುಣಿಯುತ್ತಿದ್ದಾರೆ.
ಚಿರಂಜೀವಿ ಹೊಚ್ಚ ಹೊಸ ಸಿನಿಮಾ 'ಮನ ಶಂಕರ ವರ ಪ್ರಸಾದ್ ಗಾರು' ಭಾನುವಾರ ರಾತ್ರಿಯೇ ಪೇಯ್ಡ್ ಪ್ರೀಮಿಯರ್ ಶೋ ನಡೆದಿದೆ. ಭಾನುವಾರದಿಂದಲೇ ಅಭಿಮಾನಿಗಳು ಸಿನಿಮಾವನ್ನು ವೀಕ್ಷಿಸಿ ಥ್ರಿಲ್ ಆಗಿದ್ದಾರೆ. ಅನಿಲ್ ರಾವಿಪುಡಿ ನಿರ್ದೇಶನದ ಈ ಸಿನಿಮಾ ಮೊದಲ ದಿನ ಸಿಕ್ಕಿದ ರೆಸ್ಪಾನ್ಸ್ಗೆ ಬ್ಲಾಕ್ಬಸ್ಟರ್ ಲಿಸ್ಟ್ ಸೇರೋದು ಫಿಕ್ಸ್ ಎಂದು ಟ್ರೇಡ್ ಎಕ್ಸ್ಪರ್ಟ್ಗಳು ಭವಿಷ್ಯ ನುಡಿದಿದ್ದಾರೆ.

'ಮನ ಶಂಕರ ವರಪ್ರಸಾದ ಗಾರು' ಸಿನಿಮಾವನ್ನು ಸಂಭ್ರಮದಿಂದ ಅಭಿಮಾನಿಗಳು ವೀಕ್ಷಿಸುತ್ತಿದ್ದಾರೆ. ಈ ವೇಳೆ ಹೈದರಾಬಾದ್ನಲ್ಲಿ ಒಂದು ದುರದೃಷ್ಟಕರ ಘಟನೆ ನಡೆದಿದೆ. ಇದು ಸಿನಿಮಾ ತಂಡ ಹಾಗೂ ಅಭಿಮಾನಿ ವಲಯದಲ್ಲಿ ಬೇಸರದ ವಾತಾರಣ ಮೂಡಿದೆ. ಸಿನಿಮಾ ನೋಡುತ್ತಿರುವಾಗಲೇ ಅಭಿಮಾನಿಯೊಬ್ಬರು ಕೊನೆಯುಸಿರೆಳೆದಿದ್ದಾರೆ. ಹಾಗಿದ್ದರೆ, ಹೈದರಾಬಾದ್ನ ಚಿತ್ರಮಂದಿರದಲ್ಲಿ ನಡೆದ ಘಟನೆ ಏನು? ಆ ವ್ಯಕ್ತಿ ಯಾರು? ತಿಳಿಯುವುದಕ್ಕೆ ಮುಂದೆ ಓದಿ.
ಹೈದರಾಬಾದ್ನ ಕೂಕಟ್ಪಲ್ಲಿಯ ಅರ್ಜುನ್ ಥಿಯೇಟರ್ನಲ್ಲಿ ಮೆಗಾಸ್ಟಾರ್ ಅಭಿಮಾನಿಯೊಬ್ಬರು ಸಿನಿಮಾ ವೀಕ್ಷಿಸುತ್ತಿರುವಾಗ ತೀವ್ರ ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ. ಅಂದ್ಹಾಗೆ, ಚಿತ್ರಮಂದಿರದಲ್ಲಿ ಕೊನೆಯುಸಿರೆಳೆದ ಈ ಅಭಿಮಾನಿಯನ್ನು ಆನಂದ್ ಕುಮಾರ್ ಎಂದು ಗುರುತಿಸಲಾಗಿದೆ. ಮೃತರನ್ನು ಆನಂದ್ ಕುಮಾರ್ ಎಂದು ಹೇಳಲಾಗಿದ್ದು, ನಿವೃತ್ತ ಎಎಸ್ಐ ಎಂದು ಹೇಳಲಾಗಿದೆ.
ಹೈದರಾಬಾದ್ ಪೊಲೀಸರ ಮಾಹಿತಿ ಪ್ರಕಾರ, ಆನಂದ್ ಕುಮಾರ್ ಮೆಗಾಸ್ಟಾರ್ ಚಿರಂಜೀವಿ ಅವರ ಅಪ್ಪಟ ಅಭಿಮಾನಿಯಾಗಿದ್ದರು. ಸಿನಿಮಾ ರಿಲೀಸ್ ಆದ ಮೊದಲ ದಿನ ಅಂದರೆ, ಸೋಮವಾರ ಬೆಳಗ್ಗೆ 11:30ರ ಶೋಗೆ 'ಮನ ಶಂಕರ ವರಪ್ರಸಾದ ಗಾರು' ನೋಡುವುದಕ್ಕೆ ಬಂದಿದ್ದರು. ಈ ವೇಳೆ ಸಿನಿಮಾ ನೋಡುತ್ತಿರುವಾಗಲೇ ಅವರು ತಮ್ಮ ಸೀಟಿನಲ್ಲೇ ಕುಸಿದು ಬಿದ್ದಿದ್ದರು. ತಕ್ಷಣ ಪಕ್ಕದಲ್ಲಿ ಇದ್ದ ಪ್ರೇಕ್ಷಕರು ಚಿತ್ರಮಂದಿರದ ಸಿಬ್ಬಂದಿಗೆ ಮಾಹಿತಿಯನ್ನು ನೀಡಿದ್ದರು.
ಚಿರಂಜೀವಿ ಅಭಿಮಾನಿ ಆನಂದ್ ಕುಮಾರ್ ಅವರನ್ನು ಕೂಡಲೇ ಸಮೀಪದ ಆಸ್ಪತ್ರೆಗೆ ದಾಖಲಿಸಿದರು. ಆದರೆ, ಅವರು ಆಸ್ಪತ್ರೆ ತಲುಪುವ ಮುನ್ನವೇ ಮೃತಪಟ್ಟಿದ್ದಾಗಿ ವೈದ್ಯರು ದೃಢಪಡಿಸಿದ್ದಾರೆ. ಪ್ರಾಥಮಿಕ ಹಂತದಲ್ಲಿ ತೀವ್ರ ಹೃದಯಾಘಾತದಿಂದಲೇ ಸಾವನ್ನಪ್ಪಿದ್ದಾರೆಂದು ವೈದ್ಯರು ತಿಳಿಸಿದ್ದಾಗಿ ವರದಿಯಾಗಿದೆ. ಚಿರಂಜೀವಿ ಬಗ್ಗೆ ಅಪಾರ ಅಭಿಮಾನ ಇಟ್ಟುಕೊಂಡಿದ್ದ ಆನಂದ್ ಕುಮಾರ್ ಅವರ ಸಿನಿಮಾ ನೋಡುವಾಗಲೇ ಸಾವನ್ನಪ್ಪಿದ್ದು, ಕುಟುಂಬ ಶೋಕಸಾಗರದಲ್ಲಿ ಮುಳುಗಿದೆ.
ಹೈದರಾಬಾದ್ನ ಕೂಕಟ್ಪಲ್ಲಿ ಪೊಲೀಸರು ಥಿಯೇಟರ್ಗೆ ಭೇಟಿ ಕೊಟ್ಟು ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಅಭಿಮಾನಿಯ ಸಾವಿನ ನಿಖರ ಕಾರಣ ಪತ್ತೆ ಹಚ್ಚುವುದಕ್ಕೆ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ. 'ಮನ ಶಂಕರ ವರಪ್ರಸಾದ ಗಾರು' ಸಿನಿಮಾ ಯಶಸ್ವಿಯಾಗಿ ಪ್ರದರ್ಶನಗೊಳ್ಳುತ್ತಿದ್ದರೂ, ಈ ದುರಂತವು ಅಭಿಮಾನಿಗಳಲ್ಲಿ ತೀವ್ರ ಬೇಸರ ಮೂಡಿಸಿದೆ. ಸೋಶಿಯಲ್ ಮೀಡಿಯಾದಲ್ಲೂ ಚಿರಂಜೀವಿ ಅಭಿಮಾನಿ ಸಾವಿಗೆ ಸಂತಾಪ ಸೂಚಿಸುತ್ತಿದ್ದಾರೆ.
ಇನ್ನು ಮೆಗಾಸ್ಟಾರ್ ಚಿರಂಜೀವಿ ಸಿನಿಮಾ 'ಮನ ಶಂಕರ ವರಪ್ರಸಾದ ಗಾರು' ಬಾಕ್ಸಾಫೀಸ್ನಲ್ಲಿ ಜೋರಾಗಿ ಸದ್ದು ಮಾಡುತ್ತಿದೆ. ಪೇಯ್ಡ್ ಪ್ರೀಮಿಯರ್ಗೆ ಅದ್ಭುತ ರೆಸ್ಪಾನ್ಸ್ ಸಿಕ್ಕಿದ್ದು, ಮೊದಲ ದಿನವೇ ಸುಮಾರು ₹28 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿದೆ.


Click it and Unblock the Notifications











