ಆಂಧ್ರ ಸಿಎಂ ಭೇಟಿಯಾದ ಮೆಗಾಸ್ಟಾರ್ ಚಿರಂಜೀವಿ: ಸಿನಿಮಾ ಟಿಕೆಟ್ ಸಮಸ್ಯೆ ಕಥೆ ಏನಾಯ್ತು?
ಆಂಧ್ರ ಪ್ರದೇಶ ಸರ್ಕಾರ ಹಾಗೂ ತೆಲುಗು ಚಿತ್ರರಂಗದ ಮಧ್ಯೆ ಹಲವು ದಿನಗಳಿಂದ ಟಿಕೆಟ್ ದರ ಇಳಿಕೆ ಬಗ್ಗೆ ಕಿತ್ತಾಟ ನಡೆಯುತ್ತಲೇ ಇದೆ. ಜಗನ್ ನೇತೃತ್ವದ ಸರ್ಕಾರ ಸಿನಿಮಾ ಟಿಕೆಟ್ ಬೆಲೆಯನ್ನು ಗಣನೀಯವಾಗಿ ಇಳಿಕೆ ಮಾಡಿತ್ತು. ಹೀಗಾಗಿ ತೆಲುಗು ಚಿತ್ರರಂಗದ ಹಲವು ಗಣ್ಯರು ತಿರುಗಿಬಿದ್ದಿದ್ದರು. ಈ ಸಂಬಂಧ ಚಿತ್ರರಂಗದ ಪರವಾಗಿ ಮೆಗಾಸ್ಟಾರ್ ಚಿರಂಜೀವಿ ಆಂಧ್ರ ಸಿಎಂ ವೈ ಎಸ್ ಜಗನ್ ಮೋಹನ್ ರೆಡ್ಡಿಯನ್ನು ಭೇಟಿ ಮಾಡುತ್ತಾರೆ ಎನ್ನಲಾಗುತ್ತಿತ್ತು. ಊಹೆಯಂತೆಯೇ ಇಂದು ( ಜನವರಿ 13) ಚಿರಂಜೀವಿ ಸಿಎಂ ಜಗನ್ರನ್ನು ಭೇಟಿ ಮಾಡಿದ್ದಾರೆ.
ಮೆಗಾಸ್ಟಾರ್ ಚಿರಂಜೀವಿ ಮಧ್ಯಾಹ್ನದ ವೇಳೆ ಅಮರಾವತಿಯ ತಡೆಪಲ್ಲಿಯಲ್ಲಿರುವ ಸಿಎಂ ಜಗನ್ ಮೋಹನ್ ರೆಡ್ಡಿ ನಿವಾಸಕ್ಕೆ ಭೇಟಿ ನೀಡಿದ್ದರು. ಈ ವೇಳೆ ಜಗನ್ ಹಾಗೂ ಚಿರಂಜೀವಿ ನಡುವೆ ತೆಲುಗು ಸಿನಿಮಾಗಳ ಟಿಕೆಟ್ ದರ ಇಳಿಕೆ ಬಗ್ಗೆ ಚರ್ಚೆ ಮಾಡಲಾಗಿದೆ ಎನ್ನುವ ಮಾತುಗಳು ಕೇಳಿ ಬಂದಿವೆ.

ಚಿರುಗೆ ಆಹ್ವಾನ ನೀಡಿದ ಜಗನ್
ಆಂಧ್ರ ಪ್ರದೇಶದ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ತೆಲುಗು ಚಿತ್ರರಂಗದ ಮೇರು ನಟ ಚಿರಂಜೀವಿಗೆ ಮನೆಗೆ ಬರುವಂತೆ ಆಹ್ವಾನ ನೀಡಿದ್ದರು. ಅವರ ಆಹ್ವಾನದ ಮೇರೆಗೆ ಚಿರಂಜೀವಿ ಇಂದು ಅಮರಾವತಿಗೆ ಭೇಟಿ ನೀಡಿದ್ದರು. ಈ ವೇಳೆ ಚಿರು ಸಿಎಂ ಜಗನ್ಗೆ ಶಾಲು ಹೊದಿಸಿ, ಹೂಗುಚ್ಚ ನೀಡಿ ಗೌರವಿಸಿದ್ದಾರೆ. ಸಿನಿಮಾ ಟಿಕೆಟ್ ದರವನ್ನು ಕಡಿತಗೊಳಿಸಿದ್ದರಿಂದ ಚಿತ್ರರಂಗ ನಷ್ಟದಲ್ಲಿದೆ. ಅಲ್ಲದೆ ಹಲವು ಚಿತ್ರಮಂದಿರಗಳು ಈಗಾಗಲೇ ಬಾಗಿಲು ಮುಚ್ಚಿವೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಚಿರಂಜೀವಿ ಆಂಧ್ರ ಸಿಎಂ ಜೊತೆ ಚರ್ಚೆ ಮಾಡಲಿದ್ದಾರೆ.

ಸಿಎಂ ಜೊತೆ ಚಿರು ಊಟ
ಮೆಗಾಸ್ಟಾರ್ ಚಿರಂಜೀವಿಯನ್ನು ಆಂಧ್ರ ಸಿಎಂ ಜಗನ್ ಮೋಹನ್ ರೆಡ್ಡಿ ಊಟಕ್ಕೆ ಆಹ್ವಾನಿದ್ದರು. ಇದೇ ವೇಳೆ ಸರ್ಕಾರ ಟಿಕೆಟ್ ದರ ಇಳಿಸಿದ್ದರಿಂದ ಏನೆಲ್ಲಾ ಸಮಸ್ಯೆಗಳಾಗಿವೆ ಎಂಬುದನ್ನು ಮನವರಿಕೆ ಮಾಡಿಕೊಡುವ ಪ್ರಯತ್ನ ಮಾಡಿದ್ದಾರೆ ಎನ್ನಲಾಗಿದೆ. ಲಾಕ್ಡೌನ್ನಿಂದ ಚಿತ್ರರಂಗಕ್ಕೆ ಆಗಿರುವ ನಷ್ಟದ ಬಗ್ಗೆನೂ ಚಿರಂಜೀವಿ ಸಿಎಂ ಜಗನ್ ಜೊತೆ ಚರ್ಚೆ ಮಾಡಿದ್ದಾರೆ ಎನ್ನುವ ಮಾತು ಕೇಳಿಬರುತ್ತಿದೆ.

ಸಿಎಂಗೆ ಚಿರಂಜೀವಿ ಪ್ರೆಸೆಂಟೇಷನ್
ಟಿಕೆಟ್ ದರ ಕಡಿತಗೊಳಿಸಿರುವುದರಿಂದ ತೆಲುಗು ಸಿನಿಮಾಗಳ ಮೇಲೆ ಏನೇನು ಪರಿಣಾಮ ಬೀರಿದೆ. ಬಿಗ್ ಬಜೆಟ್ ಸಿನಿಮಾಗಳಿಗೆ ಹಾಗೂ ಸ್ಮಾಲ್ ಬಜೆಟ್ ಸಿನಿಮಾಗಳಿಗೆ ಒಂದೇ ರೀತಿಯ ದರ ನಿಗದಿ ಮಾಡಿರುವುದರಿಂದ ಏನೆಲ್ಲಾ ಸಮಸ್ಯೆಗಳು ಆಗುತ್ತಿವೆ ಎಂಬುದನ್ನು ಸಿಎಂ ಮುಂದೆ ಪ್ರೆಸೆಂಟ್ ನೀಡಿದ್ದಾರೆ ಎಂದು ಆಂಧ್ರ ಮಾಧ್ಯಮಗಳು ವರದಿ ಮಾಡಿವೆ. ಈ ಮೂಲಕ ಆಂಧ್ರ ಸರ್ಕಾರ ಟಿಕೆಟ್ ದರ ಕಡಿತಗೊಳಿಸುವ ಯೋಜನೆಯನ್ನು ಕೈ ಬಿಡಲಿದೆ ಎಂಬ ಆಶಾಭಾವನೆ ವ್ಯಕ್ತವಾಗುತ್ತಿದೆ.

2ನೇ ಬಾರಿ ಚಿರು-ಸಿಎಂ ಭೇಟಿ
ತೆಲುಗಿನ ಮೆಗಾ ಸ್ಟಾರ್ ಚಿರಂಜೀವಿ ಹಾಗೂ ಸಿಎಂ ಜಗನ್ ಮೋಹನ್ ರೆಡ್ಡಿ ಭೇಟಿಯಾಗುತ್ತಿರುವುದು ಇದು ಎರಡನೇ ಬಾರಿ. ಈ ಹಿಂದೆ ಜಗನ್ ಮುಖ್ಯಮಂತ್ರಿಯಾದಾಗ ಚಿರಂಜೀವಿ ಭೇಟಿ ಮಾಡಿದ್ದರು. ಅಲ್ಲಿಂದ ಮತ್ತೆಂದೂ ಚಿರು ಹಾಗೂ ಜಗನ್ ಇಬ್ಬರೂ ಭೇಟಿಯಾಗಿರಲಿಲ್ಲ. ಈಗ ಟಿಕೆಟ್ ದರ ಕಡಿತ ಸಮಸ್ಯೆ ಬಗ್ಗೆ ಭೇಟಿ ಮಾಡಿ ಚರ್ಚೆ ಮಾಡಿದ್ದಾರೆ.


Click it and Unblock the Notifications











