ಚಿರಂಜೀವಿ, ಪ್ರಭಾಸ್, ರವಿತೇಜಾ, ಶರ್ವಾನಂದ್, ನವೀನ್ ಪೊಲಿಶೆಟ್ಟಿ; ಇವರಲ್ಲಿ ಸಂಕ್ರಾಂತಿ ಗೆದ್ದವರು ಯಾರು?
ತೆಲುಗು ಚಿತ್ರರಂಗದಲ್ಲಿ ಸಂಕ್ರಾಂತಿ ಬಂತೆಂದರೆ ಬಾಕ್ಸಾಫೀಸ್ನಲ್ಲಿ ಕೇವಲ ಪೈಪೋಟಿ ಅಷ್ಟೇ ಅಲ್ಲ, ಸೂಪರ್ಸ್ಟಾರ್ಗಳ ಅಭಿಮಾನಿಗಳ ನಡುವೆಯೂ ತೀವ್ರ ಪೈಪೋಟಿ ನೋಡುವುದಕ್ಕೆ ಸಿಗುತ್ತೆ. ಸೋಶಿಯಲ್ ಮೀಡಿಯಾಗಳಲ್ಲಿ ಟ್ರೋಲಿಂಗ್ ಮಾಡುವುದರಿಂದ ಹಿಡಿದು ಹೀರೋಗಳನ್ನು ಟೀಕೆ ಮಾಡುವುದರವರೆಗೂ ಬಂದು ನಿಲ್ಲುತ್ತದೆ. ಈ ನಡುವೆ ಇಂತಹ ಘಟನೆಗಳು ಹೆಚ್ಚಾಗಿವೆ.
ಈ ಬಾರಿಯ ಸಂಕ್ರಾಂತಿಗೂ ದೊಡ್ಡ ಬಜೆಟ್ ಹಾಗೂ ಯುವ ನಟರು ಸೇರಿ ಐದು ಸಿನಿಮಾಗಳು ರಿಲೀಸ್ ಆಗಿವೆ. ಹಬ್ಬದ ಮೂಡಿನಲ್ಲಿ ಬಾಕ್ಸಾಫೀಸ್ ಅಖಾಡಕ್ಕೆ ಇಳಿದಿದ್ದವು. ಈ ಸಿನಿಮಾಗಳಲ್ಲಿ ಯಾವುದು ಹೆಚ್ಚು ಯಶಸ್ಸು ಗಳಿಸಿದೆ ಎಂಬುದರ ವಿವರ ಇಲ್ಲಿದೆ.

ಸಂಕ್ರಾಂತಿ ರೇಸ್ನಲ್ಲಿ ಮೊದಲು ಬಂದ ಪ್ರಭಾಸ್ ಅಭಿನಯದ 'ದಿ ರಾಜಾಸಾಬ್' ಸುಮಾರು ₹400 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿತ್ತು. ಕಾಮಿಡಿ ಹಾಗೂ ಹಾರರ್ ಜಾನರ್ನಲ್ಲಿ ಪ್ರಭಾಸ್ ನೋಡುವುದಕ್ಕೆ ಜನರು ಉತ್ಸುಕರಾಗಿದ್ದರು. ನಿರೀಕ್ಷೆಯಂತೆ ಜನವರಿ 9ಕ್ಕೆ ಬಿಡುಗಡೆಯಾಗಿತ್ತು. ಆದರೆ, ಫಸ್ಟ್ ಡೇ ಫಸ್ಟ್ ಶೋನೇ ಈ ಸಿನಿಮಾಗೆ ಪ್ರೇಕ್ಷಕರು, ಅಭಿಮಾನಿಗಳು ಹಾಗೂ ವಿಮರ್ಶಕರಿಂದ ನಕಾರಾತ್ಮಕ ಪ್ರತಿಕ್ರಿಯೆ ಸಿಕ್ಕಿತು. ಇದು ಸಿನಿಮಾ ಗಳಿಕೆ ಮೇಲೆ ಪ್ರತಿಕೂಲ ಪರಿಣಾಮ ಬೀರಿದೆ ಎಂದು ಟ್ರೇಡ್ ಎಕ್ಸ್ಪರ್ಟ್ಗಳು ಅಭಿಪ್ರಾಯ ಪಡುತ್ತಿದ್ದಾರೆ.
ಸಂಕ್ರಾಂತಿ ಹಬ್ಬಕ್ಕೆ ರಿಲೀಸ್ ಆದ ಎರಡನೇ ಸಿನಿಮಾ ಚಿರಂಜೀವಿ ನಟನೆಯ 'ಮನ ಶಂಕರ ವರಪ್ರಸಾದ್ ಗಾರು'. ಅನಿಲ್ ರವಿಪುಡಿ ನಿರ್ದೇಶನದ ಈ ಸಿನಿಮಾವನ್ನು ಚಿರಂಜೀವಿ ಪುತ್ರಿ ಸುಶ್ಮಿತಾ ಹಾಗೂ ಯುವ ನಿರ್ಮಾಪಕ ಸಾಹು ಗಾರಾಪತಿ ನಿರ್ಮಿಸಿದ್ದಾರೆ. ಫಸ್ಟ್ ಡೇ ಫಸ್ಟ್ ಶೋ ಬಳಿಕ ಈ ಸಿನಿಮಾ ಪಾಸಿಟಿವ್ ರೆಸ್ಪಾನ್ಸ್ ಪಡೆದುಕೊಂಡಿತ್ತು. ಪ್ರೇಕ್ಷಕರ ಬಾರಿಯಲ್ಲಿ ಸೂಪರ್ ಹಿಟ್ ಅನ್ನೋ ಮಾತುಗಳು ಕೇಳಿ ಬಂದಿದ್ದವು. ಚಿರಂಜೀವಿ, ನಯನತಾರಾ ಹಾಗೂ ವೆಂಕಟೇಶ್ ನಟನೆಯ ಸಿನಿಮಾ ಬಾಕ್ಸಾಫೀಸ್ನಲ್ಲಿ ಉತ್ತಮ ಗಳಿಕೆ ಮಾಡುತ್ತಿದೆ ಎಂದು ವಿತರಕರ ವಲಯ ವರದಿ ನೀಡಿದ್ದಾರೆ.
ಸುಗ್ಗಿ ಹಬ್ಬಕ್ಕೆ ಸೇರ್ಪಡೆಯಾಗಿರುವ ಮೂರನೇ ಸಿನಿಮಾ ರವಿತೇಜ ನಟನೆಯ 'ಭರ್ತ ಮಹಾಶಯುಲಕು ವಿಜ್ಞಾಪತಿ'. ಟಾಲಿವುಡ್ನ ಮಾಸ್ ಮಹಾರಾಜ ಕೂಡ ಬಾಕ್ಸಾಫೀಸ್ ಸಮರಕ್ಕೆ ಸೇರಿಕೊಂಡಿದ್ದರು. ಇದರಲ್ಲಿ ರವಿ ತೇಜಾ ಜೊತೆ ಡಿಂಪಲ್ ಹಯಾತಿ, ಆಶಿಕಾ ರಂಗನಾಥ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಈ ಸಿನಿಮಾವನ್ನು ಕಿಶೋರ್ ತಿರುಮಲ ನಿರ್ದೇಶನ ಮಾಡಿದ್ದಾರೆ. ಇದನ್ನು ಸುಧಾಕರ್ ಚೆರುಕೂರಿ ನಿರ್ಮಿಸಿದ್ದಾರೆ. ಅದೇ ಮಾಮೂಲಿ ಕಥೆ ಇದ್ದಿದ್ದರಿಂದ ಪ್ರೇಕ್ಷಕರನ್ನು ಮೆಚ್ಚಿಸಲು ವಿಫಲವಾಗಿದೆ.
ಸಂಕ್ರಾಂತಿ ಅಖಾಡದಲ್ಲಿ ಮೊದಲಿನಿಂದಲೂ ನಿರೀಕ್ಷೆ ಹೆಚ್ಚಿಸಿದ್ದ ಸಿನಿಮಾ 'ಅನಗನಗಾ ಓಕ ರಾಜು'. ನವೀನ್ ಪೊಲಿಶೆಟ್ಟಿ, ಮೀನಾಕ್ಷಿ ಚೌಧರಿ ಪ್ರಮುಖ ಪಾತ್ರದಲ್ಲಿ ನಟಿಸಿರುವ ಈ ಸಿನಿಮಾ ಆರಂಭದಲ್ಲಿ ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂದೇ ಭಾವಿಸಲಾಗಿತ್ತು. ಆದರೆ, ರಿಲೀಸ್ ಬಳಿಕ ಸಂಕ್ರಾಂತಿ ಹಬ್ಬಕ್ಕೆ ಸೂಕ್ತವಾದ ಸಿನಿಮಾ ಎಂಬ ಅಭಿಪ್ರಾಯ ವ್ಯಕ್ತವಾಗಿತ್ತು. ಸಿನಿಮಾ ತಂಡಕ್ಕೆ ಮಾಡಿದ ಪ್ರಚಾರಕ್ಕೆ ಉತ್ತಮ ಪ್ರತಿಕ್ರಿಯೆ ಸಿಕ್ಕಿತ್ತು. ಹೀಗಾಗಿ ಸಿನಿಮಾಗೆ ಒಳ್ಳೆಯ ಓಪನಿಂಗ್ ಸಿಕ್ಕಿತ್ತು. ಈ ಸಿನಿಮಾದ ಕಂಟೆಂಟ್ ಅಷ್ಟಕ್ಕಷ್ಟೇ ಎಂಬ ಅಭಿಪ್ರಾಯ ವ್ಯಕ್ತವಾಗಿದ್ದರೂ, ಗಳಿಕೆಯಲ್ಲಿ ಉತ್ತಮ ಪ್ರದರ್ಶನ ಕಂಡಿದೆ.
ಇನ್ನೂ ಶರ್ವಾನಂದ್ ನಟನೆಯ 'ನಾರಿ ನಾರಿ ನಡುವ ಮುರಾರಿ' ಕೂಡ ರಿಲೀಸ್ ಆಗಿದೆ. ಇಷ್ಟೊಂದು ಸಿನಿಮಾಗಳು ಇರುವಾಗ ಇದು ರಿಲೀಸ್ ಆಗೋದು ಬೇಡ ಎಂದೇ ಭಾವಿಸಲಾಗಿತ್ತು. ಸತತ ಫ್ಲಾಪ್ಗಳ ನಂತರ ಶರ್ವಾನಂದ್ಗೆ ಇದು ನಿರ್ಣಾಯಕವಾಗಿತ್ತು. ರಾಮ್ ಅಬ್ಬರಾಜು ನಿರ್ದೇಶನದ ಈ ಸಿನಿಮಾದ ಪ್ರಚಾರ ಕೂಡ ಸರಿಯಾಗಿ ಮಾಡಿರಲಿಲ್ಲ. ಆದರೆ, ಸಿನಿಮಾದ ಕಂಟೆಂಟ್ ಮೆಚ್ಚುಗೆ ಗಳಿಸಿದೆ. ಆದರೆ, ಪಾಸಿಟಿವ್ ಟಾಕ್ ಇದ್ದರೂ, ಬಾಕ್ಸಾಫೀಸ್ ಗೆಲ್ಲುವುದು ದೊಡ್ಡ ಸವಾಲು ಎನ್ನಲಾಗಿದೆ.
ಸಂಕ್ರಾಂತಿ ರೇಸ್ನಲ್ಲಿದ್ದ ಐದು ಸಿನಿಮಾಗಳಲ್ಲಿ, ದೊಡ್ಡ ಮಟ್ಟದಲ್ಲಿ ಯಶಸ್ಸು ಗಳಿಸಿರೊದು ಮೆಗಾಸ್ಟಾರ್ ಚಿರಂಜೀವಿ ನಟನೆಯ 'ಮನ ಶಂಕರ ವರಪ್ರಸಾದ್ ಗಾರು'. ಇದು ಕಂಟೆಂಟ್ ಹಾಗೂ ಕಲೆಕ್ಷನ್ ಎರಡರಲ್ಲೂ ಯಶಸ್ಸು ಗಳಿಸಿದೆ. 'ನಾರಿ ನಾರಿ ನಡುವ ಮುರಾರಿ' ಕಂಟೆಂಟ್ನಲ್ಲಿ ಯಶಸ್ವಿಯಾದರೂ ಗಳಿಕೆಯಲ್ಲಿ ಹಿಂದೆ ಬಿದ್ದಿದೆ. ಇನ್ನು 'ಅನಗನಗಾ ಓಕ ರಾಜು' ಕಂಟೆಂಟ್ ಏನೂ ಇಲ್ಲದೆ ಇದ್ದರೂ, ಗಳಿಕೆ ಮಾತ್ರ ಉತ್ತಮವಾಗಿದೆ. 'ದಿ ರಾಜಾಸಾಬ್' ಮತ್ತು 'ಭರ್ತ ಮಹಾಶಯುಲಕು ವಿಜ್ಞಾಪತಿ' ಸಿನಿಮಾಗಳು ಬಾಕ್ಸಾಫೀಸ್ ರೇಸ್ನಿಂದ ಬಹುತೇಕ ಹೊರಬಿದ್ದಿವೆ ಎನ್ನುತ್ತಿದ್ದಾರೆ ಟ್ರೇಡ್ ಎಕ್ಸ್ಪರ್ಟ್ಗಳು.


Click it and Unblock the Notifications











