ಟಾಲಿವುಡ್ ನಟ ಕೃಷ್ಣಂ ರಾಜು ನಿಧನ ಹಿನ್ನೆಲೆ: ಪ್ರಭಾಸ್ ಭೇಟಿ ಮಾಡಿದ ರಕ್ಷಣ ಸಚಿವ!
ರಕ್ಷಣಾ ಸಚಿವ ರಾಜನಾಥ್ ಸಿಂಗ್ ಇತ್ತೀಚೆಗೆ ನಿಧನರಾಗಿರೋ ಟಾಲಿವುಡ್ ಹಿರಿಯ ನಟ ಕೃಷ್ಣಂ ರಾಜು ಅವರ ಕುಟುಂಬವನ್ನು ಭೇಟಿ ಮಾಡಿದ್ದಾರೆ. ಹೈದರಾಬಾದ್ಗೆ ಬಂದಿಳಿದ ರಕ್ಷಣಾ ಸಚಿವ ಕೃಷ್ಣಂ ರಾಜು ಅವರ ಕುಟುಂಬ ಹಾಗೂ ಪ್ರಭಾಸ್ಗೆ ಸಂತ್ವಾನ ಹೇಳಿದ್ದಾರೆ.
ಈ ವಿಷಯವನ್ನು ಸ್ವತ: ರಾಜನಾಥ್ ಸಿಂಗ್ ಅವರೇ ತಮ್ಮ ಟ್ವಿಟರ್ ಖಾತೆ ಮೂಲಕ ಸ್ಪಷ್ಟಪಡಿಸಿದ್ದಾರೆ. ಅಲ್ಲದೆ ಪ್ರಭಾಸ್ ಹಾಗೂ ಕೃಷ್ಣಂ ರಾಜು ಕುಟುಂಬವನ್ನು ಭೇಟಿ ಮಾಡಿ ಸಂತ್ವಾನ ಹೇಳಿದ ಫೋಟೊಗಳನ್ನು ಶೇರ್ ಕೂಡ ಮಾಡಿಕೊಂಡಿದ್ದಾರೆ.

" ನಾನು ಪ್ರಭಾಸ್ ಅವರನ್ನು ಹಾಗೂ ನಮ್ಮನ್ನು ಅಗಲಿದ ಕೃಷ್ಣಂ ರಾಜು ಅವರ ಕುಟುಂಬದ ಎಲ್ಲಾ ಸದಸ್ಯರನ್ನು ಇಂದು ಹೈದರಾಬಾದ್ನಲ್ಲಿ ಭೇಟಿ ಮಾಡಿದೆ. ಈ ವೇಳೆ ಮೃತರ ಕುಟುಂಬಕ್ಕೆ ನನ್ನ ಸಂತಾಪ ಸೂಚಿಸಿದ್ದೇನೆ. ಆ ದೇವರು ದು:ಖವನ್ನು ಭರಿಸುವ ಶಕ್ತಿ ನೀಡಲಿ." ಎಂದು ರಕ್ಷಣಾ ಸಚಿವಾ ರಾಜ್ನಾಥ್ ಸಿಂಗ್ ಟ್ವೀಟ್ ಮಾಡಿದ್ದಾರೆ.
ಕೃಷ್ಣಂ ರಾಜು ಅವರ ಪತ್ನಿ ಶ್ಯಾಮಲಾದೇವಿ, ಅವರ ಹೆಣ್ಣು ಮಕ್ಕಳು ಮತ್ತು ಪ್ರಭಾಸ್ ಅವರಿಗೆ ರಕ್ಷಣಾ ಸಚಿವರು ತಮ್ಮ ಸಂತಾಪಗಳು ಸೂಚಿಸಿದ್ದಾರೆ. ಈ ವೇಳೆ ತೆಗೆದ ಫೋಟೊಗಳು ಹಾಗೂ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ. ಈ ವೇಳೆ ಮಂತ್ರಿ ಕೃಷ್ಣಾರೆಡ್ಡಿ ಹಾಗೂ ಎಂಪಿ ಕೆ ಲಕ್ಷ್ಮಣ್ ಇಬ್ಬರೂ ರಾಜ್ನಾಥ್ ಸಿಂಗ್ಗೆ ಸಾಥ್ ನೀಡಿದ್ದರು.

ಅನಾರೋಗ್ಯದಿಂದ ಬಳಲುತ್ತಿದ್ದ ಕೃಷ್ಣಂ ರಾಜು ಸೆಪ್ಟೆಂಬರ್ 11ರಂದು ಕೊನೆಯುಸಿರೆಳೆದಿದ್ದರು. ಹೈದರಾಬಾದ್ನ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗಾಗಿ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಿಸದೆ ನಿಧನರಾಗಿದ್ದಾರೆ. ಇವರ ನಿಧನ ಟಾಲಿವುಡ್ಗೆ ದೊಡ್ಡ ಶಾಕ್ ಆಗಿತ್ತು. ಟಾಲಿವುಡ್ ತಾರೆಯರಾದ ಚಿರಂಜೀವಿ, ಮಹೇಶ್ ಬಾಬು, ಜೂ.ಎನ್ಟಿಆರ್, ಅನುಷ್ಕಾ ಶೆಟ್ಟಿ, ಸಾಯಿ ಧರಂ ತೇಜ್, ವಿಜಯ್ ದೇವರಕೊಂಡ ಹಾಗೂ ಅಲ್ಲು ಅರ್ಜುನ್ ಸೇರಿದಂತೆ ಹಲವರು ಅಂತಿಮ ನಮನ ಸಲ್ಲಿಸಿದ್ದರು.


Click it and Unblock the Notifications











