ಆಂಧ್ರ ಸಿಎಂ ಜಗನ್ ಎದುರು ಹಾಕಿಕೊಂಡಿದ್ದಕ್ಕೆ ಪವನ್ ಕಲ್ಯಾಣ್ಗೆ 10 ಕೋಟಿ ನಷ್ಟ
ತೆಲುಗು ಚಿತ್ರರಂಗ ಹಾಗೂ ಆಂಧ್ರದ ಜಗನ್ ಸರ್ಕಾರದ ಟಿಕೆಟ್ ಏರಿಕೆ ವಿಚಾರವಾಗಿ ತಿಕ್ಕಾಟ ನಡೆಯುತ್ತಿದೆ. ಈ ವಿಚಾರವಾಗಿ ಟಾಲಿವುಡ್ ಪವರ್ಸ್ಟಾರ್ ಪವನ್ ಕಲ್ಯಾಣ್ ಆಂಧ್ರ ಸಿಎಂ ಜಗನ್ ವಿರುದ್ಧ ಕಿಡಿಕಾರಿದ್ದರು. ಸಿಎಂ ಜಗನ್ ವಿರುದ್ಧ ಏಕವಚನದಲ್ಲಿ ವಾಗ್ದಾಳಿ ನಡೆಸಿದ್ದರು. ಬೈಕ್ ಅಪಘಾತಕ್ಕೆ ಒಳಗಾಗಿ ಆಸ್ಪತ್ರೆ ಸೇರಿದ್ದ ಸಾಯಿ ಧರಂ ತೇಜ್ ನಟಿಸಿದ ರಿಪಬ್ಲಿಕ್ ಸಿನಿಮಾದ ಪ್ರಿ-ರಿಲೀಸ್ ಇವೆಂಟ್ ಕಾರ್ಯಕ್ರಮದ ವೇಳೆ ಜಗನ್ ವಿರುದ್ಧ ನೇರಾ ನೇರ ಆರೋಪಗಳನ್ನು ಮಾಡಿದ್ದರು.
ಆಂಧ್ರ ಜಗನ್ ನೇತೃತ್ವದ ಸರ್ಕಾರ ಟಿಕೆಟ್ ದರ ಹಾಗೂ ಮಾರಾಟದ ಮೇಲೆ ನಿಗಾ ಇಡಲು ಮುಂದಾಗಿತ್ತು. ಜಗನ್ ಅಧಿಕಾರಕ್ಕೆ ಬಂದ ಕೂಡಲೇ ಏಕಾಏಕಿ ಏರಿಕೆಯಾಗುತ್ತಿದ್ದ ಸಿನಿಮಾ ಟಿಕೆಟ್ ದರ ಹಾಗೂ ವಿಶೇಷ ಪ್ರದರ್ಶನವನ್ನು ರದ್ದು ಮಾಡಲಾಗಿತ್ತು. ಇದರ ವಿರುದ್ಧ ಪವನ್ ಕಲ್ಯಾಣ್ ಆಕ್ರೋಶ ಭರಿತರಾಗಿದ್ದು ಮಾತನಾಡಿದ್ದರು. ಅದೇ ಈಗ ಪವನ್ ಸಿನಿಮಾ 'ಭೀಮ್ಲಾ ನಾಯಕ್'ಗೆ ಕಂಟಕವಾಗಿ ಪರಿಣಮಿಸಿದೆ. ಸಿಎಂ ಜಗನ್ ಎದುರು ಹಾಕಿಕೊಂಡಿದ್ದಕ್ಕೆ ಪವನ್ ಭೀಮ್ಲಾ ನಾಯಕ್ ಸಿನಿಮಾಗೆ 10 ಕೋಟಿ ನಷ್ಟ ಆಗಿದೆ ಅಂತ ಟಾಲಿವುಡ್ ಮಾತಾಡಿಕೊಳ್ಳುತ್ತಿದೆ.

'ಭೀಮ್ಲಾ ನಾಯಕ್' ಖರೀದಿಗೆ ಹಿಂದೇಟು
ಜನವರಿ 12ರಂದು ಪವನ್ ಕಲ್ಯಾಣ್ ಹಾಗೂ ರಾಣಾ ದಗ್ಗುಬಾಟಿ ನಟನೆಯ 'ಭೀಮ್ಲಾ ನಾಯಕ್' ನಾಯಕ್ ಸಿನಿಮಾ ಬಿಡುಗಡೆಗೆ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ. ಹೀಗಾಗಿ ಸಿನಿಮಾ ನಿರ್ಮಾಪಕರು ಹಾಗೂ ವಿತರಕರ ನಡುವೆ ವ್ಯಾಪಾರ ವಹಿವಾಟು ನಡೆಯುತ್ತಿದೆ. ಪವರ್ಸ್ಟಾರ್ ಸಿನಿಮಾ ದೊಡ್ಡ ಮೊತ್ತಕ್ಕೆ ಖರೀದಿಸುತ್ತಾರೆಂದು ನಿರೀಕ್ಷೆ ಮಾಡಿದ್ದ ನಿರ್ಮಾಪಕರಿಗೆ ನಿರಾಸೆ ಆಗಿದ್ಯಂತೆ. ಸಿಎಂ ಜಗನ್ ಎದುರು ಹಾಕಿಕೊಂಡಿರುವ ಪವನ್ ಸಿನಿಮಾ ಖರೀದಿಸಲು ವಿತರಕರು ಹಿಂದೇಟು ಹಾಕುತ್ತಿದ್ದಾರಂತೆ.

'ಭೀಮ್ಲಾ ನಾಯಕ್'ಗೆ 10 ಕೋಟಿ ನಷ್ಟ
ಭೀಮ್ಲಾ ನಾಯಕ ಸಿನಿಮಾ ಟೀಸರ್ ಈಗಾಗಲೇ ಅಭಿಮಾನಿಗಳನ್ನು ಕೆರಳಿಸಿದೆ. ಇದು ಮಲಯಾಳಂ ಸಿನಿಮಾ 'ಅಯ್ಯಪ್ಪನುಂ ಕೋಶಿಯುಂ' ಸಿನಿಮಾದ ರಿಮೇಕ್ ಆಗಿದ್ದರೂ, ತೆರೆಮೇಲೆ ಪವನ್ ಹಾಗೂ ರಾಣಾ ಗುದ್ದಾಟ ನೋಡಲು ಕಾತುರರಾಗಿದ್ದಾರೆ. ಹೀಗಾಗಿ 'ಭೀಮ್ಲಾ ನಾಯಕ್' ಸಿನಿಮಾ ದೊಡ್ಡ ಮೊತ್ತಕ್ಕೆ ಮಾರಾಟ ಆಗಬಹುದು ಅನ್ನುವ ನೀರಿಕ್ಷೆ ಇತ್ತು. ನಿರ್ಮಾಪಕರು 100 ಕೋಟಿ ಸೇಲ್ ಮಾಡಲು ಮುಂದಾಗಿದ್ದರು. ಆದರೆ, ಟಿಕೆಟ್ ಬೆಲೆ ಇಳಿಕೆ ಹಾಗೂ RRR, ರಾಧೆ ಶ್ಯಾಮ್ ಸಿನಿಮಾ ನಡುವಿನ ಬಾಕ್ಸಾಫೀಸ್ ಗುದ್ದಾಟ ಮನಗಂಡಿರುವ ವಿತರಕರು 90 ಕೋಟಿ ಆಫರ್ ಮಾಡಿದ್ದಾರಂತೆ. ವಕೀಲ್ ಸಾಬ್ ಸಿನಿಮಾ ವೇಳೆ ತೊಂದರೆ ಆದಂತೆ, ಭೀಮ್ಲಾ ನಾಯಕ್ ರಿಲೀಸ್ ವೇಳೆನೂ ತೊಂದರೆ ನಷ್ಟ ಆಗುತ್ತೆ ಅನ್ನುವ ಭಯದಲ್ಲಿ ವಿತರಕರು ಇದ್ದಾರೆ ಎನ್ನಲಾಗಿದೆ.

ಜಗನ್ ವಿರುದ್ಧ ಸಿಡಿದೆದ್ದಿದ್ದ ಪವನ್
ರಿಪಬ್ಲಿಕ್ ಪ್ರಿ- ರಿಲೀಸ್ ವೇದಿಕೆ ಮೇಲೆ ಸಿಎಂ ಜಗನ್ ವಿರುದ್ಧ ಪವನ್ ಕಿಡಿಕಾರಿದ್ದರು. "ನಿನಗೆ ನನ್ನ ಮೇಲೆ ಕೋಪ ಇದ್ದರೆ ನನ್ನ ಸಿನಿಮಾ ನಿಲ್ಲಿಸು. ಇಡೀ ಚಿತ್ರರಂಗಕ್ಕೆ ಸಮಸ್ಯೆ ಕೊಡಬೇಡ. 'ವಕೀಲ್ ಸಾಬ್'ಗೆ ಸಮಸ್ಯೆ ಆಗದೇ ಇದ್ದಿದ್ದರೆ ತೆಲುಗಿನಲ್ಲಿ ಇನ್ನೂ ಹಲವು ಸಿನಿಮಾಗಳು ಬಿಡುಗಡೆ ಆಗುತ್ತಿದ್ದವು." ಎಂದು ಪವನ್ ಕಲ್ಯಾಣ್ ತಮ್ಮ ಆಕ್ರೋಶ ಹೊರ ಹಾಕಿದ್ದರು. ಟಿಕೆಟ್ ಬೆಲೆ ಏರಿಕೆ ಹಾಗೂ ಸ್ಪೆಷಲ್ ಶೋಗೆ ಆಂಧ್ರ ಸರ್ಕಾರ ಕಡಿವಾಣ ಹಾಕಿದ್ದು, ಸರ್ಕಾರದ ಪೋರ್ಟಲ್ ಮೂಲಕ ಟಿಕೆಟ್ ಖರೀದಿಗೆ ಅವಕಾಶ ನೀಡುವ ಆಲೋಚನೆ ಹೊಂದಿದೆ.

ಏನಿದು ಟಿಕೆಟ್ ದರ ವಿವಾದ?
ಸೂಪರ್ಸ್ಟಾರ್ ಸಿನಿಮಾಗಳು ಬಿಡುಗಡೆಯಾದಾಗ, ಆಂಧ್ರದಲ್ಲಿ ಟಿಕೆಟ್ ದರ ಏರಿಕೆಯಾಗುತ್ತಿತ್ತು. ಕೆಲವೊಮ್ಮೆ ಸ್ಪೆಷಲ್ ಶೋಗಳನ್ನು ಏರ್ಪಡಿಸಿ 1000 ರೂಪಾಯಿವರೆಗೂ ಟಿಕೆಟ್ ಬೆಲೆ ಹೆಚ್ಚಿಸಿದ ಉದಾಹರಣೆಗಳು ಇವೆ. ಇದಕ್ಕೆ ಆಂಧ್ರ ಸರ್ಕಾರ ಬ್ರೇಕ್ ಹಾಕಿ, ಗರಿಷ್ಟ 250ರೂಪಾಯಿ ಹಾಗೂ ಕನಿಷ್ಟ 5 ರೂಪಾಯಿಗೆ ಟಿಕೆಟ್ ಬೆಲೆಯನ್ನು ಇಳಿಸಿತ್ತು. ಅಲ್ಲದೆ ಆಂಧ್ರದ ಸಿನಿಮ್ಯಾಟೋಗ್ರಫಿ ಆಕ್ಟ್ ಪ್ರಕಾರ, ದಿನ ನಾಲ್ಕು ಶೋಗಳನ್ನು ಮಾತ್ರ ಹಾಕಬೇಕು ಎಂಬ ನಿಯಮವಿದೆ. ಈ ಎರಡು ನೀತಿಯನ್ನು ಎತ್ತಿ ಹಿಡಿದಿತ್ತು. ಇದರ ವಿರುದ್ಧ ಪವನ್ ಕಲ್ಯಾಣ್ 'ವಕೀಲ್ ಸಾಬ್' ಸಿನಿಮಾ ಬಿಡುಗಡೆ ವೇಳೆನೂ ಗುಡುಗಿದ್ದರು.


Click it and Unblock the Notifications











