'ಹನುಮಾನ್' ನಟನ 'ಮಿರಾಯ್' ಟ್ರೈಲರ್ ಟ್ರೆಂಡಿಂಗ್; ಸೂಪರ್ ಯೋಧನಾಗಿ ಜಬರ್ದಸ್ತ್ ಎಂಟ್ರಿ
ತೆಲುಗಿನಲ್ಲಿ 'ಹನುಮಾನ್' ಅನ್ನೋ ಸಿನಿಮಾ ದೇಶಾದ್ಯಂತ ಸದ್ದು ಮಾಡಿತ್ತು. ಟಾಲಿವುಡ್ನ ಯುವ ನಟ ತೇಜ್ ಸಜ್ಜಾ ಈ ಸಿನಿಮಾದಲ್ಲಿ ನಾಯಕನಾಗಿ ನಟಿಸಿದ್ದರು. ತೆಲುಗು ಚಿತ್ರರಂಗಕ್ಕೆ ಈಗತಾನೆ ಕಾಲಿಟ್ಟಿರುವ ತೇಜ್ ಸಜ್ಜಾ ಇದೇ 'ಹನುಮಾನ್' ಸಿನಿಮಾ ಮೂಲಕ ಪ್ಯಾನ್ ಇಂಡಿಯಾ ಲೆವೆಲ್ನಲ್ಲಿ ಸದ್ದು ಮಾಡಿದ್ದರು. 'ಹನುಮಾನ್' ಬಿಡುಗಡೆಯಾದ ಎಲ್ಲಾ ಭಾಷೆಯಲ್ಲೂ ಭರ್ಜರಿ ಕಲೆಕ್ಷನ್ ಮಾಡಿತ್ತು.
'ಹನುಮಾನ್' ಸೂಪರ್ಸ್ಟಾರ್ ಸಿನಿಮಾಗಳನ್ನು ಮೀರಿಸುವಂತೆ ಬಾಕ್ಸಾಫೀಸ್ ದೊಡ್ಡ ಮಟ್ಟದಲ್ಲಿ ಯಶಸ್ಸು ಕಂಡಿತ್ತು. ಇಷ್ಟು ದೊಡ್ಡ ಸಕ್ಸಸ್ ಕೊಟ್ಟ ತೇಜ್ ಸಜ್ಜಾ ಅಳೆದು ತೂಗಿ ಮತ್ತೊಂದು ಪ್ರಾಜೆಕ್ಟ್ಗೆ ಕೈ ಹಾಕಿದ್ದರು. ಅದುವೇ 'ಮಿರಾಯ್'. ಈ ಸಿನಿಮಾದಲ್ಲೂ ತೇಜ್ ಸಜ್ಜಾ ಸೂಪರ್ ಹೀರೋ ಆಗಿ ನಟಿಸಿದ್ದಾರೆ. ಈಗ ರಿಲೀಸ್ ಆಗಿರುವ ಟ್ರೈಲರ್ ಸೋಶಿಯಲ್ ಮೀಡಿಯಾಗಳಲ್ಲಿ ಸಿಕ್ಕಾಪಟ್ಟೆ ಟ್ರೆಂಡಿಂಗ್ನಲ್ಲಿದೆ.

'ಹನುಮಾನ್' ಸಿನಿಮಾ ಬಳಿಕ ತೇಜ್ ಸಜ್ಜಾ ನಟಿಸಿದ 'ಮಿರಾಯ್' ಎಲ್ಲಾ ಕಡೆಯಿಂದ ಉತ್ತಮ ರೆಸ್ಪಾನ್ಸ್ ಸಿಕ್ಕಿದೆ. 'ಮಿರಾಯ್' ಮೂಲಕ ಮತ್ತೆ ಪ್ರೇಕ್ಷಕರನ್ನು ರಂಜಿಸುವುದಕ್ಕೆ ಮುಂದಾಗಿದ್ದಾರೆ. ತೇಜ್ ಸಜ್ಜಾರನ್ನು ಮತ್ತೆ ಸೂಪರ್ ಯೋಧನ ಪಾತ್ರದಲ್ಲಿ ನೋಡುವುದಕ್ಕೆ ಪ್ರೇಕ್ಷಕರು ಕೂಡ ತುದಿಗಾಲಲ್ಲಿ ನಿಂತಿದ್ದಾರೆ. ಈ ಸಿನಿಮಾ ಕೂಡ ಬಹುಭಾಷೆಯಲ್ಲಿಯೇ ರಿಲೀಸ್ ಆಗುತ್ತಿದೆ. ಇಷ್ಟು ದಿನ 'ಮಿರಾಯ್' ಟೈಟಲ್ನಿಂದಲೇ ಗಮನ ಸೆಳೆಯುತ್ತಿತ್ತು. ಈಗ ಟ್ರೈಲರ್ನಿಂದ ಸೌಂಡ್ ಮಾಡುತ್ತಿದೆ.
ತೇಜ್ ಸಜ್ಜಾ 'ಹನುಮಾನ್' ಸಿನಿಮಾದ ಮೂಲಕ ಬಾಕ್ಸಾಪೀಸ್ ಶೇಕ್ ಮಾಡಿದ್ದ ತೇಜ್ ಸಜ್ಜಾ ಈಗ ಸೂಪರ್ ಯೋಧನಾಗಿಯೂ ಅಷ್ಟೇ ಸದ್ದು ಮಾಡುತ್ತಾರಾ? ಅನ್ನೋ ಕುತೂಹಲ ಪ್ರೇಕ್ಷಕರಿಗಷ್ಟೇ ಅಲ್ಲ, ಸಿನಿಮಾ ಮಂದಿಯಲ್ಲೂ ಇದೆ. ನಿರ್ದೇಶಕ ಕಾರ್ತಿಕ್ ಘಟ್ಟಮನೇನಿ ಟ್ರೈಲರ್ನಿಂದ ಪ್ರೇಕ್ಷಕರಿಗೆ ವಿಷ್ಯುವಲ್ ಟ್ರೀಟ್ ಕೊಟ್ಟಿದ್ದು ಭರವಸೆಯನ್ನು ಮೂಡಿಸಿದ್ದಾರೆ. ಮೂರು ನಿಮಿಷ ಏಳು ಸೆಕೆಂಡ್ಗಳ ಈ ಟ್ರೈಲರ್ ಮತ್ತೆ ಪ್ಯಾನ್ ಇಂಡಿಯಾ ಲೆವೆಲ್ನಲ್ಲಿ ಸದ್ದು ಮಾಡುವುದಕ್ಕೆ ಸಿದ್ಧವಾಗಿ ನಿಂತಿದೆ.
ತೆಲುಗಿನ ಈ ಯುವ ನಟ ಸೂಪರ್ ಯೋಧನಾಗಿ ಜನರನ್ನು ರಕ್ಷಿಸಲು ಹೋರಾಡು ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ತೇಜ ಸಜ್ಜಾ ವಿರುದ್ಧ ಟಾಲಿವುಡ್ ನಟ ಮಂಚು ಮನೋಜ್ ಖಳನಾಯಕನಾಗಿ ಅಬ್ಬರಿಸಿದ್ದಾರೆ. ಅದ್ದೂರಿ ಆಕ್ಷನ್ ಜೊತೆಗೆ ಪುರಾಣದ ಕಥೆಯನ್ನು ಸೇರಿಸಿ ಸೊಗಸಾದ ಟ್ರೈಲರ್ ಅನ್ನು ಪ್ರೇಕ್ಷಕರ ಮುಂದೆ ಇಟ್ಟಿದ್ದಾರೆ. ಧರ್ಮ ರಕ್ಷಕನಾಗಿ ತೇಜ್ ಸಜ್ಜಾ ಹೋರಾಟ ಮಾಡುವ ದೃಶ್ಯಗಳು ಅದ್ಭುತ ಎನಿಸಿವೆ. ಟ್ರೈಲರ್ ಕೊನೆಯಲ್ಲಿ ಬರುವ ಭಗವಾನ್ ಶ್ರೀರಾಮ ದೃಶ್ಯವಂತೂ ಪ್ರೇಕ್ಷಕರ ಮೈ ಝಂ ಏನಿಸುತ್ತಿದೆ.
'ಮಿರಾಯ್' ಸಿನಿಮಾವನ್ನು ದಕ್ಷಿಣ ಭಾರತದ ಪ್ರತಿಷ್ಠಿತ ನಿರ್ಮಾಣ ಸಂಸ್ಥೆ 'ಮೀಡಿಯಾ ಫ್ಯಾಕ್ಟರಿ' ಬ್ಯಾನರ್ನಲ್ಲಿ ಟಿ.ಜಿ.ವಿಶ್ವಪ್ರಸಾದ್ ನಿರ್ಮಾಣ ಮಾಡಿದ್ದಾರೆ. ತೇಜ್ ಸಜ್ಜಾ ಜೊತೆ ರಿತಿಕಾ ನಾಯಕ್ ನಾಯಕಿಯಾಗಿ ಗಮನ ಸೆಳೆದಿದ್ದಾರೆ. ನಿರ್ದೇಶಕ ಕಾರ್ತಿಕ್ ಘಟ್ಟಮನೇನಿ 'ಮಿರಾಯ್'ಗೆ ಕಥೆಯ ಜೊತೆಗೆ ಚಿತ್ರಕಥೆಯನ್ನೂ ಬರೆದು ನಿರ್ದೇಶನ ಮಾಡಿದ್ದಾರೆ.
ಈ ಸಿನಿಮಾಗೆ ಮಣಿಬಾಬು ಕರಣಂ ಸಂಭಾಷಣೆ ಬರೆದಿದ್ದರೆ, ಶ್ರೀ ನಾಗೇಂದ್ರ ತಂಗಳ ಅವರ ಆರ್ಟ್ ವರ್ಕ್ ಸಿನಿಮಾದ ಹೈಲೈಟ್. ಇನ್ನು ವಿವೇಕ್ ಕೂಚಿಭೋಟ್ಲ ಸಹ ನಿರ್ಮಾಪಕರಾಗಿದ್ದರೆ, ಪ್ರಸಾದ್ ಕ್ರಿಯೇಟಿವ್ ನಿರ್ಮಾಪಕರಾಗಿದ್ದಾರೆ. ಕಾರ್ಯಕಾರಿ ನಿರ್ಮಾಪಕರಾಗಿ ಸುಜಿತ್ ಕುಮಾರ್ ಕೊಲ್ಲಿ ಕಾರ್ಯ ನಿರ್ವಹಿಸಿದ್ದಾರೆ. ಈಗಾಗಲೇ ಸದ್ದು ಮಾಡುತ್ತಿರುವ 'ಮಿರಾಯ್' ಸೆಪ್ಟೆಂಬರ್ 12ರಂದು ಕೇವಲ 2Dಯಲ್ಲಷ್ಟೇ ಅಲ್ಲ 3D ಫಾರ್ಮಾಟ್ನಲ್ಲಿ ಬರೋಬ್ಬರಿ ಏಳು ಭಾಷೆಗಳಲ್ಲಿ ರಿಲೀಸ್ ಆಗಲಿದೆ. ಕನ್ನಡದಲ್ಲಿ ಈ ಸಿನಿಮಾವನ್ನು ವಿಕೆ ಫಿಲ್ಮ್ ಬ್ಯಾನರ್ ಅಡಿಯಲ್ಲಿ ಹೊಂಬಾಳೆ ಫಿಲ್ಮ್ ಬಿಡುಗಡೆ ಮಾಡುತ್ತಿದೆ.


Click it and Unblock the Notifications











