"ಆ ಪ್ರಭಾವಿ ನಟ ಕರೆದಾಗಲೆಲ್ಲಾ ಹೋಗದಿದ್ದರೆ ಹೊಡೆಯುತ್ತಿದ್ದರು"; ಟ್ರಾನ್ಸ್ಜೆಂಡರ್ ತನ್ಮಯಿ
ಸಿನಿಮಾರಂಗದ ಒಂದು ಮುಖ ಎಲ್ಲರಿಗೂ ಕಾಣಿಸುತ್ತೆ. ಆದರೆ, ಸಾಮಾನ್ಯ ಜನರಿಗೆ ಕಾಣಿಸದ ಇನ್ನೊಂದು ಮುಖವೂ ಇದೆ. ಅದು ಇತ್ತೀಚೆಗೆ ಬೆಳಕಿಗೆ ಬರುತ್ತಿದೆ. ಅದರಲ್ಲೂ ಮೀಟೂ ಅಭಿಯಾನ ಭಾರತದಲ್ಲಿ ಯಶಸ್ವಿಯಾದ ಬಳಿಕ ಒಂದೊಂದು ಕರ್ಮಕಾಂಡಗಳು ಹೊರ ಬರುತ್ತಿವೆ. ನಟಿಯರು, ಮಹಿಳಾ ತಂತ್ರಜ್ಞರು ತಮಗಾದ ಲೈಂಗಿಕ ಕಿರುಕುಳದ ಬಗ್ಗೆ ಬಹಿರಂಗವಾಗಿಯೇ ಹೇಳಿಕೊಂಡಿದ್ದಾರೆ. ಈಗಾಗಲೇ ಇಂತಹ ಸಾಕಷ್ಟು ಘಟನೆಗಳು ಹೊರಬಂದಿವೆ.
ಇದೂವರೆಗೂ ಭಾರತದ ಬೇರೆ ಬೇರೆ ಚಿತ್ರರಂಗದ ನಟಿಯರು, ಪೋಷಕ ಕಲಾವಿದರು, ಮಹಿಳಾ ತಂತ್ರಜ್ಞರು ಚಿತ್ರರಂಗದಲ್ಲಿ ತಮಗಾದ ಕಹಿ ಅನುಭವವನ್ನು ಹಂಚಿಕೊಂಡಿದ್ದಾರೆ. ಆದ್ರೀಗ ಚಿತ್ರರಂಗ ತೃತೀಯ ಲಿಂಗಿಗೂ ಸೇಫ್ ಅಲ್ಲ ಅನ್ನೋ ಸಂಗತಿ ಕೂಡ ಹೊರ ಬರುತ್ತಿದೆ. ಇವರಿಗೂ ಚಿತ್ರರಂಗದಲ್ಲಿ ಕಿರುಕುಳ ನೀಡಿರುವ ಘಟನೆ ತೆಲುಗು ಚಿತ್ರರಂಗದಲ್ಲಿ ನಡೆದಿದೆ. ಅದೇ ಈಗ ಟಾಲಿವುಡ್ನಲ್ಲಿ ಹಲ್ಚಲ್ ಎಬ್ಬಿಸಿದೆ.

ತೆಲುಗಿನ ಜನಪ್ರಿಯ ರಿಯಾಲಿಟಿ ಶೋ ಮೂಲಕ ಜನಪ್ರಿಯರಾಗಿರುವ ಕಾಮಿಡಿ ಶೋ 'ಜಬರ್ದಸ್ತ್'. ಈ ಶೋ ಮೂಲಕ ಹಲವು ಪ್ರತಿಭೆಗಳು ಫೇಮಸ್ ಆಗಿದ್ದಾರೆ. ಅದರಲ್ಲಿ ಟ್ರಾನ್ಸ್ಜೆಂಡರ್ ತನ್ಮಯಿ ಕೂಡ ಒಬ್ಬರು. ಇವರು ಇತ್ತೀಚೆಗೆ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ "ತೆಲುಗು ಖ್ಯಾತಿ ನಟರೊಬ್ಬರು ತನ್ನ ಜೊತೆ ಇರುವಂತೆ ಬೆದರಿಕೆ ಹಾಕುತ್ತಿದ್ದರು. ಹೋಗದೇ ಇದ್ದರೆ ಹೊಡೆಯುತ್ತಿದ್ದರು" ಎಂದು ಆರೋಪ ಮಾಡಿದ್ದಾರೆ.
ದಶಕಗಳಿಂದ ತೆಲುಗಿನ ರಿಯಾಲಿಟಿ ಶೋ ವೀಕ್ಷಕರನ್ನು ಹೊಟ್ಟೆ ಹುಣ್ಣಾಗಿಸುವಷ್ಟು ನಗಿಸುತ್ತಿದೆ. ಈ ಶೋನಲ್ಲಿ ಭಾಗವಹಿಸಿರುವ ಅದೆಷ್ಟೋ ಮಂದಿ ತೆಲುಗು ಚಿತ್ರರಂಗದಲ್ಲಿ, ತೆಲುಗು ಕಿರುತೆರೆಯಲ್ಲಿ ಬದುಕನ್ನು ಕಂಡುಕೊಂಡಿದ್ದಾರೆ. ಈ ಕಾರ್ಯಕ್ರಮಕ್ಕೆ ಬಂದವರು ಇದೀಗ ನಾಯಕರಾಗಿ, ಸ್ಟಾರ್ ನಟ-ನಟಿಯರಾಗಿ ಮತ್ತು ನಿರೂಪಕರಾಗಿ ಗುರುತಿಸಿಕೊಂಡಿದ್ದಾರೆ. ಅವರಲ್ಲಿ ಟ್ರಾನ್ಸ್ಜೆಂಡರ್ ತನ್ಮಯಿ ಕೂಡ ಒಬ್ಬರು.
ಇದೇ ಜಬರ್ದಸ್ತ್ ಶೋನಲ್ಲಿ ಟ್ರಾನ್ಸ್ಜೆಂಡರ್ ತನ್ಮಯಿ ಕೂಡ ತಮ್ಮ ಹಾಸ್ಯ ಪ್ರಜ್ಞೆಯಿಂದ ಮಿಂಚಿದ್ದರು. ವೀಕ್ಷಕರು ಇವರನ್ನು ಜಬರ್ದಸ್ತ್ ತನ್ಮಯಿ ಎಂದೇ ಗುರುತಿಸುತ್ತಾರೆ. ತಮ್ಮದೇ ವಿಶಿಷ್ಠ ಶೈಲಿಯ ಮೂಲಕ ಹಲವು ಸಂಚಿಕೆಗಳಲ್ಲಿ ವೀಕ್ಷಕರ ಮನಸ್ಸನ್ನು ಸೆಳೆದಿದ್ದಾರೆ. ಈ ಶೋ ಮೂಲಕ ಚಿತ್ರರಂಗಕ್ಕೆ ಪ್ರವೇಶ ಮಾಡುವುದಕ್ಕೆ ಯತ್ನಿಸಿದ್ದರು. ಕೆಲವು ಸಿನಿಮಾಗಳಲ್ಲೂ ನಟಿಸಿದ್ದರು. 'ವರ್ಜಿನ್ ಸ್ಟೋರೀಸ್' ಸೇರಿದಂತೆ ಕೆಲವು ಸಿನಿಮಾಗಳಲ್ಲಿ ನಟಿಸುವ ಅವಕಾಶ ಕೂಡ ಸಿಕ್ಕಿತ್ತು.

ಜೀ ತೆಲುಗಿನಲ್ಲಿ ಬಂದಿದ್ದ 'ಅದಿರಿಂದಿ' ಶೋನಲ್ಲಿ ಭಾಗವಹಿಸಿ ವೀಕ್ಷಕರ ಮೆಚ್ಚುಗೆ ಗಳಿಸಿದ್ದರು. 'ಬಿಗ್ ಬಾಸ್ ತೆಲುಗು ಸೀಸನ್ 7'ಗೆ ಎಂಟ್ರಿ ಕೊಡುವುದಕ್ಕೂ ಯತ್ನಿಸಿದ್ದರು. ಕೊನೆಯ ಹಂತದಲ್ಲಿ ಕೈತಪ್ಪಿತ್ತು. ತಮ್ಮ ಸಿನಿಮಾ ಜರ್ನಿಯಲ್ಲಿ ಆದ ಕಹಿ ಅನುಭವವನ್ನು ಸಂದರ್ಶನವೊಂದರಲ್ಲಿ ಹಂಚಿಕೊಂಡಿದ್ದಾರೆ. "ತೆಲುಗು ಚಿತ್ರರಂಗದಲ್ಲಿ ದೊಡ್ಡ ಸ್ಥಾನದಲ್ಲಿರುವ ವ್ಯಕ್ತಿಗಳಿಂದ ತಮಗೆ ಸಾಕಷ್ಟು ತೊಂದರೆಗಳಾಗಿವೆ" ಎಂದು ಸಂದರ್ಶನದಲ್ಲಿ ಹೇಳಿದ್ದಾರೆ.
ಚಿತ್ರರಂಗದ ಪ್ರಭಾವಿ ನಟರೊಬ್ಬರು ನನ್ನನ್ನು ದುರುಪಯೋಗ ಪಡಿಸಿಕೊಂಡಿದ್ದಾರೆಂದು ಆರೋಪ ಮಾಡಿದ್ದಾರೆ. ಇದು ತೆಲುಗು ಚಿತ್ರರಂಗವನ್ನೇ ಆಘಾತಕ್ಕೆ ಎಡೆ ಮಾಡಿಕೊಟ್ಟಿದೆ. "ನನ್ನ ತಂದೆ ಹಾಗೂ ತಾಯಿ ಇಬ್ಬರೂ ಅನಾರೋಗ್ಯದಿಂದ ಬಳಲುತ್ತಿದ್ದರು. ಆ ವೇಳೆ ಚಿತ್ರರಂಗದ ಪ್ರಭಾವಿ ವ್ಯಕ್ತಿಯೊಬ್ಬರು ತಮ್ಮೊಂದಿಗೆ ಇರುವಂತೆ ನನಗೆ ಬೆದರಿಸುತ್ತಿದ್ದರು. ಅವರು ಕರೆದಾಗಲೆಲ್ಲಾ ಹೋಗಬೇಕಿತ್ತು. ಒಂದು ವೇಳೆ ಹೋಗದೇ ಇದ್ದರೆ ಹೊಡೆಯುತ್ತಿದ್ದರು, ಬೈಯ್ಯುತ್ತಿದ್ದರು, ಹಿಂಸೆ ಕೊಡುತ್ತಿದ್ದರು" ಎಂದು ತನ್ಮಯಿ ಸಂದರ್ಶನದಲ್ಲಿ ಆರೋಪ ಮಾಡಿದ್ದಾರೆ.
"ಆ ವೇಳೆ ನನ್ನ ಕುಟುಂಬಕ್ಕೆ ನಾನು ಟ್ರಾನ್ಸ್ಜೆಂಡರ್ ಆಗಿರುವ ವಿಷಯ ತಿಳಿದಿರಲಿಲ್ಲ. ನನಗೆ ಆಗ ಹಣದ ಅವಶ್ಯಕತೆಯಿತ್ತು. ಈ ಕಾರಣಕ್ಕೆ ನಾನು ಅವರೊಂದಿಗೆ ಇರಬೇಕಾಯಿತು. ಆ ದೊಡ್ಡ ವ್ಯಕ್ತಿ ನನಗೆ ಹೊಡೆಯುತ್ತಿದ್ದರು. ಈ ಉದ್ಯಮದಿಂದಲೇ ಹೊರಗೆ ಹಾಕುತ್ತೇನೆಂದು ಬೆದರಿಸುತ್ತಿದ್ದರು. ಆಗ ವೇಳೆ ನನ್ನ ತಲೆಯಲ್ಲಿ ಓಡುತ್ತಿದ್ದದ್ದು ಒಂದೇ.. ನನ್ನ ಕುಟುಂಬಕ್ಕೆ ಯಾವುದೇ ಸಮಸ್ಯೆ ಆಗಬಾರದು. ಅದಕ್ಕಾಗಿ ನಾನು ಸುಮ್ಮನಿದ್ದೆ" ಎಂದು ತನ್ಮಯಿ ಹೇಳಿಕೊಂಡಿದ್ದಾರೆ. ಸದ್ಯ ಇವರ ಹೇಳಿಕೆ ವೈರಲ್ ಆಗುತ್ತಿದ್ದು, ಆ ದೊಡ್ಡ ನಟ ಯಾರು? ಅಂತ ತೆಲುಗು ಮಂದಿ ತಲೆಕೆಡಿಸಿಕೊಂಡಿದ್ದಾರೆ.


Click it and Unblock the Notifications











