Kaala Bhairava: "ನಾಟು ನಾಟು.." ಗಾಯಕ ಕಾಲ ಭೈರವ ವಿರುದ್ಧ ರೊಚ್ಚಿಗೆದ್ದ ರಾಮ್ ಚರಣ್–Jr.NTR ಫ್ಯಾನ್ಸ್!
ಇತ್ತೀಚೆಗೆ ಅಮೆರಿಕದ ಲಾಸ್ ಏಂಜಲೀಸ್ನಲ್ಲಿ ನಡೆದ ಆಸ್ಕರ್ ಸಮಾರಂಭದಲ್ಲಿ RRR ಸಿನಿಮಾದ "ನಾಟು ನಾಟು.." ಪ್ರಶಸ್ತಿ ಗೆದ್ದಿದ್ದು ಗೊತ್ತೇ ಇದೆ. ಓರಿಜಿನಲ್ ಸಾಂಗ್ ಕ್ಯಾಟಗರಿಯಲ್ಲಿ ಭಾರತದ ನಿರ್ಮಾಣ ಸಂಸ್ಥೆ ನಿರ್ಮಿಸಿದ ಸಿನಿಮಾಗೆ ಸಿಕ್ಕ ಮೊದಲ ಪ್ರಶಸ್ತಿಯಿದು. ಹೀಗಾಗಿ "ನಾಟು ನಾಟು.." ಹಾಡಿಗೆ ಪ್ರಶಸ್ತಿ ಬಂದಿದ್ದು ಭಾರತೀಯರಿಗೆ ತುಂಬಾನೇ ಸ್ಪೆಷಲ್.
"ನಾಟು ನಾಟು.." ಹಾಡು ಆಸ್ಕರ್ ಗೆಲ್ಲುವ ಪಟ್ಟಿಯಲ್ಲಿ ತೀವ್ರ ಪೈಪೋಟಿ ನೀಡಿ ಗೆದ್ದಿದೆ. ಅಂತರಾಷ್ಟ್ರೀಯ ಮಟ್ಟದ ಸಂಗೀತಕಾರರನ್ನೇ ಹಿಂದಿಕ್ಕಿ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದೆ. ಇನ್ನು ಈ ಹಾಡಿನ ಗಾಯಕರಾದ ರಾಹುಲ್ ಸಿಪ್ಲಿಗುಂಜ್ ಹಾಗೂ ಕಾಲ ಭೈರವ ಇಬ್ಬರೂ ಆಸ್ಕರ್ ವೇದಿಕೆ ಮೇಲೆ ಪರ್ಫಾಮೆನ್ಸ್ ನೀಡಿದ್ದು ಹೆಮ್ಮೆಯ ವಿಷಯವಾಗಿತ್ತು. ಈಗ ಇವರಲ್ಲೊಬ್ಬ ಗಾಯಕ ಕಾಲ ಭೈರವ ವಿವಾದಕ್ಕೆ ಸಿಲುಕಿದ್ದಾರೆ.

ಗಾಯಕ ಕಾಲ ಭೈರವ "ನಾಟು ನಾಟು.." ಹಾಡಿಗೆ ಆಸ್ಕರ್ ಪ್ರಶಸ್ತಿ ಬರುತ್ತಿದ್ದಂತೆ ಸಂಭ್ರಮದಲ್ಲಿ ಟ್ವೀಟ್ ಮಾಡಿದ್ದರು. ಆ ಟ್ವೀಟ್ RRR ಸಿನಿಮಾದಲ್ಲಿ ನಟಿಸಿದ್ದ ರಾಮ್ ಚರಣ್ ಹಾಗೂ ಜೂ.ಎನ್ಟಿಆರ್ ಅಭಿಮಾನಿಗಳ ಕೋಪಕ್ಕೆ ಕಾರಣವಾಗಿದೆ.
ರಾಮ್ ಚರಣ್-ಜೂ.ಎನ್ಟಿಆರ್ ಫ್ಯಾನ್ಸ್ ಸಿಟ್ಟು
ಆಸ್ಕರ್ ಪ್ರಶಸ್ತಿ ಗೆದ್ದ ಬಳಿಕ RRR ತಂಡ ಭಾರತಕ್ಕೆ ಹಿಂತಿರುಗಿದೆ. ಇತ್ತ ಗಾಯಕ ಕಾಲ ಭೈರವ ಇಡೀ ತಂಡಕ್ಕೆ ಧನ್ಯವಾದಗಳನ್ನು ಅರ್ಪಿಸಲು ಮುಂದಾಗಿದ್ದರು. ಟ್ವೀಟ್ ಮೂಲಕ ತಮ್ಮಗೆ ನೆರವಾದವರ ಬಗ್ಗೆ ಒಂದು ಸಾಲುಗಳನ್ನು ಬರೆದು ಪೋಸ್ಟ್ ಮಾಡಿದ್ದರು. ಅದೇ ಪೋಸ್ಟ್ ಈಗ ವಿವಾದಕ್ಕೆ ಸಿಲುಕಿದೆ.
" ನಾನು RRR ತಂಡವನ್ನು ಪ್ರತಿನಿಧಿಸಿದ್ದು ಹಾಗೂ ಆಸ್ಕರ್ ಪ್ರಶಸ್ತಿ ಸಮಾರಂಭದಲ್ಲಿ ಪರ್ಫಾಮೆನ್ಸ್ ಕೊಟ್ಟಿದ್ದಕ್ಕೆ ಆಭಾರಿಯಾಗಿದ್ದೇನೆ. ಎಸ್ಎಸ್ ರಾಜಮೌಳಿ ಬಾಬಾ, ಅಪ್ಪ(ಎಂ ಎಂ ಕೀರವಾಣಿ), ಕೋರಿಯೋಗ್ರಾಫರ್ ಪ್ರೇಮ್ ರಕ್ಷಿತ್, ಕಾರ್ತಿಕೇಯ ಅಣ್ಣ, ಅಮ್ಮ ಮತ್ತು ಪದ್ಮಮ್ಮ ಇವರ ಹಾರ್ಡ್ವರ್ಕ್ನಿಂದ ಈ ಎಲ್ಲಾ ಭಾಗಗಳಲ್ಲೂ ರೀಚ್ ಆಗಿದೆ. ಅಷ್ಟೇ ಅಲ್ಲದೆ ಇಡೀ ವಿಶ್ವವೇ ಡ್ಯಾನ್ಸ್ ಮಾಡುವಂತಾಗಿದೆ" ಎಂದು ಟ್ವೀಟ್ ಮಾಡಿದ್ದರು. ಈ ಟ್ವೀಟ್ಗೆ ಇಬ್ಬರ ಫ್ಯಾನ್ಸ್ ಆಕ್ರೋಶ ಹೊರ ಹಾಕಿದ್ದಾರೆ.
ಫ್ಯಾನ್ಸ್ ಬೇಸರ ಯಾಕೆ?
ಕಾಲ ಭೈರವ ಧನ್ಯವಾದಗಳನ್ನು ಅರ್ಪಿಸುವ ಸಲುವಾಗಿ ಟ್ವೀಟ್ ಏನೂ ಮಾಡಿದ್ದರು. ಆದರೆ, ಅದರಲ್ಲಿ "ನಾಟು ನಾಟು.." ಹಾಡಿನಲ್ಲಿ ಹೆಜ್ಜೆ ಹಾಕಿದ್ದ ಜೂ.ಎನ್ಟಿಆರ್ ಹಾಗೂ ರಾಮ್ ಚರಣ್ ಹೆಸರನ್ನೇ ಬಿಟ್ಟಿದ್ದರು. ಇದು ಇಬ್ಬರ ಅಭಿಮಾನಿಗಳ ನಿದ್ದೆಕೆಡಿಸಿತ್ತು.
ತಮ್ಮ ಟ್ವೀಟ್ನಲ್ಲಿ ರಾಮ್ ಚರಣ್ ಹಾಗೂ ಜೂ.ಎನ್ಟಿಆರ್ ಬಗ್ಗೆ ಉಲ್ಲೇಖ ಮಾಡದೇ ಇದ್ದಿದ್ದಕ್ಕೆ ಇಬ್ಬರ ಅಭಿಮಾನಿಗಳೂ ಕಿಡಿ ಕಾಡಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಗಾಯಕ ಕಾಲ ಭೈರವ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಆ ಬಳಿಕ ಇಬ್ಬರ ಅಭಿಮಾನಿಗಳು ಕಾಲ ಭೈರವ ಕ್ಷಮೆ ಕೇಳಿದ್ದಾರೆ.
ಕ್ಷಮೆ ಕೇಳಿದ ಕಾಲ ಭೈರವ
ರಾಮ್ ಚರಣ್ ಹಾಗೂ ಜೂ.ಎನ್ಟಿಆರ್ ಅಭಿಮಾನಿಗಳು ರೊಚ್ಚಿಗೇಳುತ್ತಿದ್ದಂತೆ ಗಾಯಕ ಕಾಲ ಭೈರವ ಕ್ಷಮೆ ಕೇಳಿದ್ದಾರೆ. " ಈ ಹಾಡು ಹಾಗೂ ಸಿನಿಮಾ ಯಶಸ್ಸಿಗೆ ತಾರಕ್ ಅಣ್ಣ ಹಾಗೂ ಚರಣ್ ಅಣ್ಣ ಪ್ರಮುಖ ಕಾರಣ ಅನ್ನೋದರಲ್ಲಿ ಯಾವುದೇ ಅನುಮಾನವಿಲ್ಲ. ಆದರೆ, ನಾನಿಲ್ಲಿ ನನಗೆ ಸಹಾಯ ಮಾಡಿದ ವ್ಯಕ್ತಿಗಳು ಹಾಗೂ 95ನೇ ಆಸ್ಕರ್ ಪ್ರಶಸ್ತಿ ಸಮಾರಂಭದಲ್ಲಿ ಪರ್ಫಾಮೆನ್ಸ್ ಮಾಡಲು ಅವಕಾಶ ಮಾಡಿಕೊಟ್ಟವರ ಬಗ್ಗೆ ಮಾತನಾಡಿದ್ದೇನೆ. ಅದು ಬಿಟ್ಟು ಬೇರೆ ಏನೂ ಇಲ್ಲ. ನನ್ನ ಸಂದೇಶವನ್ನು ತಪ್ಪಾಗಿ ಅರ್ಥೈಸಲಾಗುತ್ತಿದೆ ಅನ್ನೋದು ನನಗೆ ಗೊತ್ತಿದೆ. ಅದಕ್ಕೆ ನಾನು ಕ್ಷಮೆಯನ್ನು ಯಾಚಿಸುತ್ತೇನೆ." ಎಂದು ಕಾಲ ಭೈರವ ಹೇಳಿದ್ದಾರೆ.
ವಿವಾದಗಳು ಏನೇ ಇದ್ದರೂ, RRR ತಂಡವೀಗ ಭಾರತಕ್ಕೆ ಹಿಂತಿರುಗಿದೆ. ರಾಜಮೌಳಿ, ಎಂಎಂ ಕೀರವಾಣಿ, ಜೂ.ಎನ್ಟಿಆರ್ ಹಾಗೂ ರಾಮ್ ಚರಣ್ ಹಿಂತಿರುಗಿದ್ದಾರೆ. ಈಗ ಈ ದಿಗ್ಗಜರ ಮುಂದಿನ ನಡೆಯೇನು ಅನ್ನೋದೇ ಸಿನಿಪ್ರಿಯರನ್ನು ಕಾಡುವುದಕ್ಕೆ ಶುರುವಾಗಿದೆ.


Click it and Unblock the Notifications











